Agriculture Budget 2025: ಬಜೆಟ್ನಲ್ಲಿ ಕೃಷಿ ವಲಯಕ್ಕೆ ಬಂಪರ್ ಕೊಡುಗೆ ಘೋಷಿಸಿದ ಕೇಂದ್ರ
ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಶನಿವಾರ (ಫೆ. 1) ತಮ್ಮ 8ನೇ ಕೇಂದ್ರ ಬಜೆಟ್ ಮಂಡಿಸಿದ್ದಾರೆ. 1 ಗಂಟೆ 14 ನಿಮಿಷಗಳ ಬಜೆಟ್ ಭಾಷಣದಲ್ಲಿ ಅವರು ಕೃಷಿ ಕ್ಷೇತ್ರಕ್ಕೂ ಬಂಪರ್ ಕೊಡುಗೆ ಘೋಷಿಸಿದ್ದಾರೆ. ಇಲ್ಲಿದೆ ಈ ಬಜೆಟ್ನಲ್ಲಿ ಕೃಷಿ ರಂಗಕ್ಕೆ ದೊರೆತ ಕೊಡುಗೆಗಗಳ ವಿವರ.
Ramesh B
Feb 1, 2025 2:15 PM
ಹೊಸದಿಲ್ಲಿ: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ತಮ್ಮ 8ನೇ ಕೇಂದ್ರ ಬಜೆಟ್ ಮಂಡಿಸಿದ್ದಾರೆ (Agriculture Budget 2025). ಮಧ್ಯಮ ವರ್ಗದವರಿಗೆ ಭರಪೂರ ಯೋಜನೆಗಳನ್ನು ಘೋಷಿಸಿದ ಅವರು ಕೃಷಿ ರಂಗಕ್ಕೂ ಸಾಕಷ್ಟು ಒತ್ತು ನೀಡಿದ್ದಾರೆ. ಇಲ್ಲಿದೆ ಈ ಬಜೆಟ್ನಲ್ಲಿ ಕೃಷಿ ರಂಗಕ್ಕೆ ದೊರೆತ ಕೊಡುಗೆಗಳ ವಿವರ:
- ಕಿಸಾನ್ ಕ್ರೆಡಿಟ್ ಯೋಜನೆಯಡಿ ಸಾಲದ ಮೊತ್ತವನ್ನು 3 ಲಕ್ಷ ರೂ.ಯಿಂದ 5 ಲಕ್ಷ ರೂ.ಗೆ ಹೆಚ್ಚಿಸುವುದಾಗಿ ಸಚಿವೆ ನಿರ್ಮಲಾ ಘೋಷಿಸಿದರು.
- ರಾಜ್ಯಗಳ ಸಹಭಾಗಿತ್ವದಲ್ಲಿ ಪ್ರಧಾನ ಮಂತ್ರಿ ಧನ್ ಧಾನ್ಯ ಕೃಷಿ ಯೋಜನೆಯನ್ನು ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು. 100 ಜಿಲ್ಲೆಗಳ 1.7 ಕೋಟಿ ರೈತರಿಗೆ ಇದು ನೆರವಾಗಲಿದೆ.
- ಮಖಾನಾ (ತಾವರೆ ಬೀಜ)ದ ಸಂಸ್ಕರಣೆ, ಮೌಲ್ಯವರ್ಧನೆ ಮತ್ತು ಮಾರುಕಟ್ಟೆಯನ್ನು ಸುಧಾರಿಸಲು ಬಿಹಾರದಲ್ಲಿ ಮಖಾನಾ ಮಂಡಳಿಯನ್ನು ರಚಿಸುವುದಾಗಿ ಹಣಕಾಸು ಸಚಿವರು ಘೋಷಿಸಿದರು.
The loan limit under the Modified Interest Subvention Scheme will be enhanced from Rs 3 Lakh to Rs 5 Lakh for loans taken through Kisan Credit Card (KCC).#ViksitBharatBudget2025 pic.twitter.com/MPx4PVRcGn
— Nirmala Sitharaman Office (@nsitharamanoffc) February 1, 2025
- ಮಖಾನಾ ಉತ್ಪಾದನೆಯಲ್ಲಿ ತೊಡಗಿರುವವರನ್ನು ಎಫ್ಪಿಒಗಳಾಗಿ ಸಂಘಟಿಸಲಾಗುತ್ತದೆ. ಮಂಡಳಿಯು ಮಖಾನಾ ರೈತರಿಗೆ ಬೆಂಬಲ ಮತ್ತು ತರಬೇತಿ ನೀಡುತ್ತದೆ ಮತ್ತು ಅವರು ಎಲ್ಲ ಸರ್ಕಾರಿ ಯೋಜನೆಗಳ ಪ್ರಯೋಜನಗಳನ್ನು ಪಡೆಯುವುದನ್ನು ಖಚಿತಪಡಿಸಿಕೊಳ್ಳಲು ಕೆಲಸ ಮಾಡಲಿದೆ.
- ಯೂರಿಯಾ ಉತ್ಪಾದನೆಯಲ್ಲಿ ಸ್ವಾವಲಂಬನೆಯನ್ನು ಖಚಿತಪಡಿಸಿಕೊಳ್ಳಲು ಸರ್ಕಾರವು ನಿಷ್ಕ್ರಿಯಗೊಂಡಿದ್ದ 3 ಯೂರಿಯಾ ಉತ್ಪಾದನೆ ಘಟಕವನ್ನು ಮತ್ತೆ ತೆರೆದಿದೆ. ಇದು ಯೂರಿಯಾ ಪೂರೈಕೆಯನ್ನು ಹೆಚ್ಚಿಸುತ್ತದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದರು.
- ಅಸ್ಸಾಂನ ನಮ್ರಪ್ ಎಂಬಲ್ಲಿ ವಾರ್ಷಿಕ 12.7 ಲಕ್ಷ ಮೆಟ್ರೋ ಟನ್ ಉತ್ಪಾದನೆ ಸಾಮರ್ಥ್ಯದ ಯೂರಿಯಾ ಸ್ಥಾವರವನ್ನು ಸ್ಥಾಪಿಸಲಾಗುವುದು ಎಂದು ಅವರು ಹೇಳಿದರು.
- ದ್ವಿದಳ ಧಾನ್ಯಗಳ ವಲಯದಲ್ಲಿ ಸ್ವಾವಲಂಬಿಯಾಗಲು ಸರ್ಕಾರ 6 ವರ್ಷಗಳ ಮಿಷನ್ ಅನ್ನು ಪ್ರಾರಂಭಿಸಲಿದೆ ಎಂದು ಅವರು ಘೋಷಿಸಿದರು.
- ಮುಂದಿನ 4 ವರ್ಷಗಳಲ್ಲಿ ಕೇಂದ್ರ ಸಂಸ್ಥೆಗಳು ತೊಗರಿ, ಉದ್ದು, ಮಸೂರ್ ಅನ್ನು ಖರೀದಿಸಲಿವೆ ಎಂದು ಹಣಕಾಸು ಸಚಿವೆ ಹೇಳಿದರು.
- ಹೆಚ್ಚಿನ ಇಳುವರಿ ನೀಡುವ ಬಿತ್ತನೆ ಬೀಜಗಳ ವಿತರಣೆಗೆ ಸರ್ಕಾರ ರಾಷ್ಟ್ರೀಯ ಮಿಷನ್ ಪ್ರಾರಂಭಿಸಲಿದೆ ಎಂದು ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದರು.
ಈ ಸುದ್ದಿಯನ್ನೂ ಓದಿ: union budget 2025: 120 ಹೊಸ ವಿಮಾನ ನಿಲ್ದಾಣ ಸ್ಥಾಪನೆ