ವಿದ್ಯಮಾನ
ಟ್ಯಾಗೋರರನ್ನೂ ಸೇರಿ ನಮ್ಮ ಅನೇಕ ನಾಯಕರಿಗೆ ಪೊಳ್ಳು ಜಾತ್ಯತೀತವಾದ, ಅಲ್ಪ ಸಂಖ್ಯಾತರ ತುಷ್ಟೀಕರಣದ ಚಾಳಿ ಸ್ವಾತಂತ್ರ್ಯಪೂರ್ವದ ತಲೆಗೇರಿತ್ತು ಎನಿಸುತ್ತದೆ. ನಂತರ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್, ಸಾರ್ವಜನಿಕ ಸಭೆಗಳಲ್ಲಿ ಹಾಡಬೇಕಾದ ರಾಷ್ಟ್ರೀಯ ಗೀತೆಯಾಗಿ ಮೊದಲ 2 ಶ್ಲೋಕಗಳನ್ನಷ್ಟೇ ಅಳವಡಿಸಿಕೊಳ್ಳಲು ನಿರ್ಧರಿಸಿತು.
ವಂದೇ ಮಾತರಂ ಗೀತೆ ನಮಗೆಲ್ಲ ಚಿರಪರಿಚಿತವೇ. ಹಾಗೆ ನೋಡಿದರೆ, ಈ ಗೀತೆಯಲ್ಲಿನ ಶಬ್ದಗಳು ಮತ್ತು ಈ ಗೀತೆಯ ಸಂಗೀತ ಸಂಯೋಜನೆಯಿಂದಾಗಿ, ‘ಜನಗಣಮನ ಅಧಿನಾಯಕ’ ಎನ್ನುವ ರಾಷ್ಟ್ರಗೀತೆಗಿಂತ ಭಾರತೀಯರಿಗೆ ಹೆಚ್ಚು ಮನೋವೇದ್ಯವಾದದ್ದಾಗಿದೆ. ಆದರೆ ನಾವು ಹಾಡುತ್ತಿರುವ ವಂದೇ ಮಾತರಂ ಗೀತೆಯು ಮೂಲಗೀತೆಯ ಅರ್ಧಭಾಗ ಮಾತ್ರ ಎನ್ನುವುದು ಬಹಳ ಜನರಿಗೆ ತಿಳಿದಿಲ್ಲ.
ಅಷ್ಟೇ ಅಲ್ಲದೇ, ವಂದೇ ಮಾತರಂ ಒಂದು ಸ್ವತಂತ್ರ ಗೀತೆಯಲ್ಲ, ಕಾದಂಬರಿಯ ಸಂದರ್ಭಕ್ಕೆ ಹೊಂದುವಂತೆ ರಚನೆಯಾಗಿದ್ದ ಗೀತೆಯಾಗಿತ್ತು ಎನ್ನುವುದೂ ಇಂದಿನ ಕಾಲದ ಬಹಳ ಜನರಿಗೆ ತಿಳಿದಿರಲಿಕ್ಕಿಲ್ಲ. ಹೌದು, ಬ್ರಿಟಿಷರ ವಿರುದ್ಧದ ಬಂಗಾಳದ ಸನ್ಯಾಸಿ ದಂಗೆಯ ಕಥೆಯನ್ನು ಒಳಗೊಂಡ ಬಂಕಿಮ್ ಚಂದ್ರರ ‘ಆನಂದಮಠ’ ಎನ್ನುವ ಕಾದಂಬರಿಯಲ್ಲಿ ಸಾಂದರ್ಭಿಕವಾಗಿ ಬರುವ ಹಾಡಿದು.
ಮುಂದೆ ಭಾರತದ ಸ್ವಾತಂತ್ರ್ಯ ಸಂಗ್ರಾಮದುದ್ದಕ್ಕೂ ಈ ಕಾದಂಬರಿ ಹಾಗೂ ಅದರಲ್ಲಿ ಬರುವ ವಂದೇ ಮಾತರಂ ಗೀತೆ ಮತ್ತು ಘೋಷಣೆಗಳು, ಸ್ವಾತಂತ್ರ್ಯ ಹೋರಾಟಗಾರರಿಗೆ ಸ್ಪೂರ್ತಿಯ ಸೆಲೆ ಯಾಗಿ ಪರಿಣಮಿಸಿದವು ಎನ್ನುವುದು ಈಗ ಇತಿಹಾಸ.
ಆನಂದಮಠವು ಕವಿ ಬಂಕಿಮ್ ಚಂದ್ರರು ಬರೆದ ಬಂಗಾಳಿ ಐತಿಹಾಸಿಕ ಕಾದಂಬರಿ. ಈ ಕೃತಿ ಬಂಗಾಳಿ ಮತ್ತು ಭಾರತೀಯ ಸಾಹಿತ್ಯದಲ್ಲಿ ಅತ್ಯಂತ ಮಹತ್ವದ ಕಾದಂಬರಿಯಾಗಿದೆ. ಅತ್ಯಂತ ಶ್ರೀಮಂತ ಕುಟುಂಬದ ಮುಖ್ಯ ಪಾತ್ರಧಾರಿ ಮಹೇಂದ್ರನಿಂದ ಕಥೆ ಪ್ರಾರಂಭವಾಗುತ್ತದೆ. ಮಹೇಂದ್ರ ನು ಕಲ್ಯಾಣಿ ಎಂಬ ಮಹಿಳೆಯನ್ನು ಮದುವೆಯಾಗಿದ್ದಾನೆ.
ಇದನ್ನೂ ಓದಿ: Vinayaka V Bhat Column: ದೇವವ್ರತಃ ಸನಾತನ ಪರಂಪರೆಯ ಭರವಸೆಯ ಬೆಳಕು
ಮಹೇಂದ್ರ ಮತ್ತು ಕಲ್ಯಾಣಿ ಅವರಿಗೆ ಸುಕುಮಾರಿ ಎಂಬ ಮಗಳಿದ್ದಾಳೆ. ಮಹೇಂದ್ರನ ಗ್ರಾಮಸ್ಥರು ಭೀಕರ ಬರಗಾಲವನ್ನು ಎದುರಿಸುತ್ತಿರುತ್ತಾರೆ. ತಿನ್ನಲು ಆಹಾರವಿಲ್ಲದ ಸ್ಥಿತಿ. ಗ್ರಾಮಸ್ಥರು ಗ್ರಾಮವನ್ನು ತೊರೆದು ನಗರಕ್ಕೆ ಗುಳೆ ಹೋಗುತ್ತಾರೆ, ಮಹೇಂದ್ರನೂ ತನ್ನ ಕುಟುಂಬದೊಂದಿಗೆ ಕಲ್ಕತ್ತಾಗೆ ಹೋಗಲು ನಿರ್ಧರಿಸುತ್ತಾನೆ.
ಕಲ್ಕತ್ತಾಗೆ ಹೋಗುವಾಗ, ಮಹೇಂದ್ರನು ತನ್ನ ಮಗಳಿಗೆ ಕುಡಿಯಲು ಹಾಲು ಹುಡುಕಲು ಒಂದು ಹಳ್ಳಿಗೆ ಹೋಗುತ್ತಾನೆ. ಮಹೇಂದ್ರ ಹಾಲನ್ನು ಹುಡುಕಿಕೊಂಡು ಹಳ್ಳಿಗೆ ಹೋದಾಗ, ದರೋಡೆ ಕೋರರು ಮಹೇಂದ್ರನ ಹೆಂಡತಿ ಮತ್ತು ಮಗಳನ್ನು ಅಪಹರಿಸುತ್ತಾರೆ. ಅವನು ತನ್ನ ಹೆಂಡತಿ ಮತ್ತು ಮಗಳಿಗಾಗಿ ಹಳ್ಳಿಯಲ್ಲ ಹುಡುಕಾಡುತ್ತಿರುವಾಗ ಬ್ರಿಟಿಷ್ ಸೈನಿಕರ ಗುಂಪು ಮಹೇಂದ್ರನನ್ನು ಬಂಡಾಯಗಾರನೆಂದು ಅನುಮಾನಿಸಿ ಬಂಧಿಸುತ್ತದೆ.
ಏತನ್ಮಧ್ಯೆ, ದರೋಡೆಕೋರರಿಂದ ಸೆರೆಯಾಳಾಗಿದ್ದ ಮಹೇಂದ್ರನ ಪತ್ನಿ ಕಲ್ಯಾಣಿ ಮತ್ತು ಸುಕುಮಾರಿ, ದರೋಡೆಕೋರರ ನಡುವೆ ಜಗಳವಾಗುತ್ತಿದ್ದಾಗ ತಪ್ಪಿಸಿಕೊಳ್ಳುತ್ತಾರೆ. ದರೋಡೆಕೋರ ರಿಂದ ತಪ್ಪಿಸಿಕೊಂಡು ಕಲ್ಯಾಣಿ ಮತ್ತು ಸುಕುಮಾರಿ ಕಾಡಿನಲ್ಲಿರುವ ಸನ್ಯಾಸಿಗಳ ಆಶ್ರಮಕ್ಕೆ ಬರುತ್ತಾರೆ.
ತಮ್ಮನ್ನು ಭಾರತ ಮಾತೆಯ ಸಂತತಿ ಎಂದು ಕರೆಸಿಕೊಳ್ಳುತ್ತಿದ್ದ ಸನ್ಯಾಸಿ ಬಂಡಾಯಗಾರರ ಈ ಗುಂಪು, ಬ್ರಿಟಿಷ್ ಈ ಇಂಡಿಯಾ ಕಂಪನಿಯ ವಿರುದ್ಧ ದಂಗೆ ಎದ್ದಿತ್ತು. ಕಥೆಯು ಈಗ ಸನ್ಯಾಸಿ ಗುಂಪಿನ ನಾಯಕ ಮಹಾತ್ಮ ಸತ್ಯಾನಂದನನ್ನು ಪರಿಚಯಿಸುತ್ತದೆ. ಸತ್ಯಾನಂದನು ಕಲ್ಯಾಣಿ ಮತ್ತು ಅವಳ ಮಗಳಿಗೆ ತನ್ನ ಆಶ್ರಮದಲ್ಲಿ ಆಶ್ರಯವನ್ನು ಒದಗಿಸುತ್ತಾನೆ.
ಸತ್ಯಾನಂದನು ಕಲ್ಯಾಣಿಗೆ ಆಕೆಯ ಗಂಡನನ್ನು ಹುಡುಕಿ ಅವನನ್ನು ಮತ್ತೆ ಅವಳ ಬಳಿಗೆ ಕರೆ ತರುವುದಾಗಿ ಭರವಸೆ ನೀಡುತ್ತಾನೆ. ಅದರಂತೆ ಅವರು ಮಹೇಂದ್ರನನ್ನು ಹುಡುಕಿ ಕರೆ ತರುತ್ತಾರೆ. ಮಹೇಂದ್ರನನ್ನು ತನ್ನ ಸನ್ಯಾಸಿ ಗುಂಪಿಗೆ ಸೇರಿಸಲು ಸತ್ಯಾನಂದ ಬಯಸುತ್ತಾನೆ. ಮಹೇಂದ್ರನು ಸನ್ಯಾಸಿ ದಂಗೆಯ ಬಗ್ಗೆ ಎಲ್ಲವನ್ನೂ ತಿಳಿದುಕೊಂಡು, ಸನ್ಯಾಸಿಯಾಗಲು ತನ್ನ ಹೆಂಡತಿ ಮತ್ತು ಮಗಳನ್ನು ತ್ಯಜಿಸಬೇಕಾಗುವುದರಿಂದ ಸನ್ಯಾಸಿ ಗುಂಪಿಗೆ ಸೇರಲು ನಿರಾಕರಿಸು ತ್ತಾನೆ.
ಮಹೇಂದ್ರನು ತನ್ನಿಂದಾಗಿ ಸನ್ಯಾಸಿ ದಂಗೆಗೆ ಸೇರಲು ನಿರಾಕರಿಸಿದ್ದಾನೆ ಎಂದು ತಿಳಿದಾಗ ಕಲ್ಯಾಣಿಗೆ ತೀವ್ರ ದುಃಖವಾಗಿ ತನ್ನ ಮಗಳೊಂದಿಗೆ ವಿಷಸೇವನೆ ಮಾಡುತ್ತಾಳೆ. ಮಹೇಂದ್ರನು ತನ್ನ ಹೆಂಡತಿ ಮತ್ತು ಮಗಳ ಸಾವನ್ನ ನೆನೆದು ಕಣ್ಣೀರಿಡುತ್ತಿರುವಾಗ, ಅವರ ಅಂತ್ಯಕ್ರಿಯೆಗೂ ಅವಕಾಶ ಕೊಡದೇ ಅವನನ್ನು ಸನ್ಯಾಸಿ ದಂಗೆಕೋರ ಎಂದು ತಪ್ಪಾಗಿ ಭಾವಿಸಿ ಪೊಲೀಸರು ಬಂಧಿಸುತ್ತಾರೆ.
ಕಲ್ಯಾಣಿ ಮತ್ತು ಸುಕುಮಾರಿ ಅವರ ಶವಗಳು ಇನ್ನೂ ರಸ್ತೆ ಬದಿಯಲ್ಲಿ ಬಿದ್ದಿರುತ್ತವೆ. ಇಬ್ಬರು ಸಾಧುಗಳು ಅವನ್ನು ನೋಡಿದಾಗ, ತಾಯಿ ಸತ್ತಿದ್ದಾಳೆ ಮತ್ತು ಮಗಳು ಜೀವಂತವಾಗಿದ್ದಾಳೆ ಎಂಬುದು ಗೊತ್ತಾಗುತ್ತದೆ. ಮಗಳನ್ನು ತಮ್ಮೊಂದಿಗೆ ಕರೆದೊಯ್ದು ಶುಶ್ರೂಷೆ ಮಾಡುತ್ತಾರೆ. ಸ್ವಲ್ಪ ಸಮಯದ ನಂತರ, ಸನ್ಯಾಸಿನಿಯೊಬ್ಬಳು ಕಲ್ಯಾಣಿಯ ದೇಹವನ್ನು ನೋಡುತ್ತಾಳೆ, ಅವಳು ಇನ್ನೂ ಜೀವಂತವಾಗಿದ್ದಾಳೆ ಎಂದು ಕಂಡುಕೊಳ್ಳುತ್ತಾಳೆ ಮತ್ತು ಔಷದೋಪಚಾರ ಮಾಡಿ ಅವಳು ಚೇತರಿಸಿಕೊಳ್ಳುವಂತೆ ಮಾಡುತ್ತಾಳೆ.
ಏತನ್ಮಧ್ಯೆ, ಸತ್ಯಾನಂದನು ತನ್ನ ಶಿಷ್ಯನ ಸಹಾಯದಿಂದ ಮಹೇಂದ್ರನನ್ನು ಜೈಲಿನಿಂದ ಬಿಡುಗಡೆ ಮಾಡಿಸುತ್ತಾನೆ. ತರುವಾಯ, ಸತ್ಯಾನಂದನು ಮಹೇಂದ್ರನಿಗೆ ತ್ಯಾಗದ ಮಾರ್ಗವನ್ನು ಕಲಿಸಲು ಪ್ರಾರಂಭಿಸುತ್ತಾನೆ. ತನ್ನ ಹೆಂಡತಿ ಮತ್ತು ಮಗಳ ಕಾರಣದಿಂದಾಗಿ ತ್ಯಾಗಿಗಳ ಗುಂಪಿಗೆ ಸೇರಲು ಹಿಂಜರಿಯುತ್ತಿದ್ದ ಮಹೇಂದ್ರ, ತನ್ನ ಹೆಂಡತಿ ಮತ್ತು ಮಗಳು ಜೀವಂತವಾಗಿಲ್ಲ ಎಂದು ತಿಳಿದು ಕೊಂಡು ಸನ್ಯಾಸಿಯಾಗಲು ಒಪ್ಪಿಕೊಳ್ಳುತ್ತಾನೆ.
ಹೀಗೆ ಅನೇಕ ಜನ ದಂಗೆಯಲ್ಲಿ ಸೇರಲು ಮುಂದೆ ಬರುವುದರಿಂದ, ಸನ್ಯಾಸಿ ಹೋರಾಟಗಾರರ ಗುಂಪು ದಿನದಿಂದ ದಿನಕ್ಕೆ ಬಲಗೊಳ್ಳುತ್ತ ಸಾಗುತ್ತದೆ. ಒಂದು ದಿನ, ಬ್ರಿಟಿಷ್ ಸೈನ್ಯವು ಕಾಡಿನಲ್ಲಿ ಸನ್ಯಾಸಿ ಗುಂಪಿನ ಅಡಗುತಾಣವನ್ನು ಕಂಡುಹಿಡಿದು, ಅವರ ಮೇಲೆ ದಾಳಿ ಮಾಡುತ್ತದೆ ಮತ್ತು ಅಲ್ಲಿ ಘೋರ ಯುದ್ಧ ನಡೆಯುತ್ತದೆ.
ಅಂತಿಮವಾಗಿ ಸನ್ಯಾಸಿ ಹೋರಾಟಗಾರರು ಯುದ್ಧವನ್ನು ಗೆಲ್ಲುತ್ತಾರೆ. ಯುದ್ಧದ ನಂತರ, ಮಹೇಂದ್ರ ತನ್ನ ಹೆಂಡತಿ ಮತ್ತು ಮಗಳೊಂದಿಗೆ ಮತ್ತೆ ಒಂದಾಗುತ್ತಾನೆ. ಇದು ಪ್ರಸಿದ್ಧ ‘ಆನಂದ ಮಠ’ ಕಾದಂಬರಿಯ ಕಥಾವಸ್ತುವಿನ ಸ್ಥೂಲ ಪರಿಚಯ.
‘ವಂದೇ ಮಾತರಂ’ ಹಾಡು ಆನಂದಮಠ ಕಾದಂಬರಿಯುದ್ದಕ್ಕೂ ಪ್ರಮುಖವಾಗಿ ಕಾಣಿಸಿಕೊಂಡಿದೆ. ಪ್ರಮುಖ ದೃಶ್ಯವೊಂದರಲ್ಲಿ, ಸನ್ಯಾಸಿ ಹೋರಾಟಗಾರನೊಬ್ಬ ಈ ಹಾಡು ಮತ್ತು ಅದರ ಪರಿಕಲ್ಪನೆ ಯನ್ನು ನಾಯಕ ಮಹೇಂದ್ರನಿಗೆ ಪರಿಚಯಿಸುತ್ತಾನೆ. ಅವನನ್ನು ತಮ್ಮ ದೇವಾಲಯದ ಒಳಗೆ ಕರೆದೊಯ್ದು, ಇದು ರಾಷ್ಟ್ರದ ಭೂತ, ವರ್ತಮಾನ ಮತ್ತು ಭವಿಷ್ಯವನ್ನು ಸಂಕೇತಿಸುವ ಮೂರು ರೂಪಗಳಲ್ಲಿ ದೇವತೆಯಾಗಿ ಮೂರ್ತೀಕರಿಸಲ್ಪಟ್ಟ ಮಾತೃಭೂಮಿಯ ಚಿತ್ರವಾಗಿದೆ ಎಂದು ತಿಳಿಸುತ್ತಾನೆ.
ಈ ದೇವಾಲಯದ ದೃಶ್ಯದಲ್ಲಿಯೇ ಬಂಡುಕೋರರು ತಾಯ್ನಾಡನ್ನು ದೇವತೆಯಾಗಿ ಮೂರ್ತ ರೂಪದಿಂದ ಪೂಜಿಸುತ್ತಾರೆ ಮತ್ತು ಆರು ಶ್ಲೋಕಗಳ ಭಕ್ತಿ ಕಾವ್ಯವಾದ ‘ವಂದೇ ಮಾತರಂ’ ಅನ್ನು ಪಠಿಸುತ್ತಾರೆ. ಈ ಹಾಡು ಬ್ರಿಟಿಷ್ ಆಡಳಿತದ ವಿರುದ್ಧದ ಹೋರಾಟದಲ್ಲಿ ಸನ್ಯಾಸಿ ಬಂಡುಕೋರ ರಿಗೆ ಪ್ರಮುಖ ಮಂತ್ರ ಮತ್ತು ಒಂದುಗೂಡಿಸುವ ಶಕ್ತಿಯಾಗಿ ಕಾರ್ಯನಿರ್ವಹಿಸುತ್ತದೆ.
ಇಂದಿಗೂ ‘ಆನಂದಮಠ’ ಕಾದಂಬರಿಯು ಭಾರತೀಯ ರಾಷ್ಟ್ರೀಯತೆಯ ಅಡಿಪಾಯ ಪಠ್ಯವಾಗಿ ಉಳಿದಿದೆ. ಇದು ನಿರಂತರ ಪ್ರತಿರೋಧದ ಮನೋಭಾವ ಮತ್ತು ನಾಗರಿಕ ಕರ್ತವ್ಯದ ಕರೆಗೆ ಸಾಕ್ಷಿ ಯಾಗಿ ಹಾಗೂ ಭಾರತೀಯ ರಾಷ್ಟ್ರೀಯತೆಯ ಪ್ರಬಲ ಪ್ರಚೋದನೆಯಾಗಿ ಪ್ರತಿಧ್ವನಿಸುತ್ತಿದೆ.
ಬಂಕಿಮ್ ಚಂದ್ರರ ಜನಪ್ರಿಯ ‘ವಂದೇ ಮಾತರಂ’ ಗೀತೆ ರಚನೆಯಾಗಿ 150 ವರ್ಷಗಳು ಪೂರ್ಣ ಗೊಂಡಿವೆ. 1875ರ ನವೆಂಬರ್ 7ರಂದು ಮೊದಲ ಬಾರಿಗೆ ಪ್ರಕಟವಾದ ‘ವಂದೇ ಮಾತರಂ’ ಕ್ರಾಂತಿ ಗೀತೆಗೆ ಈಗ 150ರ ಸಂಭ್ರಮ. ಸ್ವಾತಂತ್ರ್ಯ ಸಂಗ್ರಾಮದಲ್ಲಿ ಹೋರಾಟಗಾರರ ಉತ್ಸಾಹ ಹೆಚ್ಚಿಸಿದ್ದ ಈ ಹಾಡನ್ನು ಸ್ಮರಣೀಯಗೊಳಿಸಲು ಕೇಂದ್ರ ಸರಕಾರ ಕಾರ್ಯಪ್ರವೃತ್ತವಾಗಿದೆ. ಈ ಹಾಡಿನ ಇತಿಹಾಸ ಮತ್ತು ಪರಂಪರೆಯ ಕಡಿಮೆ ತಿಳಿದಿರುವ ಅಂಶಗಳನ್ನು ಇಂದಿನ ಜನಾಂಗಕ್ಕೆ ತಿಳಿಸಲು ಲೋಕಸಭೆಯ ಚಳಿಗಾಲದ ಅಧಿವೇಶನದಲ್ಲಿ ಚರ್ಚೆ ನಡೆಸಲಾಯಿತು.
ಈ ಚರ್ಚೆಯಲ್ಲಿ ಹಾಡಿನ ಮೂಲ ಹಾಗೂ ಅಲ್ಪಸಂಖ್ಯಾತರನ್ನು ಸಮಾಧಾನಿಸಲು ಅದನ್ನು ಹೃಸ್ವಪಡಿಸಿದ ಕಾಂಗ್ರೆಸ್ಸಿನ ಮನೋಧೋರಣೆಯನ್ನೂ ಸರಕಾರ ಎಳೆಎಳೆಯಾಗಿ ದೇಶದ ಮುಂದಿ ರಿಸಿತು. ಸ್ವತಃ ಪ್ರಧಾನಮಂತ್ರಿಗಳು ಈ ಕುರಿತು ಸುದೀರ್ಘ ಭಾಷಣಮಾಡಿ, ಕಾಂಗ್ರೆಸ್ಸಿನಿಂದ ಈ ಹಾಡಿಗಾದ ಶಾಶ್ವತ ಅನ್ಯಾಯವನ್ನು ಪ್ರಭಾವಶಾಲಿಯಾಗಿ ಪ್ರಸ್ತುತಪಡಿಸಿದರು.
“ಮುಂಬರುವ ಪಶ್ಚಿಮ ಬಂಗಾಳದ ಚುನಾವಣೆಯನ್ನು ದೃಷ್ಟಿಯಲ್ಲಿರಿಸಿ ಈ ಚರ್ಚೆಯನ್ನು ಸರಕಾರ ಆಯೋಜಿಸಿದೆ, ಎಲ್ಲ ವಿಷಯಗಳಲ್ಲೂ ನೆಹರು ಅವರನ್ನು ಎಳೆದು ತರದಿದ್ದರೆ ಬಿಜೆಪಿ ಯವರಿಗೆ ನಿದ್ದೆ ಬಾರದು" ಎಂದು ಸಂಸದೆ ಪ್ರಿಯಾಂಕ ಗಾಂಧಿ ಸದನದಲ್ಲಿ ಪ್ರತಿಕ್ರಿಯಿಸಿ ದರು. ಮೋದಿಯವರು ಪ್ರಸ್ತುತಪಡಿಸಿದ ತಥ್ಯಗಳನ್ನು ಸುಳ್ಳು ಎಂದು ಸಾಬೀತುಪಡಿಸುವಲ್ಲಿ ಮಾತ್ರ ಅವರು ವಿಫಲರಾದರು.
ಮೌಲಾನಾ ಆಜಾದ್, ಜವಾಹರಲಾಲ್ ನೆಹರು, ಸುಭಾಷ್ ಚಂದ್ರ ಬೋಸ್, ಆಚಾರ್ಯ ದೇವ ಮತ್ತು ರವೀಂದ್ರನಾಥ ಟ್ಯಾಗೋರ್ ಅವರನ್ನೊಳಗೊಂಡ ಸಮಿತಿಯು ಶಿಫಾರಸು ಮಾಡಿದ ನಂತರ, 1937ರಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ವಂದೇ ಮಾತರಂನ ಮೊದಲರ್ಧ ಭಾಗ ಗಳನ್ನು ರಾಷ್ಟ್ರೀಯ ಗೀತೆಯಾಗಿ ಆಯ್ಕೆ ಮಾಡಿತು.
ಹಿಂದೂಯೇತರರ ಭಾವನೆಗಳನ್ನು ಗೌರವಿಸುವ ಸಲುವಾಗಿ ಇಡೀ ಹಾಡನ್ನು ಈ ನಾಯಕರು ಆಯ್ಕೆ ಮಾಡಲಿಲ್ಲ ಎನ್ನುವುದು ವಿಪರ್ಯಾಸ. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷ ಸುಭಾಷ್ ಚಂದ್ರ ಬೋಸ್ ಅವರು ವಂದೇ ಮಾತರಂ ಹಾಡಿನ ಬಗ್ಗೆ ಟ್ಯಾಗೋರ್ ಅವರ ಅಭಿಪ್ರಾಯಗಳನ್ನು ಕೇಳಿದಾಗ, “ಈ ಗೀತೆಯಲ್ಲಿ ಮೊದಲ ಎರಡು ಚರಣಗಳಲ್ಲಿ ಮಾತೃಭೂಮಿ ಯ ಸೌಂದರ್ಯದ ಅಸಾಧಾರಣ ವರ್ಣನೆಯಿದೆ; ಆದರೆ ಈ ಗೀತೆಯ ತಿರುಳು ದುರ್ಗಾದೇವಿಯ ಸ್ತುತಿಯೇ ಆಗಿದೆ.
ಯಾವುದೇ ಮುಸಲ್ಮಾನನು ಹತ್ತು ಕೈಗಳ ದೇವತೆಯನ್ನು ನಮ್ಮ ತಾಯ್ನಾಡು ಎಂದು ಪೂಜಿಸು ತ್ತಾನೆ ಎಂದು ನನಗನಿಸುವುದಿಲ್ಲ, ಈ ಹಾಡು ಸಾಂದರ್ಭಿಕವಾಗಿ ಕಾದಂಬರಿಗೆ ಸೂಕ್ತವಾಗಿದೆ. ದೇಶವು ಎಲ್ಲಾ ಧಾರ್ಮಿಕ ಗುಂಪುಗಳಿಗೆ ಸೇರಿದ ಒಕ್ಕೂಟವಾಗಿರುವಾಗ ಈ ಹಾಡು ಸರ್ವಸಮ್ಮತ ವಾಗಲು ಸಾಧ್ಯವಿಲ್ಲ" ಎಂದು ಅಭಿಪ್ರಾಯಪಟ್ಟರು.
ಟ್ಯಾಗೋರರನ್ನೂ ಸೇರಿ ನಮ್ಮ ಅನೇಕ ನಾಯಕರಿಗೆ ಪೊಳ್ಳು ಜಾತ್ಯತೀತವಾದ, ಅಲ್ಪಸಂಖ್ಯಾತರ ತುಷ್ಟೀಕರಣದ ಚಾಳಿ ಸ್ವಾತಂತ್ರ್ಯಪೂರ್ವದ ತಲೆಗೇರಿತ್ತು ಎನ್ನುವುದು ಇದರಿಂದ ತಿಳಿದು ಬರುತ್ತದೆ. ನಂತರ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಸಾರ್ವಜನಿಕ ಸಭೆಗಳಲ್ಲಿ ಹಾಡಬೇಕಾದ ರಾಷ್ಟ್ರೀಯ ಗೀತೆಯಾಗಿ ಮೊದಲ ಎರಡು ಶ್ಲೋಕಗಳನ್ನು ಮಾತ್ರ ಅಳವಡಿಸಿಕೊಳ್ಳಲು ನಿರ್ಧರಿಸಿ, ‘ಕೋಟಿ ಕಂಠ ಕಲಕಲ ನಿನಾದ ಕರಾಲೇ’, ‘ತುಮಿ ವಿದ್ಯಾ ತುಮಿ ಧರ್ಮ ತುಮಿ ಹೃದಿ ತುಮಿ ಮರ್ಮ’ ಹಾಗೂ ‘ತ್ವಂ ಹಿ ದುರ್ಗಾ ದಶಪ್ರಹರಣ ಧಾರಿಣೀ ಕಮಲಾ ಕಮಲಾದಲ ವಿಹಾರಿಣೀ’ ಎನ್ನುವ ದುರ್ಗಾ, ಲಕ್ಷ್ಮಿ ಹಾಗೂ ಸರಸ್ವತಿಯ ಉಖವಿರುವ ಇತರ ಚರಣಗಳನ್ನು ತೆಗೆದುಹಾಕಲಾಯಿತು.
1950ರ ಜನವರಿ 24ರಂದು ಸಂವಿಧಾನ ರಚನಾ ಸಭೆಯ ಅಧ್ಯಕ್ಷತೆ ವಹಿಸಿದ್ದ ರಾಜೇಂದ್ರ ಪ್ರಸಾದ್ ಅವರ ಈ ಕೆಳಗಿನ ಹೇಳಿಕೆಯನ್ನು ಈ ವಿಷಯದ ಬಗ್ಗೆ ಅಂತಿಮ ನಿರ್ಧಾರವಾಗಿ ಅಂಗೀಕರಿಸ ಲಾಯಿತು. ರವೀಂದ್ರರ ‘ಜನ ಗಣ ಮನ ಅಧಿನಾಯಕ’ ಸಂಯೋಜನೆಯು ಭಾರತದ ರಾಷ್ಟ್ರಗೀತೆ ಯಾಗಿದ್ದು, ಭಾರತೀಯ ಸ್ವಾತಂತ್ರ್ಯ ಹೋರಾಟದಲ್ಲಿ ಐತಿಹಾಸಿಕ ಪಾತ್ರ ವಹಿಸಿದ ‘ವಂದೇ ಮಾತರಂ’ ಹಾಡನ್ನು ‘ಜನ ಗಣ ಮನ’ದೊಂದಿಗೆ ಸಮಾನವಾಗಿ ಗೌರವಿಸಲಾಗುವುದು ಎನ್ನುವುದು ರಾಜೇಂದ್ರ ಪ್ರಸಾದ್ ಅವರ ನಿರ್ಣಯವಾಗಿತ್ತು.
ಇಡೀ ವಂದೇ ಮಾತರಂ ಹಾಡನ್ನು ಬಂಕಿಮ್ ಚಂದ್ರರು ಭಕ್ತಿಗೀತೆಯಾಗಿ ಬರೆದಿzರೆ, ಅಲ್ಲಿ ಅವರು ದೇಶವನ್ನು ದೇವತೆ ಎಂದು ಬಣ್ಣಿಸುತ್ತಾರೆ, ಅವರ ಹಾಡು ದೇವಿಯನ್ನು ಪೂಜಿಸಬೇಕು ಮತ್ತು ಸೇವೆ ಸಲ್ಲಿಸಬೇಕು ಎಂದು ಕರೆ ನೀಡುತ್ತದೆ. ನಾವು ನಮಸ್ಕರಿಸುವುದು ನಮ್ಮ ದೇವರಾದ ಅಹುವಿಗೆ ಮಾತ್ರ ಮತ್ತು ನಾವು ಅಹುವನ್ನು ಹೊರತುಪಡಿಸಿ ಬೇರೆ ಯಾರನ್ನೂ ಆರಾಧಿಸುವುದಿಲ್ಲ.
ವಂದೇ ಮಾತರಂ ಹಾಡುವಂತೆ ನಿರ್ಧರಿಸುವುದು ಮುಸ್ಲಿಮರಿಗೆ ತಮ್ಮ ಧರ್ಮಕ್ಕೆ ವಿರುದ್ಧವಾಗಿ ಹೋಗುವಂತೆ ಒತ್ತಡ ಹೇರಿದಂತಾಗುತ್ತದೆ. ‘ಸಾರೆ ಜಹಾನ್ ಸೆ ಅಚ್ಚಾ ’ನಂಥ ಬೇರೆ ದೇಶಭಕ್ತಿ ಗೀತೆಗಳನ್ನು ಹಾಡಲು ನಮಗೆ ಅಭ್ಯಂತರವಿಲ್ಲ, ಇದು ಹಿಂದೂ ದೇಶಭಕ್ತಿಯ ಗೀತೆಯಾಗಿದೆ ಮತ್ತು ಅದನ್ನು ಜಾತ್ಯತೀತವಾಗಿ ಕಾಣುವಂತೆ ಮಾಡಲು ಕವಿತೆಯ ಕೆಲವು ಭಾಗಗಳನ್ನು ಮಾತ್ರ ಕತ್ತರಿಸ ಲಾಗಿದೆ ಎಂದು ಮುಸ್ಲಿಮ್ ನಾಯಕರುಗಳು ಆಗಲೂ ತಮ್ಮ ಅಸಮಾನ ವ್ಯಕ್ತಪಡಿಸಿದ್ದರು.
‘ಜನಗಣ ಮನ ಅಧಿನಾಯಕ ಜಯ ಹೇ ಭಾರತೊ ಭಾಗ್ಯಭಿದಾತೋ’ ಎನ್ನುವ ನಮ್ಮ ಈಗಿನ ರಾಷ್ಟ್ರಗೀತೆಯನ್ನು ಕವಿ ರವೀಂದ್ರನಾಥ ಟ್ಯಾಗೋರರು 1911ರ ಬಂಗಾಳಿ ಭಾಷೆಯಲ್ಲಿ ರಚಿಸಿ ದ್ದರು. 1950ರಲ್ಲಿ ಅದನ್ನು ರಾಷ್ಟ್ರಗೀತೆಯಾಗಿ ಅಂಗೀಕರಿಸಲಾಗಿತ್ತು. ವಿಶೇಷವೆಂದರೆ, ಈ ಹಾಡಿನಲ್ಲಿ ಎಲ್ಲೂ ಭಾರತಮಾತೆಯ ಅಥವಾ ಮಾತೃಭೂಮಿಯ ಕುರಿತಾದ ಪ್ರಸ್ತಾಪವೇ ಇಲ್ಲ.
ಯಾವುದೋ ಅಜ್ಞಾತ ಪುರಷ, ಭಾರತ ಭಾಗ್ಯವಿದಾತನಿಗೆ ಜಯಕಾರ ಹೇಳುವ ಧಾಟಿಯಲ್ಲಿ ಈ ಗೀತೆಯಿದೆ. ಟ್ಯಾಗೋರರು ಹೇಳುವ ಆ ‘ಜನಗಣ ಮನದ ಅಧಿನಾಯಕ’, ‘ಭಾರತ ಭಾಗ್ಯವಿದಾತ’ ಯಾರು ಎನ್ನುವುದು ಇಂದಿಗೂ ಪ್ರಶ್ನೆಯಾಗಿಯೇ ಉಳಿದಿದೆ.
‘ಜನಗಣ ಮನ ಅಧಿನಾಯಕ’ ರಾಷ್ಟ್ರಗೀತೆಯಾಗಿ ಅಧಿಕೃತವಾಗಿ ಅಂಗೀಕೃತವಾದ ಮೇಲೂ, ಬಂಕಿಮ್ ಚಂದ್ರರ ‘ವಂದೇ ಮಾತರಂ’ ಗೀತೆ ತನ್ನ ಹೊಳಪನ್ನು ಕಳೆದು ಕಂಡಿಲ್ಲ ಎನ್ನುವುದು ವಿಶೇಷ. ಕ್ಷುಲ್ಲಕ ರಾಜಕೀಯ ಕಾರಣಕ್ಕಾಗಿ ಹೃಸ್ವಗೊಳಿಸಿದ ವಂದೇ ಮಾತರಂ ಗೀತೆಯ ಚರಣಗಳ ಅರ್ಥಾನುಸಂಧಾನ ಮಾಡಿದರೆ ಇಂದಿಗೂ ನಾವು ರೋಮಾಂಚಿತರಾಗುವುದರಲ್ಲಿ ಸಂದೇಹವಿಲ್ಲ.
ಕೋಟಿ ಕಂಠಗಳಿಂದ ಘರ್ಜನೆಯು ಮೊಳಗುತ್ತಿರುವಾಗ, ಕೋಟಿ ಕೈಗಳಲ್ಲಿ ಹಿಡಿದಿರುವ ಖಡ್ಗಗಳ ಮೊನೆಯು ಹೊಳೆಯುತ್ತಿರುವಾಗ ನೀನು ಅಬಲೆಯೆಂದು ಹೇಳುವ ಧೈರ್ಯ ಯಾರಿಗಿದೆ? ಅಪಾರ ಸಾಮರ್ಥ್ಯದಿಂದ ಶತ್ರುಸೈನ್ಯವನ್ನು ಹಿಮ್ಮೆಟ್ಟಿಸಿ ನಿನ್ನ ಸಂತಾನವನ್ನು ರಕ್ಷಿಸುತ್ತಿರುವ ನಿನಗೆ ವಂದನೆಗಳು. ನೀನೇ ನಮ್ಮ ಜ್ಞಾನ, ಚಾರಿತ್ರ್ಯ, ಧರ್ಮವಾಗಿದ್ದೀ.
ನೀನೇ ನಮ್ಮ ಹೃದಯ ಚೈತನ್ಯವಾಗಿದ್ದೀ. ನಮ್ಮ ಪ್ರಾಣವು ನೀನೇ ಆಗಿದ್ದೀ. ನಮ್ಮ ಭುಜಕೀರ್ತಿ, ಅಂತಃಕರಣದಲ್ಲಿನ ಕಾಳಿಯೂ ನೀನೇ. ದೇವಸ್ಥಾನದಲ್ಲಿ ಕಾಣುವ ವಿವಿಧ ಮೂರ್ತಿಗಳೂ ನಿನ್ನದೇ ರೂಪಗಳಾಗಿವೆ. ದಶಭುಜಗಳಲ್ಲಿ ಶಸ್ತ್ರಗಳನ್ನು ಧರಿಸಿದ ಶತ್ರುಸಂಹಾರಿಣಿ ದುರ್ಗೆಯೂ ನೀನೇ, ಕಮಲದ ಪುಷ್ಪಗಳಿಂದ ತುಂಬಿದ ಸರೋವರದಲ್ಲಿ ವಿಹರಿಸುವ ಲಕ್ಷ್ಮಿಯೂ ನೀನೇ.
ವಿದ್ಯಾ ಪ್ರದಾಯಿನಿಯಾದ ಶಾರದೆಯೂ ನೀನೇ. ಐಶ್ವರ್ಯದಾತ್ರಿ, ಪುಣ್ಯಪ್ರದಾಯಿನಿ ಮತ್ತು ಪಾವನ, ಪವಿತ್ರ ಜಲಪ್ರವಾಹಗಳಿಂದ ಮತ್ತು ಅಮೃತಮಯ ಫಲಗಳಿಂದ ಸಮೃದ್ಧಳಾಗಿರುವ ಮಾತೆಯೇ ನಿನ್ನ ಶ್ರೇಷ್ಠತನಕ್ಕೆ ಯಾವುದೇ ಹೋಲಿಕೆಯಿಲ್ಲ,. ಹೇ ಮಾತೆ, ಹೇ ಜನನಿ ನಿನಗೆ ನಮ್ಮ ಪ್ರಣಾಮಗಳು....