ಪಾಕಿಸ್ತಾನ ಪರ ಬೇಹುಗಾರಿಕೆ ನಡೆಸುತ್ತಿದ್ದ ವಾಯುಪಡೆಯ ಸಿಬ್ಬಂದಿ ಅರೆಸ್ಟ್
Air Force personnel arrested: ಪಾಕಿಸ್ತಾನ ಹ್ಯಾಂಡ್ಲರ್ಗಳಿಗಾಗಿ ಬೇಹುಗಾರಿಕೆ ನಡೆಸುತ್ತಿದ್ದ ಆರೋಪದ ಮೇಲೆ ವಾಯುಪಡೆಯ ಸಿಬ್ಬಂದಿಯನ್ನು ಬಂಧಿಸಲಾಗಿದೆ. ರಾಜಸ್ಥಾನ ಗುಪ್ತಚರ ಮತ್ತು ವಾಯುಪಡೆಯ ಗುಪ್ತಚರ ಇಲಾಖೆಯ ಜಂಟಿ ಕಾರ್ಯಾಚರಣೆಯಲ್ಲಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಗುಪ್ತಚರ) ಪ್ರಫುಲ್ ಕುಮಾರ್ ತಿಳಿಸಿದ್ದಾರೆ.
ಬೇಹುಗಾರಿಕೆ ನಡೆಸುತ್ತಿದ್ದ ಸುಮಿತ್ ಕುಮಾರ್ ಮತ್ತು ಸಾಂದರ್ಭಿಕ ಚಿತ್ರ -
ದಿಸ್ಪುರ್, ಮಾ. 23: ಪಾಕಿಸ್ತಾನ ಹ್ಯಾಂಡ್ಲರ್ಗಳಿಗಾಗಿ (Pakistani handlers) ಬೇಹುಗಾರಿಕೆ ನಡೆಸುತ್ತಿದ್ದ ಆರೋಪದ ಮೇಲೆ ವಾಯುಪಡೆಯ ಸಿಬ್ಬಂದಿಯನ್ನು ಬಂಧಿಸಲಾಗಿದೆ. ಅಸ್ಸಾಂನ ಭಾರತೀಯ ವಾಯುಪಡೆಯ ನಿಲ್ದಾಣದಲ್ಲಿ ನಿಯೋಜಿತವಾಗಿದ್ದ ಸಿಬ್ಬಂದಿಯನ್ನು ಪಾಕಿಸ್ತಾನದ ಪರ ಬೇಹುಗಾರಿಕೆ ನಡೆಸುತ್ತಿದ್ದ (spying) ಮತ್ತು ಸೂಕ್ಷ್ಮ ಮಾಹಿತಿಯನ್ನು ಹಂಚಿಕೊಂಡ ಆರೋಪದ ಮೇಲೆ ಬಂಧಿಸಲಾಗಿದೆ ಎಂದು ರಾಜಸ್ಥಾನ ಗುಪ್ತಚರ ಇಲಾಖೆ (Rajasthan Intelligence) ತಿಳಿಸಿದೆ. ಬಂಧಿತನನ್ನು ಉತ್ತರ ಪ್ರದೇಶದ ನಿವಾಸಿ ಸುಮಿತ್ ಕುಮಾರ್ (36) ಎಂದು ಗುರುತಿಸಲಾಗಿದೆ.
ರಾಜಸ್ಥಾನ ಗುಪ್ತಚರ ಮತ್ತು ವಾಯುಪಡೆಯ ಗುಪ್ತಚರ ಇಲಾಖೆ ಜಂಟಿ ಕಾರ್ಯಾಚರಣೆಯಲ್ಲಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಗುಪ್ತಚರ) ಪ್ರಫುಲ್ ಕುಮಾರ್ ತಿಳಿಸಿದ್ದಾರೆ. ಜನವರಿಯಲ್ಲಿ ರಾಜಸ್ಥಾನದ ಜೈಸಲ್ಮೇರ್ನಿಂದ ಶಂಕಿತನೊಬ್ಬನ ಬಂಧನವಾದ ಬಳಿಕ ತನಿಖೆ ಪ್ರಾರಂಭವಾಯಿತು. ತನಿಖೆ ಇದೀಗ ಉತ್ತರ ಪ್ರದೇಶದ ನಿವಾಸಿ ಸುಮಿತ್ ಕುಮಾರ್ ಬಂಧನಕ್ಕೆ ಕಾರಣವಾಯಿತು. ಆತ ಪ್ರಸ್ತುತ ದಿಬ್ರುಗಢದ ಚಾಬುವಾದಲ್ಲಿರುವ ವಾಯುಪಡೆ ನಿಲ್ದಾಣದಲ್ಲಿ ಮಲ್ಟಿ-ಟಾಸ್ಕಿಂಗ್ ಸ್ಟಾಫ್ (ಎಂಟಿಎಸ್) ಆಗಿ ಕಾರ್ಯನಿರ್ವಹಿಸುತ್ತಿದ್ದಾನೆ.
ವಿಚಾರಣೆಯ ಸಮಯದಲ್ಲಿ ಆರೋಪಿಯು 2023ರಿಂದ ಪಾಕಿಸ್ತಾನದ ಗುಪ್ತಚರ ಸಂಸ್ಥೆಯೊಂದಿಗೆ ಸಂಪರ್ಕದಲ್ಲಿದ್ದಾನೆ ಮತ್ತು ಹಣಕ್ಕಾಗಿ ಗೌಪ್ಯ ಮಾಹಿತಿಯನ್ನು ಹಂಚಿಕೊಳ್ಳುತ್ತಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ತನಿಖೆ ವೇಳೆ ಸುಮಿತ್ ಕುಮಾರ್ ತಪ್ಪೊಪ್ಪಿಕೊಂಡಿದ್ದಾನೆ.
ಪಾಕಿಸ್ತಾನ ಪರ ಬೇಹುಗಾರಿಕೆ ನಡೆಸುತ್ತಿದ್ದ ಆರೋಪ; ವ್ಯಕ್ತಿ ಬಂಧನ
ಆರೋಪಿಯು ಯುದ್ಧ ವಿಮಾನಗಳ ಸ್ಥಳಗಳು, ಕ್ಷಿಪಣಿ ವ್ಯವಸ್ಥೆಗಳು ಮತ್ತು ಸಿಬ್ಬಂದಿಗೆ ಸಂಬಂಧಿಸಿದ ಮಾಹಿತಿ ಸೇರಿ ವಾಯುಪಡೆಗೆ ಸ್ಥಾಪನೆಗಳ ಸೂಕ್ಷ್ಮ ವಿವರಗಳನ್ನು ಸಾಮಾಜಿಕ ಮಾಧ್ಯಮ ಮೂಲಕ ಸಂಗ್ರಹಿಸಿ ರವಾನಿಸಿದ್ದಾನೆ ಎಂದು ಶಂಕಿಸಲಾಗಿದೆ.
ಆರೋಪಿಯನ್ನು ಬಂಧಿಸಿ ರಾಜಸ್ಥಾನದ ಜೈಪುರಕ್ಕೆ ಕೇಂದ್ರ ವಿಚಾರಣಾ ಕೇಂದ್ರದಲ್ಲಿ ವಿಚಾರಣೆಗಾಗಿ ಕರೆತರಲಾಯಿತು. ಅಲ್ಲಿ ಬಹು ಸಂಸ್ಥೆಗಳು ಜಂಟಿಯಾಗಿ ವಿಚಾರಣೆ ನಡೆಸಿದವು ಎಂದು ಅಧಿಕಾರಿಗಳು ತಿಳಿಸಿದ್ದಾರೆ. 1923ರ ಅಧಿಕೃತ ರಹಸ್ಯ ಕಾಯ್ದೆ ಮತ್ತು ಭಾರತೀಯ ನ್ಯಾಯ ಸಂಹಿತಾದ ಸಂಬಂಧಿತ ನಿಬಂಧನೆಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ವ್ಯಾಪಕ ಬೇಹುಗಾರಿಕೆ ಜಾಲವನ್ನು ಬಹಿರಂಗಪಡಿಸಲು ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೂವರು ಪಾಕಿಸ್ತಾನಿ ಏಜೆಂಟ್ಗಳ ಬಂಧನ
ದೇಶದ ಮೇಲೆ ಬೇಹುಗಾರಿಕೆ ನಡೆಸುತ್ತಿರುವ ಶಂಕಿತರನ್ನು ನಿಯಮಿತವಾಗಿ ಬಂಧಿಸಲಾಗುತ್ತಿದೆ. ಈಗ ಮತ್ತೊಮ್ಮೆ, ಪೊಲೀಸರ ವಿಶೇಷ ತನಿಖಾ ತಂಡ (ಎಸ್ಐಟಿ) ದೇಶ ವಿರೋಧಿ ಚಟುವಟಿಕೆಗಳಲ್ಲಿ ಭಾಗಿಯಾಗಿರುವ ಪ್ರಮುಖ ಗ್ಯಾಂಗ್ ಅನ್ನು ಭೇದಿಸಿ, ಒಬ್ಬ ಮಹಿಳೆ ಮತ್ತು ಅಪ್ರಾಪ್ತ ವಯಸ್ಕ ಸೇರಿ ಮೂವರು ಆರೋಪಿಗಳನ್ನು ಬಂಧಿಸಿದೆ. ಪೊಲೀಸರು ಅವರಿಂದ ಮೂರು ಮೊಬೈಲ್ ಫೋನ್ಗಳನ್ನು ವಶಪಡಿಸಿಕೊಂಡಿದ್ದಾರೆ.
ಭಾರತದ ವಿರುದ್ಧ ಬೇಹುಗಾರಿಕೆ ನಡೆಸಲು ಅಪ್ರಾಪ್ತರ ಬ್ರೇನ್ ವಾಶ್ಗೆ ಮುಂದಾದ ಪಾಕಿಸ್ತಾನ!
ಪ್ರಮುಖ ಆರೋಪಿ ನೌಶಾದ್ ಅಲಿ ಅಲಿಯಾಸ್ ಲಾಲು (20), 8ನೇ ತರಗತಿಯವರೆಗೆ ಮಾತ್ರ ಓದಿದ್ದಾನೆ. ಈತ ಹರಿಯಾಣದ ಫರಿದಾಬಾದ್ ನಿವಾಸಿ. ಈತನ ಜತೆಗೆ ಮಥುರಾ ನಿವಾಸಿ ಮೀರಾ (28) ಮತ್ತು ಅಪ್ರಾಪ್ತ ವಯಸ್ಕನನ್ನು ಸಹ ಬಂಧಿಸಲಾಗಿದೆ. ಇಬ್ಬರೂ ಸೀಮಿತ ಶಿಕ್ಷಣವನ್ನು ಹೊಂದಿದ್ದು, ಈ ಜಾಲದಲ್ಲಿ ದೀರ್ಘಕಾಲದಿಂದ ಭಾಗಿಯಾಗಿದ್ದಾರೆ.
ವಿಚಾರಣೆಯ ಸಮಯದಲ್ಲಿ, ಈ ಗ್ಯಾಂಗ್ ಗಡಿಯಾಚೆಯಿಂದ ಕಾರ್ಯನಿರ್ವಹಿಸುತ್ತಿದೆ ಎಂದು ತಿಳಿದುಬಂದಿದೆ. ಇದರ ಪ್ರಮುಖ ಸದಸ್ಯರು ಸುಹೇಲ್ ಮಲಿಕ್, ನೌಶಾದ್ ಅಲಿ ಮತ್ತು ಸಮೀರ್ ಅಲಿಯಾಸ್ ಶೂಟರ್. ನೌಶಾದ್ ಸಾಮಾಜಿಕ ಮಾಧ್ಯಮದ ಮೂಲಕ ಈ ಜಾಲಕ್ಕೆ ಸಂಪರ್ಕ ಹೊಂದಿದ್ದರು ಮತ್ತು ಅವರಿಗೆ ತರಬೇತಿಯನ್ನೂ ನೀಡಲಾಯಿತು ಎಂದು ತಿಳಿದುಬಂದಿದೆ.
ಪ್ರಕರಣ ಬೆಳಕಿಗೆ ಬಂದಿದ್ಹೇಗೆ?
ಮಾರ್ಚ್ 14ರಂದು, ಕೌಶಂಬಿ ಪ್ರದೇಶದಲ್ಲಿ ಕೆಲವು ಯುವಕರು ಅನುಮಾನಾಸ್ಪದ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದಾರೆಂದು ಪೊಲೀಸರಿಗೆ ಮಾಹಿತಿ ಸಿಕ್ಕಿತು. ಅವರು ಪ್ರಮುಖ ಸ್ಥಳಗಳ ವಿಡಿಯೊಗಳನ್ನು ಚಿತ್ರೀಕರಿಸಿ ಕಳುಹಿಸುತ್ತಿದ್ದರು. ಈ ಮಾಹಿತಿಯ ಆಧಾರದ ಮೇಲೆ, ಪ್ರಕರಣ ದಾಖಲಿಸಲಾಯಿತು. ವಿಷಯದ ಗಂಭೀರತೆಯನ್ನು ಪರಿಗಣಿಸಿ, ವಿಶೇಷ ತನಿಖಾ ತಂಡ (SIT) ರಚಿಸಲಾಯಿತು. ಕೆಲವು ಅಪ್ರಾಪ್ತ ವಯಸ್ಕರು ಸೇರಿದಂತೆ ಹಲವು ಆರೋಪಿಗಳನ್ನು ಬಂಧಿಸಲಾಗಿದೆ.