Bomb threat: ಹಾನಗಲ್ ಕುಮಾರೇಶ್ವರ ಮಠಕ್ಕೆ ಬಾಂಬ್ ಬೆದರಿಕೆ; ಬಾಂಬ್ ನಿಷ್ಕ್ರಿಯ ದಳ, ಡಾಗ್ ಸ್ಕ್ವಾಡ್ನಿಂದ ತಪಾಸಣೆ
Hangal News: ಹಾನಗಲ್ ಪಟ್ಟಣದ ಕುಮಾರೇಶ್ವರ ಮಠ ಸೇರಿ ಕಾರು, ಬಸ್, ಶಾಲೆಗಳು ಸೇರಿ ವಿವಿಧೆಡೆ ಆರ್ಡಿಎಕ್ಸ್ ಬಾಂಬ್ ಇಡಲಾಗಿದೆ ಎಂಬ ಬೆದರಿಕೆ ಕರೆ ಬಂದಿದೆ. ಈ ಬಗ್ಗೆ ಸ್ಪಿ ಯಶೋಧಾ ವಂಟಗೋಡಿ ಪ್ರತಿಕ್ರಿಯೆ ನೀಡಿದ್ದು, ಹಾನಗಲ್ ಜನರು ಆತಂಕಪಡುವ ಅವಶ್ಯಕತೆ ಇಲ್ಲ. ಕರೆ ಮಾಡಿರುವ ನಂಬರ್ ಟ್ರೇಸ್ ಮಾಡಿದ್ದು, ಆರೋಪಿಯನ್ನು ವಶಕ್ಕೆ ಪಡೆದು ವಿಚಾರ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

-

ಹಾವೇರಿ: ಜಿಲ್ಲೆಯ ಹಾನಗಲ್ ಪಟ್ಟಣದ ಕುಮಾರೇಶ್ವರ ಮಠ ಸೇರಿ ಕಾರು, ಬಸ್, ಶಾಲೆಗಳು ಸೇರಿ ವಿವಿಧೆಡೆ ಆರ್ಡಿಎಕ್ಸ್ ಬಾಂಬ್ (Bomb threat) ಇಡಲಾಗಿದೆ ಎಂಬ ಬೆದರಿಕೆ ಕರೆ ಬಂದಿದ್ದರಿಂದ ಶುಕ್ರವಾರ ಮಧ್ಯಾಹ್ನ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ತುರ್ತು ಸಹಾಯವಾಣಿ 112ಗೆ ಕರೆಬಂದ ತಕ್ಷಣವೇ ಎಚ್ಚೆತ್ತ ಪೊಲೀಸರು, ಬಾಂಬ್ ನಿಷ್ಕ್ರಿಯ ದಳ, ಡಾಗ್ ಸ್ಕ್ವಾಡ್ ಜತೆ ತೆರಳಿ ತಪಾಸಣೆ ನಡೆಸಿದ್ದಾರೆ.
ಈ ಬಗ್ಗೆ ಎಸ್ಪಿ ಯಶೋಧಾ ವಂಟಗೋಡಿ ಪ್ರತಿಕ್ರಿಯಿಸಿ, ಹಾನಗಲ್ ಜನರು ಆತಂಕಪಡುವ ಅವಶ್ಯಕತೆ ಇಲ್ಲ. ಕರೆ ಮಾಡಿರುವ ನಂಬರ್ ಟ್ರೇಸ್ ಮಾಡಿದ್ದು, ಆರೋಪಿಯನ್ನು ವಶಕ್ಕೆ ಪಡೆದು ವಿಚಾರ ಮಾಡಲಾಗಿದೆ. ಆತ ಮಾನಸಿಕ ಅಸ್ವಸ್ಥತೆಯಿಂದ ಕೂಡಿದವನೆಂದು ತಿಳಿದುಬಂದಿದ್ದು, ಹೆಚ್ಚಿನ ತನಿಖೆ ನಡೆಸಿ ಅವರ ಸಂಬಂಧಿಕರನ್ನು ವಿಚಾರಿಸಲಾಗಿದೆ.
ಈ ಸುದ್ದಿಯನ್ನೂ ಓದಿ | ದೆಹಲಿಯ ಮೌಲಾನಾ ಆಜಾದ್ ವೈದ್ಯಕೀಯ ಕಾಲೇಜಿಗೆ ಬಾಂಬ್ ಬೆದರಿಕೆ; ಆವರಣದಲ್ಲಿ ಶೋಧ
ಹರೀಶ ಎಂಬಾತ ಹುಸಿ ಬಾಂಬ್ ಬೆದರಿಕೆ ಕರೆ ಮಾಡಿದ್ದ. ಈತ ಡಿಆರ್ಡಿಒದಲ್ಲಿ ಡ್ರೈವರ್ ಆಗಿದ್ದ. ಆತನಿಗೆ ಮಾನಸಿಕ ಅಸ್ವಸ್ಥತೆ ಇದೆ ಎನ್ನಲಾಗಿದೆ. ಮುಂಜಾಗ್ರತವಾಗಿ ಬಾಂಬ್ ಪತ್ತೆಗಾಗಿ ಎಎಸ್ಪಿ ಮತ್ತು ಸೊಕೊ ಟೀಂ, ಹಾನಗಲ್ನ ಕುಮಾರೇಶ್ವರ ಮಠ, ಸುತ್ತಮುತ್ತಲಿನ ಪ್ರದೇಶಗಳಲ್ಲಿ ಚುರುಕಾಗಿ ಶೋಧ ಕಾರ್ಯಾಚರಣೆ ನಡೆಸಿದ್ದು, ಯಾವುದೇ ಸ್ಫೋಟಕ ಪತ್ತೆಯಾಗಿಲ್ಲ. ಯಾರೂ ಭಯ ಪಡುವ ಅವಶ್ಯಕತೆಯಿಲ್ಲ ಎಂದು ಎಸ್ಪಿ ತಿಳಿಸಿದ್ದಾರೆ.
ದೆಹಲಿ ಹೈಕೋರ್ಟ್ಗೆ ಬಾಂಬ್ ಬೆದರಿಕೆ- ಹೈ ಅಲರ್ಟ್ ಘೋಷಣೆ
ನವದೆಹಲಿ: ಹೈಕೋರ್ಟ್ ಗೆ (Delhi High Court) ಬಾಂಬ್ ಬೆದರಿಕೆ (Bomb Threat) ಬಂದ ಹಿನ್ನೆಲೆಯಲ್ಲಿ ಕಚೇರಿ ಕೆಲಸ ಕಾರ್ಯಗಳನ್ನು ಬೇರೆಡೆಗೆ ಸ್ಥಳಾಂತರಿಸಬೇಕಾದ ಪ್ರಸಂಗ ದೆಹಲಿಯಲ್ಲಿ ಶುಕ್ರವಾರ ನಡೆಯಿತು. ನ್ಯಾಯಾಧೀಶರ ಕೊಠಡಿ ( judge rooms), ಇತರ ಪ್ರದೇಶಗಳಲ್ಲಿ ಸ್ಫೋಟಕಗಳನ್ನು ಇರಿಸಲಾಗಿದೆ ಎಂದು ಶುಕ್ರವಾರ ದೆಹಲಿ ಹೈಕೋರ್ಟ್ಗೆ ಬಾಂಬ್ ಬೆದರಿಕೆ ಬಂದಿದ್ದರಿಂದ ಕಚೇರಿ ಕೆಲಸವನ್ನು ಆವರಣಕ್ಕೆ ಸ್ಥಳಾಂತರಿಸಲಾಯಿತು. ಮೂರು ಸ್ಫೋಟಕಗಳನ್ನು ಇರಿಸಲಾಗಿದೆ ಎಂದು ಬೆದರಿಕೆ ಪತ್ರದಲ್ಲಿ ಉಲ್ಲೇಖಿಸಲಾಗಿದ್ದು, ಮಧ್ಯಾಹ್ನ 2 ಗಂಟೆಯೊಳಗೆ ಸ್ಥಳಾಂತರವಾಗದಿದ್ದರೆ ಸ್ಪೋಟವಾಗುವುದಾಗಿ ಬೆದರಿಕೆ ಒಡ್ಡಲಾಗಿತ್ತು.
ದೆಹಲಿ ಹೈಕೋರ್ಟ್ ನ ನ್ಯಾಯಾಧೀಶರ ಕೊಠಡಿ ಮತ್ತು ಆವರಣದ ಇತರ ಸ್ಥಳಗಳಲ್ಲಿ ಮೂರು ಸ್ಫೋಟಕಗಳನ್ನು ಇರಿಸಲಾಗಿದೆ ಎಂದು ಬಾಂಬ್ ಬೆದರಿಕೆ ಬಂದ ಹಿನ್ನೆಲೆಯಲ್ಲಿ ಮಧ್ಯಾಹ್ನ 2 ಗಂಟೆಯೊಳಗೆ ಸ್ಥಳಾಂತರವನ್ನು ಪೂರ್ಣಗೊಳಿಸಬೇಕು ಎಂದು ಬೆದರಿಕೆ ಪತ್ರದಲ್ಲಿ ಎಚ್ಚರಿಸಲಾಗಿದೆ.
ಈ ಬೆದರಿಕೆಯು ಪಾಕಿಸ್ತಾನ ಐಎಸ್ಐ ನೊಂದಿಗೆ ಸಂಪರ್ಕ ಹೊಂದಿರುವುದಾಗಿ ಉಲ್ಲೇಖಿಸಲಾಗಿದೆ. ನ್ಯಾಯಾಧೀಶರ ಕೊಠಡಿ ಮಧ್ಯಾಹ್ನ ಇಸ್ಲಾಮಿಕ್ ಪ್ರಾರ್ಥನೆಯ ಅನಂತರ ಸ್ಫೋಟಗೊಳ್ಳುತ್ತದೆ ಎಂದು ಪತ್ರದಲ್ಲಿ ತಿಳಿಸಲಾಗಿದೆ. ಬೆದರಿಕೆ ಬಂದಿರುವ ಹಿನ್ನೆಲೆಯಲ್ಲಿ ನ್ಯಾಯಾಲಯದ ಆವರಣದಲ್ಲಿ ಶೋಧ ಕಾರ್ಯ ತೀವ್ರಗೊಳಿಸಲಾಗಿದೆ.
ದೆಹಲಿ ಮುಖ್ಯಮಂತ್ರಿಗಳ ಸಚಿವಾಲಯ, ಮೌಲಾನಾ ಆಜಾದ್ ವೈದ್ಯಕೀಯ ಕಾಲೇಜು (MAMC) ಮತ್ತು ರಾಷ್ಟ್ರ ರಾಜಧಾನಿಯಲ್ಲಿರುವ ಯೂನಿವರ್ಸಿಟಿ ಕಾಲೇಜ್ ಆಫ್ ಮೆಡಿಕಲ್ ಸೈನ್ಸ್ಗೆ ಮಂಗಳವಾರ ಬಾಂಬ್ ಬೆದರಿಕೆ ಕರೆಗಳು ಬಂದಿದ್ದವು. ತನಿಖೆಯ ಬಳಿಕ ಇದೊಂದು ಸುಳ್ಳು ಬೆದರಿಕೆ ಎನ್ನುವುದು ಸ್ಪಷ್ಟವಾಯಿತು. ಮೂರು ಸ್ಥಳಗಳಲ್ಲಿ ಒಂದು ಕಿ.ಮೀ. ಸ್ಫೋಟದ ವ್ಯಾಪ್ತಿಯನ್ನು ಹೊಂದಿರುವ ಆರ್ಡಿಎಕ್ಸ್ ಅನ್ನು ಇರಿಸಲಾಗಿದೆ ಎಂದು ಬೆದರಿಕೆ ಪತ್ರದಲ್ಲಿ ಉಲ್ಲೇಖಿಸಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಉಪ ಪೊಲೀಸ್ ಆಯುಕ್ತ (ಶಹದಾರ) ಪ್ರಶಾಂತ್ ಗೌತಮ್, ಬೆಳಗ್ಗೆ 11 ಗಂಟೆ ಸುಮಾರಿಗೆ ಕಾಲೇಜು ಆವರಣದಲ್ಲಿ ಬಾಂಬ್ ಇರುವ ಬಗ್ಗೆ ಇಮೇಲ್ ಬಂದಿದೆ ಎಂದು ಜಿಟಿಬಿ ಆಸ್ಪತ್ರೆಯ ಯುಸಿಎಂಎಸ್ನಿಂದ ಮಾಹಿತಿ ಬಂದಿತು. ತಕ್ಷಣವೇ ಕಾಲೇಜನ್ನು ತೆರವುಗೊಳಿಸಲಾಯಿತು. ಬಳಿಕ ಬಾಂಬ್ ಶ್ವಾನ ದಳವನ್ನು ಕರೆಸಿ ಕಟ್ಟಡದ ಪ್ರತಿಯೊಂದು ಮೂಲೆಯನ್ನೂ ಪರಿಶೀಲಿಸಲಾಯಿತು. ಬಳಿಕ ಇದೊಂದು ಸುಳ್ಳು ಬೆದರಿಕೆ ಎನ್ನುವುದು ಸ್ಪಷ್ಟವಾಗಿದೆ ಎಂದು ಅವರು ತಿಳಿಸಿದರು.
ಇದನ್ನೂ ಓದಿ: Murder Case: ಗೆಳೆಯನ ಜೊತೆ ಚಕ್ಕಂದ; ಅಡ್ಡ ಬಂದ ಗಂಡನನ್ನೇ ಮುಗಿಸಿ ಹಾರ್ಟ್ ಅಟ್ಯಾಕ್ ಎಂದು ಕಥೆ ಕಟ್ಟಿದ್ಲು!
ಬೆದರಿಕೆ ಸಂದೇಶಗಳು ಬಂದಿರುವ ಹಿನ್ನೆಲೆಯಲ್ಲಿ ದೆಹಲಿ ಅಗ್ನಿಶಾಮಕ ಸೇವೆ (DFS) ಹಲವಾರು ಮುನ್ನೆಚ್ಚರಿಕೆ ಕ್ರಮವನ್ನು ಕೈಗೊಂಡಿದೆ. ಅಗ್ನಿಶಾಮಕ ದಳದ ವಾಹನಗಳನ್ನು ಸ್ಥಳಕ್ಕೆ ರವಾನಿಸಲಾಗಿದೆ.