Vishweshwar Bhat Column: ʼಭುಜಬಲ್ʼದ ಪರಾಕ್ರಮ
ಶಿವಸೇನೆಯ ನಾಯಕ ಬಾಳ್ ಠಾಕ್ರೆ ಅವರ ಬಲಗೈ ಬಂಟ ಎಂದು ಕರೆಯಿಸಿಕೊಂಡಿದ್ದ ಭುಜಬಲ್, ತಮ್ಮ ನಾಯಕ ಕಾಲಿನಲ್ಲಿ ತೋರಿಸಿದನ್ನು ತಲೆ ಮೇಲೆ ಇಟ್ಟು ಮಾಡಿತೋರಿಸುತ್ತಿದ್ದರು. ‘ನನ್ನ ಮನೆ ದೈವ ಠಾಕ್ರೆ, ನನ್ನ ಮನೆ ಠಾಕ್ರೆ ಭಿಕ್ಷೆ’ ಎಂದು ಹೇಳಿ ಸ್ವಾಮಿನಿಷ್ಠೆಯನ್ನು ಮೆರೆದಿದ್ದ ಭುಜಬಲ್, ಮುಂಬೈಯಲ್ಲಿದ್ದಾಗ ಬಾಳ್ ಠಾಕ್ರೆಯವರನ್ನು ಒಂದು ದಿನವೂ ನೋಡದ ದಿನಗಳಿರ ಲಿಲ್ಲ.


ಸಂಪಾದಕರ ಸದ್ಯಶೋಧನೆ
ಅಧಿಕಾರ ರಾಜಕಾರಣದಲ್ಲಿ ಪಳಗುವುದು ಹೇಗೆ, ಯಾವ ನಾಣ್ಯ ಚಿಮ್ಮಿದರೂ ತಾನು ಹೇಳಿದ್ದೇ ಮೇಲ್ಮುಖವಾಗಿ ಬೀಳುವಂತೆ ಮಾಡುವುದು ಹೇಗೆ ಎಂಬ ತಂತ್ರವನ್ನು ಹಿಂದುಳಿದ ವರ್ಗಗಳ ನಾಯಕ ಹಾಗೂ ಮಹಾರಾಷ್ಟ್ರ ರಾಜ್ಯ ಸರಕಾರದಲ್ಲಿ ಪ್ರಸ್ತುತ ಸಂಪುಟ ದರ್ಜೆ ಸಚಿವರಾಗಿರುವ ಛಗನ್ ಚಂದ್ರಕಾಂತ ಭುಜಬಲ್ ಅವರಿಂದ ಕಲಿಯಬೇಕು.
ಕಾರಣ, ಸರಕಾರದಲ್ಲಿ ಮಂತ್ರಿಯಾಗುವ ಕಲೆ ಅವರಿಗೆ ಸಿದ್ಧಿಸಿದೆ. ಮಹಾತ್ಮ ಗಾಂಧಿಯವರನ್ನು ಹತ್ಯೆಗೈದ ನಾಥೂರಾಮ್ ಗೋಡ್ಸೆಯನ್ನು ‘ಹುತಾತ್ಮ’ ಎಂದು ಬಿಜೆಪಿಯ ಸಂಸದ ಸಾಕ್ಷಿ ಮಹಾರಾಜ್ ಕರೆಯುವುದಕ್ಕಿಂತ ಎಷ್ಟೋ ವರ್ಷಗಳ ಮೊದಲೇ ಛಗನ್ ಭುಜಬಲ್, ‘ಈ ದೇಶದಲ್ಲಿ ಎಲ್ಲೆಲ್ಲಿ ಮಹಾತ್ಮ ಗಾಂಧಿ ಪ್ರತಿಮೆಗಳಿವೆಯೋ, ಅಲ್ಲೆಲ್ಲ ಗೋಡ್ಸೆ ಪ್ರತಿಮೆಗಳನ್ನು ಸ್ಥಾಪಿಸಬೇಕು’ ಎಂದು ಕರೆಕೊಟ್ಟು ವಿವಾದಕ್ಕೆ ಸಿಲುಕಿದ್ದರು. ಆಗ ಅವರು ಮುಂಬೈ ಮಹಾನಗರದ ಮೇಯರ್ ಆಗಿದ್ದರು ಮತ್ತು ಶಿವಸೇನೆಯಲ್ಲಿದ್ದರು.
ಶಿವಸೇನೆಯ ನಾಯಕ ಬಾಳ್ ಠಾಕ್ರೆ ಅವರ ಬಲಗೈ ಬಂಟ ಎಂದು ಕರೆಯಿಸಿಕೊಂಡಿದ್ದ ಭುಜಬಲ್, ತಮ್ಮ ನಾಯಕ ಕಾಲಿನಲ್ಲಿ ತೋರಿಸಿದನ್ನು ತಲೆ ಮೇಲೆ ಇಟ್ಟು ಮಾಡಿತೋರಿಸುತ್ತಿದ್ದರು. ‘ನನ್ನ ಮನೆದೈವ ಠಾಕ್ರೆ, ನನ್ನ ಮನೆ ಠಾಕ್ರೆ ಭಿಕ್ಷೆ’ ಎಂದು ಹೇಳಿ ಸ್ವಾಮಿನಿಷ್ಠೆಯನ್ನು ಮೆರೆದಿದ್ದ ಭುಜಬಲ್, ಮುಂಬೈಯಲ್ಲಿದ್ದಾಗ ಬಾಳ್ ಠಾಕ್ರೆಯವರನ್ನು ಒಂದು ದಿನವೂ ನೋಡದ ದಿನಗಳಿರ ಲಿಲ್ಲ.
ಇದನ್ನೂ ಓದಿ: Vishweshwar Bhat Column: ವಿಮಾನ ಮತ್ತು ಎತ್ತರದ ಹಾರಾಟ
ಸದಾ ಅವರ ಮನೆಯಲ್ಲಿಯೇ ಇರುತ್ತಿದ್ದ ಅವರನ್ನು ನೋಡದಿದ್ದರೆ ಠಾಕ್ರೆಗೂ ಸಮಾಧಾನವಾಗು ತ್ತಿರಲಿಲ್ಲ. ಶಿವಸೇನೆಯ ಆರಂಭಿಕ ಕ್ರಿಯಾಶೀಲ ಸದಸ್ಯರ ಪೈಕಿ ಭುಜಬಲ್ ಸಹ ಒಬ್ಬರಾಗಿದ್ದರು. 1985ರಲ್ಲಿ ಮುಂಬೈನ ಹುತಾತ್ಮ ಚೌಕದಲ್ಲಿ ದಲಿತ ಸಮಾವೇಶ ನಡೆದಾಗ, ಗೋಮೂತ್ರ ಸಿಂಪಡಿಸುವುದರ ಮೂಲಕ ಸ್ವಚ್ಛಗೊಳಿಸಿ ವಿವಾದಕ್ಕೆ ತುತ್ತಾಗಿದ್ದರು.
ಮುಂಬೈನ ಬೈಕುಲ್ಲಾ ಮಾರ್ಕೆಟ್ ನಲ್ಲಿ ತಮ್ಮ ತಾಯಿಯ ಹಣ್ಣು-ತರಕಾರಿ ಅಂಗಡಿಯಲ್ಲಿ, ತಾವೂ ಅದೇ ವ್ಯಾಪಾರ ಮಾಡುತ್ತಿದ್ದ ಭುಜಬಲ್, ಮಹಾರಾಷ್ಟ್ರ ರಾಜಕಾರಣದಲ್ಲಿ ಬೆಳೆದು, ವ್ಯಾಪಿಸಿದ ರೀತಿ ಎಂಥವರಿಗಾದರೂ ಅಚ್ಚರಿ ಮೂಡಿಸಬಲ್ಲುದು. ಮೂಲತಃ ನಾಸಿಕ್ನವರಾದ ಅವರು, ಮಾಲಿ (ಗಾರ್ಡನರ್) ಜಾತಿಗೆ ಸೇರಿದವರು. ತಾಯಿಯ ತರಕಾರಿ ವ್ಯಾಪಾರದಲ್ಲಿ ಸಹಾಯ ಮಾಡುತ್ತಾ, ಶಾಲೆಗೆ ಹೋಗುತ್ತಿದ್ದರು.
ಹಾಗೆ ಮುಂದೆ, ಮೆಕ್ಯಾನಿಕಲ್ ಎಂಜಿನಿಯರಿಂಗ್ ಡಿಪ್ಲೋಮ ಮುಗಿಸಿದರು. ಶಿವಸೇನೆ ಏರ್ಪಡಿಸಿದ ಕಾರ್ಯಕ್ರಮವೊಂದರಲ್ಲಿ ಆಕಸ್ಮಿಕವಾಗಿ ಪಾಲ್ಗೊಂಡಿದ್ದ ಭುಜಬಲ್ರ ಉತ್ಸಾಹ ಮತ್ತು ಕ್ರಿಯಾಶೀಲತೆಯನ್ನು ನೋಡಿ ಠಾಕ್ರೆ, ಪಕ್ಷ ಸೇರುವಂತೆ ಹೇಳಿದರು. ಅಲ್ಲಿಂದ ಅವರ ರಾಜಕೀಯ ನಂಟು ಆರಂಭವಾಗಿ ಇಲ್ಲಿ ತನಕ ಕರೆದುಕೊಂಡು ಬಂದಿದೆ.
1973ರಲ್ಲಿ ಮೊದಲ ಬಾರಿಗೆ ಮುಂಬೈ ಮಹಾನಗರದಲ್ಲಿ ಕಾರ್ಪೊರೇಟರ್ ಆಗಿ ಆಯ್ಕೆಯಾದ ಅವರು ಎರಡು ಸಲ ಮೇಯರ್ ಕೂಡ ಆದರು. 1985ರಿಂದ 1990ರವರೆಗೆ ಅವರು ಮಹಾರಾಷ್ಟ್ರ ವಿಧಾನಸಭೆಯಲ್ಲಿ ಶಿವಸೇನೆಯ ಏಕೈಕ ಶಾಸಕರಾಗಿದ್ದರು. 1990ರಲ್ಲಿ ಬಿಜೆಪಿ-ಶಿವಸೇನೆ ವಿಧಾನ ಸಭಾ ಚುನಾವಣೆಯಲ್ಲಿ 85 ಸ್ಥಾನಗಳನ್ನು ಪಡೆದುಕೊಂಡಾಗ, ತಮ್ಮನ್ನು ಸಹಜವಾಗಿ ಪ್ರತಿಪಕ್ಷದ ನಾಯಕನನ್ನಾಗಿ ಮಾಡುತ್ತಾರೆ ಎಂದು ಭುಜಬಲ್ ನಿರೀಕ್ಷಿಸಿದ್ದರು. ಆದರೆ ಬಾಳ್ ಠಾಕ್ರೆ, ತಮ್ಮ ಪಕ್ಷದ ಮತ್ತೊಬ್ಬ ನಾಯಕ ಮನೋಹರ ಜೋಶಿಯವರನ್ನು ಆ ಸ್ಥಾನದಲ್ಲಿ ಕುಳ್ಳಿರಿಸಿದರು.
ಅದರಿಂದ ಮನ ನೊಂದ ಭುಜಬಲ್, 1991ರಲ್ಲಿ ಸೇನೆಯನ್ನು ತೊರೆದು, ಶರದ್ ಪವಾರ್ ನೇತೃತ್ವದ ಕಾಂಗ್ರೆಸ್ ಸೇರಿದರು. ಆ ದಿನಗಳಲ್ಲಿ ಠಾಕ್ರೆ ವಿರುದ್ಧ ಯಾರೂ ಮಾತಾಡುತ್ತಿರಲಿಲ್ಲ. ಆದರೆ ಠಾಕ್ರೆಯನ್ನು ಹಿಗ್ಗಾಮುಗ್ಗಾ ಟೀಕಿಸಿದವರಲ್ಲಿ ಮೊದಲಿಗರೆಂದರೆ ಭುಜಬಲ್.