ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Roopa Gururaj Column: ಅಜ್ಞಾನದಿಂದ ಅಮೃತವನ್ನು ನಿರಾಕರಿಸಿದ ಉತ್ತುಂಕ

ಇಂದ್ರನು ‘ಮಲಿನ ಬಟ್ಟೆ ಧರಿಸಿದ ಒಬ್ಬ ಬೇಟೆಗಾರನೊಡನೆ ಅಮೃತವನ್ನು ಕಳುಹಿಸುತ್ತೇನೆಂದೂ, ಮಾನವರೆಲ್ಲರೂ ಒಂದೇ ಎಂದು ಭಾವಿಸಿ ಅವನು ಕೊಟ್ಟ ಅಮೃತವನ್ನು ಉತ್ತುಂಕನು ಕುಡಿದರೆ ಸರಿ, ಇಲ್ಲದೇ ಹೋದರೆ ಆ ಅಮೃತವನ್ನು ಹಿಂದಕ್ಕೆ ತರಿಸಿಕೊಳ್ಳುತ್ತೇನೆ’ ಎನ್ನುವ ನಿಬಂಧನೆಯನ್ನು ವಿಧಿಸಿದ. ನೀನು ಅಜ್ಞಾನದಿಂದ ಅಮೃತವನ್ನು ಕುಡಿಯುವ ಅವಕಾಶವನ್ನು ಕಳೆದುಕೊಂಡೆ

ಅಜ್ಞಾನದಿಂದ ಅಮೃತವನ್ನು ನಿರಾಕರಿಸಿದ ಉತ್ತುಂಕ

ಒಂದೊಳ್ಳೆ ಮಾತು

rgururaj628@gmail.com

ಕುರುಕ್ಷೇತ್ರ ಯುದ್ಧ ಮುಗಿದು ಪಾಂಡವರಿಗೆ ವಿಜಯ ಲಭಿಸಿದ ಮೇಲೆ ಹಸ್ತಿನಾಪುರಕ್ಕೆ ಧರ್ಮರಾಯ ರಾಜನಾದನು. ಆ ಸಮಯದಲ್ಲಿ ಉತ್ತುಂಕನೆನ್ನುವ ಋಷಿ ಶ್ರೀಕೃಷ್ಣನನ್ನು ಭೇಟಿಯಾದನು. ಅವನು ಕೃಷ್ಣನೊಂದಿಗೆ, ದೇವಾ! ನಾನು ಯಾವಾಗಲೂ ಕಾಲು ನಡಿಗೆಯಲ್ಲಿ ಪಯಣಿಸುತ್ತಿರುತ್ತೇನೆ. ಮಾರ್ಗ ಮಧ್ಯದಲ್ಲಿ ದಾಹವುಂಟಾದಾಗ ಅದು ದಟ್ಟ ಕಾಡಾಗಿರಲಿ ಅಥವಾ ಮರುಭೂಮಿಯಾಗಿರಲಿ ನನಗೆ ನೀರು ಸಿಗುವಂತೆ ಮಾಡು ಎಂದು ಬೇಡಿಕೊಂಡನು.

ಶ್ರೀಕೃಷ್ಣನು ಅದಕ್ಕೆ ತಥಾಸ್ತು ಅಂದನು. ಉತ್ತುಂಕನು ಒಂದು ದಿನ ದೊಡ್ಡ ಮರುಭೂಮಿ ಯೊಂದರ ಮೂಲಕ ನಡೆದುಕೊಂಡು ಹೋಗುತ್ತಿದ್ದ. ಸ್ವಲ್ಪ ಸಮಯಕ್ಕೆ ಅವನಿಗೆ ದಾಹವುಂಟಾ ಯಿತು. ಅವನು ನೀರಿಗಾಗಿ ಹುಡುಕಾಡಿ ಕಂಗಾಲಾದ. ಕಡೆಗೆ ಕೃಷ್ಣನು ತನಗಿತ್ತ ವರವನ್ನು ಅವನು ಜ್ಞಾಪಿಸಿಕೊಂಡ.

ಆಗ ಅವನ ಎದುರಿಗೆ ಒಬ್ಬ ಬೇಟೆಗಾರ ಬಂದನು. ಅವನ ಬಟ್ಟೆಬರೆಗಳು ಅಲ್ಲಲ್ಲಿ ಹರಿದು ಹೋಗಿ, ಮಾಸಿ ಧೂಳುಧೂಳಾಗಿದ್ದವು. ನಿಮಗೆ ನೀರಡಿಕೆಯಾದಂತೆ ತೋರುತ್ತದೆ. ಈ ಬೊಂಬಿನ ಕೊಳವೆ ಯಲ್ಲಿ ನೀರಿದೆ ಅದನ್ನು ಕುಡಿಯಿರಿ ಎಂದು ಹೇಳಿದನು. ಉತ್ತಂಕನು ಆ ಬೇಟೆಗಾರನೆಡೆಗೆ ಸಂದೇಹದಿಂದ ನೋಡಿದನು.

ಇದನ್ನೂ ಓದಿ: Roopa Gururaj Column: ಅಮೃತಕ್ಕಾಗಿ ದೇವ ದಾನವರ ಹರಸಾಹಸ

ಮಲಿನ ಬಟ್ಟೆ ಧರಿಸಿದ ಆ ಬೇಟೆಗಾರ ತಂದ ನೀರನ್ನು ಅದು ಹೇಗೆ ತಾನೇ ನೀರು ಕುಡಿಯಬಲ್ಲೆ? ಎಂದು ಅವನು ಭಾವಿಸಿ, ನನಗೆ ದಾಹವೇನೂ ಆಗಿಲ್ಲ ಎಂದು ಹೇಳಿದ. ಆ ಬೇಟೆಗಾರನು ನಾನಾ ವಿಧವಾಗಿ ಬೇಡಿಕೊಂಡರೂ ಉತ್ತಂಕನು ಅವನ ಕೈಯಿಂದ ನೀರನ್ನು ಸ್ವೀಕರಿಸಲು ಒಪ್ಪಿಕೊಳ್ಳ ಲಿಲ್ಲ. ಆಗ ಆ ಬೇಟೆಗಾರ ಅಲ್ಲಿಂದ ಅದೃಶ್ಯವಾದನು. ಆಗ ಉತ್ತಂಕನಿಗೆ ತಾನು ಮಾಡಿದ ಅಚಾತುರ್ಯದ ಅರಿವಾಯಿತು.

ಕೃಷ್ಣಾ! ನೀನು ಕೊಟ್ಟ ನೀರನ್ನು ಕುಡಿಯಲು ನಿರಾಕರಿಸಿ ಎಂತಹ ಅಪರಾಧ ಮಾಡಿದೆ ಎಂದು ಉತ್ತುಂಕನು ಪರಿ ಪರಿಯಾಗಿ ದುಃಖಿಸಿದ. ಆಗ ಕೃಷ್ಣನು ಅವನ ಮುಂದೆ ಪ್ರತ್ಯಕ್ಷನಾದನು. ಉತ್ತುಂಕನು ಅವನ ಪಾದಗಳಿಗೆ ಸಾಷ್ಟಾಂಗವೆರಗಿ, ದೇವಾ! ನೀನು ಈ ವಿಧವಾಗಿ ನನ್ನನ್ನು ಪರೀಕ್ಷಿಸುವುದು ನಿನಗೆ ತರವೇ? ಎಂದು ಪ್ರಶ್ನಿಸಿದನು.

ಅದಕ್ಕೆ ಕೃಷ್ಣನು ನಗುತ್ತಾ ನಿನಗೆ ಅಮೃತವನ್ನು ಕೊಡು ಎಂದು ಇಂದ್ರನಿಗೆ ಹೇಳಿದ್ದೆ. ಅವನು ಒಬ್ಬ ಮಾನವನಿಗೆ ಅಮೃತವನ್ನು ಕೊಡಲಾರೆನೆಂದ. ಆದರೆ ನಿನಗೆ ಅಮೃತವನ್ನು ಕೊಡಲು ಅವನನ್ನು ಒಪ್ಪಿಸಿದ್ದೆ. ಅದಕ್ಕೆ ಇಂದ್ರನು ‘ಮಲಿನ ಬಟ್ಟೆ ಧರಿಸಿದ ಒಬ್ಬ ಬೇಟೆಗಾರನೊಡನೆ ಅಮೃತವನ್ನು ಕಳುಹಿಸುತ್ತೇನೆಂದೂ, ಮಾನವರೆಲ್ಲರೂ ಒಂದೇ ಎಂದು ಭಾವಿಸಿ ಅವನು ಕೊಟ್ಟ ಅಮೃತವನ್ನು ಉತ್ತುಂಕನು ಕುಡಿದರೆ ಸರಿ, ಇಲ್ಲದೇ ಹೋದರೆ ಆ ಅಮೃತವನ್ನು ಹಿಂದಕ್ಕೆ ತರಿಸಿಕೊಳ್ಳುತ್ತೇನೆ’ ಎನ್ನುವ ನಿಬಂಧನೆಯನ್ನು ವಿಧಿಸಿದ. ನೀನು ಅಜ್ಞಾನದಿಂದ ಅಮೃತವನ್ನು ಕುಡಿಯುವ ಅವಕಾಶವನ್ನು ಕಳೆದುಕೊಂಡೆ ಎಂದು ಹೇಳಿದನು. ಇದನ್ನು ಕೇಳಿ ಋಷಿ ಉತ್ತುಂಕನಿಗೆ ತನ್ನ ತಪ್ಪಿನ ಅರಿವಾಗಿ ಕೈಮುಗಿದು ಕ್ಷಮೆಯಾಚಿಸಿದನು.

ಮುನಿಗೆ ನೀರು ಒದಗಿಸುವ ತನ್ನ ವರವನ್ನು ಉಳಿಸಿಕೊಳ್ಳುವುದಾಗಿ ಕೃಷ್ಣನು ಭರವಸೆ ನೀಡಿದನು. ನಂತರ ಉತ್ತಂಕನ ಆಜ್ಞೆಯ ಮೇರೆಗೆ ಮಳೆ ಮೋಡಗಳು, ಮರುಭೂಮಿಯಲ್ಲೂ ಮಳೆ ಸುರಿಯುತ್ತವೆ ಎಂದು ಆಶೀರ್ವದಿಸಿದನು. ಈ ಮೋಡಗಳು ಇಂದಿಗೂ ವಿರಳವಾಗಿ ಕಾಣಿಸಿಕೊಳ್ಳು ತ್ತವೆ ಮತ್ತು ಮರುಭೂಮಿಯಲ್ಲಿ ಮಳೆ ಮೋಡಗಳನ್ನು ಸುರಿಸುತ್ತವೆ. ಮರಳುಗಾಡಿನಲ್ಲಿ ಅಪರೂಪಕ್ಕೆ ಮಳೆ ಸುರಿಸುವ ಈ ಮೋಡಗಳನ್ನು ಉತ್ತುಂಕನ ಮೋಡಗಳು (ಉತ್ತಂಕ ಮೇಘ) ಎಂದು ಕರೆಯ ಲಾಗುತ್ತದೆ.

ಜೀವನದಲ್ಲಿ ಕೆಲವೊಮ್ಮೆ ಅಜ್ಞಾನದಿಂದ ಬಂದ ಅವಕಾಶಗಳನ್ನು ನಾವು ಕೂಡ ಇದೇ ರೀತಿ ಕಳೆದುಕೊಳ್ಳುತ್ತೇವೆ. ಯಾವುದಕ್ಕಾಗೋ ಕಾಯುತ್ತಾ ಕುಳಿತು ಕಣ್ಣ ಮುಂದೆ ಇರುವ ಚಿನ್ನದಂತಹ ಅವಕಾಶಗಳನ್ನ ಕೈ ಬಿಟ್ಟುಬಿಡುತ್ತೇವೆ. ಆದ್ದರಿಂದಲೇ ಬದುಕಿಗೆ ಸವಾಲುಗಳನ್ನು ಹಾಕಬೇಡಿ. ಕೆಲವೊಮ್ಮೆ ನಮಗೆ ಸಿಕ್ಕ ಚಿಕ್ಕ ಅವಕಾಶವೇ, ಮುಂಬರುವ ದಿನಗಳಲ್ಲಿ ನಮಗೆ ಅಭಿವೃದ್ಧಿಯ ದೊಡ್ಡ ಬಾಗಿಲಾಗಬಹುದು.

ಯಾವ ಕೆಲಸವೂ ಚಿಕ್ಕದಲ್ಲ ಯಾವುದೂ ದೊಡ್ಡದಲ್ಲ, ಆ ಕೆಲಸ ಮಾಡಿದ ಅನುಭವ ಎಲ್ಲಕ್ಕಿಂತ ದೊಡ್ಡದು. ಆದ್ದರಿಂದಲೇ ವ್ಯಕ್ತಿಗಳ ಬಗ್ಗೆ ಮಾಡುವ ಕೆಲಸದ ಬಗ್ಗೆ ಮೇಲು-ಕೀಳು ಎನ್ನುವ ಭಾವ ಇಲ್ಲದೆ ಎಲ್ಲವನ್ನು, ಎಲ್ಲರನ್ನೂ ಸಮಾನವಾಗಿ ಗೌರವಿಸುವ ಗುಣ ಬೆಳೆಸಿಕೊಳ್ಳೋಣ.