Indian Railways: ರೈಲ್ವೇ ಪ್ರಯಾಣಿಕರೇ ಅಲರ್ಟ್...ಅಲರ್ಟ್! ತತ್ಕಾಲ್ ಟಿಕೆಟ್ ಬುಕ್ಕಿಂಗ್ಗೆ ಬಂದಿದೆ ಹೊಸ ರೂಲ್
ತತ್ಕಾಲ್ ಯೋಜನೆಯ ದುರಪಯೋಗದ ಬಗ್ಗೆ ಭಾರಿ ಟೀಕೆಗಳು ಕೇಳಿ ಬಂದ ಬಳಿಕ ಇದೀಗ ಇದನ್ನು ತಡೆಗಟ್ಟಲು ರೈಲ್ವೆ ಇಲಾಖೆಯು (Indian Railways) ಒಂದು ಮಹತ್ವದ ಹೆಜ್ಜೆಯನ್ನು ಇಟ್ಟಿದೆ. ಪ್ರಯಾಣದ ಕೊನೆಯ ಹಂತದಲ್ಲಿ ಟಿಕೆಟ್ ಬುಕ್ಕಿಂಗ್ ಮಾಡುವಾಗ ಹೆಚ್ಚಿನ ಪಾರದರ್ಶಕತೆಯನ್ನು ತೋರ್ಪಡಿಸಲು ಜೂನ್ ತಿಂಗಳ ಅಂತ್ಯದ ವೇಳೆಗೆ ತತ್ಕಾಲ್ ಟಿಕೆಟ್ ಬುಕ್ಕಿಂಗ್ ಗಳಿಗೆ ಇ-ಆಧಾರ್ ದೃಢೀಕರಣವನ್ನು ಕಡ್ಡಾಯಗೊಳಿಸಲಾಗುವುದು ಎಂದು ಭಾರತೀಯ ರೈಲ್ವೆ ಇಲಾಖೆ ಹೇಳಿದೆ.


ನವದೆಹಲಿ: ತತ್ಕಾಲ್ ಟಿಕೆಟ್ಗಳನ್ನು (Tatkal ticket) ಬುಕ್ ಮಾಡಲು ಇ-ಆಧಾರ್ ದೃಢೀಕರಣವನ್ನು ಶೀಘ್ರದಲ್ಲೇ ಭಾರತೀಯ ರೈಲ್ವೆಯು (Indian Railways) ಪ್ರಾರಂಭಿಸಲಿದ್ದು, ಇದರಿಂದ ಬಳಕೆದಾರರಿಗೆ ಅಗತ್ಯವಿದ್ದಾಗ ದೃಢೀಕೃತ ಟಿಕೆಟ್ಗಳನ್ನು ಪಡೆಯುವುದು ಸಾಧ್ಯವಾಗುತ್ತದೆ. ಟಿಕೆಟ್ ವಂಚನೆ ತಡೆಗಟ್ಟಲು ಮತ್ತು ಸೇವೆಯಲ್ಲಿ ದಕ್ಷತೆಯನ್ನು ಹೆಚ್ಚಿಸಲು ಜೂನ್ ತಿಂಗಳಾಂತ್ಯದ ವೇಳೆಗೆ ತತ್ಕಾಲ್ ಟಿಕೆಟ್ ಬುಕ್ಕಿಂಗ್ ಗಳಿಗೆ ಇ-ಆಧಾರ್ ದೃಢೀಕರಣ ಕಡ್ಡಾಯವಾಗಲಿದೆ ಎಂದು ಭಾರತೀಯ ರೈಲ್ವೆ ಇಲಾಖೆ ಹೇಳಿದೆ. ಈ ಕುರಿತು ರೈಲ್ವೆ ಸಚಿವ (Railways Minister) ಅಶ್ವಿನಿ ವೈಷ್ಣವ್ (Ashwini Vaishnaw) ಅವರು ಕೂಡ ಎಕ್ಸ್ ನಲ್ಲಿ ಟ್ವಿಟ್ ಮಾಡಿ ಮಾಹಿತಿ ಹಂಚಿಕೊಂಡಿದ್ದಾರೆ.
ಪ್ರಯಾಣದ ಕೊನೆಯ ಹಂತದಲ್ಲಿ ಟಿಕೆಟ್ ಬುಕ್ಕಿಂಗ್ ಮಾಡುವಾಗ ಹೆಚ್ಚಿನ ಪಾರದರ್ಶಕತೆಯನ್ನು ತೋರ್ಪಡಿಸಲು ಜೂನ್ ತಿಂಗಳ ಅಂತ್ಯದ ವೇಳೆಗೆ ಭಾರತೀಯ ರೈಲ್ವೆ ಎಲ್ಲಾ ತತ್ಕಾಲ್ ಟಿಕೆಟ್ ಬುಕ್ಕಿಂಗ್ ಗಳಿಗೆ ಇ-ಆಧಾರ್ ದೃಢೀಕರಣವನ್ನು ಕಡ್ಡಾಯವಾಗಿ ಜಾರಿಗೆ ತರಲು ಸಿದ್ಧತೆ ನಡೆಸುತ್ತಿದೆ.
ಈ ಕುರಿತು ಎಕ್ಸ್ ನಲ್ಲಿ ಟ್ವಿಟ್ ಮಾಡಿರುವ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್, ಭಾರತೀಯ ರೈಲ್ವೆಯು ತತ್ಕಾಲ್ ಟಿಕೆಟ್ಗಳನ್ನು ಬುಕ್ ಮಾಡಲು ಶೀಘ್ರದಲ್ಲೇ ಇ-ಆಧಾರ್ ದೃಢೀಕರಣವನ್ನು ಪ್ರಾರಂಭಿಸಲಿದೆ. ಇದು ನಿಜವಾಗಿ ಅಗತ್ಯವಿರುವವರಿಗೆ ದೃಢೀಕೃತ ಟಿಕೆಟ್ಗಳನ್ನು ಪಡೆಯಲು ಸಹಾಯ ಮಾಡುತ್ತದೆ. ಅಲ್ಲದೇ ಇದು ತುರ್ತು ಟಿಕೆಟ್ ಬುಕ್ಕಿಂಗ್ ಗಳನ್ನು ಕಾನೂನುಬದ್ಧವಾಗಿ ಪ್ರಯಾಣಿಕರಿಗೆ ಹೆಚ್ಚು ಸುಲಭ ಮತ್ತು ಸುರಕ್ಷಿತವಾಗಿಸಲು ಒಂದು ಪ್ರಮುಖ ಹೆಜ್ಜೆಯಾಗಿದೆ ಎಂದು ಅವರು ತಿಳಿಸಿದ್ದಾರೆ.
ತತ್ಕಾಲ್ ಯೋಜನೆಯ ದುರಪಯೋಗದಿಂದ ಭಾರಿ ಟೀಕೆಗಳು ಕೇಳಿ ಬಂದ ಬಳಿಕ ಇದೀಗ ಇದನ್ನು ತಡೆಗಟ್ಟಲು ರೈಲ್ವೆ ಇಲಾಖೆಯು ಒಂದು ಪ್ರಮುಖ ಹೆಜ್ಜೆಯನ್ನು ಇಟ್ಟಿದೆ. ಆಧಾರ್ ದೃಢೀಕರಣದಿಂದಾಗಿ ಅರ್ಹ ಪ್ರಯಾಣಿಕರಿಗೆ ತತ್ಕಾಲ್ ಟಿಕೆಟ್ಗಳನ್ನು ಪಡೆಯಲು ಸಾಧ್ಯವಾಗಲಿದೆ. ಈ ಹಿಂದೆ ಕೆಲವು ಟಿಕೆಟ್ ಬುಕ್ಕಿಂಗ್ ಮಾಡುವ ಏಜೆಂಟ್ಗಳು ನಕಲಿ ಗುರುತು ನೀಡಿ ಟಿಕೆಟ್ ಗಳನ್ನು ಮುಂಗಡವಾಗಿ ಕಾಯ್ದಿರಿಸಿಕೊಳ್ಳುತ್ತಿದ್ದರು. ಆದರೆ ಇನ್ನು ಮುಂದೆ ಅದು ಸಾಧ್ಯವಾಗುವುದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬುಕಿಂಗ್ ಪ್ರಕ್ರಿಯೆ ಹೇಗಿರುತ್ತೆ?
ಇನ್ನು ಮುಂದೆ ಭಾರತೀಯ ರೈಲ್ವೆಯ ಎಲ್ಲಾ ತತ್ಕಾಲ್ ಟಿಕೆಟ್ ಬುಕ್ಕಿಂಗ್ಗಳಿಗೆ ಆಧಾರ್ ಗುರುತು ಪರಿಶೀಲನೆ ಕಡ್ಡಾಯವಾಗಲಿದೆ. ಇದು ಐಆರ್ ಸಿಟಿಸಿ ಪೋರ್ಟಲ್ ಮೂಲಕ ಆನ್ಲೈನ್ ಬುಕ್ಕಿಂಗ್ ಮತ್ತು ರೈಲ್ವೆ ಕೌಂಟರ್ಗಳಲ್ಲಿ ನಡೆಸುವ ಆಫ್ಲೈನ್ ಬುಕ್ಕಿಂಗ್ ಗಳಿಗೂ ಅನ್ವಯವಾಗುತ್ತದೆ. ಈ ವ್ಯವಸ್ಥೆಯ ಬಳಿಕ ಪ್ರತಿ ತತ್ಕಾಲ್ ಟಿಕೆಟ್ ಅನ್ನು ಪರಿಶೀಲಿಸಿದ ಆಧಾರ್ ಐಡಿಗೆ ಡಿಜಿಟಲ್ ಆಗಿ ಲಿಂಕ್ ಮಾಡಲಾಗುತ್ತದೆ. ಇದರಿಂದ ಅರ್ಹ ಪ್ರಯಾಣಿಕರು ಮಾತ್ರ ಈ ಸೇವೆಯನ್ನು ಪಡೆಯಬಹುದಾಗಿದೆ.
ಪ್ರಯೋಜನಗಳು
ತತ್ಕಾಲ್ ಟಿಕೆಟ್ ಬುಕ್ಕಿಂಗ್ಗಳಿಗೆ ಆಧಾರ್ ಗುರುತು ಪರಿಶೀಲನೆ ಕಡ್ಡಾಯವಾಗಿರುವುದರಿಂದ ಆಧಾರ್ನೊಂದಿಗೆ ತಮ್ಮ ಐಆರ್ ಸಿಟಿಸಿ ಖಾತೆಗಳನ್ನು ಲಿಂಕ್ ಮಾಡುವ ಬಳಕೆದಾರರಿಗೆ ಬುಕ್ಕಿಂಗ್ ವಿಂಡೋದ ಮೊದಲ 10 ನಿಮಿಷಗಳಲ್ಲಿ ತತ್ಕಾಲ್ ಟಿಕೆಟ್ಗಳನ್ನು ಬುಕ್ ಮಾಡಲು ವಿಶೇಷ ಪ್ರವೇಶವನ್ನು ನೀಡಲಾಗುತ್ತದೆ. ಇದರಿಂದ ಮೊದಲ ಹಂತದಲ್ಲಿ ಆಧಾರ್ನೊಂದಿಗೆ ತಮ್ಮ ಐಆರ್ ಸಿಟಿಸಿ ಖಾತೆಗಳನ್ನು ಲಿಂಕ್ ಮಾಡಿರುವವರಿಗೆ ಮಾತ್ರ ಟಿಕೆಟ್ ಬುಕ್ಕಿಂಗ್ ಮಾಡಲು ಅವಕಾಶ ದೊರೆಯುತ್ತದೆ.
ಈ ಸಂದರ್ಭದಲ್ಲಿ ಸಾಮೂಹಿಕ ಬುಕ್ಕಿಂಗ್ ಮತ್ತು ಟಿಕೆಟ್ ಮರುಮಾರಾಟದಂತಹ ವಹಿವಾಟುಗಳನ್ನು ಮಾಡದಂತೆ ನಿರ್ಬಂಧಿಸಲಾಗುತ್ತದೆ. ಇದು ನಿಯಮಿತ ಪ್ರಯಾಣಿಕರಿಗೆ ನ್ಯಾಯಯುತ ಪ್ರವೇಶವನ್ನು ಖಚಿತಪಡಿಸುತ್ತದೆ.
ಇದನ್ನೂ ಓದಿ: Vijay Mallya: ನಾನು ಕಳ್ಳ ಅಲ್ಲ... ಆರೋಪಗಳಿಗೆ ಪಾಡ್ಕಾಸ್ಟ್ನಲ್ಲಿ ವಿಜಯ್ ಮಲ್ಯ ಉತ್ತರ
ವಂಚನೆ ತಡೆ ಸಾಧ್ಯವೇ ?
ತತ್ಕಾಲ್ ಟಿಕೆಟ್ ಬುಕ್ಕಿಂಗ್ಗಳಿಗೆ ಆಧಾರ್ ದೃಢೀಕರಣ ಕಡ್ಡಾಯವಾಗಿರುವುದರಿಂದ ಟಿಕಟ್ ಬುಕ್ಕಿಂಗ್ ನಲ್ಲಾಗುವ ವಂಚನೆಯನ್ನು ತಡೆಗಟ್ಟಬಹುದು ಎನ್ನಲಾಗುತ್ತಿದೆ. ಇತ್ತೀಚೆಗೆ ನಡೆದ ಭಾರತೀಯ ರೈಲ್ವೆಯ ಆಂತರಿಕ ಲೆಕ್ಕಪರಿಶೋಧನೆಯಲ್ಲಿ ತತ್ಕಾಲ್ ಬುಕ್ಕಿಂಗ್ ನಲ್ಲಾಗುತ್ತಿರುವ ದುರುಪಯೋಗಗಳು ಬೆಳಕಿಗೆ ಬಂದಿತ್ತು.
ಕಳೆದ ಆರು ತಿಂಗಳುಗಳಲ್ಲಿ ಸುಮಾರು 2.5 ಕೋಟಿಗೂ ಹೆಚ್ಚು ಬಳಕೆದಾರ ಐಡಿಗಳು ನಿಷ್ಕ್ರಿಯವಾಗಿದ್ದು, ಸುಮಾರು 20 ಲಕ್ಷ ಖಾತೆಗಳ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಆಧಾರ್ ದೃಢೀಕರಣವು ನಿಯಮಿತ ಬುಕ್ಕಿಂಗ್ ಗಳಿಗೆ ಅಲ್ಲ. ತತ್ಕಾಲ್ ಟಿಕೆಟ್ಗಳಿಗೆ ಮಾತ್ರ ಅನ್ವಯಿಸುತ್ತದೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.