ಪತ್ನಿಯನ್ನು ಕೊಂದು ಚಾವಣಿಯಿಂದ ಬಿದ್ದು ಮೃತಪಟ್ಟಳು ಎಂದು ಕಥೆ ಕಟ್ಟಿದ ಸೈನಿಕ
Crime News: ಗಡಿ ಭದ್ರತಾ ಪಡೆ (ಬಿಎಸ್ಎಫ್) ಸೈನಿಕನೊಬ್ಬ ರಜೆಯಲ್ಲಿದ್ದಾಗ ತನ್ನ ಮನೆಯಲ್ಲಿ ಪತ್ನಿಯ ಮೇಲೆ ಹಲ್ಲೆ ನಡೆಸಿ, ಹತ್ಯೆ ಮಾಡಿದ್ದಾನೆ. ಬಳಿಕ ಚಾವಣಿಯಿಂದ ಬಿದ್ದು ಮೃತಪಟ್ಟಿದ್ದಾಳೆ ಎಂದು ಬಿಂಬಿಸಿರುವ ಘಟನೆ ಪಂಜಾಬ್ನ ಹೋಶಿಯಾರ್ಪುರ ಜಿಲ್ಲೆಯಲ್ಲಿ ನಡೆದಿದೆ. ಆರೋಪಿ, ಮೃತಳ ಪತಿ ಅಮರ್ಜಿತ್ ಸಿಂಗ್ನನ್ನು ಪೊಲೀಸರು ಬಂಧಿಸಿದ್ದಾರೆ.
ಪತ್ನಿಯನ್ನು ಹತ್ಯೆ ಮಾಡಿದ ಸೈನಿಕ ಅಮರ್ಜಿತ್ ಸಿಂಗ್ (ಸಂಗ್ರಹ ಚಿತ್ರ) -
ಚಂಡೀಗಢ, ಆ. 16: ಗಡಿ ಭದ್ರತಾ ಪಡೆ (BSF) ಸೈನಿಕನೊಬ್ಬ ರಜೆಯಲ್ಲಿದ್ದಾಗ ತನ್ನ ಮನೆಯಲ್ಲಿ ಪತ್ನಿಯ ಮೇಲೆ ಹಲ್ಲೆ ನಡೆಸಿ, ಹತ್ಯೆ ಮಾಡಿದ್ದಾನೆ. ಬಳಿಕ ಚಾವಣಿಯಿಂದ ಬಿದ್ದು ಮೃತಪಟ್ಟಿದ್ದಾಳೆ ಎಂದು ಬಿಂಬಿಸಿರುವ ಘಟನೆ ಪಂಜಾಬ್ನ (Punjab) ಹೋಶಿಯಾರ್ಪುರ ಜಿಲ್ಲೆಯಲ್ಲಿ ನಡೆದಿದೆ. ಮೃತ ಮಹಿಳೆಯನ್ನು ರಮ ಎಂದು ಗುರುತಿಸಲಾಗಿದೆ. ದಂಪತಿ ಸುಮಾರು 12 ವರ್ಷಗಳ ಹಿಂದೆ ಮದುವೆಯಾಗಿದ್ದು, ಅವರಿಗೆ ಇಬ್ಬರು ಮಕ್ಕಳಿದ್ದಾರೆ (Crime News). ಸದ್ಯ ಆರೋಪಿ ಪತಿ ಅಮರ್ಜಿತ್ ಸಿಂಗ್ನನ್ನು ಪೊಲೀಸರು ಬಂಧಿಸಿದ್ದಾರೆ.
ರಮ ಅವರ ಕುಟುಂಬ ಸಲ್ಲಿಸಿದ ದೂರಿನ ಪ್ರಕಾರ, ಅವರ ಪತಿ ಅಮರ್ಜಿತ್ ಸಿಂಗ್ ಆಗಸ್ಟ್ 13ರ ರಾತ್ರಿ ರಜೆಯ ಮೇಲೆ ಮನೆಗೆ ಮರಳಿದ್ದರು. ಬಳಿಕ ರಮ ಅವರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ತೀವ್ರ ಗಾಯಗಳಿಂದ ರಮ ಮೃತಪಟ್ಟಿದ್ದಾರೆ. ಆಗಸ್ಟ್ 14ರಂದು ಬೆಳಗಿನ ಜಾವ 4 ಗಂಟೆ ಸುಮಾರಿಗೆ ಆಕೆ ಚಾವಣಿಯಿಂದ ಬಿದ್ದು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ಆಕೆಯ ಕುಟುಂಬಕ್ಕೆ ತಿಳಿಸಲಾಯಿತು. ಆದರೆ ಮನೆಯವರು ಆಸ್ಪತ್ರೆಗೆ ತಲುಪಿದಾಗ, ಅಷ್ಟರಲ್ಲಾಗಲೇ ರಮ ಮೃತಪಟ್ಟಿದ್ದರು.
ʼʼಆಕೆಯ ದೇಹದ ಮೇಲೆ ಹಲವು ಗಾಯದ ಗುರುತುಗಳನ್ನು ಗಮನಿಸಿದ್ದೇವೆ. ಆಕೆ ಸಾಯುವ ಮೊದಲು ಥಳಿಸಿರಬಹುದುʼʼ ಎಂದು ಮನೆಯವರು ಶಂಕಿಸಿದ್ದಾಗಿ ಪೊಲೀಸರು ತಿಳಿಸಿದ್ದಾರೆ. ಅನುಮಾನವನ್ನು ಬೇರೆಡೆಗೆ ತಿರುಗಿಸಲು ಚಾವಣಿಯಿಂದ ಬಿದ್ದು ಮೃತಪಟ್ಟಿದ್ದಾಳೆ ಎಂದು ಸುಳ್ಳಿನ ಕಥೆ ಕಟ್ಟಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ.
ಮದುವೆಯಾದಾಗಿನಿಂದ ಮಗಳು ಪತಿಯಿಂದ ಕಿರುಕುಳ ಮತ್ತು ದೈಹಿಕ ಹಲ್ಲೆಯನ್ನು ಎದುರಿಸುತ್ತಿದ್ದಾಳೆ ಎಂದು ರಮಳ ತಂದೆ ರಾಮ್ಚಂದ್ ಆರೋಪಿಸಿದ್ದಾರೆ. ಅಮರ್ಜಿತ್ ಸಿಂಗ್, ಅವರ ಚಿಕ್ಕಪ್ಪ ಕುಲದೀಪ್ ಕುಕಿ ಮತ್ತು ಚಿಕ್ಕಮ್ಮ ಸೋನಿಯಾ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಪ್ರಕರಣ ಸಂಬಂಧ ಅಮರ್ಜಿತ್ ಸಿಂಗ್ ಅವರನ್ನು ಬಂಧಿಸಲಾಗಿದ್ದು, ಉಳಿದ ಇಬ್ಬರು ಆರೋಪಿಗಳು ತಲೆಮರೆಸಿಕೊಂಡಿದ್ದಾರೆ.
ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಸ್ಟೇಷನ್ ಹೌಸ್ ಅಧಿಕಾರಿ ಹರ್ಪ್ರೇಮ್ ಸಿಂಗ್ ತಿಳಿಸಿದ್ದಾರೆ. ಮರಣೋತ್ತರ ಪರೀಕ್ಷೆಯ ನಂತರ ರಮ ಅವರ ಮೃತದೇಹವನ್ನು ಅವರ ಕುಟುಂಬಕ್ಕೆ ಹಸ್ತಾಂತರಿಸಲಾಗಿದೆ. ಅಂತ್ಯಕ್ರಿಯೆಯನ್ನು ಆಕೆಯ ಹುಟ್ಟೂರಿನಲ್ಲಿ ನಡೆಸಲಾಗುವುದು ಎಂದು ಮನೆಯವರು ತಿಳಿಸಿದ್ದಾರೆ.