ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Harish Kera Column: ಕಪ್‌ ನಮ್ಮದೇ, ತಪ್ಪೂ ನಮ್ಮದೇ

ತುಸು ಹೊತ್ತಿನಲ್ಲಿ, ತ್ರಿವೇಣಿ ಸಂಗಮದಲ್ಲಿ ಹೀಗಾಯಿತಂತೆ ಎಂಬ ಸುದ್ದಿ ನಿಧಾನವಾಗಿ ಎಲ್ಲ ಕಡೆ ಪಸರಿಸಲು ಶುರುವಾಯಿತು. “ಶಾಂತರಾಗಿರಿ, ಯಾವುದೇ ಗೊಂದಲವಿಲ್ಲ. ನಿಮ್ಮ ಪಾಡಿಗೆ ಸ್ನಾನ ಮುಗಿಸಿ, ಹೊರಟು ಹೋಗಿ" ಎಂದು ಮೈಕುಗಳಲ್ಲಿ ಪೊಲೀಸರು ಅನೌನ್ಸ್ ಮಾಡುತ್ತಲೇ ಇದ್ದರೂ, ಮನದಲ್ಲಿ ಏನೋ ಕಳವಳ.

ಕಪ್‌ ನಮ್ಮದೇ, ತಪ್ಪೂ ನಮ್ಮದೇ

ಹರೀಶ್‌ ಕೇರ ಹರೀಶ್‌ ಕೇರ Jun 5, 2025 7:37 AM

ಕಾಡುದಾರಿ

ಜನವರಿ 29, 2025. ಉತ್ತರ ಪ್ರದೇಶದ ಪ್ರಯಾಗ್‌ರಾಜ್. ಮಹಾಕುಂಭಮೇಳ. ಗಂಗಾ-ಯಮುನಾ-ಸರ‌ಸ್ವತಿಗಳ ತ್ರಿವೇಣಿ ಸಂಗಮದಲ್ಲಿ ಅದೆಷ್ಟು ಜನ ಸೇರಿದ್ದರೋ ಗೊತ್ತಿಲ್ಲ. ನಡುರಾತ್ರಿ ಮೂರು ಗಂಟೆ. ಏನೋ ಸುದ್ದಿ, ಏನೋ ತಲ್ಲಣ. ಮಲಗಿದ್ದ ಜನರ ಮೇಲೆ ದಬದಬನೆ ಸಾವಿರಾರು ಜನ ತುಳಿದುಕೊಂಡು ಓಡಿದರು. ಪವಿತ್ರಸ್ನಾನದ ನಿರೀಕ್ಷೆಯಲ್ಲಿ ಬಂದು ರಸ್ತೆಯಲ್ಲಿ ಮಲಗಿದ್ದವರು ಗುಂಪುಗಳ ಕಾಲುಗಳಡಿ ಸಿಕ್ಕಿ ಸತ್ತವರು ಮೂವತ್ತು ಜನ. ಗಾಯಗೊಂಡವರು ಅರುವತ್ತು ಜನ. ಇದೆಲ್ಲವೂ ನಡೆಯುತ್ತಿದ್ದ ಅದೇ ಹೊತ್ತಿನಲ್ಲಿ, ಅಲ್ಲಿಂದಾಚೆಗೆ ಒಂದೆರಡು ಕಿಲೋಮೀಟರ್ ದೂರದಲ್ಲಿ ಗಂಗೆಯ ಇನ್ನೊಂದು ದಡದಲ್ಲಿ ಇದ್ದ ನಮಗೆ ಗೊತ್ತೇ ಇರಲಿಲ್ಲ. ಅಲ್ಲೂ ಜನಸಂದಣಿ, ಮೇಲಿನಿಂದ ಅಕ್ಕಿ ಕಾಳು ಚೆಲ್ಲಿದರೆ ನೆಲಕ್ಕೆ ಬೀಳದಂತೆ ಒತ್ತೊತ್ತಿಕೊಂಡು ಇತ್ತು. ಎಲ್ಲರೂ ಸಾಗು ತ್ತಿದ್ದುದು ಬೆಳಗಿನ ಮೌನಿ ಅಮಾವಾಸ್ಯೆಯ ಮುಹೂರ್ತದ ಪವಿತ್ರ ಸ್ನಾನಕ್ಕೆ.

ತುಸು ಹೊತ್ತಿನಲ್ಲಿ, ತ್ರಿವೇಣಿ ಸಂಗಮದಲ್ಲಿ ಹೀಗಾಯಿತಂತೆ ಎಂಬ ಸುದ್ದಿ ನಿಧಾನವಾಗಿ ಎಲ್ಲ ಕಡೆ ಪಸರಿಸಲು ಶುರುವಾಯಿತು. “ಶಾಂತರಾಗಿರಿ, ಯಾವುದೇ ಗೊಂದಲವಿಲ್ಲ. ನಿಮ್ಮ ಪಾಡಿಗೆ ಸ್ನಾನ ಮುಗಿಸಿ, ಹೊರಟುಹೋಗಿ" ಎಂದು ಮೈಕುಗಳಲ್ಲಿ ಪೊಲೀಸರು ಅನೌನ್ಸ್ ಮಾಡುತ್ತಲೇ ಇದ್ದರೂ, ಮನದಲ್ಲಿ ಏನೋ ಕಳವಳ.‌ ವಾತಾವರಣದಲ್ಲಿ ಒಂದು ಅದೃಶ್ಯ ಆತಂಕ ಇದ್ದಂತೆ. ಸಂಗಮದ ಬಳಿಯ ರೈಲ್ವೇ ಸ್ಟೇಷನ್‌ನಲ್ಲಿ ಇದ್ದಕ್ಕಿದ್ದಂತೆ ಜನಸಂದಣಿ ಹೆಚ್ಚಿತು. ನಾಲ್ಕಾರು ಕಡೆಗಳಿಂದ ಬಂದು ಸೇರುವ ರಸ್ತೆಗಳು ಒಂದಾಗುವಲ್ಲಿ ಅಷ್ಟೂ ಕಡೆಗಳಿಂದ ಬಂದು ಸೇರಿದ ಜನ ಇನ್ಯಾವುದೋ ಕಡೆಗೆ ಸರಿಯಲು ಒತ್ತರಿಸುತ್ತಿದ್ದಂತೆ ಜನಪ್ರವಾಹಗಳು ಪರಸ್ಪರ ಪ್ರತಿರೋಧಿಸಲು ತೊಡಗಿದವು.

ಸಾವಿರಾರು ಮಂದಿ ಅಲೆಗಳಂತೆ ನುಗ್ಗುವಾಗ ಭಯ ಶುರುವಾಯಿತು. ದಿಢೀರ್ ಅಡಿತಪ್ಪಿ ಜಾರಿ ಬಿದ್ದರೆ? ಸುತ್ತಮುತ್ತ ಇರುವ ಸಾವಿರಾರು ಜನ ತುಳಿದುಕೊಂಡು ಓಡಿದರೆ? ಪಕ್ಕೆಲುಬುಗಳು ಮುರಿದು, ದೇಹ ಜಜ್ಜಿಯಾಗಿ, ಹೃದಯಕ್ಕೆ ರಕ್ತ, ಶ್ವಾಸಕೋಶ ಗಾಳಿಯ ಪರಿಚಲನೆ ನಿಂತುಹೋಗಿ ಬಿಟ್ಟರೆ... ಇಕ್ಕಟ್ಟಾದ ಜಾಗದಲ್ಲಿ ದಿಗಿಲು ದುಪ್ಪಟ್ಟು.

ಇದನ್ನೂ ಓದಿ: Harish Kera Column: ಬೆಂಗಳೂರಿನ ಮಳೆಗೊಂದು ಫಿಲಾಸಫಿ

ನಿನ್ನೆ ಬೆಂಗಳೂರಿನಲ್ಲಿ ಸಂಭವಿಸಿದ ದಾರುಣ ಕಾಲ್ತುಳಿತ, ಜನರ ಸಾವಿನ ದೃಶ್ಯಗಳನ್ನು ನೋಡು ವಾಗಲೂ ಇದೇ ನೆನಪು ಮರುಕಳಿಸುತ್ತಿತ್ತು. ಬಹುಶಃ ಒಂದು ಗುಂಪಿನಲ್ಲಿ ಸಿಲುಕಿಕೊಂಡು ಉಸಿರು ಗಟ್ಟಿದ, ಕಾಲ್ತುಳಿತದಂಥ ಸನ್ನಿವೇಶವನ್ನು ನೋಡಿದ ವ್ಯಕ್ತಿ ಜೀವಮಾನದಲ್ಲಿ ಎಂದೂ ಅದನ್ನು ಮರೆಯುವುದಿಲ್ಲ. ಜನಸಂದಣಿ ನೋಡಿದರೆ ಅದೇ ನೆನಪಾಗುತ್ತದೆ. ಮನುಷ್ಯ ಸಂಘಜೀವಿ ನಿಜ, ಆದರೆ ಇನ್ನೊಬ್ಬನನ್ನು ತುಳಿದೇ ಕೊಂದುಹಾಕುವಷ್ಟು ಸಂಘಜೀವಿಯಾದರೆ ಕಷ್ಟ. ಕಾಲ್ತುಳಿತವೆಂಬುದು ಒಂದು ವಿಚಿತ್ರ ಸನ್ನಿವೇಶ. ಯಾರಿಗೂ ಯಾರನ್ನೂ ಇಲ್ಲಿ ತುಳಿಯುವ, ಕೊಲ್ಲುವ ಉದ್ದೇಶವಿರುವುದಿಲ್ಲ. ತುಳಿಯುವವರಿಗೂ ತುಳಿಸಿಕೊಳ್ಳುವವರಿಗೂ ಈ ಜಾಗದಿಂದ ಪಾರಾಗಬೇಕು ಎಂಬ ಒಂದೇ ಹಪಾಹಪಿ ಇರುತ್ತದೆ. ಯಾವುದೋ ಒಂದು ಕ್ಷಣದಲ್ಲಿ ತುಳಿಯುತ್ತಿರುವವನು ಅಡಿತಪ್ಪಿ ತಾನೇ ಕೆಳಗೆ ಬಿದ್ದು ತುಳಿತಕ್ಕೆ ಬಲಿಯಾಗಬಹುದು. ಆದರೆ ಕೆಳಗೆ ಬಿದ್ದವನು ಪಾರಾಗುವ ಚಾನ್ಸೇ ಇಲ್ಲ. ತಾನು ಯಾರಿಂದ ಸಾಯುತ್ತಿರುವೆನೋ, ತಾನು ಯಾರನ್ನು ಕೊಂದೆನೋ, ಯಾರಿಗಾಗಿ ಯಾಕೆ ಇದೆಲ್ಲ ನಡೆಯುತ್ತಿದೆಯೋ ಯಾವುದೂ ಅರ್ಥವಾಗುವ ಮುನ್ನವೇ ಎಲ್ಲ ಘಟಿಸಿರುತ್ತದೆ.

ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಅನಾಹುತವನ್ನು ತಪ್ಪಿಸಬಹುದಾಗಿತ್ತು. ಆರ್‌ಸಿಬಿ ಅಭಿಮಾನಿಗಳು ಅಷ್ಟೊಂದು ಸಂಖ್ಯೆಯಲ್ಲಿ ಬರುತ್ತಾರೆ ಎಂಬ ಅಂದಾಜು ಇಂಟಲಿಜೆನ್ಸ್‌ಗೆ ಇರಬಹುದಿತ್ತು. ಪೊಲೀಸರು ಲಾಠಿ ಬೀಸಿ ಭಯ ಸೃಷ್ಟಿಸುವುದನ್ನು ತಪ್ಪಿಸಬಹುದಿತ್ತು. ಆರ್‌ಸಿಬಿ ಅಭಿಮಾನಿಗಳು ತಮ್ಮನ್ನು ನಿಯಂತ್ರಿಸಿಕೊಂಡು ತಾವಿದ್ದಲ್ಲಿಂದಲೇ ಹಾರೈಸಬಹುದಿತ್ತು- ಎಲ್ಲವೂ ದುರ್ಘಟನೆ ಘಟಿಸಿದ ಬಳಿಕ ಆಡಬಹುದಾದ ಮಾತುಗಳಷ್ಟೇ. ಶೋಕದಿಂದ ಪಾಠ ಕಲಿಯುವ ಮನಸ್ಸಿದ್ದರೆ ಕಲಿಯಬಹುದು. ಮೂಲತಃ, ಗುಂಪು ಮನಸ್ಥಿತಿ ಇರುವಲ್ಲಿ ಕಾಲ್ತುಳಿತ ಸಂಭವನೀಯ ಎಂಬ ಸರಳ ಸತ್ಯ ಗೊತ್ತಿರಬೇಕು. ಕಾಲ್ತುಳಿತ ಸಂಭವಿಸುವುದು ಹೇಗೆ ಎಂಬುದು ಗೊತ್ತಿದ್ದರೆ ಇಂಥ ಗುಂಪುಗಳ ನಡುವೆ ಹೋಗುವುದನ್ನೇ ತಪ್ಪಿಸಬಹುದು.

ಇತ್ತೀಚಿನ ವರ್ಷಗಳಲ್ಲಿ ಕಾಲ್ತುಳಿತಗಳು ಮರುಕಳಿಸುತ್ತಿವೆ. ಈ ಒಂದೇ ವರ್ಷದಲ್ಲಿ ಘಟಿಸಿದ ಪ್ರಯಾಗ್‌ರಾಜ್, ದಿಲ್ಲಿ ರೈಲು ನಿಲ್ದಾಣ, ತಿರುಪತಿ ಕಾಲ್ತುಳಿತಗಳನ್ನು ನೆನಪಿಸಿಕೊಳ್ಳಬಹುದು. ಇಲ್ಲಿ ಮಾತ್ರವಲ್ಲ, ವಿದೇಶಗಳಲ್ಲೂ ಸಾಕಷ್ಟಾಗಿವೆ. ಜನ ಭಯಭೀತರಾಗಿ ಅಸ್ತವ್ಯಸ್ತವಾಗಿ ಓಡುವುದು ಯಾಕೆ ಎಂಬುದು ಮನೋವಿಜ್ಞಾನದ ಸಂಗತಿಯಷ್ಟೇ ಅಲ್ಲ. ‘ಕ್ರೌಡ್ ಡೈನಾಮಿಕ್ಸ್‌ ’ ಅಥವಾ ಜನಸಮೂಹದ ಚಲನಶಾಸ್ತ್ರದ ಅಧ್ಯಯನದಿಂದ ಇದರ ಪಾಠಗಳನ್ನು ನಿಖರವಾಗಿ ಕಲಿಯಬಹುದು. ಕೆಲವಷ್ಟು ಕಾಲ್ತುಳಿತಗಳನ್ನು ಒಟ್ಟಾಗಿ ಕಂಪ್ಯೂಟರ್ ಮಾಡೆಲಿಂಗ್ ಮೂಲಕ ಈಗ ಅಧ್ಯಯನ ಮಾಡಲು ಸಾಧ್ಯ. ಆ ಮೂಲಕ ಜನಸಮೂಹದ ನಡವಳಿಕೆಯನ್ನು ಅರ್ಥ ಮಾಡಿಕೊಳ್ಳಬಹುದು ಹಾಗೂ ಹೆಚ್ಚಿನ ಅಪಾಯದ ಘಟನೆಗಳನ್ನು ತಡೆಗಟ್ಟಬಹುದು ಎಂಬುದು ತಜ್ಞರ ಆಶಯ.

ನೂಕುನುಗ್ಗಲುಗಳಲ್ಲಿ ಸಾವುಗಳು ಸಂಭವಿಸುವುದು ಹೇಗೆ? ಈ ಬಗ್ಗೆ ಅಧ್ಯಯನ ಮಾಡಿದ್ದಾನೆ ಡರ್ಕ್ ಹೆಲ್ಬಿಂಗ್ (Dirk Helbing) ಎಂಬ ತಜ್ಞ. ಜ್ಯೂರಿಚ್‌ನಲ್ಲಿ ಕಂಪ್ಯೂಟೇಶನಲ್ ಸೋಷಿಯಲ್ ಸೈನ್ಸ್ ಪ್ರೊಫೆಸರ್ ಆಗಿರುವ ಇವನು ಕ್ರೌಡ್ ಡೈನಾಮಿಕ್ಸ್‌ನಲ್ಲಿ ಜಾಗತಿಕ ತಜ್ಞ. 2006ರಲ್ಲಿ ಹಜ್‌ನಲ್ಲಿ ಭಾರಿ ಕಾಲ್ತುಳಿತ ಸಂಭವಿಸಿ 362 ಯಾತ್ರಿಕರು ಸತ್ತುಹೋದರು.‌ ಅಂದಿನಿಂದ ಅಲ್ಲಿ ಹೊಸ ಗುಂಪು ನಿಯಂತ್ರಣ ವ್ಯವಸ್ಥೆಯನ್ನೇ ಅಳವಡಿಸಲಾಯಿತು. ಇದನ್ನು ಅಧ್ಯಯನ ಮಾಡಿದ ಹೆಲ್ಬಿಂಗ್ ‘ಬ್ಲ್ಯಾಕ್ ಹೋಲ್ ಎಫೆಕ್ಟ್’ ಅಥವಾ ಕಪ್ಪು ಕುಳಿ ಪರಿಣಾಮ ಎಂಬ ಪರಿಕಲ್ಪನೆಯನ್ನು ಮುಂದಿಟ್ಟ. ಅದರ ಪ್ರಕಾರ, ಜನಜಂಗುಳಿ ಒತ್ತೊತ್ತಾಗಿ ಒಬ್ಬರಿಗೊಬ್ಬರು ಅಂಟಿಕೊಂಡಂತೆ ಚಲಿಸುತ್ತಿರುವಾಗ ಒಬ್ಬೊಬ್ಬನ ಬಲವೂ ಸೇರಿಕೊಂಡು ಒಂದು ಗುಂಪಿನ ಬಲವಾಗುತ್ತದೆ. ಇವೆಲ್ಲವೂ ಸೇರಿಕೊಂಡು ಒಂದು ಫೋರ್ಸ್ ಚೈನ್ ಅಥವಾ ಶಕ್ತಿಯ ಸರಪಣಿಯನ್ನು ಸೃಷ್ಟಿಸುತ್ತದೆ. ಇದು ವ್ಯಕ್ತಿಯನ್ನು ಹಲವು ಕಡೆಗಳಿಂದ ಅನಿರೀಕ್ಷಿತವಾಗಿ ಒತ್ತಬಹುದು. ಈ ತಳ್ಳುವಿಕೆ ನೂಕುವಿಕೆ‌ಗಳು ಯಾರೋ ಒಬ್ಬನನ್ನೋ ಇಬ್ಬರನ್ನೋ ಇದ್ದಕ್ಕಿದ್ದಂತೆ ಕೆಳಗೆ ಬೀಳುವಂತೆ ಮಾಡಬಹುದು. ಹೀಗೆ ವ್ಯಕ್ತಿ ಕೆಳಗೆ ಬಿದ್ದಾಗ, ಅಲ್ಲಿ ಒಂದು ‘ಕುಳಿ’ ಸೃಷ್ಟಿಯಾಗುತ್ತದೆ.

ಆಗ ಅವರ ಪಕ್ಕದಲ್ಲಿದ್ದವರು ಒಂದು ಬದಿಯಿಂದ ಒತ್ತಡದ ಶೂನ್ಯತೆ, ಮತ್ತೊಂದು ಕಡೆಯಿಂದ ಭಾರಿ ಒತ್ತಡವನ್ನು ಅನುಭವಿಸುತ್ತಾರೆ. ಹೀಗಾಗಿ, ಅವರೂ ಕೆಳಗೆ ಬೀಳುತ್ತಾರೆ. ಇದು ಅವರು ಎಷ್ಟೇ ಶಕ್ತಿವಂತರಾದರೂ ಸಂಭವಿಸುತ್ತದೆ. ಕಾರಣ ಗುಂಪಿನ ಒತ್ತಡ ಅಷ್ಟು ಬಲವಾಗಿ ಇರುವುದರಿಂದ. ಹೀಗೆ ಒಬ್ಬರ ಮೇಲೊಬ್ಬರು ಬೀಳುತ್ತಾರೆ. ಹಿಂದಿದ್ದವರು ತಮ್ಮ ಹಿಂದಿದ್ದವರಿಂದ ತಳ್ಳಿಸಿ ಕೊಳ್ಳುತ್ತಿರುವುದರಿಂದ ಅವರೂ ಅಸಹಾಯಕರೇ. ಹೀಗೆ ಶರೀರಗಳೂ ಬೀಳುತ್ತ, ಅವರ ಮೇಲೆ ಹತ್ತಾರು ನೂರಾರು ಶರೀರಗಳ ಭಾರಗಳು ಬೀಳುತ್ತವೆ ಅಥವಾ ಓಡಾಡುತ್ತವೆ. ಹೀಗಾದಾಗ ಏನಾಗುತ್ತದೆ ಎಂದು ಊಹಿಸಬಹುದು. ನೂಕುನುಗ್ಗಲಿನಲ್ಲಿ ಅನೇಕ ಜನರು ಬಿದ್ದು ತುಳಿತಕ್ಕೊಳಗಾಗಬಹುದಾದರೂ, ಸಾವಿಗೆ ಸಾಮಾನ್ಯ ಕಾರಣವೆಂದರೆ ಎದೆಯ ಸಂಕೋಚನ ಅಥವಾ ಉಸಿರು ಕಟ್ಟುವಿಕೆ.ದೇಹದ ಮೇಲೆ ಬೀಳುವ ಬಾಹ್ಯ ಒತ್ತಡ ಮನುಷ್ಯನ ಉಸಿರಾಟವನ್ನು ತಡೆಯುವಾಗ ಸಂಭವಿಸುವ ಅಪಾಯಕಾರಿ ಸ್ಥಿತಿ. ನಾವು ಉಸಿರಾಡುವಾಗ ನಮ್ಮ ಶ್ವಾಸಕೋಶದ ಒಳಗೆ ಆಮ್ಲಜನಕ ತೆಗೆದುಕೊಂಡು ಹೊರಗೆ ಇಂಗಾಲದ ಡಯಾಕ್ಸೈಡ್ ಅನ್ನು ಬಿಡುತ್ತೇವೆ. ನಮ್ಮ ರಕ್ತ ನಮ್ಮ ದೇಹದ ಜೀವಕೋಶಗಳಿಗೆ ಆಮ್ಲಜನಕವನ್ನು ಸಾಗಿಸುತ್ತದೆ. ತ್ಯಾಜ್ಯವಾದ ಇಂಗಾಲದ ಡಯಾಕ್ಸೈಡ್ ಅನ್ನು ಅದೇ ವ್ಯವಸ್ಥೆ ನಮ್ಮ ದೇಹದಿಂದ ಹೊರಗೆ ಸಾಗಿಸುತ್ತದೆ. ಕಾಲ್ತುಳಿತದ ಸಮಯದಲ್ಲಿ, ಜನಸಂದಣಿಯಲ್ಲಿ ಸಿಲುಕಿದ ಜನರಿಗೆ ಚಲಿಸಲು, ಉಸಿರಾಡಲು ಸ್ಥಳವಿರುವುದಿಲ್ಲ.

ಉಸಿರಾಟಕ್ಕೆ ಕಾರಣವಾದ ಪ್ರಮುಖ ಸ್ನಾಯು ವಪೆ, ಇದು ಸಂಕುಚಿತವಾಗಬೇಕು ಮತ್ತು ವಿಸ್ತರಿಸ ಬೇಕು. ಆದರೆ ಹೀಗಾಗಲು ಜಾಗವಿರೋಲ್ಲ. ಅಂದರೆ ಗಾಳಿಯು ಶ್ವಾಸಕೋಶವನ್ನು ಪ್ರವೇಶಿಸಲು ಅಥವಾ ಬಿಡಲು ಸಾಧ್ಯವಾಗುವುದಿಲ್ಲ. ಹೀಗಾದಾಗ ಇಂಗಾಲದ ಡಯಾಕ್ಸೈಡ್ ಶೇಖರಣೆಯಾಗು ತ್ತದೆ, ಆಮ್ಲಜನಕ ಹೊರಗಿನಿಂದ ಬರುವುದಿಲ್ಲ. ಉಸಿರುಗಟ್ಟುತ್ತದೆ. ಆಮ್ಲಜನಕವಿಲ್ಲದೆ ದೀರ್ಘಕಾಲ ಇರಲು ದೇಹಕ್ಕೆ ಸಾಧ್ಯವಿಲ್ಲ. ಪರಿಣಾಮವೇ ಅಂಗಾಂಗ ವೈಫಲ್ಯ ಮತ್ತು ಬ್ರೇನ್ ಡೆತ್.

ಇಂಥ ಭಯಾನಕ ಕಾಲ್ತುಳಿತದಿಂದ ಪಾರಾಗುವ ಬಗೆ ಹೇಗೆ? ಕಾಲ್ತುಳಿತದಲ್ಲಿ ಒಮ್ಮೆ ಸಿಕ್ಕಿಹಾಕಿಕೊಂಡರೆ ಪಾರಾಗುವುದು ಅಷ್ಟು ಸುಲಭಸಾಧ್ಯವಲ್ಲ. ಮುಖ್ಯವಾಗಿ, ಯಾವ ಕ್ಷಣದಲ್ಲೂ ಮನೋನಿಯಂತ್ರಣ ಕಳೆದುಕೊಂಡಂತೆ ವರ್ತಿಸಬಲ್ಲ ಗುಂಪುಗಳ ಬಗ್ಗೆ ಹುಷಾರಾಗಿರಬೇಕು ಹಾಗೂ ಅಂಥ ಕಡೆ ಹೋಗುವುದನ್ನೇ ತಪ್ಪಿಸಬೇಕು. ಅಂಥ ಗುಂಪು ಸೇರುವಲ್ಲಿ ಇರಬೇಕಿದ್ದರೆ, ಎಕ್ಸಿಟ್ ಗಳು, ಎಮರ್ಜೆನ್ಸಿ ಎಕ್ಸಿಟ್‌ಗಳನ್ನೆಲ್ಲ ಮೊದಲೇ ನೋಡಿಕೊಂಡು ಬಿಡಬೇಕು. ಬಾಟಲ್‌ನೆಕ್ ಜಾಗಗಳು ಇರುವ ಕಡೆಯಲ್ಲಿ ಹೋಗುವುದನ್ನು ತಪ್ಪಿಸುವುದೇ ಶ್ರೇಯಸ್ಕರ. ಗುಂಪು ಯದ್ವಾತದ್ವಾ ನುಗ್ಗಾಡಲು ಶುರುಮಾಡಿದರೆ ಅದನ್ನು ತಡೆಯುವುದರಿಂದ ನಿಮ್ಮ ಶಕ್ತಿ ಹಾನಿ, ನಿತ್ರಾಣರಾಗಿ ಬೀಳುವ ಸಂಭವ ಹೆಚ್ಚು. ಅದರ ಬದಲು, ಗುಂಪಿನ ಚಲಿಸುತ್ತಿರುವ ದಿಕ್ಕಿಗೆ ಅದರೊಂದಿಗೆ ಸಾಗುವುದು ಒಳ್ಳೆಯದು. ಕೈಗಳನ್ನು ಎತ್ತಿ ಹಿಡಿಯುವುದಕ್ಕಿಂತಲೂ, ಕೈಗಳನ್ನು ಎದೆಯ ಎದುರು ರಕ್ಷಣೆಗಾಗಿ ಹಿಡಿದುಕೊಂಡರೆ ನಿಮಗೆ ಉಸಿರಾಡಲು ಅಷ್ಟು ಜಾಗ ಸಿಗುತ್ತದೆ.

ಇದೆಲ್ಲವನ್ನೂ ತಜ್ಞರು ಹೇಳುತ್ತಾರೆ, ಆದರೆ ಆ ಸಂದರ್ಭದಲ್ಲಿ ಇವೆಲ್ಲ ನೆನಪಿರಬೇಕಲ್ಲ. ನಮಗೆ ನೆನಪಿಲ್ಲದಿದ್ದರೂ ಸರಕಾರಕ್ಕೆ, ಗುಂಪುಗಳನ್ನು ಸೇರಿಸುವವರಿಗೆ ಇದೆಲ್ಲ ನೆನಪಿರಬೇಕು. ಲಕ್ಷಾಂತರ ಮಂದಿಯನ್ನು ಸೇರಿಸುವಾಗ ಅವರು ನಿಲ್ಲಲು ಜಾಗವಿದೆಯೇ, ಸುರಕ್ಷತೆ ಹೇಗೆ, ನೂಕುನುಗ್ಗಲು ಉಂಟಾದರೆ ಪಾರಾಗುವ ದಾರಿಗಳಿದೆಯಾ, ಎಕ್ಸಿಟ್‌ಗಳು ಎಷ್ಟಿವೆ, ಬಾಟಲ್ ನೆಕ್‌ಗಳನ್ನು ಆದಷ್ಟು ಕಡಿಮೆಗೊಳಿಸುವುದು ಹೇಗೆ, ಸೇರುವ ಜನಸಂದಣಿಯ ಮನಸ್ಥಿತಿ ಎಂಥದು- ಇವೆಲ್ಲ ತಿಳಿದಿರಬೇಕು.

ವ್ಯಕ್ತಿಗಳಿಗೆ ಮಿದುಳು ಇರುತ್ತದೆ; ಆದರೆ ಗುಂಪಿಗೆ ಮಿದುಳೂ ಇರುವುದಿಲ್ಲ, ವಿವೇಕವಂತೂ ಮೊದಲೇ ಇರುವುದಿಲ್ಲ. ಆದ್ದರಿಂದ ನೂಕುನುಗ್ಗಲು ಉಂಟಾದಾಗ ಅಲ್ಲಿರುವ ಜನರೆಲ್ಲ ಪರಸ್ಪರ ಸಹಕರಿಸಿಕೊಂಡು ಗುಂಪನ್ನು ವಿರಳಗೊಳಿಸಿಕೊಂಡು ಪಾರಾಗಬೇಕು ಎಂದು ನಿರೀಕ್ಷಿಸುವಂತಿಲ್ಲ.

ಯಾವ ರೀತಿಯ ಭ್ರಮೆಗಳು ಗುಂಪನ್ನು ಹುಚ್ಚುಗಟ್ಟಿಸಬಹುದು? ನಮಗೆ ಗೊತ್ತೇ ಇದೆ. ಅದನ್ನು ಕುರುಡು ಭಕ್ತಿ ಎನ್ನುತ್ತಾರೆ. ಕುರುಡು ಭಕ್ತಿಯನ್ನು ಹೊಂದಿರುವ ಯಾವುದೇ ಗುಂಪಿನಲ್ಲಿ ಸೇರಿಕೊಳ್ಳುವ ಮೊದಲು ತುಸು ನಿಂತು ಯೋಚಿಸಿ. ನಿಮ್ಮ ಜೀವ ಉಳಿದೀತು. ಕುರುಡು ಭಕ್ತಿಯನ್ನು ನಿಮ್ಮಲ್ಲಿ ಪ್ರಚೋದಿಸುವವರ ಮೂಲ ಉದ್ದೇಶವನ್ನು ತುಸು ಪರೀಕ್ಷಿಸಿ. ನಿಮ್ಮ ಹುಚ್ಚು ಅಭಿಮಾನ ದಿಂದ ಯಾರು ಕಾಸು ಮಾಡಿಕೊಳ್ಳುತ್ತಿದ್ದಾರೆ, ನಿಮ್ಮ ಸಮಯ-ಶ್ರಮ-ಹಣದಿಂದ ಯಾರಿಗೆ ಲಾಭ ವಾಗುತ್ತಿದೆ ನೋಡಿ. ಸಂಯಮ ಹಾಗೂ ವಿವೇಕದಿಂದ ವರ್ತಿಸುವ ಮಿದುಳೇ ಇಂಥ ಅನಾಹುತ ಗಳಿಂದ ಪಾರಾಗಲು ದಾರಿ.