Budget 2026: ಬೆಂಗಳೂರು ಸೇರಿ 7 ಕಡೆ ಹೈಸ್ಪೀಡ್ ರೈಲು ಕಾರಿಡಾರ್ ಸ್ಥಾಪನೆ
ಕೇಂದ್ರ ಬಜೆಟ್ನಲ್ಲಿ ನಿರ್ಮಲಾ ಸೀತಾರಾಮನ್ ದೇಶದ ಸಾರಿಗೆ ಮೂಲಸೌಕರ್ಯಕ್ಕೆ ಬೃಹತ್ ಉತ್ತೇಜನ ನೀಡುವ ಯೋಜನೆಯನ್ನು ಘೋಷಿಸಿದ್ದಾರೆ. ಚೆನ್ನೈ-ಬೆಂಗಳೂರು ಸೇರಿದಂತೆ ಪ್ರಮುಖ ನಗರಗಳನ್ನು ಸಂಪರ್ಕಿಸುವ 7 ಹೈಸ್ಪೀಡ್ ರೈಲ್ವೆ ಕಾರಿಡಾರ್ಗಳನ್ನು ಸ್ಥಾಪಿಸಲಾಗುತ್ತದೆ ಎಂದು ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.
ಸಾಂದರ್ಭಿಕ ಚಿತ್ರ. -
ನವದೆಹಲಿ, ಫೆ. 1: ಕೇಂದ್ರ ಬಜೆಟ್ನಲ್ಲಿ (Union Budget 2026) ನಿರ್ಮಲಾ ಸೀತಾರಾಮನ್ ದೇಶದ ಸಾರಿಗೆ ಮೂಲಸೌಕರ್ಯಕ್ಕೆ ಬೃಹತ್ ಉತ್ತೇಜನ ನೀಡುವ ಯೋಜನೆಯನ್ನು ಘೋಷಿಸಿದ್ದಾರೆ. ಚೆನ್ನೈ-ಬೆಂಗಳೂರು ಸೇರಿದಂತೆ ಪ್ರಮುಖ ನಗರಗಳನ್ನು ಸಂಪರ್ಕಿಸುವ 7 ಹೈಸ್ಪೀಡ್ ರೈಲ್ವೆ ಕಾರಿಡಾರ್ಗಳನ್ನು (High-Speed Rail Corridors) ಸ್ಥಾಪಿಸಲು ಕೇಂದ್ರ ಸರ್ಕಾರ ನಿರ್ಧರಿಸಿರುವುದಾಗಿ ತಿಳಿಸಿದ್ದಾರೆ.
ಮುಂಬೈ–ಪುಣೆ, ಪುಣೆ–ಹೈದರಾಬಾದ್, ಹೈದರಾಬಾದ್–ಬೆಂಗಳೂರು, ಹೈದರಾಬಾದ್–ಚೆನ್ನೈ, ಚೆನ್ನೈ–ಬೆಂಗಳೂರು, ದೆಹಲಿ–ವಾರಾಣಸಿ ಹಾಗೂ ವಾರಾಣಸಿ–ಸಿಲಿಗುರಿ ನಡುವೆ ಹೈಸ್ಪೀಡ್ ರೈಲು ಮಾರ್ಗಗಳನ್ನು ಅಭಿವೃದ್ಧಿಪಡಿಸಲಾಗುತ್ತದೆ ಎಂದು ನಿರ್ಮಲಾ ಸೀತಾರಾಮನ್ ಘೋಷಿಸಿದ್ದಾರೆ.
ಈ ಮಾರ್ಗಗಳು ಬಹು ರಾಜ್ಯಗಳು ಮತ್ತು ಆರ್ಥಿಕ ವಲಯಗಳಲ್ಲಿ ವ್ಯಾಪಿಸಿವೆ. ಮಹಾರಾಷ್ಟ್ರದ ಕೈಗಾರಿಕಾ ಪ್ರದೇಶದಿಂದ ಕರ್ನಾಟಕ ಮತ್ತು ತೆಲಂಗಾಣದ ತಂತ್ರಜ್ಞಾನ ಕೇಂದ್ರಗಳವರೆಗೆ ಮತ್ತು ಉತ್ತರ ಪ್ರದೇಶದ ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಪ್ರದೇಶದಿಂದ ಸಿಲಿಗುರಿ ಮೂಲಕ ಈಶಾನ್ಯ ಗೇಟ್ವೇವರೆಗೆ ತಲುಪಲಿವೆ.
ಹೈ-ಸ್ಪೀಡ್ ಕಾರಿಡಾರ್ಗಳು ಪ್ರಯಾಣದ ಸಮಯವನ್ನು ಗಣನೀಯವಾಗಿ ಕಡಿಮೆ ಮಾಡುವ ಸಾಮರ್ಥ್ಯವನ್ನು ಹೊಂದಿವೆ. ಉದಾಹರಣೆಗೆ: ಪ್ರಸ್ತುತ ರೈಲು ಮೂಲಕ ಮೂರು ಗಂಟೆಗಳಿಗಿಂತ ಹೆಚ್ಚು ಸಮಯ ತೆಗೆದುಕೊಳ್ಳುವ ಮುಂಬೈ- ಪುಣೆ ಪ್ರಯಾಣವನ್ನು ಒಂದೂವರೆ ಗಂಟೆಗೆ ಕಡಿಮೆ ಮಾಡುವ ನಿರೀಕ್ಷೆಯಿದೆ.
ತಂತ್ರಜ್ಞಾನ, ಉತ್ಪಾದನೆ ಮತ್ತು ಸೇವೆಗಳ ಪ್ರಮುಖ ಕೇಂದ್ರಗಳಾದ ಹೈದರಾಬಾದ್, ಬೆಂಗಳೂರು ಮತ್ತು ಚೆನ್ನೈ ನಡುವಿನ ಅಂತರ ಕಡಿಮೆಯಾಗಲಿದೆ. ಇದು ಅಂತರ-ರಾಜ್ಯ ವ್ಯವಹಾರ ಏಕೀಕರಣವನ್ನು ಹೆಚ್ಚಿಸುವ ನಿರೀಕ್ಷೆ ಇದೆ. ದೆಹಲಿ-ವಾರಣಾಸಿ ಮತ್ತು ವಾರಣಾಸಿ-ಸಿಲಿಗುರಿ ಕಾರಿಡಾರ್ಗಳು ಸಂಪರ್ಕವನ್ನು ಸುಧಾರಿಸುತ್ತದೆ ಮತ್ತು ಉತ್ತರ ಮತ್ತು ಪೂರ್ವ ಪ್ರದೇಶಗಳನ್ನು ಹೆಚ್ಚು ಪರಿಣಾಮಕಾರಿಯಾಗಿ ಸಂಪರ್ಕಿಸುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.