ಹೊಸ ಕಾಯ್ದೆ ಬಂದರೂ ಹಳೆ ಟ್ಯಾಕ್ಸ್ ಅಸ್ತಿತ್ವ ಕಳೆದುಕೊಳ್ಳುವುದಿಲ್ಲ; ಹಳೆ ತೆರಿಗೆ ಇಷ್ಟಪಡುವವರಿಗೆ ಜಾಕ್ಪಾಕ್
Tax rules 2026: ಹೊಸ ಆದಾಯ ತೆರಿಗೆ ಕಾಯ್ದೆ ಜಾರಿಗೆ ಬಂದರೂ ಹಳೆಯ ತೆರಿಗೆ ವ್ಯವಸ್ಥೆ ಅಸ್ತಿತ್ವ ಕಳೆದುಕೊಳ್ಳುವ ಸಾಧ್ಯತೆ ಇಲ್ಲ ಎಂಬ ಸೂಚನೆಗಳು ಲಭ್ಯವಾಗಿವೆ. ಕರಡು ಆದಾಯ ತೆರಿಗೆ ನಿಯಮಗಳು ಹಳೆಯ ಪದ್ಧತಿಯನ್ನು ಇನ್ನೂ ಆಕರ್ಷಕವಾಗಿಸಬಹುದೆಂಬ ಅಂಶಗಳನ್ನು ಒಳಗೊಂಡಿದ್ದು, ಹಳೆ ತೆರಿಗೆ ವ್ಯವಸ್ಥೆಯನ್ನು ಇಷ್ಟಪಡುವ ತೆರಿಗೆದಾರರಿಗೆ ಇದು ದೊಡ್ಡ ರಿಲೀಫ್ ಆಗಿದೆ.
ಸಾಂದರ್ಭಿಕ ಚಿತ್ರ -
ನವದೆಹಲಿ, ಫೆ.10: ಆದಾಯ ತೆರಿಗೆ ಇಲಾಖೆ ಶುಕ್ರವಾರ (ಫೆ.6), 2025ರ ಹೊಸ ಆದಾಯ ತೆರಿಗೆ ಕಾಯ್ದೆಯನ್ನು (New Income Tax Act) 2026ರ ಏಪ್ರಿಲ್ 1ರಿಂದ ಜಾರಿಗೆ ತರಲು ಅಗತ್ಯವಿರುವ ಕರಡು ನಿಯಮಗಳನ್ನು ಬಿಡುಗಡೆ ಮಾಡಿದೆ. ಆದಾಯ ತೆರಿಗೆ ನಿಯಮಗಳು, 2026ರ ಕರಡು ನಿಯಮಗಳ ಪ್ರಕಾರ, ಹಳೆಯ ತೆರಿಗೆ ವ್ಯವಸ್ಥೆ (old tax regime) ಇನ್ನೂ ಸದ್ಯದಲ್ಲೇ ಅಸ್ತಿತ್ವ ಕಳೆದುಕೊಳ್ಳುವ ಸಾಧ್ಯತೆ ಇಲ್ಲ ಎಂಬುದು ಸ್ಪಷ್ಟವಾಗುತ್ತದೆ. ಈ ಮೂಲಕ ಊಹಾಪೋಹಕ್ಕೆ ತೆರೆಬಿದ್ದಿದೆ.
ಈ ಸುಧಾರಣೆಯ ಭಾಗವಾಗಿ ಸರಳೀಕರಣಕ್ಕೆ ಹೆಚ್ಚಿನ ಒತ್ತು ನೀಡಲಾಗಿದ್ದು, ನಿಯಮಗಳ ಸಂಖ್ಯೆಯನ್ನು 511ರಿಂದ 333ಕ್ಕೆ ಇಳಿಸಲಾಗಿದೆ. ಜೊತೆಗೆ, ಫಾರ್ಮ್ಗಳ ಸಂಖ್ಯೆಯನ್ನು 399ರಿಂದ 190ಕ್ಕೆ ಕಡಿಮೆ ಮಾಡಲಾಗಿದೆ. ಮುಂದಿನ ಹಣಕಾಸು ವರ್ಷದಿಂದ ಹೊಸ ಕಾಯ್ದೆ ಜಾರಿಗೆ ಬರಲಿರುವ ಹಿನ್ನೆಲೆಯಲ್ಲಿ ಕರಡು ನಿಯಮಗಳ ಕುರಿತು ಹಿತಾಸಕ್ತಿದಾರರಿಂದ ಸಲಹೆ ಮತ್ತು ಅಭಿಪ್ರಾಯಗಳನ್ನು ಆಹ್ವಾನಿಸಿ ಸರ್ಕಾರ ಸಮಾಲೋಚನೆ ಪ್ರಕ್ರಿಯೆಯನ್ನು ಆರಂಭಿಸಿದೆ.
Budget 2026: ರಾಜ್ಯಗಳ ತೆರಿಗೆ ಹಣ ಹಂಚಿಕೆಯಲ್ಲಿ ಬದಲಾವಣೆ ಇಲ್ಲ, 41%ದಲ್ಲಿಯೇ ಉಳಿಕೆ
ತೆರಿಗೆ ಸರಳೀಕರಣವೇ ಗುರಿಯಾಗಿದ್ದರೂ ಸಹ, ಮಕ್ಕಳ ಶಿಕ್ಷಣ, ಮನೆ ಬಾಡಿಗೆ ಭತ್ಯೆ ಸೇರಿದಂತೆ ಹಲವು ಭತ್ಯೆಗಳಲ್ಲಿ ಪ್ರಸ್ತಾಪಿಸಿದ ಹೆಚ್ಚಳಗಳು ಹಳೆಯ ತೆರಿಗೆ ಪದ್ಧತಿಯನ್ನು ತೆರಿಗೆದಾರರಿಗೆ ಮತ್ತೆ ಲಾಭದಾಯಕವಾಗಿಸಿದೆ. ಇದರಿಂದ ಅನೇಕ ತೆರಿಗೆದಾರರು ಹೊಸ ವ್ಯವಸ್ಥೆಗಿಂತ ಹಳೆಯ ವ್ಯವಸ್ಥೆಯನ್ನೇ ಆರಿಸಿಕೊಳ್ಳುವ ಸಾಧ್ಯತೆಯಿದೆ.
ಈ ನಿಯಮಗಳು ತೆರಿಗೆದಾರರು ಹಾಗೂ ವೃತ್ತಿಪರರು ಅನುಸರಿಸಬೇಕಾದ ವಿವರವಾದ ಪ್ರಕ್ರಿಯೆಗಳನ್ನು ನಿರ್ದಿಷ್ಟಪಡಿಸುತ್ತಿದ್ದು, ಅನುಸರಣೆ ಸುಲಭಗೊಳಿಸುವುದು ಮತ್ತು ನ್ಯಾಯಾಂಗ ವಿವಾದಗಳನ್ನು ಕಡಿಮೆ ಮಾಡುವುದು ಎಂಬುದನ್ನು ಉದ್ದೇಶವಾಗಿ ಹೊಂದಿವೆ. ಆದರೆ ತೆರಿಗೆ ವ್ಯವಸ್ಥೆಯನ್ನು ಸರಳಗೊಳಿಸುವುದೇ ಪ್ರಧಾನ ಉದ್ದೇಶವಾಗಿದ್ದರೂ, ಕೆಲ ನಿಯಮಾವಳಿಗಳು ಹಳೆಯ ತೆರಿಗೆ ವ್ಯವಸ್ಥೆಯನ್ನು ಇನ್ನಷ್ಟು ಆಕರ್ಷಕವಾಗಿಸಬಹುದೆಂಬ ಸಾಧ್ಯತೆಯೂ ಇದೆ.
ಹಳೆಯ ತೆರಿಗೆ ಪದ್ಧತಿ ಅಡಿಯಲ್ಲಿ ಮುಂಬೈ, ದೆಹಲಿ, ಕೋಲ್ಕತ್ತಾ ಮತ್ತು ಚೆನ್ನೈ ನಾಲ್ಕು ಮಹಾನಗರಗಳು ಮಾತ್ರ ಶೇಕಡಾ 50 ರಷ್ಟು ವಿನಾಯಿತಿಗೆ ಅರ್ಹತೆ ಪಡೆದಿವೆ. ಆದರೆ ಇತರ ನಗರಗಳು ಶೇಕಡಾ 40ಕ್ಕೆ ಮಿತಿಗೊಳಿಸಲಾಗಿದೆ. ಹೊಸ ಕರಡು ನಿಯಮಗಳ ಪ್ರಕಾರ ಬೆಂಗಳೂರು, ಹೈದರಾಬಾದ್, ಪುಣೆ ಮತ್ತು ಅಹಮದಾಬಾದ್ಗಳನ್ನು ಹೆಚ್ಚಿನ ವಿನಾಯಿತಿ ಶ್ರೇಣಿಗೆ ಸೇರಿಸಲು ಪ್ರಸ್ತಾಪಿಸಲಾಗಿದೆ. ಇತರ ನಗರಗಳಿಗೆ ಶೇ. 40 ಮಿತಿ ಮುಂದುವರಿಯಲಿದೆ.
ರಾಜ್ಯಕ್ಕೆ ಹೆಚ್ಚಿನ ತೆರಿಗೆ ಪಾಲು; ಕಾಂಗ್ರೆಸ್ ಸರ್ಕಾರದ ಟೀಕೆಗಳಿಗೆ ಈ ಬಜೆಟ್ ಉತ್ತರ ಎಂದ ಕುಮಾರಸ್ವಾಮಿ
ದಶಕಗಳಿಂದ ಬದಲಾಗದೆ ಉಳಿದಿದ್ದ ಹಲವಾರು ಭತ್ಯೆಗಳನ್ನು ಸಹ ಈ ಕರಡು ಪರಿಷ್ಕರಿಸುತ್ತದೆ. ಮಕ್ಕಳ ಶಿಕ್ಷಣ, ಹಾಸ್ಟೆಲ್ ವೆಚ್ಚ ಮತ್ತು ಕೆಲವು ವಿಶೇಷ ಭತ್ಯೆಗಳ ಮೊತ್ತ ಒಂದೇ ರೀತಿಯಲ್ಲಿ ಉಳಿದಿತ್ತು. ಹಣದುಬ್ಬರ ಹೆಚ್ಚಾದರೂ ಈ ಭತ್ಯೆಗಳು ಪರಿಷ್ಕೃತವಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಕರಡು ಆದಾಯ ತೆರಿಗೆ ನಿಯಮಗಳು 2026 ಅಡಿಯಲ್ಲಿ ಸರ್ಕಾರ ಈ ಭತ್ಯೆಗಳನ್ನು ಗಮನಾರ್ಹವಾಗಿ ಹೆಚ್ಚಿಸಲು ಪ್ರಸ್ತಾಪಿಸಿದೆ.
ಮಕ್ಕಳ ಶಿಕ್ಷಣ ಭತ್ಯೆಯನ್ನು ಪ್ರತಿ ಮಗುವಿಗೆ (ಗರಿಷ್ಠ ಎರಡು ಮಕ್ಕಳು) ತಿಂಗಳಿಗೆ 100 ರೂ.ಗಳಿಂದ 3,000 ರೂ.ಗಳಿಗೆ ಹೆಚ್ಚಿಸಲು ಪ್ರಸ್ತಾಪಿಸಲಾಗಿದೆ. ಹಾಸ್ಟೆಲ್ ವೆಚ್ಚ ಭತ್ಯೆ ಪ್ರತಿ ಮಗುವಿಗೆ ತಿಂಗಳಿಗೆ 300 ರೂ.ಗಳಿಂದ 9,000 ರೂ.ಗಳಿಗೆ ಏರಿಕೆಯಾಗಲಿದೆ.