31 DAYS Movie: ನಿರಂಜನ್ ಶೆಟ್ಟಿ ಅಭಿನಯದ ʼ31 DAYSʼ ಚಿತ್ರತಂಡದಿಂದ ಸಕ್ಸಸ್ ಮೀಟ್
31 DAYS Movie: ನಿರಂಜನ್ ಶೆಟ್ಟಿ ನಾಯಕನಾಗಿ ನಟಿಸಿರುವ, ರಾಜ ರವಿಕುಮಾರ್ ನಿರ್ದೇಶಿಸಿರುವ ಹಾಗೂ ಖ್ಯಾತ ಸಂಗೀತ ನಿರ್ದೇಶಕ ವಿ. ಮನೋಹರ್ ಸಂಗೀತ ಸಂಯೋಜಿಸಿರುವ 150ನೇ ಚಿತ್ರ ʼ31 DAYSʼ ಕಳೆದ ವಾರ ರಾಜ್ಯಾದ್ಯಂತ ಬಿಡುಗಡೆಯಾಗಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಈ ಕುರಿತು ಮಾಹಿತಿ ನೀಡಲು ಚಿತ್ರತಂಡದಿಂದ ಸಕ್ಸಸ್ ಮೀಟ್ ಆಯೋಜಿಸಲಾಗಿತ್ತು.

-

ಬೆಂಗಳೂರು: ʼಜಾಲಿಡೇಸ್ʼ ಚಿತ್ರದ ಖ್ಯಾತಿಯ ನಿರಂಜನ್ ಶೆಟ್ಟಿ ನಾಯಕನಾಗಿ ನಟಿಸಿರುವ, ರಾಜ ರವಿಕುಮಾರ್ ನಿರ್ದೇಶಿಸಿರುವ ಹಾಗೂ ಖ್ಯಾತ ಸಂಗೀತ ನಿರ್ದೇಶಕ ವಿ. ಮನೋಹರ್ ಸಂಗೀತ ಸಂಯೋಜಿಸಿರುವ 150ನೇ ಚಿತ್ರ ʼ31 DAYSʼ (31 DAYS Movie) ಕಳೆದ ವಾರ ರಾಜ್ಯಾದ್ಯಂತ ಬಿಡುಗಡೆಯಾಗಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಈ ಕುರಿತು ಮಾಹಿತಿ ನೀಡಲು ಆಯೋಜಿಸಲಾಗಿದ್ದ ಸಕ್ಸಸ್ ಮೀಟ್ನಲ್ಲಿ ಚಿತ್ರತಂಡದ ಸದಸ್ಯರು ಮಾತನಾಡಿದರು.
ಚಿತ್ರದ ನಾಯಕ ನಿರಂಜನ್ ಶೆಟ್ಟಿ ಮಾತನಾಡಿ, ನಮ್ಮ ʼ31 DAYSʼ ಚಿತ್ರ ಸೆಪ್ಟೆಂಬರ್ 5ರಂದು ಬಿಡುಗಡೆಯಾಯಿತು. ಇದು ನನ್ನ ಅಭಿನಯದ 8ನೇ ಚಿತ್ರ. ನಮ್ಮ ನಿರೀಕ್ಷೆಗೂ ಮೀರಿ ಜನ ನಮ್ಮ ಚಿತ್ರವನ್ನು ಒಪ್ಪಿಕೊಂಡಿರುವುದಕ್ಕೆ ಬಹಳ ಖುಷಿಯಾಗಿದೆ. ಅದರಲ್ಲೂ ಇತ್ತೀಚೆಗೆ ನಮ್ಮ ಸಿನಿಮಾ ನೋಡಿದ ಪ್ರೇಕ್ಷಕರೊಬ್ಬರು ನನ್ನನ್ನು ಭೇಟಿಯಾಗಿ ಕೇವಲ ಎರಡು ಪ್ರಮುಖಪಾತ್ರಗಳನ್ನಿಟ್ಟುಕೊಂಡು ಎರಡು ಗಂಟೆ ಸಿನಿಮಾ ಮಾಡುವುದು ಸುಲಭವಲ್ಲ. ಅಲ್ಲಿ ನೀವು ಗೆದ್ದಿದ್ದೀರಿ. ʼ31 DAYSʼ ಎಲ್ಲೂ ಬೇಸರ ತರಿಸದ ಸಿನಿಮಾ ಎಂದರು. 1884ರಲ್ಲಿ ಅಮೋಲ್ ಪಾಲೇಕರ್ ಅವರು ಅಭಿನಯಿಸಿದ್ದ ʼವಸಂತ ಮಾಸʼ ಎಂಬ ಸಿನಿಮಾದಲ್ಲಿ ಕೇವಲ ಎರಡೇ ಪಾತ್ರಗಳಿದ್ದವು. ನಮ್ಮ ಚಿತ್ರಕ್ಕೆ ಆ ಚಿತ್ರವೂ ಸ್ಪೂರ್ತಿ ಎನ್ನಬಹುದು. ಪ್ರೇಕ್ಷಕರು ಹಾಗೂ ಚಿತ್ರ ಆರಂಭದ ದಿನದಿಂದಲೂ ಪತ್ರಕರ್ತರು ನೀಡುತ್ತಿರುವ ಪ್ರೋತ್ಸಾಹವೇ ಚಿತ್ರದ ಗೆಲುವಿಗೆ ಕಾರಣ.
ನಾನು ಬಿಡುಗಡೆಗೆ ಪೂರ್ವದಲ್ಲೇ ಬಹುತೇಕ ಸೇಫ್ ಆಗಿದ್ದೀನಿ. ಅದಕ್ಕೆ ನಾನು ರೂಪಿಸಿದ ಹಲವು ಯೋಜನೆಗಳೆ ಕಾರಣ. ಇನ್ನೂ ಈ ಚಿತ್ರದ ವಿತರಕರಾದ ಪ್ರಶಾಂತ್ ಹಾಗೂ ಬಾಬಣ್ಣ ಅವರ ಸಹಕಾರದಿಂದ ಈ ವಾರ ಚಿತ್ರಮಂದಿರಗಳ ಸಂಖ್ಯೆ ಸ್ವಲ್ಪ ಏರಿಕೆಯಾಗಿದೆ. ಈ ಸಂದರ್ಭದಲ್ಲಿ ನಾನು ಮತ್ತೊಂದು ವಿಷಯ ಹಂಚಿಕೊಳ್ಳುತ್ತಿದ್ದೇನೆ. ನಾವು ಸೀಮಿತ ಬಜೆಟ್ನ ಮೂರು ಸಿನಿಮಾಗಳನ್ನು N -STAR ENTERPRISES ಲಾಂಛನದಲ್ಲೇ ನಿರ್ಮಾಣ ಮಾಡಲು ಮುಂದಾಗಿದ್ದೇವೆ. ಕಥೆ ಸಿದ್ಧವಾಗಿದೆ. ಸದ್ಯದಲ್ಲೇ ಚಾಲನೆ ಸಿಗಲಿದೆ ಎಂದು ನಾಯಕ ನಿರಂಜನ್ ಶೆಟ್ಟಿ ತಿಳಿಸಿದರು. ವಿಶೇಷವಾಗಿ ತಮ್ಮ ಎಲ್ಲಾ ಕಾರ್ಯಗಳಿಗೂ ಜತೆಯಾಗಿ ನಿಂತಿರುವ ಪತ್ನಿ, ನಿರ್ಮಾಪಕಿ ನಾಗವೇಣಿ ಎನ್ ಶೆಟ್ಟಿ ಅವರಿಗೂ ನಿರಂಜನ್ ಶೆಟ್ಟಿ ಧನ್ಯವಾದ ಹೇಳಿದರು.
ಈ ಸುದ್ದಿಯನ್ನೂ ಓದಿ | Jewel Trend 2025: ದಾಂಡಿಯಾ ಸಂಭ್ರಮಕ್ಕೆ ಬಂತು ವೈವಿಧ್ಯಮಯ ಕುಂದನ್ ಆಭರಣಗಳು
ಚಿತ್ರದ ನಿರ್ದೇಶಕ ರಾಜ ರವಿಶಂಕರ್, ನಾಯಕಿ ಪ್ರಜ್ವಲಿ ಸುವರ್ಣ, ನಿರ್ಮಾಪಕಿ ನಾಗವೇಣಿ ಎನ್ ಶೆಟ್ಟಿ, ನಟ ಚಿಲ್ಲರ್ ಮಂಜು ಹಾಗೂ ವಿತರಕರಾದ ಪ್ರಶಾಂತ್ ಹಾಗೂ ಬಾಬಣ್ಣ ಚಿತ್ರದ ಯಶಸ್ಸನ್ನು ತಮ್ಮ ಮಾತುಗಳ ಮೂಲಕ ಹಂಚಿಕೊಂಡರು.