ಫೋಟೋ ಗ್ಯಾಲರಿ ಗುಜರಾತ್​ ವಿಮಾನ ಪತನ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Roopa Gururaj Column: ಭಗವಂತನ ಮೇಲೆ ಸಂಪೂರ್ಣವಾದ ನಂಬಿಕೆ

ಭಗವಂತನ ಮೇಲೆ ಸಂಪೂರ್ಣ ನಂಬಿಕೆಯಿಂದ ಶರಣಾಗತರಾದವರಿಗೆ ಕೂಡಾ ಒಮ್ಮೊಮ್ಮೆ ಆತ ನಮ್ಮನ್ನು ಕೈಬಿಟ್ಟನೇನೋ ಎನ್ನುವ ಅನುಮಾನವುಂಟಾಗುತ್ತದೆ. ಲೋಕದಲ್ಲಿ ಕೇವಲ ಲಾಭನಷ್ಟಗಳ ಮೇಲೆ ದೃಷ್ಟಿ ನೆಟ್ಟರೆ ಭಗವಂತನು ನಮ್ಮನ್ನು ಕಷ್ಟ ಕಾಲದಲ್ಲಿ ಕೈ ಬಿಟ್ಟನೇನೋ ಎನ್ನುವಂತೆ ಕಾಣುತ್ತದೆ, ಆದರೆ ಭಗವಂತ ನಂಬಿದವರನ್ನು ಎಂದಿಗೂ ಕೈಬಿಡನು.

ಭಗವಂತನ ಮೇಲೆ ಸಂಪೂರ್ಣವಾದ ನಂಬಿಕೆ

ಒಂದೊಳ್ಳೆ ಮಾತು

rgruraj628@gmail.com

ಒಂದು ರಾತ್ರಿ ಒಬ್ಬನಿಗೆ ಒಂದು ಕನಸು ಬಿದ್ದಿತು. ಆ ಕನಸಿನಲ್ಲಿ ಅವನು ಭಗವಂತನೊಂದಿಗೆ ಸಮುದ್ರದ ದಂಡೆಯಲ್ಲಿ ನಡೆಯುತ್ತಿದ್ದ. ಮೇಲೆ ಆಕಾಶದಲ್ಲಿ ಅವನ ಜೀವನದ ಅನೇಕ ಘಟ್ಟಗಳು ದೃಶ್ಯ ರೂಪದಲ್ಲಿ ಕಾಣಿಸುತ್ತಿದ್ದವು. ಪ್ರತಿಯೊಂದು ದೃಶ್ಯದಲ್ಲೂ ಎರಡೆರಡು ಜೊತೆ ಹೆಜ್ಜೆ ಗುರುತುಗಳು ಕಾಣುತ್ತಿದ್ದವು. ಅದರಲ್ಲಿ ಒಂದು ಅವನದಾದರೆ ಮತ್ತೊಂದು ಭಗವಂತನದು.

ಕಡೆಯ ದೃಶ್ಯ ಆಕಾಶದಲ್ಲಿ ಮೂಡಿ ಮರೆಯಾಗುತ್ತಿದ್ದಂತೆಯೇ ತಾನು ನಡೆದು ಬಂದ ಹಾದಿಯನ್ನು ಅವನು ತಿರಿಗಿ ನೋಡಿದ. ಮರಳಿನಲ್ಲಿ ಅನೇಕ ಕಡೆ ಕೇವಲ ಒಂದೇ ಜೊತೆ ಹೆಜ್ಜೆ ಗುರುತುಗಳು ಕಾಣಿಸುತ್ತಿದ್ದವು. ಅದೂ ಸಹ ತಾನು ಯಾವ ಪರಿಸ್ಥಿತಿಗಳಲ್ಲಿ ಅತ್ಯಂತ ಕಷ್ಟದಿಂದ ಕುಗ್ಗಿ ಹೋಗಿದ್ದನೋ ಆ ಸಮಯದಲ್ಲೆಲ್ಲಾ ಅಲ್ಲಿ ಅವನಿಗೆ ಕೇವಲ ಒಂದೇ ಒಂದು ಜೊತೆ ಹೆಜ್ಜೆ ಗುರುತುಗಳಿರುವುದನ್ನು ಅವನು ಗಮನಿಸಿದ.

ಇದೇನೆಂದು ಅವನು ಭಗವಂತನನ್ನು ಪ್ರಶ್ನಿಸಿದ. ದೇವಾ, ನಾನು ನಿನ್ನನ್ನು ಅನುಸರಿಸುವುದಕ್ಕೆ ಸಿದ್ಧನಾಗಿದ್ದರೆ ನೀನು ನನ್ನನ್ನು ಯಾವ ಪರಿಸ್ಥಿತಿಯಲ್ಲೂ ಕೈಬಿಡುವುದಿಲ್ಲವೆಂದೂ, ದಾರಿ ಯುದ್ದಕ್ಕೂ ನನಗೆ ನೀನು ಜೊತೆಯಾಗಿರುತ್ತೀಯೆಂದು ಭರವಸೆ ಕೊಟ್ಟೆಯಲ್ಲವೇ? ಆದರೆ ನಾನು ಜೀವನದಲ್ಲಿ ಕಷ್ಟಗಳನ್ನು ಎದುರಿಸುತ್ತಿದ್ದಾಗ ಮತ್ತು ಚಿಂತಾಜನಕ ಸ್ಥಿತಿಯಲ್ಲಿದ್ದಾಗ, ನನಗೆ ಮರಳಿನಲ್ಲಿ ಕೇವಲ ಒಂದೇ ಒಂದು ಜೊತೆ ಹೆಜ್ಜೆ ಗುರುತುಗಳು ಕಾಣಿಸುತ್ತಿವೆ, ಇದನ್ನು ನಾನು ಹೇಗೆ ಅರ್ಥ ಮಾಡಿಕೊಳ್ಳಬೇಕೋ ತಿಳಿಯುತ್ತಿಲ್ಲ.

ಇದನ್ನೂ ಓದಿ: Roopa Gururaj Column: ಬನಶಂಕರಿ ದೇವಿಯ ಮಹಾತ್ಮೆ

ನಿಜವಾಗಲೂ ನಿನ್ನ ಅವಶ್ಯಕತೆ ನನಗೆ ಹೆಚ್ಚಾಗಿ ಇದ್ದ ಸಮಯದಲ್ಲಿ ನೀನು ನನ್ನನ್ನು ಏಕೆ ಬಿಟ್ಟು ಹೊರಟು ಹೋದೆ ಸ್ವಾಮಿ? ಎಂದು ಕೇಳಿದ.

ಅದಕ್ಕೆ ಭಗವಂತ ನಕ್ಕು, ಮಗೂ, ನಾನು ನಿನ್ನನ್ನು ಬಹಳಷ್ಟು ಪ್ರೀತಿಸುತ್ತೇನೆ. ನಿನ್ನನ್ನು ಬಿಟ್ಟು ಹೋಗುವ ಪ್ರಶ್ನೆಯಾದರೂ ಏತಕ್ಕೆ ಉದ್ಭವಿಸುತ್ತದೆ? ನೀನು ದುಃಖಕ್ಕೆ ಮತ್ತು ಕಷ್ಟಗಳಿಗೆ ಈಡಾದ ಸಮಯದಲ್ಲಿ ನಿನಗೆ ಕಂಡು ಬಂದ ಒಂದೇ ಜೊತೆ ಹೆಜ್ಜೆ ಗುರುತುಗಳು ನನ್ನವೇ; ಆ ಸಮಯದಲ್ಲಿ ನಾನು ನಿನ್ನನ್ನು ನನ್ನ ಭುಜದ ಮೇಲೆ ಹೊತ್ತುಕೊಂಡು ನಡೆಯುತ್ತಿದ್ದೆ ಎಂದು ಹೇಳಿದ.

ಭಗವಂತನ ಮೇಲೆ ಸಂಪೂರ್ಣ ನಂಬಿಕೆಯಿಂದ ಶರಣಾಗತರಾದವರಿಗೆ ಕೂಡಾ ಒಮ್ಮೊಮ್ಮೆ ಆತ ನಮ್ಮನ್ನು ಕೈಬಿಟ್ಟನೇನೋ ಎನ್ನುವ ಅನುಮಾನವುಂಟಾಗುತ್ತದೆ. ಲೋಕದಲ್ಲಿ ಕೇವಲ ಲಾಭನಷ್ಟ ಗಳ ಮೇಲೆ ದೃಷ್ಟಿ ನೆಟ್ಟರೆ ಭಗವಂತನು ನಮ್ಮನ್ನು ಕಷ್ಟ ಕಾಲದಲ್ಲಿ ಕೈ ಬಿಟ್ಟನೇನೋ ಎನ್ನುವಂತೆ ಕಾಣುತ್ತದೆ, ಆದರೆ ಭಗವಂತ ನಂಬಿದವರನ್ನು ಎಂದಿಗೂ ಕೈಬಿಡನು.

ಈ ರೀತಿಯ ನಂಬಿಕೆ ನಮಗೆ ಮೂಡಲು ಸಾಧ್ಯವೇ? ಅದೆಷ್ಟೇ ದಿನವೂ ಪೂಜೆ ಪಾರಾಯಣದಲ್ಲಿ ನಿರತರಾಗಿದ್ದರು ಸಹ, ಆಗಾಗ ಕಷ್ಟದಲ್ಲಿ ಮನಸ್ಸಿನ ಸಮತೋಲನವನ್ನು ಕಳೆದುಕೊಳ್ಳುತ್ತೇವೆ. ಅದೆಷ್ಟೇ ಓದಿದ್ದರೂ, ತಿಳಿದಿದ್ದರೂ ಸಹ ಕಷ್ಟಗಳು ಎದುರಾದಾಗ ಮನಸ್ಸು ಒಂದು ರೀತಿ ಮಂಕು ಹಿಡಿದಂತಾಗುತ್ತದೆ. ಪ್ರಪಂಚಕ್ಕೆಲ್ಲ ಬುದ್ಧಿ ಹೇಳುವ ನಾವು ಒಂದು ಹಂತದ ನಂತರ ಆಶಾ ಭಾವನೆಯನ್ನು ಕಳೆದುಕೊಂಡು ಖಿನ್ನತೆಗೆ ಜಾರುತ್ತೇವೆ.

ನಾವೇ ಆಚರಿಸುತ್ತಿದ್ದ ಅನೇಕ ವಿಚಾರಗಳು, ಹೇಳುತ್ತಿದ್ದ ವಿಷಯಗಳು ಆ ಕಷ್ಟದ ಬೇಗುದಿಯಲ್ಲಿ ಮರೆತಂತಾಗುತ್ತದೆ. ಈ ರೀತಿ ಆಗುವುದು ಸಹಜವೇ. ಆದರೆ ನಾವು ಮರೆತರೂ ಕೂಡ ಭಗವಂತ ನಮ್ಮನ್ನು ಮರೆಯುವುದಿಲ್ಲ. ಪ್ರತ್ಯಕ್ಷವಾಗಿ ಪರೋಕ್ಷವಾಗಿ ನಾನಾ ರೀತಿಯಲ್ಲಿ ನಮಗೆ ಒದಗಿ ಬರುತ್ತಾ ಇರುತ್ತಾನೆ. ಸೂಕ್ಷ್ಮವಾಗಿ ಗಮನಿಸಿದರೆ ಯಾರೋ ಸ್ನೇಹಿತರ ರೂಪದಲ್ಲಿ, ಪರಿಚಿತರ ಸಹಾಯದಲ್ಲಿ ಮನೆಯವರ ಅಕ್ಕರೆಯಲ್ಲಿ ಭಗವಂತನ ಇರುವುವು ನಮಗೆ ಸದಾ ಗೋಚರವಾಗು ತ್ತದೆ. ಅದನ್ನು ಗಮನಿಸದೆ ಹೋದಾಗ ನಾವು ಒಂಟಿ ಎನಿಸುವ ಭಾವ ಕಾಡುತ್ತದೆ. ಇಂತಹ ಸಮಯದಲ್ಲೇ ನಾವು ಭಗವಂತನ ಬಗ್ಗೆ ಇನ್ನೂ ಹೆಚ್ಚಿನ ನಂಬಿಕೆಯನ್ನು ಇರಿಸಿಕೊಂಡು, ಏನಾದರೂ ಆಗಲಿ ಅವನು ನಮ್ಮನ್ನು ಕಾಪಾಡುತ್ತಾನೆ ಎನ್ನುವ ಧೈರ್ಯ ಬೆಳೆಸಿಕೊಳ್ಳಬೇಕು.

ಇಂತಹ ಮಾತುಗಳೇ ನಮ್ಮನ್ನು ಅಧೀರರಾಗಿಸದೆ, ಸಾವಿಗೆ ಶರಣು ಹೋಗದಂತೆ ಬದುಕನ್ನ ಆತ್ಮವಿಶ್ವಾಸದಿಂದ ಎದುರಿಸುವಂತೆ ಪ್ರೇರಣೆಯಾಗುತ್ತದೆ.