ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Narayana Yaji Column: ವಾಲಿವಧೆ: ರಾಮನ ವ್ಯಕ್ತಿತ್ವಕ್ಕೆ ಒಡ್ಡಿದ ನಿಕಷ; ಉದ್ದೇಶಪೂರ್ವಕವೋ ಅಥವಾ ಹದ ತಪ್ಪಿದ ನಡೆಯೋ?

Narayana Yaji Column: ಇನ್ನೇನು ಸುಗ್ರೀವ ಸತ್ತೇ ಹೋಗುತ್ತಾನೆ ಎನ್ನುವ ಸ್ಥಿತಿಗೆ ಬಂದಾಗ ರಾಮ ಮೊದಲು ಧನುಸ್ಸನ್ನು ಠೇಂಕಾರ ಮಾಡುತ್ತಾನೆ. ಆ ಶಬ್ದಕ್ಕೆ ಗರುಡನೇ ಮೊದಲಾದ ಪಕ್ಷಿಗಳು, ಮೃಗಗಳು ಪ್ರಳಯಕಾಲವೇ ಸನ್ನಿಹಿತವಾಯಿತೆಂದು ಭ್ರಮಿಸಿ ಓಡಿಹೋದವು. ಇದನ್ನೂ ವಾಲಿ ಲಕ್ಷಿಸಲಿಲ್ಲ.

Narayana Yaji Column: ವಾಲಿವಧೆ: ರಾಮನ ವ್ಯಕ್ತಿತ್ವಕ್ಕೆ ಒಡ್ಡಿದ ನಿಕಷ

ಹರೀಶ್‌ ಕೇರ ಹರೀಶ್‌ ಕೇರ May 30, 2025 6:51 AM

- ನಾರಾಯಣ ಯಾಜಿ

narayana yaji

ಶ್ರುತ್ವಾ ತು ತಸ್ಯ ನಿನದಂ ಸರ್ವಭೂತಪ್ರಕಮ್ಪನಮ್. ৷

ಮದಶ್ಚೈಕಪದೇ ನಷ್ಟಃ ಕ್ರೋಧಶ್ಚಾಪತಿತೋ ಮಹಾನ್ ৷৷ ಕಿ..15.2৷৷

ಸಮಸ್ತಭೂತಗಳನ್ನು ನಡುಗಿಸುವಂತಿರುವ ಆ (ಸುಗ್ರೀವನ) ಗರ್ಜನೆಯನ್ನು ಕೇಳಿದೊಡನೆ, ತನಗೆ ಸಮಾನರೇ ಇಲ್ಲವೆಂದು (ವಾಲಿ) ಭಾವಿಸಿದ್ದ ವಾಲಿಯ ಮದವು ಒಂದೇ ಬಾರಿಗೆ ಉಡುಗಿಹೋಯಿತು.

ಎರಡನೆ ಸಾರಿ ವಾಲಿಯನ್ನು ಯುದ್ಧಕ್ಕೆ ಆಹ್ವಾನಿಸಿದ್ದ ಸುಗ್ರೀವನ ಧ್ವನಿಯ ವಿಶೇಷಣವನ್ನು ಇಲ್ಲಿ ವಾಲ್ಮೀಕಿ ವಿವರಿಸುವುದು ಹೀಗೆ. ವಾಲಿಯನ್ನು ಸಂಹರಿಸುವ ಮೊದಲು ರಾಮ ಧನುಸ್ಸಿನ ಠೇಂಕಾರವೂ ಹೀಗೆ ಇತ್ತು. ಈ ಎರಡರ ಹೋಲಿಕೆಯನ್ನು ಕವಿ ಇಲ್ಲಿ ಪರೋಕ್ಷವಾಗಿ ಮಾಡಿದ್ದಾನೆ.

ಸುಗ್ರೀವ ಮತ್ತು ವಾಲಿಯ ನಡುವೆ ಹೋಲಿಕೆ ಮಾಡುವುದಿದ್ದರೆ ರೂಪ ಸಾಮ್ಯವನ್ನು ಈ ಮೊದಲೇ ಹೇಳಿಯಾಗಿದೆ. ಅವರಿಬ್ಬರ ರೂಪದಲ್ಲಿ ಯಾವ ವೆತ್ಯಾಸವೂ ಇಲ್ಲವಾಗಿತ್ತು. ಆದರೆ ಬುದ್ಧಿಯ ವಿಷಯ ಬಂದಾಗ ಸುಗ್ರೀವ ಮಹಾ ಚಾಣಾಕ್ಷ ರಾಜಕಾರಣಿ. ರಾಮನನ್ನು ಆತ ಬಡಪಟ್ಟಿಗೆ ನಂಬಿದವನಲ್ಲ. ರಾವಣ ವಾಲಿಯೊಡನೆ ಯುದ್ಧಕ್ಕೆ ಕಿಷ್ಕಿಂಧೆಗೆ ಬಂದಾಗ ರಾಜನೀತಿಯಲ್ಲಿ ಆರು ಅಂಗಗಳಲ್ಲಿ ಒಂದಾದ ದ್ವೈಧೀಭಾವದ ಮೂಲಕ ಸುಗ್ರೀವ ಸಮಾಧಾನ ಮಾಡಿದ್ದ. ವಾಲಿಗೆ ಧರ್ಮನೀತಿ ಎಲ್ಲ ತಿಳಿದಿದೆ. ಆದರೆ ಆತ ನಂಬಿಕೊಂಡಿದ್ದು ತನ್ನ ಬಾಹು ಬಲವನ್ನು. ಸುಗ್ರೀವ ಯುವರಾಜನಾಗಿ ರಾಜ್ಯಭಾರ ಮಾಡುವಾಗ ವಾನರಲ್ಲಿ ತನ್ನದೇ ಆದ ಛಾಪನ್ನು ಒತ್ತಿದ್ದ. ಇಲ್ಲದಿದ್ದರೆ ಆತನ ಒಂದು ಕರೆಗೆ ಪ್ರಪಂಚದಲ್ಲಿ ಇದ್ದ ಎಲ್ಲಾ ವಾನರರು ಅತಿ ಶೀಘ್ರದಲ್ಲಿ ಬಂದು ಸೇರಿ ಸೀತಾನ್ವೇಷಣೆಗೆ ಹೊರಡಲು ಸಾಧ್ಯವಾಗುತ್ತಿರಲಿಲ್ಲ. ಎರಡನೆ ಸಾರಿ ರಾಮನ ಸಲಹೆಯಂತೆ ವಾಲಿಯನ್ನು ಹುಣ್ಣಿಮೆಯ ರಾತ್ರಿ ಯುದ್ಧಕ್ಕೆ ಆಹ್ವಾನಿಸಿದ. ಆತನ ಗರ್ಜನೆ, ಗಾಳಿಯ ರಭಸದಿಂದ ಹುಟ್ಟುವ ತೆರೆಗಳುಳ್ಳ, ನದಿಗಳಿಗೆ ಒಡೆಯನಾದ ಸಮುದ್ರನಂತೆ ಇತ್ತು. ಆತನ ಗರ್ಜನೆಯನ್ನು ಕೇಳಿದ ವಾಲಿಯ ಮದವು ಒಂದೇ ಬಾರಿಗೆ ಇಳಿದುಹೋಯಿತು. ಮರುಕ್ಷಣದಲ್ಲಿಯೇ ಕೋಪವು ತಾರಕಕ್ಕೇರಿತು. ಸುಗ್ರೀವನನ್ನು ಕೊಂದೇ ಬಿಡುವೆ ಎನ್ನುತ್ತಾ ಹೊರಟವನನ್ನು ಆತನ ಪತ್ನಿ ತಾರೆ ತಡೆದಳು. ತಾರೆ ಕೇವಲ ವಾಲಿಗೆ ಪತ್ನಿ ಮಾತ್ರವಲ್ಲ, ಕಿಷ್ಕಿಂಧೆಯ ಸಾಮ್ರಾಜ್ಯದ ರಾಜಕೀಯದ ಆಗುಹೋಗುಗಳನ್ನು ಬಲ್ಲ ನಿಪುಣೆಯಾಗಿದ್ದಳು. ಅವಳ ಕುಶಲತೆ, ವಾಕ್ಪಟುತ್ವ ಮೊದಲಾದ ಸಂಗತಿಗಳನ್ನು ತಾರೆಯ ಕುರಿತಾದ ಲೇಖನದಲ್ಲಿ ವಿವೇಚಿಸಲಾಗುವುದು. ರಾಮ ಲಕ್ಷ್ಮಣರು ಬಂದು ಸುಗ್ರೀವನಲ್ಲಿ ಸಂಧಿ ಮಾಡಿಕೊಂಡ ವಿಷಯ ಆಕೆಗೆ ಅಂಗದನಿಂದ ತಿಳಿದಿತ್ತು. ಅನತಿ ದೂರದಲ್ಲಿರುವ ದಂಡಕಾರಣ್ಯದಲ್ಲಿ ರಾಮ ರಾಕ್ಷಸರನ್ನೆಲ್ಲ ಕೊಂದ ವಿಷಯವೆಲ್ಲವೂ ಈ ಮೊದಲೇ ವಾನರರು ತಿಳಿಸಿದ್ದರು. ತಾರೆ ರಾಮನ ಗುಣ, ಧರ್ಮಪರಾಯಣತೆ, ಶರಣಾಗತರನ್ನು ರಕ್ಷಿಸುವುದು, ವೀರತನ ಈ ಎಲ್ಲ ಸಂಗತಿಗಳನ್ನು ಇಲ್ಲಿ ವಾಲಿಗೆ ತಿಳಿಸುವ ಪ್ರಯತ್ನ ಮಾಡುತ್ತಾಳೆ. ಆತ ಮಾತ್ರ ಯಾವ ಮಾತುಗಳನ್ನೂ ಕೇಳುವ ಸ್ಥಿತಿಯಲ್ಲಿಯೂ ಇರುವುದಿಲ್ಲ. ತಾರೆಗೇ ಗದರಿಸಿ ಸುಮ್ಮನಿರಿಸುತ್ತಾನೆ. ರಾಮನ ವಿಷಯದಲ್ಲಿ ವಾಲಿಗೆ ತುಂಬಾ ಗೌರವವಿದೆ. “ಧರ್ಮಜ್ಞಶ್ಚ ಕೃತಜ್ಞಶ್ಚ ಕಥಂ ಪಾಪಂ ಕರಿಷ್ಯತಿ- ಧರ್ಮಜ್ಞನೂ-ಕೃತಜ್ಞನೂ ಆಗಿರುವ ಶ್ರೀರಾಮನು ಪಾಪಕಾರ್ಯವನ್ನು ಅದೇಕೆ ಮಾಡುವುನು” ಎಂದು ಸಮಾಧಾನ ಮಾಡುವುನು. ಸಮುದ್ರಮಥನದಲ್ಲಿ ಇಂದ್ರನೇ ಅನುಗ್ರಹಿಸಿದ ಕಾಂಚನ ಮಾಲೆಯನ್ನು ತೊಟ್ಟುಕೊಂಡು ಸುಗ್ರೀವನನ್ನು ಕೆಣಕಲು ಹೊರಟೇ ಬಿಟ್ಟ. ಅಬಲೆಯಾದ ತಾರೆಗೆ ಪತಿಗೆ ಸ್ವಸ್ತಿವಾಚನವನ್ನು ಮಾಡಿ ಆರತಿ ಬೆಳಗಿ ಕಳುಹಿಸಿಕೊಡುವದನ್ನು ಬಿಟ್ಟು ಬೇರೆ ವಿಕಲ್ಪಗಳಿರಲಿಲ್ಲ; ಕೇಳಿಯೂ ಕೇಳಿಸದಂತೆ ಅಳುತ್ತಾ ಪತಿಗೆ ಪ್ರದಕ್ಷಿಣೆ ಮಾಡಿ ಕಳಿಹಿದಳು!

ತಾರೆಯೊಡನೆ ಸುಗ್ರೀವನ ಪ್ರಾಣ ತೆಗೆಯುವುದಿಲ್ಲ ಎಂದು ಹೇಳಿದ ವಾಲಿ ಸುಗ್ರೀವನನ್ನು ಕೊಲ್ಲುವ ಉದ್ಧೇಶದಿಂದಲೇ ಪ್ರಹಾರ ಮಾಡುತ್ತಾನೆ. ಮೊದ ಮೊದಲು ಸುಗ್ರೀವನೂ, ವಾಲಿಯ ಮೇಲೆ ಬಲವಾಗಿ ಪ್ರಹರಿಸಿದರೂ ಕ್ರಮೇಣ ಕೈಸಾಗುವುದಿಲ್ಲ. ಆತನ ಒಂದೊಂದು ಪೆಟ್ಟಿಗೂ ಜೀವ ಕುತ್ತಿಗೆಗೆ ಬರುತ್ತದೆ. ಸಹಾಯಕ್ಕಾಗಿ ಪದೇ ಪದೇ ರಾಮ ಅವಿತಿರುವೆಡೆ ನೋಡುತ್ತಾನೆ. ಚಾಣಾಕ್ಷ ಮತಿಯಾದವನಿಗೆ ವೈರಿಯ ವ್ಯೂಹವನ್ನು ಅರಿಯಲು ಇಷ್ಟೇ ಸಾಕಾಗುತ್ತದೆ. ಬಾಹುಬಲವನ್ನೇ ನಂಬಿಕೊಂಡ ವಾಲಿ ಅದನ್ನು ಲಕ್ಷಿಸುವುದಿಲ್ಲ. ಇನ್ನೇನು ಸುಗ್ರೀವ ಸತ್ತೇ ಹೋಗುತ್ತಾನೆ ಎನ್ನುವ ಸ್ಥಿತಿಗೆ ಬಂದಾಗ ರಾಮ ಮೊದಲು ಧನಸ್ಸನ್ನು ಠೇಂಕಾರ ಮಾಡುತ್ತಾನೆ. ಆ ಶಬ್ದಕ್ಕೆ ಗರುಡನೇ ಮೊದಲಾದ ಪಕ್ಷಿಗಳು, ಮೃಗಗಳು ಪ್ರಳಯಕಾಲವೇ ಸನ್ನಿಹಿತವಾಯಿತೆಂದು ಭ್ರಮಿಸಿ ಓಡಿಹೋದವು. ಇದನ್ನೂ ವಾಲಿ ಲಕ್ಷಿಸಲಿಲ್ಲ. ತಾರೆ ಹೇಳಿದ ರಾಮನ ವಿಷಯವೂ ಆತನಿಗೆ ಹೊಳೆಯಲಿಲ್ಲವೆಂದರೆ, ಆತ ತಾರೆಯ ಬುದ್ಧಿವಾದವನ್ನು ಅರೆಮನಸ್ಸಿನಿಂದ ಕೇಳಿದ್ದ ಅಂತಲೇ ಅರ್ಥ. ಸರ್ಪದಂತಿರುವ ಬಾಣವೊಂದನ್ನು ತೆಗೆದು ರಾಮ ವಾಲಿಯ ವಕ್ಷಃಸ್ಥಳಕ್ಕೆ ನಾಟುವಂತೆ ಬಿಟ್ಟ. ಬಿರುಗಾಳಿಯ ಹೊಡೆತಕ್ಕೆ ಪುಷ್ಪರಹಿತವಾದ ಅಶೋಕವೃಕ್ಷದಂತೆ, ಉತ್ಸವದ ಕೊನೆಯಲ್ಲಿ ಭೂಮಿಗೆ ಇಳಿಸಿದ ಇಂದ್ರಧ್ವಜದಂತೆ ಆ ಬಾಣದ ಆಘಾತಕ್ಕೆ ಸಿಲುಕಿದ ವಾಲಿ ಭೂಮಿಗೆ ಧೊಪ್ಪನೆ ಬಿದ್ದ. ಆತ ಧರಿಸಿದ್ದ ಕಾಂಚನಮಾಲೆ ಅವನ ಪ್ರಾಣಗಳನ್ನೂ, ಅವನ ತೇಜಸ್ಸನ್ನೂ, ಕಾಂತಿಯನ್ನೂ ಅವನ ದೇಹವನ್ನು ಬಿಟ್ಟುಹೋಗದಂತೆ ನಿಲ್ಲಿಸಿತು. ಆ ಸಮಯದಲ್ಲಿ ವಾಲಿ ಹೇಗೆ ಕಾಣಿಸುತ್ತಿದ್ದನೆಂದರೆ

ತಸ್ಯ ಮಾಲಾ ಚ ದೇಹಶ್ಚ ಮರ್ಮಘಾತೀ ಚ ಯಶ್ಶರಃ.

ತ್ರಿಧೇವ ರಚಿತಾ ಲಕ್ಷ್ಮೀಃ ಪತಿತಸ್ಯಾಪಿ ಶೋಭತೇ ৷৷ ಕಿ.17.7৷৷

ಸ್ವಾಭಾವಿಕವಾದ ದಿವ್ಯತೇಜಸಿನಿಂದ ಕೂಡಿದ ಅವನ ದೇಹವೂ, ಧರಿಸಿದ್ದ ಕಾಂಚನ ಮಾಲೆಯೂ, ಅವನ ದೇಹಕ್ಕೆ ನಾಟಿದ್ದ ರಾಮ ಬಾಣ-ಇವು ಮೂರು ಬೇರೆಬೇರೆಯಾಗಿ ಪ್ರಕಾಶಿಸುತ್ತಿದ್ದರೂ, ವಾಲಿಯ ತೇಜಸ್ಸೇ ಆ ಮೂರುವಿಧದಿಂದ ರಚಿಸಲ್ಪಟ್ಟಂತೆ ತೋರುತ್ತಿದ್ದವು.

ಇಂದ್ರನ ಅಂಶದಿಂದ ಜನಿಸಿದ ವಾಲಿ ಇಂದ್ರನಂತೆ ಪ್ರಕಾಶಿಸುತ್ತಿದ್ದ, ಆತಧರಿಸಿದ್ದ ಕಾಂಚನಮಾಲೆ ಸಹ ದಿವ್ಯಪ್ರಭೆಯುಳ್ಳದ್ದು, ಇನ್ನು ರಾಮಬಾಣವೂ ಸಹ ತೇಜಸ್ಸನ್ನು ಸಹಜವಾಗಿಯೇ ಹೊಂದಿರುವಂತಹದ್ದು ಎನ್ನುವ ಮೂಲಕ ವಾಲಿಯ ತೇಜಸ್ಸು ರಾಮಬಾಣಕ್ಕೆ ಪ್ರತಿಸ್ಪರ್ಧಿಯಾಗಿತ್ತು ಎನ್ನುವುದನ್ನು ಕವಿ ಇಲ್ಲಿ ಸೂಚಿಸುತ್ತಾನೆ.

ರಾಮನ ಆಯನದ ವ್ಯಕ್ತಿತ್ವ ನಿಕಷಕ್ಕೆ ಒಡ್ಡಿದ ಈ ಕ್ರಿಯೆ ಇತಿಹಾಸದುದ್ದಕ್ಕೂ ರಾಮ ಎನ್ನುವ ಮಹಾತ್ಮೆಗೆ ನಿರಂತರವಾಗಿ ಸವಾಲನ್ನು ಎಸೆಯುತ್ತಲೇ ಇದೆ. ಯಾವುದೇ ರಾಮಾಯಣವನ್ನು ತೆಗೆದುಕೊಳ್ಳಲಿ, ವಾಲಿವಧಾ ಪ್ರಕರಣದಲ್ಲಿ ರಾಮನನ್ನು ದೈವತ್ವದ ನೆಲೆಯಲ್ಲಿ ನಿಲ್ಲಿಸಿ ಏನೆಲ್ಲಾ ಕಾರಣ ಹೇಳಿ ಸಮರ್ಥನೆಗೇ ತೊಡಗುವ ಪ್ರಯತ್ನವನ್ನು ಮಾಡುತ್ತಾರೆ. ಕುವೆಂಪು ತಮ್ಮ ರಾಮಾಯಣದಲ್ಲಿ ವಾಲಿಗೆ ಹೃದಯ ಪರಿವರ್ತನೆಯುಂಟಾಗಿ ಸುಗ್ರೀವನನ್ನು ಎತ್ತಿಕೊಂಡು ಕಿಷ್ಕಿಂಧೆಗೆ ಎತ್ತಿಕೊಂಡು ಹೋಗುವಾಗ ಈ ಪರಿವರ್ತನೆಯನ್ನು ರಾಮ ಗ್ರಹಿಸದೇ ತನ್ನ ಸನ್ಮಿತ್ರನನ್ನು ಕೊಲ್ಲುತ್ತಾನೇ ಎಂದೇ ಭಾವಿಸಿ

’ಹಾ ಕೈಮೀರ್ದುದಾ ಎನುತೆ ಮುಂಗೆಟ್ಟು,

ಬೇರೆ ಬಟ್ಟೆಯ ಕಾಣದಯ್ಯಯ್ಯೋ, ರಘುಕುಲದ

ಶುಭ್ರ ಕೀರ್ತಿಯ ದಾಶರಥಿ, ಕಣೆಯ ಬಟ್ಟೆಯನೆ

ಕೈಕೊಂಡನೆಚ್ಚನ್ ಕಠೋರ ಶರಮೃತ್ಯುವಂ ವಾನರನ

ಬೆನ್ಗೆ....... (ನೀಂ ಸತ್ಯವ್ರತನೆ ದಿಟಂ)

ಎನ್ನುವ ಮೂಲಕ ವಾಲಿಯನ್ನು ಇನ್ನಷ್ಟು ಉದಾತ್ತೀಕರಿಸಿ ರಾಮ ತನ್ನ ಕೃತ್ಯಕ್ಕೆ ಮರುಗುತ್ತಿರುವಂತೆ ಚಿತ್ರಿಸುತ್ತಾರೆ. ವಾಲಿಯೇ ರಾಮನಿಗೆ “ನೀಂ ಸತ್ಯವ್ರತಂ, ದಿಟ” ಎಂದು ಸಮಾಧಾನ ಮಾಡುತ್ತಾನೆ. ಕವಿಗಿರುವ ಸ್ವಾತಂತ್ರ್ಯ ಇದು. ಆದರೆ ಈ ಉದಾತ್ತೀಕರಣ, ಮತ್ತು ಅತಿ ಭಂಜನೆಯಿಂದ ವಾಲ್ಮೀಕಿಯ ರಾಮಾಯಣದ ರಾಮನಿಗೆ ಇಂತಹ ಕಾರ್ಯ ಮಾಡಲೇಬೇಕಾದ ಅವಶ್ಯಕತೆ ಏನಿತ್ತು ಎನ್ನುವ ಸಂಶಯ ಖಂಡಿತವಾಗಿ ಬಾರದೇ ಇರದು. ತಾಳಮದ್ದಳೆಯಲ್ಲಿಯಂತೂ ಶೇಣಿ ಗೋಪಾಲಕೃಷ್ಣ ಭಟ್ಟರ ವಾಲಿಯ ಎದುರು ಯಾರೂ ನಿಲ್ಲುತ್ತಲೇ ಇರಲಿಲ್ಲ. ಪಾರ್ತಿಸುಬ್ಬನ ಪದ್ಯಗಳು ಅದಕ್ಕೆ ಪೂರಕವಾಗಿಯೇ ಇವೆ. ಕೊನೆಗೆ ಒಮ್ಮೆ ಶೇಣಿಯವರೇ ರಾಮನ ಪಾತ್ರವನ್ನು ನಿರ್ವಹಿಸಿ ಅದ್ಭುತವಾಗಿ ವಾಲಿ ಹೇಗೆ ವದಾರ್ಹ ಎನ್ನುವುದನ್ನೆ ಎಳೆ ಎಳೆಯಾಗಿ ಬಿಡಿಸಿ ಹೇಳಿದರಂತೆ. ವಾಲ್ಮೀಕಿ ರಾಮಾಯಣದ ಕಿಷ್ಕಿಂಧಾ ಕಾಂಡದ 17ನೆಯ ಅಧ್ಯಾಯವಿಡೀ ವಾಲಿ ರಾಮನಲ್ಲಿ ಮರೆಯಲ್ಲಿ ನಿಂತು ತನಗೆ ಯಾಕೆ ಬಾಣವನ್ನು ಹೊಡೆದೆ ಎನ್ನುವ ಪ್ರಶ್ನೆಗಳಿಂದಲೇ ಕೂಡಿವೆ.

ಪ್ರಪಂಚದ ಮಹಾ ಶಕ್ತಿಯೊಂದು ರಾಮಬಾಣದ ಆಘಾತಕ್ಕೆ ಸಿಲುಕಿ ನೆಲಕ್ಕುರುಳಿದರೂ ವಾಲಿಯಲ್ಲಿ ಇನ್ನೂ ಮಾತಾಡುವಂತಹ ತೇಜಸ್ಸಿತ್ತು. ಗಮನಿಸಬೇಕಾದ ಸಂಗತಿ ಎಂದರೆ ವಾಲಿ ರಾಮನನ್ನು ಪ್ರಶ್ನೆ ಮಾಡುವಾಗಲೂ ಸಹ “ಗರ್ವಿತಂ-ರಣಗರ್ವಿತಂ” ತನ್ನ ಪರಾಕ್ರಮದ ಕುರಿತು ’ಗರ್ವಿತನೂ’ ತನ್ನ ಯುದ್ಧಕೌಶಲದ ಕುರಿತು “ರಣಗರ್ವಿತನೂ” ಆಗಿದ್ದನು; ಅಂದರೆ ರಾಮನಿಗೆ ಸಮಾನವಾದ ಶೌರ್ಯ ವಾಲಿಯಲ್ಲಿತ್ತು ಎನ್ನುವುದನ್ನೇ ಸಾರುತ್ತಾರೆ. ವಾಲ್ಮೀಕಿ ಇಲ್ಲಿ ಎಲ್ಲಿಯೂ ರಾಮನ ಕೃತ್ಯವನ್ನು ಯಾವುದೇ ದೈವಿಕ ಭಾವದಿಂದ ಸಮರ್ಥನೆಗಾಗಿ ಹೋಗದೇ ಇತಿಹಾಸದುದ್ದಕ್ಕೂ ಬರುವ ಆಕ್ಷೇಪಣೆಗಳನ್ನು ಊಹಿಸಿ ಈ ಅಧ್ಯಾಯವನ್ನು ಸೇರಿಸಿದ್ದಾರೆ ಎನ್ನುವುದು ಸ್ಪಷ್ಟ. ವಾಲಿ ರಾಮನ ಹತ್ತಿರ ಎಸೆಯುವ ಪ್ರಶ್ನೆಗಳೆಲ್ಲವೂ ಆತನ ರಾಜಧರ್ಮದಲ್ಲಿ ಆತನಿಗಿರುವ ಪರಿಣಿತಿಯನ್ನು ಸಾರಿ ಸಾರಿ ಹೇಳುತ್ತದೆ. ಅದಕ್ಕಿಂತಲೂ ವಾಲಿ ಪ್ರಶ್ನೆಗಳನ್ನು ಹಣೆಯುವ ರೀತಿ ಎದುರಾಳಿಯನ್ನು ಇಕ್ಕಟ್ಟಿಗೆ ಸಿಕ್ಕಿಸುವಂತಹ ಮಾರ್ಗವನ್ನು ಹಣೆದಂತವು. ಆತನ ಹಾಗೂ ಆ ಮೂಲಕ ಇಂದಿಗೂ ರಾಮನ ವಿಷಯದಲ್ಲಿ ಬರುವ ಆಕ್ಷೇಪಗಳ ಪಟ್ಟಿಯನ್ನು ಸಂಕ್ಷೇಪಿಸಿ ಹೀಗೆ ಹೇಳಬಹುದು.

1) ಇಲ್ಲಿ ನಡೆದ ಯುದ್ಧ ತನ್ನ ಮತ್ತು ತನ್ನ ತಮ್ಮನ ನಡುವೆ. ವ್ಯಾಜವೂ ಸಹಾ ತಮ್ಮಿಬ್ಬರಿಗೆ ಸಂಬಂಧಿಸಿದ್ದು. ಅಂತಿರುವಾಗ ದ್ವಂದ್ವ ಯುದ್ಧದಲ್ಲಿ ತೊಡಗಿರುವಾಗ ನೀನು ವೃಕ್ಷಸ್ಥಳಕ್ಕೆ ಪ್ರಹರಿಸುವ ಮೂಲಕ ಯಾವ ಗೌರವವನ್ನು ಸಂಪಾದಿಸಿದೆ.

2) ರಾಜಧರ್ಮದಲ್ಲಿ ಪ್ರಧಾನವಾಗಿ ಇರಬೇಕಾದ “ಅಂತರಿಂದ್ರಿಯ ನಿಗ್ರಹ, ಬಹಿರಿಂದ್ರಿಯ ನಿಗ್ರಹ, ಧರ್ಮಾಚರಣೆ, ಧೈರ್ಯ, ಸತ್ಯನಿಷ್ಠೆ, ಪರಾಕ್ರಮ, ಅಪರಾಧಿಗಳನ್ನು ಶಿಕ್ಷಿಸುವುದು” ಇವುಗಳನ್ನು ಅಲಕ್ಷಿಸಿದ ಈ ನಿನ್ನ ಕಾರ್ಯದಿಂದ ನೀನು ಹೃದಯ ಶೂನ್ಯನೆಂದು ಸಾರುತ್ತದೆ.

3) ತಾನೋರ್ವ ಕಪಿ, ತಮಗೆ ನಾಡಿನ ನ್ಯಾಯ ಅನ್ವಯಿಸುವುದಿಲ್ಲ; ನರಶ್ರೇಷ್ಠನಾದ ನೀನು ಯಾಕೆ ವಂಚಕನಾಗಿ ವ್ಯವಹರಿಸಿದ್ಧೀಯೇ

4) ಯುದ್ಧಕ್ಕೆ ಕಾರಣವಾದ ಅಂಶಗಳು ಹೆನ್ನು ಹೊನ್ನು ಮಣ್ಣು. ಅಯೋಧ್ಯೆಯ ಅರಸರ ವಿಷಯದಲ್ಲಿ ಈ ಮೂರು ವಿಷಯದಲ್ಲಿ ತಾನು ಯಾವತ್ತಿಗೂ ತಪ್ಪಿನಡೆದವನಲ್ಲ, ಸ್ವೇಚ್ಚಾಚಾರವೆನ್ನುವುದು ರಾಜರಿಗೆ ಸಲ್ಲದು, ದಂಡನೀತಿ, ವಿನಯ, ನಿಗ್ರಹ ಮತ್ತು ಅನುಗ್ರಹ ರಾಜನಿಗಿರಬೇಕಿತ್ತು. ಅದೇ ಇಲ್ಲ ನಿನಗೆ (ಕಪಿಗಳಾದ ತಮಗೆ ಇದು ಅನ್ವಯವಾಗುವುದಿಲ್ಲ!!!).

5) ಕ್ಷತ್ರಿಯರಿಗೆ ಕಪಿಗಳ ಮಾಂಸ ನಿಷಿದ್ಧ, ಐದು ಬೆರಳುಗಳುಳ್ಳ ಪ್ರಾಣಿಗಳ ಪೈಕಿ ಉಡ, ಖಡ್ಗಮೃಗ, ಮುಳ್ಳು ಹಂದಿ, ಮೊಲ ಮತ್ತು ಆಮೆ ಈ ಐದು ಪ್ರಾಣಿಗಳನ್ನು ಮಾತ್ರ ಬ್ರಾಹ್ಮಣರು ಮತ್ತು ಕ್ಷತ್ರಿಯರು ತಿನ್ನಬಹುದು. ಕಪಿಯ ಮಾಂಸವನ್ನು ಯಾರೂ ತಿನ್ನುವುದಿಲ್ಲ. ಹಾಗಾದರೆ ನನ್ನನ್ನು ಚರ್ಮದ ಆಸೆಗೆ ಹೊಡೆದೆಯೋ ಹೇಗೆ, ಅದೂ ಸಹ ನಿಮಗೆ ನಿಷಿದ್ಧ.

6) ಸಮಾನ ಬಲದವರ ಹತ್ತಿರ ಆಶ್ರಯ ಕೋರುವುದನ್ನು ಬಿಟ್ಟು ನೀನು ಸುಗ್ರೀವನ ಹತ್ತಿರ ಮಿತ್ರತ್ವವನ್ನು ಮಾಡಿಕೊಂಡ ಕಾರಣ ಹೀಗೆ ಆಯಿತು. ನಿನಗೇನಾದರೂ ಹೆಂಡತಿಯ ಆಸೆಯಿದ್ದರೆ ತನ್ನ ಹತ್ತಿರ ಆಶ್ರಯವನ್ನು ಕೇಳಬಹುದಿತ್ತು. ತನ್ನ ಬಾಲವನ್ನೇ (ಪುಚ್ಛವನ್ನು) ಕಳುಹಿಸಿ ರಾವಣನಿಂದ ಸೀತೆಯನ್ನುತಂದು ನಿನಗೆ ಒಪ್ಪಿಸುತ್ತಿದ್ದೆ.

7) ನಿರಪರಾಧಿಯಾದ ನನ್ನನ್ನು ಕೊಲ್ಲಲು ಮುಂದಾದೆಯಲ್ಲ, ಸೂರ್ಯ ವಂಶದ ಧವಳ ಕೀರ್ತಿ ನಿನ್ನಿಂದ ಕಳಂಕಿತವಾಯಿತು.

8) ಸುಗ್ರೀವ ತನ್ನ ಅತ್ತಿಗೆಯನ್ನು ಇರಿಸಿಕೊಂಡಿದ್ದು ದ್ರೋಹವಲ್ಲವೇ, ಆತನಿಗೆ ರಾಮ ಯಾವ ಶಿಕ್ಷೆಯನ್ನು ವಿಧಿಸಿದ್ದಾನೆ. ರುಮೆಯನ್ನು ತಾನು ಇಟ್ಟುಕೊಂಡಿರುವುದನ್ನು ತನ್ನ ಪ್ರಜೆಗಳಲ್ಲಿ ಯಾರೂ ಖಂಡಿಸಲಿಲ್ಲ. ಹಾಗುರುವಾಗ ರಾಮನಿಗೆ ಯಾವ ಅಧಿಕಾರ ಇದರಲ್ಲಿದೆ. ( ವಾಲಿ ಈ ಪ್ರಶ್ನೆಗಳನ್ನು ಕೇಳಿಲ್ಲ. ನಂತರದಲ್ಲಿ ಇದು ಪ್ರಬಲ ವಾದವಾಗಿ ಇತರರಿಂದ ಕೇಳಲ್ಪಟಿದೆ.

9) ಎಲ್ಲಕ್ಕಿಂತ ಮುಖ್ಯವಾಗಿ ಎದುರು ನಿಂತು ಯುದ್ಧಕ್ಕೆ ಆಹ್ವಾನಿಸಿ ನೀನು ನನ್ನನ್ನು ಕೊಲ್ಲಬಹುದಿತ್ತು. ಮರೆಯಲ್ಲಿ ನಿಂತು ಕೊಲ್ಲುವ ಅಗತ್ಯ ಏನು. ನಿನ್ನ ವಂಶಕ್ಕೆ ಕಳಂಕ ತಂದೆ.

10) ಆತನಿಗೆ ತನ್ನ ಹೆಂಡತಿ ತಾರೆ ಹೇಳಿದ ಮಾತುಗಳು ನೆನಪಾಗುತ್ತದೆ. “ನಿನ್ನ ವಂಶೋನ್ನತಿಯನ್ನು ಪರ್ಯಾಲೋಚಿಸಿ ತಾರೆಯು ತನ್ನನು ಅನೇಕ ವಿಧದಲ್ಲಿ ತಡೆದರೂ ಕೇಳದೇ ನಮ್ಮ ಅಂತಃ ಕಲಹದದಲ್ಲಿ ಮದ್ಯ ಪ್ರವೇಶಮಾಡಲಾರೆ ಎಂದು ತಿಳಿದಿದ್ದೆ. ನಿನ್ನ ವಂಶೋನ್ನತಿಯನ್ನು ಗಮನಿಸದೇ ನಿರಪರಾಧಿಯಾದ ನನ್ನನ್ನು ಕೊಂದೆಯಲ್ಲಾ.

11) ತಾನೋರ್ವ ರಾಜ, ರಾಜರಾದವರನ್ನು ಹೀಗೆ ಕೊಲ್ಲಬಹುದೇ, ಹೀಗೆ ಕೊಂದವರಿಗೆ ಘೋರ ನರಕ ಶತಃ ಸಿದ್ಧ.

12) ಮರಣದಂಡನೆಗೆ ಗುರಿಯಾಗಬಹುದಾಂತಹ ಯಾವ ಪಾತಕವನ್ನು ನಾನು ಮಾಡಿದ್ದೇನೆ. “ಮಾಮಿಹಾನಪರಾಧಿನಂ I ಕಿಂವಕ್ಷ್ಯಸಿ ಸತಾಂ ಮಧ್ಯೇ ಕರ್ಮಕೃತ್ವಾ ಜುಗುಪ್ಸಿತಂ II ನೀನು ಸತ್ಪುರುಷರ ನಡುವೆ ಇರುವಾಗ ಯಾರಾದರೂ ನಿನ್ನನ್ನು ವಾಲಿಯನ್ನು ಕೊಂದುದೇಕೆ ಎಂದರೆ ಏನೆಂದು ಉತ್ತರಿಸುವೆ”. ಇಲ್ಲಿ ವಾಲಿ ತನ್ನನ್ನು ತಾನು “ಅನಪರಾಧಿನಮ್-ಯಾವ ತಪ್ಪನ್ನೂ ಮಾಡಿದವನಲ್ಲ” ಎಂದೇ ಸಮರ್ಥಿಸಿಕೊಳ್ಳುತ್ತಾನೆ.

ವಾಲಿ ರಾಮನಲ್ಲಿ ಎತ್ತುವ ಆಕ್ಷೇಪಗಳ ಒಟ್ಟೂ ತಾತ್ಪರ್ಯಗಳು ಈ ಮೇಲಿನವು. ಅದನಂತರದಲ್ಲಿ ರಾಮನನ್ನು ವಿಮರ್ಶಿಸುತ್ತಾ ಬೇರೆ ಬೇರೆ ವಿಧದ ಆಕ್ಷೇಪಗಳು ಇವೆಯಾದರೂ ಅವೆಲ್ಲದರ ಸಾರ ಸಂಗ್ರಹ ಈ ಮೇಲಿನವುಗಳೇ ಹೊರತೂ ಬೇರಿನ್ನೇನೂ ಇಲ್ಲ. ರಾಮನಿಗೆ ವಾಲಿ ವಧೆ ಎನ್ನುವುದು ವಿಕಲ್ಪಗಳಿಲ್ಲದ ಕಾರ್ಯವಾಗಿತ್ತೇ, ಅದನ್ನು ಬಿಟ್ಟು ಪರ್ಯಾಯವಾದ ಮಾರ್ಗಗಳಿಲ್ಲವೇ ಎನ್ನುವ ಸಂಶಯ ವಾಲಿ ಒಟ್ಟೂ ಐವತ್ತು ಶ್ಲೋಕಗಳಲ್ಲಿ ರಾಮನನ್ನು ಆಕ್ಷೇಪಿಸುವ ಭಾಗವನ್ನು ನೋಡಿದಾಗ ಬರುವುದು ಸಹಜ. ರಾಮನ ಸ್ಪಷ್ಟೀಕರನವೇನು ಈ ವಿಷಯದಲ್ಲಿ ಎನ್ನುವುದನ್ನು ಮುಂದಿನ ಭಾಗದಲ್ಲಿ ಗಮನಿಸೋಣ.

ಇದನ್ನೂ ಓದಿ: Narayana Yaji Column: ವಾಲ್ಮೀಕಿಗಿರಿಯಿಂದ ಹುಟ್ಟಿದ ರಾಮಾಯಣ ಮಹಾನದಿ