ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಸಿಕ್ಕಿಂನಲ್ಲಿ ಭೂಕುಸಿತ: ಸುರಂಗದೊಳಗೆ ಅನಿಲ ಸೋರಿಕೆಯಾಗಿ 10 ಸಾವು

ಸಿಕ್ಕಿಂನಲ್ಲಿ ಭೂಕುಸಿತವಾಗಿ ಸುರಂಗದೊಳಗೆ ಅನಿಲ ಸೋರಿಕೆಯಾಗಿದ್ದು 10 ಮಂದಿ ಸಾವನ್ನಪ್ಪಿದ್ದಾರೆ. ಹಲವಾರು ಮಂದಿ ಸುರಂಗದೊಳಗೆ ಸಿಲುಕಿರುವ ಶಂಕೆ ವ್ಯಕ್ತವಾಗಿದೆ. 12 ಜನರನ್ನು ರಕ್ಷಿಸಲಾಗಿದೆ. ಮಾಹಿತಿ ತಿಳಿದ ತಕ್ಷಣವೇ ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ಪಡೆ ತಂಡಗಳು ಸ್ಥಳಕ್ಕೆ ಧಾವಿಸಿ ರಕ್ಷಣಾ ಮತ್ತು ಶೋಧ ಕಾರ್ಯಾಚರಣೆಗಳನ್ನು ಪ್ರಾರಂಭಿಸಿವೆ.

ಸಿಕ್ಕಿಂನಲ್ಲಿ ಭೂಕುಸಿತ ಅನಿಲ ಸೋರಿಕೆ

ಸಂಗ್ರಹ ಚಿತ್ರ -

ಗುವಾಹಟಿ: ಭೂಕುಸಿತದಿಂದಾಗಿ ಅನಿಲ ಸೋರಿಕೆಯಾಗಿ ಸುಮಾರು ಹತ್ತು ಮಂದಿ ಸಾವನ್ನಪ್ಪಿರುವ ಘಟನೆ ದಕ್ಷಿಣ ಸಿಕ್ಕಿಂನ ಸಮರ್ದುಂಗ್ ಸುರಂಗದಲ್ಲಿ ಸೋಮವಾರ ಮಧ್ಯಾಹ್ನ ನಡೆದಿದೆ. ಸುರಂಗದೊಳಗೆ ಹಲವಾರು ಮಂದಿ ಸಿಲುಕಿಕೊಂಡಿದ್ದು, ಮಾಹಿತಿ ತಿಳಿದ ತಕ್ಷಣವೇ ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ಪಡೆ (ಎನ್‌ಡಿಆರ್‌ಎಫ್) ತಂಡಗಳು ಸ್ಥಳಕ್ಕೆ ಧಾವಿಸಿದ್ದು, ರಕ್ಷಣಾ ಮತ್ತು ಶೋಧ ಕಾರ್ಯಾಚರಣೆಗಳನ್ನು ನಡೆಸುತ್ತಿವೆ. ಸುರಂಗದೊಳಗೆ ಮೀಥೇನ್ ಮಟ್ಟ ತೀವ್ರವಾಗಿ ಹೆಚ್ಚಳವಾಗಿದ್ದರಿಂದ ರಕ್ಷಣಾ ಸಿಬ್ಬಂದಿ ತಕ್ಷಣ ಸ್ಥಳಕ್ಕೆ ತಲುಪಲು ಸಾಧ್ಯವಾಗಲಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ದಕ್ಷಿಣ ಸಿಕ್ಕಿಂನ ಸಮರ್ದುಂಗ್ ಸುರಂಗದಲ್ಲಿ ಸೋಮವಾರ ಮಧ್ಯಾಹ್ನ 3.09ರ ಸುಮಾರಿಗೆ ಭೂಕುಸಿತ ಉಂಟಾಗಿ ಅನಿಲ ಸೋರಿಕೆಯಾಗಿದೆ. ಇಲ್ಲಿ ಪಟೇಲ್ ಎಂಜಿನಿಯರಿಂಗ್ ತೀಸ್ತಾ ಹಂತ VI ಜಲವಿದ್ಯುತ್ ಯೋಜನೆಯ ಒಂದು ಭಾಗವನ್ನು ನಿರ್ಮಿಸುತ್ತಿದೆ. ಭೂಕುಸಿತದಿಂದ ಸುರಂಗ ನಿರ್ಮಾಣ ಸ್ಥಳದಲ್ಲಿ ಹಾನಿಯಾಗಿದೆ. ಇದರಿಂದ ಅನಿಲ ಸೋರಿಕೆಯಾಗಿದ್ದು, ಹತ್ತು ಮಂದಿ ಮೃತಪಟ್ಟಿದ್ದಾರೆ. ಇವರ ಶವಗಳನ್ನು ಹೊರತೆಗೆಯಲಾಗಿದೆ. 12 ಮಂದಿಯನ್ನು ರಕ್ಷಿಸಲಾಗಿತ್ತು, ಸುಮಾರು 18ಕ್ಕೂ ಹೆಚ್ಚು ಮಂದಿ ಒಳಗೆ ಸಿಲುಕಿರುವ ಸಾಧ್ಯತೆ ಇದೆ ಎನ್ನಲಾಗಿದೆ.

ಉಕ್ರೇನ್‌ನಲ್ಲಿ ಸರಕು ಹಡಗಿನ ಮೇಲೆ ದಾಳಿ; ನಾಲ್ವರು ಭಾರತೀಯರು ಸಾವು

ಘಟನೆಯ ಕುರಿತು ಮಾಹಿತಿ ನೀಡಿರುವ ಮುಖ್ಯಮಂತ್ರಿ ಕಚೇರಿ, ರಕ್ಷಣಾ ತಂಡಗಳು ಕಾರ್ಯಾಚರಣೆಯನ್ನು ಮುಂದುವರಿಸಿವೆ. 18ಕ್ಕೂ ಹೆಚ್ಚು ಜನರು ಸುರಂಗದೊಳಗೆ ಇರುವ ಸಾಧ್ಯತೆ ಇದೆ. ನಿಖರ ಮಾಹಿತಿ ಇನ್ನೂ ಅಧಿಕೃತವಾಗಿ ದೃಢಪಡಿಸಲಾಗಿಲ್ಲ ಎಂದು ಹೇಳಿದೆ.



ಭೂಕುಸಿತದ ಬಳಿಕ ಮಿಥೇನ್ ಸೋರಿಕೆಯಾಗಿದ್ದು ಇದರಿಂದ ರಕ್ಷಣಾ ಕಾರ್ಯಕ್ಕೆ ತೊಂದರೆ ಉಂಟಾಗಿದೆ. ಆರಂಭದಲ್ಲಿ ರಕ್ಷಣೆ ಕಾರ್ಯಾಚರಣೆಗೆ ತೊಡಗಿದ ರಕ್ಷಣಾ ತಂಡದ ಸದಸ್ಯರು ತಲೆತಿರುಗುವಿಕೆ ಮತ್ತು ಉಸಿರಾಟದ ತೊಂದರೆ ಉಂಟಾಗಿದ್ದು, ಅವರನ್ನು ಸುರಕ್ಷಿತವಾಗಿ ಹೊರಗೆ ಕರೆದುಕೊಂಡು ಬಂದು ಚಿಕಿತ್ಸೆಗಾಗಿ ಹತ್ತಿರದ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಹೀಗಾಗಿ ಒಳಗೆ ಕಾರ್ಮಿಕರು ಸಿಲುಕಿರುವ ವಿಭಾಗವನ್ನು ತಲುಪುವುದು ರಕ್ಷಣಾ ತಂಡದ ಸಿಬ್ಬಂದಿ ಕಠಿಣವಾಯಿತು.

ಎನ್‌ಡಿಆರ್‌ಎಫ್ ಜೊತೆಗೆ ರಾಜ್ಯ ವಿಪತ್ತು ಪ್ರತಿಕ್ರಿಯೆ ಪಡೆ, ಸಿಕ್ಕಿಂ ಪೊಲೀಸ್, ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ತಂಡಗಳನ್ನು ಸ್ಥಳದಲ್ಲಿ ನಿಯೋಜಿಸಲಾಗಿದೆ. ರಕ್ಷಣಾ ಕಾರ್ಯಾಚರಣೆಯನ್ನು ಸುಗಮಗೊಳಿಸಲು ಪ್ರದೇಶದಲ್ಲಿ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಘಟನೆಯ ಕುರಿತು ಮಾಹಿತಿ ನೀಡಿದ ನಾಮ್ಚಿ ಜಿಲ್ಲಾ ಕಲೆಕ್ಟರ್ ಅನುಪಾ ಟ್ಯಾಮ್ಲಿಂಗ್, ಮಾಹಿತಿ ಬಂದ ತಕ್ಷಣವೇ ಜಿಲ್ಲಾಡಳಿತ ಎಸ್‌ಡಿಆರ್‌ಎಫ್ ಜೊತೆಗೆ ಸಿಲಿಗುರಿ ಮತ್ತು ಪಾಕ್ಯೊಂಗ್‌ನ ರಕ್ಷಣಾ ತಂಡಗಳಿಗೆ ಸೂಚನೆಯನ್ನು ಕಳುಹಿಸಿದೆ. ಸೋಮವಾರ ಮಧ್ಯಾಹ್ನ 3.09 ರ ಸುಮಾರಿಗೆ ಈ ಘಟನೆ ನಡೆದಿದೆ. ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಸಿಬ್ಬಂದಿ ಮತ್ತು ಪೊಲೀಸ್ ಅಧಿಕಾರಿಗಳು ರಕ್ಷಣಾತ್ಮಕ ಸಾಧನಗಳಿಲ್ಲದೆ ಸುರಂಗವನ್ನು ಪ್ರವೇಶಿಸಲು ಎರಡು ಬಾರಿ ಪ್ರಯತ್ನಿಸಿದರು. ಆದರೆ ಸ್ಥಳದಲ್ಲಿ ಹೆಚ್ಚಿನ ಅಪಾಯವಿರುವುದರಿಂದ ಸಾಧ್ಯವಾಗಲಿಲ್ಲ ಎಂದು ಹೇಳಿದರು.

ಎನ್‌ಡಿಆರ್‌ಎಫ್ ತಂಡವೊಂದು ಮೊದಲು ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಿತ್ತು. ಬಳಿಕ ಎರಡನೇ ತಂಡ ಕೂಡ ಸ್ಥಳಕ್ಕೆ ಆಗಮಿಸಿ ರಕ್ಷಣಾ ಕಾರ್ಯಾಚರಣೆಯನ್ನು ಮುಂದುವರಿಸಿದೆ. ಸುರಂಗದೊಳಗಿನ ಮೀಥೇನ್ ಮಟ್ಟವು ತುಂಬಾ ಹೆಚ್ಚಾಗಿದೆ. ಒಳಗೆ ಎಷ್ಟು ಕಾರ್ಮಿಕರು ಸಿಲುಕಿದ್ದಾರೆ ಎನ್ನುವ ನಿಖರ ಮಾಹಿತಿ ಇಲ್ಲ ಎಂದರು.

ದೆಹಲಿ ಆಸ್ಪತ್ರೆಯಲ್ಲಿ ಘೋರ ದುರಂತ; ಹೊಟ್ಟೆ ಮೇಲೆ ಫ್ಯಾನ್ ಬಿದ್ದು ರೋಗಿ ಸಾವು: ವಿಡಿಯೊ ವೈರಲ್‌

ಭೂಕುಸಿತಕ್ಕೆ ನಿಖರವಾದ ಕಾರಣ ತಿಳಿದು ಬಂದಿಲ್ಲ. ಸುರಂಗದೊಳಗೆ ದೊಡ್ಡ ಸ್ಫೋಟ ಉಂಟಾಗಿದ್ದು, ತಕ್ಷಣ ಹಲವಾರು ಕಾರ್ಮಿಕರು ಸ್ಥಳದಿಂದ ಓಡಿ ಹೋದರು. ಹಲವಾರು ಮಂದಿ ಒಳಗೆ ಸಿಲುಕಿಕೊಂಡಿದ್ದಾರೆ. ಒಳಗೆ ಸಿಲುಕಿರುವ ಎಲ್ಲರನ್ನೂ ಸುರಕ್ಷಿತವಾಗಿರಿಸುವುದು ಆಡಳಿತದ ಪ್ರಥಮ ಆದ್ಯತೆಯಾಗಿದೆ ಎಂದು ತಿಳಿಸಿದರು.