Swapna Mantapa Movie: ಸಾಹಿತಿ ಬರಗೂರು ರಾಮಚಂದ್ರಪ್ಪ ನಿರ್ದೇಶನದ ‘ಸ್ವಪ್ನಮಂಟಪʼ ಚಿತ್ರ ಜು.25ಕ್ಕೆ ರಿಲೀಸ್
Swapna Mantapa Movie: ಸಾಹಿತಿ ಪ್ರೊ. ಬರಗೂರು ರಾಮಚಂದ್ರಪ್ಪ ಅವರು ನಿರ್ದೇಶಿಸಿರುವ ‘ಸ್ವಪ್ನಮಂಟಪʼ ಕನ್ನಡ ಚಿತ್ರವು ಇದೇ ಜು. 25ರಂದು ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಈ ಚಿತ್ರವು ಅನೇಕ ಅಂತಾರಾಷ್ಟ್ರೀಯ ಚಿತ್ರೋತ್ಸವಗಳಿಗೆ ಆಯ್ಕೆಯಾಗಿ ಪ್ರದರ್ಶನ ಕಂಡಿದೆ. ಚಿತ್ರದ ನಾಯಕ-ನಾಯಕಿಯಾಗಿ ವಿಜಯ ರಾಘವೇಂದ್ರ ಮತ್ತು ರಂಜಿನಿ ರಾಘವನ್ ಅಭಿನಯಿಸಿದ್ದಾರೆ.


ಬೆಂಗಳೂರು: ಮೈಸೂರಿನ ಬಾಬುನಾಯಕ್ ಅವರು ಮಲೈ ಮಹಾದೇಶ್ವರ ಎಂಟರ್ಪ್ರೈಸಸ್ ಸಂಸ್ಥೆಯಿಂದ ನಿರ್ಮಿಸಿರುವ, ಸಾಹಿತಿ ಪ್ರೊ. ಬರಗೂರು ರಾಮಚಂದ್ರಪ್ಪ ಅವರು ನಿರ್ದೇಶಿಸಿರುವ ‘ಸ್ವಪ್ನಮಂಟಪʼ ಕನ್ನಡ ಚಿತ್ರವು (Swapna mantapa Movie) ಇದೇ ಜುಲೈ ತಿಂಗಳ 25 ರಂದು ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಅನೇಕ ಸದಭಿರುಚಿ ಚಿತ್ರಗಳನ್ನು ಬಿಡುಗಡೆ ಮಾಡಿರುವ ಮಾರ್ಸ್ ಸುರೇಶ್ ಅವರು ತಮ್ಮ ಸಂಸ್ಥೆಯಿಂದ ‘ಸ್ವಪ್ನಮಂಟಪʼ ವನ್ನು ತೆರೆಗೆ ತರುತ್ತಿದ್ದಾರೆ.
ʼಸ್ವಪ್ನಮಂಟಪʼವು ಬರಗೂರು ರಾಮಚಂದ್ರಪ್ಪ ಅವರ ಅದೇ ಹೆಸರಿನ ಕಾದಂಬರಿಯನ್ನು ಆಧರಿಸಿದೆ. ಇದು ಪಾರಂಪರಿಕ ಸ್ಥಳಗಳ ಸಂರಕ್ಷಣೆಯನ್ನು ಪ್ರತಿಪಾದಿಸುವ ಚಿತ್ರವಾಗಿದೆ. ಒಂದು ಹಳ್ಳಿಯಲ್ಲಿ ರಾಜನೊಬ್ಬ ನಿರ್ಮಿಸಿದ ‘ಸ್ವಪ್ನಮಂಟಪʼ ವನ್ನು ಕೆಲವರು ಕೆಡವಿ ಅನ್ಯ ಕಾರ್ಯಗಳಿಗೆ ಬಳಸಲು ಯತ್ನಿಸಿದಾಗ ಕಥಾ ನಾಯಕ ಮತ್ತು ನಾಯಕಿ, ಜನರಲ್ಲಿ ಜಾಗೃತಿ ಮೂಡಿಸಿ ಆ ಪಾರಂಪರಿಕ ಸ್ಥಳವನ್ನು ಉಳಿಸುವ ಮತ್ತು ಅನೇಕ ತಿರುವುಗಳನ್ನು ಒಳಗೊಂಡಿರುವ ಕಥಾವಸ್ತು ಈ ಚಿತ್ರದಲ್ಲಿದೆ.
ಈ ಚಿತ್ರವು ಅನೇಕ ಅಂತಾರಾಷ್ಟ್ರೀಯ ಚಿತ್ರೋತ್ಸವಗಳಿಗೆ ಆಯ್ಕೆಯಾಗಿ ಪ್ರದರ್ಶನ ಕಂಡಿದೆ. ಬರಗೂರರೇ ತಮ್ಮ ಕಥಾವಸ್ತುವಿಗೆ ಚಿತ್ರಕತೆ, ಸಂಭಾಷಣೆ, ಗೀತರಚನೆ ಮಾಡಿ ನಿರ್ದೇಶಿಸಿದ್ದಾರೆ. ನಾಯಕ-ನಾಯಕಿಯಾಗಿ ವಿಜಯ ರಾಘವೇಂದ್ರ ಮತ್ತು ರಂಜಿನಿ ರಾಘವನ್ ಅಭಿನಯಿಸಿದ್ದಾರೆ. ಇವರಿಬ್ಬರೂ ದ್ವಿಪಾತ್ರದಲ್ಲಿ ಇರುವುದು ಒಂದು ವಿಶೇಷ. ಜತೆಗೆ ಸುಂದರರಾಜ್, ಶೋಭಾ ರಾಘವೇಂದ್ರ, ರಜನಿ, ಸುಂದರರಾಜ ಅರಸು, ಅಂಬರೀಶ್ ಸಾರಂಗಿ, ರಾಜಪ್ಪ ದಳವಾಯಿ, ವೆಂಕಟರಾಜು, ಉಮ್ಮತ್ತೂರು ಬಸವರಾಜು, ಶಿವಲಿಂಗ ಪ್ರಸಾದ್, ಮೈಸೂರು ಮಂಜುಳ ಮುಂತಾದವರು ತಾರಾಗಣದಲ್ಲಿದ್ದಾರೆ.
ಈ ಸುದ್ದಿಯನ್ನೂ ಓದಿ | Jewel Fashion 2025: ಸೀಸನ್ನಲ್ಲಿ ಟ್ರೆಂಡಿಯಾದ ವೈವಿಧ್ಯಮಯ ಪರ್ಲ್ ನೆಕ್ಲೇಸ್ಗಳಿವು
ಸುರೇಶ್ ಅರಸು ಸಂಕಲನ, ನಾಗರಾಜ ಆದವಾನಿ ಛಾಯಾಗ್ರಹಣ, ಶಮಿತಾ ಮಲ್ನಾಡ್ ಸಂಗೀತ ನಿರ್ದೇಶನ, ತ್ರಿಭುವನ್ ನೃತ್ಯ ಸಂಯೋಜನೆ, ಹೊಸ್ಮನೆ ಮೂರ್ತಿ ಕಲಾವಿನ್ಯಾಸ, ನಟರಾಜ್ಶಿವು ಮತ್ತು ಪ್ರವೀಣ್, ಸಹ ನಿರ್ದೇಶನ ಈ ಚಿತ್ರಕ್ಕಿದೆ. ಸಹ ನಿರ್ಮಾಪಕರು ಎಚ್.ಪಿ. ಕವಿತಾ.