ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Crime News: ಬಾಲಕಿಗೆ ಅಶ್ಲೀಲ ಸಂದೇಶ, ಮೂವರು ಬಾಲಕರನ್ನು ಕಂಬಕ್ಕೆ ಕಟ್ಟಿ ಥಳಿತ

Crime News: ಬಾಲಕರ ಪೋಷಕರು ಮತ್ತು ಸಂಬಂಧಿಕರು 55 ಗ್ರಾಮಸ್ಥರ ವಿರುದ್ಧ ದೌರ್ಜನ್ಯ ಪ್ರಕರಣ ದಾಖಲಿಸಿದ್ದರೆ, ಗ್ರಾಮಸ್ಥರು ಮೂವರು ಬಾಲಕರ ವಿರುದ್ಧ ಪೋಕ್ಸೊ ಪ್ರಕರಣ ದಾಖಲಿಸಿದ್ದಾರೆ. ಬಾಲಕರು ದಲಿತ ಸಮುದಾಯಕ್ಕೆ ಸೇರಿದವರು. ಜಾತಿ ಸಂಘರ್ಷ ಬೆದರಿಕೆ ಇರುವುದರಿಂದ ಗ್ರಾಮದಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ.

ಬಾಲಕಿಗೆ ಅಶ್ಲೀಲ ಸಂದೇಶ, ಮೂವರು ಬಾಲಕರನ್ನು ಕಂಬಕ್ಕೆ ಕಟ್ಟಿ ಥಳಿತ

ಹರೀಶ್‌ ಕೇರ ಹರೀಶ್‌ ಕೇರ Jun 9, 2025 10:20 AM

ಗದಗ: ಬಾಲಕಿಯೊಬ್ಬಳಿಗೆ (girl) ಅಶ್ಲೀಲ ಸಂದೇಶ (obscene messages) ಕಳುಹಿಸಿದ್ದಾರೆ ಎಂದು ಆರೋಪಿಸಿ ಮೂವರು ಬಾಲಕರನ್ನು (boys) 55 ಮಂದಿಯಿದ್ದ ಗುಂಪೊಂದು ಕಂಬಕ್ಕೆ ಕಟ್ಟಿ ಹಿಗ್ಗಾಮುಗ್ಗಾ ಥಳಿಸಿರುವ (Beaten) ಘಟನೆ ಗದಗ (Gadag crime news) ಜಿಲ್ಲೆಯ ನರಗುಂದ ತಾಲ್ಲೂಕಿನಲ್ಲಿ ನಡೆದಿದೆ. ಅಪ್ರಾಪ್ತೆಗೆ ಅಶ್ಲೀಲ ಮೆಸೇಜ್ ಮಾಡಿದ್ದಕ್ಕೆ ಮತ್ತು​​ ಚುಡಾಯಿಸಿದ್ದಕ್ಕೆ ಧ್ವಜದ ಕಂಬಕ್ಕೆ ಕಟ್ಟಿಹಾಕಿ ಹಗ್ಗ, ದೊಣ್ಣೆ, ಚಪ್ಪಲಿಯಿಂದ ಮೈ ತುಂಬಾ ಬಾಸುಂಡೆ ಬರುವಂತೆ ಬಾಲಕರ ಮೇಲೆ ಹಲ್ಲೆ ಮಾಡಿರುವ ಆರೋಪ ಕೇಳಿಬಂದಿದೆ.

ಜಿಲ್ಲೆಯ ನರಗುಂದ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮೇ 28ರಂದು ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಈ ಬಗ್ಗೆ ನರಗುಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೂವರ ಪೈಕಿ ಒಬ್ಬ ಬಾಲಕನನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆತನ ಸ್ಥಿತಿ ಗಂಭೀರವಾಗಿದೆ ಎಂದು ಹೇಳಲಾಗಿದೆ. ಇನ್ನಿಬ್ಬರು ನಾಪತ್ತೆಯಾಗಿದ್ದಾರೆ.

ಬಾಲಕರ ಪೋಷಕರು ಮತ್ತು ಸಂಬಂಧಿಕರು 55 ಗ್ರಾಮಸ್ಥರ ವಿರುದ್ಧ ದೌರ್ಜನ್ಯ ಪ್ರಕರಣ ದಾಖಲಿಸಿದ್ದರೆ, ಗ್ರಾಮಸ್ಥರು ಮೂವರು ಬಾಲಕರ ವಿರುದ್ಧ ಪೋಕ್ಸೊ ಪ್ರಕರಣ ದಾಖಲಿಸಿದ್ದಾರೆ. ಬಾಲಕರು ದಲಿತ ಸಮುದಾಯಕ್ಕೆ ಸೇರಿದವರು ಎಂದು ಹೇಳಲಾಗುತ್ತಿದ್ದು, ಜಾತಿ ಸಂಘರ್ಷ ಬೆದರಿಕೆ ಇರುವುದರಿಂದ ಗ್ರಾಮದಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ ಎಂದು ತಿಳಿದುಬಂದಿದೆ.

ಘರ್ಷಣೆಯ ಭಯದಿಂದ ಸ್ಥಳೀಯ ನಿವಾಸಿಗಳು ಹೊರಗೆ ಹೋಗಲು ಹೆದರುತ್ತಿರುವುದರಿಂದ ಗ್ರಾಮದಲ್ಲಿ ಸ್ಮಶಾನ ಮೌನ ನಿರ್ಮಾಣವಾಗಿದೆ. ಘಟನೆ ಸಂಬಂಧ ಇಲ್ಲಿಯವರೆಗೆ ಎಂಟು ಗ್ರಾಮಸ್ಥರನ್ನು ಬಂಧಿಸಲಾಗಿದೆ ಎಂದು ವರದಿಗಳು ತಿಳಿಸಿವೆ. ಈ ಘಟನೆ ಮೇ 28ರಂದು ನಡೆದಿದ್ದರೂ, ದೂರು ದಾಖಲಾದ ನಂತರ ಮೇ 30ರಂದು ಪೊಲೀಸರು ಕ್ರಮ ಕೈಗೊಂಡಿದ್ದಾರೆ.

ಗ್ರಾಮಸ್ಥರು ನಮಗೆ ಬೆದರಿಕೆ ಹಾಕಿದ್ದರು. ಬಳಿಕ ಬಾಲಕ ವಿಷ ಸೇವಿಸಿದ್ದಾನೆಂದು ಪೋಷಕರು ಹೇಳಿದ್ದಾರೆ. ಪರಿಸ್ಥಿತಿ ಉದ್ವಿಗ್ನಗೊಳ್ಳುತ್ತಿದ್ದಂತೆ, ಗದಗ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್. ನೇಮಗೌಡ ಗ್ರಾಮಕ್ಕೆ ಧಾವಿಸಿ ನಿವಾಸಿಗಳೊಂದಿಗೆ ಮಾತನಾಡಿದರು. ಆದರೆ, ಗ್ರಾಮದ ಕೆಲವು ಹಿರಿಯರು ಇದು ಜಾತಿ ಸಮಸ್ಯೆಯಾಗಿ ಬದಲಾಗಬಹುದು ಎಂದು ಪೊಲೀಸರಿಗೆ ಎಚ್ಚರಿಕೆ ನೀಡಿದ್ದು, ಬಳಿಕ ಪೊಲೀಸರು ಎರಡೂ ಕಡೆಯಿಂದಲೂ ದೂರುಗಳನ್ನು ದಾಖಲಿಸಿಕೊಂಡಿದ್ದಾರೆಂದು ತಿಳಿದುಬಂದಿದೆ.

ಎರಡೂ ಕಡೆಯವರು ಪ್ರಕರಣಗಳನ್ನು ದಾಖಲಿಸಿರುವುದರಿಂದ, ತನಿಖೆ ನಡೆಸಲಾಗುತ್ತಿದೆ. ಪರಿಸ್ಥಿತಿಯನ್ನು ಶಮನಗೊಳಿಸಲು ಶಾಂತಿ ಸಭೆ ಕರೆಯಲಾಗುವುದು ಎಂದು ನೇಮಗೌಡ ಅವರು ತಿಳಿಸಿದ್ದಾರೆ.

ಇದನ್ನೂ ಓದಿ: Murder Case: ಲೈಂಗಿಕ ಕ್ರಿಯೆಗೆ ಸಹಕರಿಸದ ಬಾಲಕಿಯ ಕೊಂದು ಸೂಟ್‌ಕೇಸ್‌ನಲ್ಲಿ ತುಂಬಿ ಎಸೆದ ದುರುಳರ ಬಂಧನ