ಫೋಟೋ ಗ್ಯಾಲರಿ ಗುಜರಾತ್​ ವಿಮಾನ ಪತನ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Roopa Gururaj Column: ಜ್ಞಾನ ದಕ್ಕಿಸಿಕೊಳ್ಳಲು ಬೇಕಾದ ಅರ್ಹತೆ

ಒಂದು ಬೀಜದಿಂದ ಮಾತ್ರವೇ ನೀಲಿ ಬಣ್ಣದ ಹೂವು ಬಿಡುತ್ತದೆ ಯಾರ ಮನೆಯಲ್ಲಿ ಆ ನೀಲಿ ಬಣ್ಣದ ಹೂವು ಬಿಡುತ್ತದೆಯೋ ಅವರು ಆ ಹೂವನ್ನು ತಂದು ನನಗೆ ಗುರುದಕ್ಷಿಣೆಯಾಗಿ ಕೊಡಬೇಕು. ಅಂತಹವರಿಗೆ ನಾನು ಹೇಳಿಕೊಟ್ಟ ವಿದ್ಯೆ ಚಿರಕಾಲ ನೆನಪಿರುತ್ತದೆ. ಉಳಿದವರು ನಿರಂತರವಾಗಿ ಅಧ್ಯಯನ ಮಾಡುತ್ತಿದ್ದರಷ್ಟೇ ನಾನು ಹೇಳಿದ ವಿಷಯಗಳು ಜ್ಞಾಪಕದಲ್ಲಿರುತ್ತವೆ ಎಂದರು.

ಜ್ಞಾನ ದಕ್ಕಿಸಿಕೊಳ್ಳಲು ಬೇಕಾದ ಅರ್ಹತೆ

ಒಂದೊಳ್ಳೆ ಮಾತು

rgururaj628@gmail.com

ಒಬ್ಬ ಗುರು ತನ್ನ ಬಳಿಗೆ ವಿದ್ಯಾಭ್ಯಾಸ ಮಾಡಲು ಬರುವ ಶಿಷ್ಯರನ್ನು ಒಂದು ವರ್ಷಕ್ಕಿಂತ ಹೆಚ್ಚು ಕಾಲ ತನ್ನ ಆಶ್ರಮದಲ್ಲಿ ಇಟ್ಟುಕೊಳ್ಳುತ್ತಿರಲಿಲ್ಲ. ತನ್ನ ಬಳಿ ಇದ್ದ ಹತ್ತು ಜನ ಶಿಷ್ಯರಲ್ಲಿ ಕುಶ ಎನ್ನುವವನಿಗೆ ಹೆಚ್ಚು ಕಾಲ ಪಾಠಗಳನ್ನು ಬೋಧಿಸುತ್ತಿದ್ದರು. ಇದರಿಂದ ಆ ವರ್ಷ ವಿದ್ಯಾಭ್ಯಾಸ ಮಾಡಲು ಬಂದ ಉಳಿದ ಶಿಷ್ಯರಿಗೆ ಕುಶನ ಬಗ್ಗೆ ಹೊಟ್ಟೆಕಿಚ್ಚುಂಟಾಯಿತು.

ವರ್ಷದ ಕಡೆಯ ದಿವಸ ಹತ್ತೂ ಜನರನ್ನು ಕರೆದು, ಹತ್ತು ಬೀಜಗಳನ್ನು ಕೈಯಲ್ಲಿ ಇರಿಸಿಕೊಂಡು ತಲಾ ಒಂದೊಂದು ಬೀಜಗಳನ್ನು ತೆಗೆದುಕೊಳ್ಳುವಂತೆ ಹೇಳಿದರು. ನೀವೆಲ್ಲರೂ ನಿಮ್ಮ ನಿಮ್ಮ ಮನೆಗಳಿಗೆ ಹಿಂದಿರುಗಿ ಈ ಬೀಜಗಳನ್ನು ನಾಟಿ ಮಾಡಿ. ಒಂದು ಬೀಜದಿಂದ ಮಾತ್ರವೇ ನೀಲಿ ಬಣ್ಣದ ಹೂವು ಬಿಡುತ್ತದೆ ಯಾರ ಮನೆಯಲ್ಲಿ ಆ ನೀಲಿ ಬಣ್ಣದ ಹೂವು ಬಿಡುತ್ತದೆಯೋ ಅವರು ಆ ಹೂವನ್ನು ತಂದು ನನಗೆ ಗುರುದಕ್ಷಿಣೆಯಾಗಿ ಕೊಡಬೇಕು. ಅಂತಹವರಿಗೆ ನಾನು ಹೇಳಿಕೊಟ್ಟ ವಿದ್ಯೆ ಚಿರಕಾಲ ನೆನಪಿರುತ್ತದೆ. ಉಳಿದವರು ನಿರಂತರವಾಗಿ ಅಧ್ಯಯನ ಮಾಡುತ್ತಿದ್ದರಷ್ಟೇ ನಾನು ಹೇಳಿದ ವಿಷಯಗಳು ಜ್ಞಾಪಕದಲ್ಲಿರುತ್ತವೆ ಎಂದರು. ಹೀಗೆ ಹೂವೊಂದನ್ನು ಗುರುದಕ್ಷಿಣೆಯಾಗಿ ತೆಗೆದುಕೊಳ್ಳುವುದು ವಿಚಿತ್ರವಾಗಿದೆ, ಅದೇಕೆ ಹಾಗೆ ಗುರುಗಳೇ ಎಂದು ಶಿಷ್ಯನೊಬ್ಬ ಪ್ರಶ್ನಿಸಿದ. ಅದಕ್ಕೆ ಗುರುಗಳು, ಆ ಹೂವನ್ನು ಜಗಿದು ತಿಂದರೆ ಮಳೆಗಳು ಯಾವಾಗ ಬೀಳುತ್ತವೆ ಎಂದು ಒಂದು ತಿಂಗಳ ಮುಂಚೆಯೇ ಗೊತ್ತಾಗುವ ಜ್ಞಾನವು ಉಂಟಾಗುತ್ತದೆ ಎಂದರು.

ಇದನ್ನೂ ಓದಿ: Roopa Gururaj Column: ಭಗವಂತನ ಮೇಲೆ ಸಂಪೂರ್ಣವಾದ ನಂಬಿಕೆ

ತಿಂಗಳ ನಂತರ ಗಣನಾಥನೆನ್ನುವ ಶಿಷ್ಯನ ಹಿತ್ತಲಿನಲ್ಲಿ ನಾಟಿ ಮಾಡಿದ ಬೀಜವು ಮೊಳಕೆ ಯೊಡೆದು ಅದರಿಂದ ಹೊರಟ ಬಳ್ಳಿಯಿಂದ ನೀಲಿ ಬಣ್ಣದ ಹೂವು ಬಿಟ್ಟಿತು. ಅವನು ಸಂತೋಷ ದಿಂದ ಅದನ್ನು ಕೊಯ್ದನು. ಆದರೆ ತನ್ನ ಗುರುಗಳು ಕುಶನ ವಿಷಯದಲ್ಲಿ ಬೇಧಭಾವ ತೋರಿಸಿ ಅವನಿಗೆ ಹೆಚ್ಚಿನ ವಿದ್ಯೆಯನ್ನು ಕಲಿಸಿಕೊಟ್ಟರು ಎಂದು ಗುರುಗಳ ಮೇಲಿನ ಕೋಪದಿಂದ, ಅದನ್ನು ಗುರುಗಳಿಗೆ ಸಮರ್ಪಿಸದೆ ತಾನೇ ಜಗಿದು ತಿಂದನು.

ತಕ್ಷಣವೇ ಗಣನಾಥನಿಗೆ ಮಳೆಗಳ ಕುರಿತಾದ ಜ್ಞಾನವು ಉಂಟಾಯಿತು. ಇದರಿಂದ ಅವನು ತನ್ನ ಗ್ರಾಮದಲ್ಲಷ್ಟೇ ಅಲ್ಲ ಅಕ್ಕ ಪಕ್ಕದ ಗ್ರಾಮಗಳಲ್ಲೂ ಪ್ರಸಿದ್ಧಿಗೆ ಬಂದನು. ಹೀಗಿರುವಾಗ ಮುಂದಿನ ವರ್ಷ ಆ ಪ್ರಾಂತದಲ್ಲಿ ಬರಗಾಲ ಬಂದಿತು. ಎರಡು ವರ್ಷಗಳ ಕಾಲ ಮಳೆಗಳೇ ಬೀಳುವುದಿಲ್ಲ ಎಂದು ಗಣನಾಥನು ಹೇಳಿದ. ಅದೇ ಸಮಯದಲ್ಲಿ ಪಕ್ಕದೂರಿನವನೊಬ್ಬನು ಗಣನಾಥನಿದ್ದ ಊರಿಗೆ ಬಂದು, ನಮ್ಮ ಊರಿಗೆ ಮಹಾತ್ಮನೊಬ್ಬ ಬಂದು ಎರಡು ದಿನಗಳಲ್ಲಿ ಮಳೆಯಾಗುತ್ತದೆ ಎಂದು ಹೇಳಿದ ನಂತರ ಅದೇ ವಿಧವಾಗಿ ಮಳೆಯಾಯಿತು.

ಆದ್ದರಿಂದ ನೀವೂ ಸಹ ಅವನನ್ನು ನಿಮ್ಮೂರಿಗೆ ಆಹ್ವಾನಿಸಿ ಕರೆತಂದಲ್ಲಿ ನಿಮ್ಮ ಊರಿನಲ್ಲೂ ಮಳೆಯಾಗುತ್ತದೆ ಎಂದು ಹೇಳಿದ. ಪಕ್ಕದೂರಿನವನ ಮಾತಿನಂತೆ ಆ ಊರಿನ ಗ್ರಾಮಾಧಿಕಾರಿ ಆ ಮಹಾತ್ಮನನ್ನು ತಮ್ಮ ಊರಿಗೆ ಬರಮಾಡಿಕೊಂಡ. ಅವನು ಬಂದು ನಾಡಿದ್ದು ಮಳೆಯಾಗುತ್ತದೆ ಎಂದು ಹೇಳಿದ ನಂತರ ಅದರ ಪ್ರಕಾರವೇ ಈ ಊರಿನಲ್ಲಿಯೂ ಮಳೆಯಾಯಿತು.

ಹಾಗೆ ಬಂದ ಮಹಾತ್ಮ ಯಾರೆಂದು ನೋಡಿದರೆ ಅವನೇ ಗುರುಗಳ ಪ್ರೀತಿಯ ಶಿಷ್ಯ ಕುಶ. ಅವನನ್ನು ಭೇಟಿಯಾದ ಗಣನಾಥನು ಗುರುಗಳು ಏನೋ ತಂತ್ರ ಹೂಡಿದ್ದಾರೆಂದು ಕುಹಕ ವಾಡಿದನು. ಅದಕ್ಕೆ ಕುಶನು, ಇದರಲ್ಲಿ ಗುರುಗಳ ತಪ್ಪೇನೂ ಇಲ್ಲ. ಅವರು ಪ್ರತಿಯೊಬ್ಬರಿಗೂ ನೀಲಿ ಬಣ್ಣದ ಹೂವು ಬಿಡುವ ಬೀಜಗಳನ್ನೇ ಕೊಟ್ಟಿದ್ದರು.

ಆದರೆ ನನ್ನ ಹೊರತು ನೀವಾರೂ ಗುರುಗಳಿಗೆ ಹೂವು ತೆಗೆದುಕೊಂಡು ಗುರುದಕ್ಷಿಣೆಯನ್ನು ಕೊಡಲು ಹಿಂದಿರುಗಿ ಹೋಗಲಿಲ್ಲ. ನಾನು ಹೂವನ್ನು ಅವರಿಗೆ ಅರ್ಪಿಸಲು ಹೋದಾಗ ಅವರು ಅಕಾಲ ಮಳೆಯನ್ನು ಸುರಿಸುವ ಶಕ್ತಿಯನ್ನು ನನಗೆ ಹೆಚ್ಚುವರಿಯಾಗಿ ಪ್ರಸಾದಿಸಿದರು ಎಂದು ಕೃತಜ್ಞತೆಯಿಂದ ಕೈಮುಗಿದು ಹೇಳಿದ. ಅದನ್ನು ಕೇಳಿದ ಗಣನಾಥನಿಗೆ ಭಕ್ತಿ ಮತ್ತು ಅರ್ಹತೆಗಳನ್ನು ಅವಲಂಬಿಸಿ ಜ್ಞಾನವು ಲಭಿಸುತ್ತದೆ ಎನ್ನುವ ಸತ್ಯ ತಿಳಿಯಿತು.

ವಿದ್ಯೆಗೆ ವಿನಯವೇ ಭೂಷಣ. ಎಷ್ಟೇ ವಿದ್ಯೆಯನ್ನು ಪಡೆದುಕೊಂಡರೂ ಅಲ್ಲಿ ವಿನಯ, ನಿರಹಂಕಾರ , ಸಮರ್ಪಣ ಭಾವ ಇರದಿದ್ದರೆ ಸಕಲ ವಿದ್ಯಗಳೂ ನಿರರ್ಥಕ. ಇದು ನಮ್ಮೆಲ್ಲರಿಗೂ ಪಾಠವಾಗಲಿ.