ಮಧ್ಯಪ್ರದೇಶ: ನಾಲ್ಕು ಶಿಶುಗಳಿಗೆ (premature babies) ಮಹಿಳೆಯೊಬ್ಬರು ಆಟೋ ರಿಕ್ಷಾದಲ್ಲೇ ಜನ್ಮ ನೀಡಿದ ಘಟನೆ ಮಧ್ಯಪ್ರದೇಶದಲ್ಲಿ (Madhya Pradesh) ನಡೆದಿದೆ. ಅಕಾಲಿಕವಾಗಿ ಜನಿಸಿದ ಶಿಶುಗಳು ಸ್ಥಳದಲ್ಲೇ ಸಾವನ್ನಪ್ಪಿವೆ. ಮಧ್ಯಪ್ರದೇಶದ ಮಾಂಡ್ಲಾ ಜಿಲ್ಲೆಯ ಆಸ್ಪತ್ರೆಗೆ ಹೋಗುತ್ತಿದ್ದ ವೇಳೆ ಮಾರ್ಗ ಮಧ್ಯದಲ್ಲೇ ಮಹಿಳೆ ಆಟೋ ರಿಕ್ಷಾದಲ್ಲಿ ನಾಲ್ಕು ಮಕ್ಕಳಿಗೆ ಜನ್ಮ ನೀಡಿದ್ದಾರೆ. ಸಮಯಕ್ಕೆ ಸರಿಯಾಗಿ ಆಂಬುಲೆನ್ಸ್ ಸಿಗದೇ ಇದ್ದುದರಿಂದ ಅಕಾಲಿಕವಾಗಿ ಜನಿಸಿದ ನಾಲ್ಕು ಮಕ್ಕಳು ಕೂಡ ರಿಕ್ಷಾದಲ್ಲೇ ಸಾವನ್ನಪ್ಪಿವೆ (premature babies dead) ಎಂದು ಕುಟುಂಬ ಆರೋಪಿಸಿದೆ.
ಈ ಕುರಿತು ಮಂಗಳವಾರ ಮಾಹಿತಿ ನೀಡಿದ ಅಧಿಕಾರಿಗಳು, ಮಧ್ಯಪ್ರದೇಶದ ಮಾಂಡ್ಲಾ ಜಿಲ್ಲೆಯಲ್ಲಿ ಆಸ್ಪತ್ರೆಗೆ ಹೋಗುತ್ತಿದ್ದ ವೇಳೆ ಮಹಿಳೆಯೊಬ್ಬರು ನಾಲ್ಕು ಶಿಶುಗಳಿಗೆ ಆಟೋರಿಕ್ಷಾದಲ್ಲಿ ಜನ್ಮ ನೀಡಿದ್ದಾರೆ. ಆದರೆ ಜನನದ ಸ್ವಲ್ಪ ಸಮಯದ ಅನಂತರ ಎಲ್ಲಾ ಶಿಶುಗಳು ಸಾವನ್ನಪ್ಪಿವೆ ಎಂದು ತಿಳಿಸಿದ್ದಾರೆ.
ಬಂಗಾಳದ 11 ವರ್ಷದ ಬಾಲಕಿ ಅತ್ಯಾಚಾರ, ಕೊಲೆ ಪ್ರಕರಣ: ಎನ್ಕೌಂಟರ್ನಲ್ಲಿ ಆರೋಪಿ ಹತ್ಯೆ
ಆಂಬ್ಯುಲೆನ್ಸ್ ಇಲ್ಲದ ಕಾರಣ ಮಹಿಳೆಯನ್ನು ಆಟೋ ರಿಕ್ಷಾದಲ್ಲಿ ಕರೆದುಕೊಂಡು ಆಸ್ಪತ್ರೆಗೆ ಬರಲಾಗುತ್ತಿತ್ತು. ಶಿಶುಗಳು ಅಕಾಲಿಕವಾಗಿ ಜನಿಸಿದ್ದು, ಸಂಪೂರ್ಣ ಬೆಳವಣಿಗೆಯಾಗದ ಕಾರಣ ಸಾವನ್ನಪ್ಪಿವೆ ಎಂದು ಆರೋಗ್ಯಾಧಿಕಾರಿಗಳು ತಿಳಿಸಿರುವುದಾಗಿ ಕುಟುಂಬಸ್ಥರು ಹೇಳಿದ್ದಾರೆ ಎಂದರು.
ನಾಲ್ಕು ಶಿಶುಗಳಿಗೆ ಜನ್ಮ ನೀಡಿದ ಮಹಿಳೆ ನೈಗಾಂವ್ ನಿವಾಸಿ ರಜನಿ ಸಿಂಗರಾಮ್ ಅವರನ್ನು ಬಿಚಿಯಾ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಗಿದೆ. ಅವರು ಅಪಾಯದಿಂದ ಪಾರಾಗಿದ್ದಾರೆ. ಸಮಯಕ್ಕೆ ಸರಿಯಾಗಿ ಆಂಬುಲೆನ್ಸ್ ಲಭ್ಯವಿದ್ದರೆ ಶಿಶುಗಳು ಬದುಕುಳಿಯಬಹುದಿತ್ತು ಎಂದು ಅವರ ಪತಿ ದುಃಖ ವ್ಯಕ್ತಪಡಿಸಿದರು.
ಜಿಲ್ಲಾ ಮುಖ್ಯ ವೈದ್ಯಕೀಯ ಮತ್ತು ಆರೋಗ್ಯ ಅಧಿಕಾರಿ ಡಾ. ಡಿ.ಜೆ. ಮೊಹಂತಿ ಅವರು ಪ್ರತಿಕ್ರಿಯಿಸಿ, ರಜನಿ ಸಿಂಗರಾಮ್ ಅವರಿಗೆ ಏಳನೇ ತಿಂಗಳಿನಲ್ಲಿ ಹೆರಿಗೆ ನೋವು ಕಾಣಿಸಿಕೊಂಡಿದೆ. ಅವರನ್ನು ಮೊದಲು ಖಾಸಗಿ ವಾಹನದಲ್ಲಿ ಘುಥಾಸ್ನಲ್ಲಿರುವ ಸರ್ಕಾರಿ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲಾಯಿತು. ಅಲ್ಲಿ ಅವರ ಸ್ಥಿತಿ ಗಂಭೀರವಾಗಿದ್ದ ಕಾರಣ ಬಿಚ್ಚಿಯಾದ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಹೋಗಲಾಗಿದೆ ಎಂದರು.
ಅವರು ಆಟೋ ರಿಕ್ಷಾದಲ್ಲಿ ಅಲ್ಲಿಂದ ತೆರಳಿದ್ದಾರೆ. ಸಮುದಾಯ ಆರೋಗ್ಯ ಕೇಂದ್ರವನ್ನು ತಲುಪುವ ಮೊದಲೇ ಅವರು ವಾಹನದಲ್ಲಿ ನಾಲ್ಕು ಮಕ್ಕಳಿಗೆ ಜನ್ಮ ನೀಡಿದರು. ನಾಲ್ಕು ಶಿಶುಗಳು ಮೂರು ಹೆಣ್ಣು ಮಕ್ಕಳು ಮತ್ತು ಒಂದು ಗಂಡು. ಅಕಾಲಿಕವಾಗಿದ್ದ ಮಕ್ಕಳು ತಲಾ 1.5 ಕಿಲೋಗ್ರಾಂ ತೂಕ ಹೊಂದಿದ್ದವು. ರಜನಿ ಅವರಿಗೆ ಹೆರಿಗೆ ನೋವು ಕಾಣಿಸಿಕೊಂಡಿದ್ದರಿಂದ ತುರ್ತು ಆಂಬುಲೆನ್ಸ್ ಸೇವೆಗೆ ಕರೆ ಮಾಡಲಾಗಿತ್ತು. ಆದರೆ ಯಾರೂ ಪ್ರತಿಕ್ರಿಯೆ ನೀಡಲಿಲ್ಲ ಎಂದು ಅವರ ಪತಿ ತಿಳಿಸಿದ್ದಾರೆ ಎಂದರು.
Bike wheeling: ಆಂಬ್ಯುಲೆನ್ಸ್ಗೆ ದಾರಿ ಬಿಡದೆ ವ್ಹೀಲಿಂಗ್ ಮಾಡಿದ್ದ ಆರು ಮಂದಿ ವಶಕ್ಕೆ; ದ್ವಿಚಕ್ರ ವಾಹನಗಳ ಜಪ್ತಿ
ಈ ಕುರಿತು ಯಾವುದೇ ದೂರು ಬಂದಿಲ್ಲ. ದೂರು ಬಂದರೆ ಪ್ರಕರಣದ ತನಿಖೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಮಾಂಡ್ಲಾ ಜಿಲ್ಲಾ ಮ್ಯಾಜಿಸ್ಟ್ರೇಟ್ ರಾಹುಲ್ ನಾಮ್ದೇವ್ ಧೋಟೆ ತಿಳಿಸಿದ್ದಾರೆ.