Murder case: ಪತ್ನಿಯ ಶೀಲದ ಬಗ್ಗೆ ಶಂಕೆ, ಕೊಡಲಿಯಿಂದ ಕೊಚ್ಚಿ ಮಕ್ಕಳನ್ನು ಕೊಂದ ಪಾಪಿ ತಂದೆ
Yadagiri: ಕಳೆದ ಕೆಲವು ದಿನಗಳಿಂದ ದಂಪತಿಯ ನಡುವೆ ಹೊಂದಾಣಿಕೆ ಇರಲಿಲ್ಲ. ಈತ ಪತ್ನಿಯ ಶೀಲದ ಮೇಲೆ ಶಂಕೆ ವ್ಯಕ್ತಪಡಿಸಿ ಜಗಳವಾಡುತ್ತಿದ್ದ. ಇದರಿಂದ ಪ್ರತಿದಿನ ಇಬ್ಬರ ಮಧ್ಯೆ ಜಗಳವಾಗುತ್ತಿದ್ದು, ಜಗಳದಿಂದ ಮನನೊಂದ ಪತ್ನಿ ಮಕ್ಕಳ ಸಮೇತ ತವರು ಮನೆ ಸೇರಿದ್ದಳು.

-

ಯಾದಗಿರಿ: ಪಾಪಿ, ಸಂಶಯಪಿಶಾಚಿ ತಂದೆಯೊಬ್ಬ (father) ತನ್ನಿಬ್ಬರು ಮಕ್ಕಳನ್ನು ಕೊಡಲಿಯಿಂದ ಕೊಚ್ಚಿ ಬರ್ಬರವಾಗಿ ಕೊಂದು ಹಾಕಿದ (Murder case) ಘಟನೆ ಯಾದಗಿರಿ (Yadagiri) ಜಿಲ್ಲೆಯ ಹತ್ತಿಕುಣಿ ಗ್ರಾಮದಲ್ಲಿ ನಡೆದಿದೆ. ಪತ್ನಿಯ (wife) ಶೀಲದ ಬಗ್ಗೆ ಆತನಿಗೆ ಇದ್ದ ಶಂಕೆಯೇ ಈ ಹತ್ಯೆಗಳಿಗೆ ಕಾರಣವಾಗಿದೆ. ಅಪ್ಪ- ಅಮ್ಮನ ಜಗಳಕ್ಕೆ ಏನೂ ಅರಿಯದ ಪುಟ್ಟ ಕಂದಮ್ಮಗಳು ಬಲಿಯಾಗಿದ್ದು, ಮಕ್ಕಳು ಮಲಗಿದ್ದಲ್ಲೇ ಅಪ್ಪನ ಕ್ರೌರ್ಯಕ್ಕೆ ತುತ್ತಾಗಿವೆ.
ಯಾದಗಿರಿ ತಾಲೂಕಿನ ಹತ್ತಿಕುಣಿ ಗ್ರಾಮದ ಶರಣಪ್ಪ (30) ಎಂಬಾತನೇ ಪತ್ನಿಯ ಶೀಲ ಶಂಕಿಸಿ ಮಕ್ಕಳ ಕೊಲೆ ಮಾಡಿದ ರಾಕ್ಷಸ. ಕಳೆದ ಕೆಲವು ದಿನಗಳಿಂದ ದಂಪತಿಯ ನಡುವೆ ಹೊಂದಾಣಿಕೆ ಇರಲಿಲ್ಲ. ಈತ ಪತ್ನಿಯ ಶೀಲದ ಮೇಲೆ ಶಂಕೆ ವ್ಯಕ್ತಪಡಿಸಿ ಜಗಳವಾಡುತ್ತಿದ್ದ. ಇದರಿಂದ ಪ್ರತಿದಿನ ಇಬ್ಬರ ಮಧ್ಯೆ ಜಗಳವಾಗುತ್ತಿದ್ದು, ಜಗಳದಿಂದ ಮನನೊಂದ ಪತ್ನಿ ಮಕ್ಕಳ ಸಮೇತ ತವರು ಮನೆ ಸೇರಿದ್ದಳು. ಕೆಲವು ದಿನಗಳ ಹಿಂದಷ್ಟೇ ಮಕ್ಕಳನ್ನು ತನ್ನ ಮನೆಗೆ ವಾಪಾಸ್ ಕರೆದುಕೊಂಡು ಬಂದಿದ್ದ.
ಮಕ್ಕಳನ್ನು ರಾತ್ರಿ ಮಲಗಿಸಿದ ಬಳಿಕ ಅಪ್ಪ ಇವರನ್ನು ಕೊಚ್ಚಿ ಕೊಂದಿದ್ದಾನೆ. ತಂದೆಯ ಈ ರಾಕ್ಷಸ ಕೃತ್ಯಕ್ಕೆ 5 ವರ್ಷದ ಮಗಳು ಸಾನ್ವಿ ಮತ್ತು 3 ವರ್ಷದ ಮಗ ಭರತ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮತ್ತೊಬ್ಬ ಮಗನ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಮಕ್ಕಳನ್ನು ಕೊಂದ ನಂತರ ಪಾಪಿ ಕೊಡಲಿ ಸಮೇತ ಎಸ್ಕೇಪ್ ಆಗಿದ್ದಾನೆ. ಕೊಲೆ ಮಾಡಿ ಪರಾರಿಯಾದ ಆರೋಪಿ ಶರಣಪ್ಪನಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.
ಯಾದಗಿರಿ ಗ್ರಾಮೀಣ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದ ಈ ಘಟನೆಯ ಸ್ಥಳಕ್ಕೆ ಡಿವೈಎಸ್ಪಿ ಸುರೇಶ್ ನಾಯಕ್ ಮತ್ತು ಪಿಎಸ್ಐ ಹಣಮಂತ ಬಂಕಲಗಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗಾಯಾಳು ಮಗನನ್ನು ಯಾದಗಿರಿ ಜಿಲ್ಲಾ ಆಸ್ಪತ್ರೆಗೆ ಒಯ್ಯಲಾಗಿದ್ದು, ಅವನ ಸ್ಥಿತಿ ಚಿಂತಾಜನಕವಾಗಿದೆ.
ಇದನ್ನೂ ಓದಿ: Self Harming: ಜಾತ್ರೆಯಿಂದ ಖುಷಿಯಾಗಿ ಬಂದ ವಿದ್ಯಾರ್ಥಿನಿ ಪಿಜಿಯಲ್ಲಿ ಅನುಮಾನಾಸ್ಪದ ಸಾವು