2 ಕೋಟಿ ರುಪಾಯಿ ವಿಮಾ ಹಣಕ್ಕಾಗಿ ಪ್ರಿಯಕರನೊಂದಿಗೆ ಸೇರಿ ಪತಿಯನ್ನೇ ಕೊಂದು ಹೃದಯಾಘಾತದ ನಾಟಕವಾಡಿದ ಮಹಿಳೆ
ಪ್ರಿಯಕರನ ಜತೆ ಸೇರಿ ಗಂಡನನ್ನೇ ಹತ್ಯೆ ಮಾಡಿದ ಪತ್ನಿ ಇದೀಗ ಪೊಲೀಸರ ಅತಿಥಿಯಾಗಿದ್ದು, ಜೈಲಿನಲ್ಲಿ ಕಂಬಿ ಎಣಿಸುತ್ತಿದ್ದಾಳೆ. ಬೋರ್ಗಂ (ಕೆ) ಗ್ರಾಮದ ಮಕ್ಳೂರು ಪ್ರದೇಶದ ನಿವಾಸಿಯಾದ ಪಾಳ್ನಾಟಿ ರಮೇಶ್ ಹತ್ಯೆಯಾದ ವ್ಯಕ್ತಿ. ಹಣದಾಸೆಗಾಗಿ ಈ ದುಷ್ಕೃತ್ಯ ಎಸಗಿದ್ದು, 2 ಕೋಟಿ ರುಪಾಯಿ ವಿಮಾ ಹಣಕ್ಕಾಗಿ ಪ್ರಿಯಕರನೊಂದಿಗೆ ಸೇರಿ ಪತಿಯನ್ನೇ ಕೊಂದು ಹೃದಯಾಘಾತದ ನಾಟಕವಾಡಿದ್ದಾಳೆ.
ಕೊಲೆ ಆರೋಪಿ -
ಹೈದರಾಬಾದ್, ಜ. 8: 2 ಕೋಟಿ ರುಪಾಯಿಗೆ ಹೆಚ್ಚು ಮೌಲ್ಯದ ವಿಮಾ ಹಣವನ್ನು ಪಡೆಯಲು ಮಹಿಳೆಯೊಬ್ಬಳು ಪ್ರಿಯಕರನೊಂದಿಗೆ ಸೇರಿ ತನ್ನ ಪತಿಯನ್ನೇ ಹತ್ಯೆ ಮಾಡಿರುವ ಘಟನೆ ತೆಲಂಗಾಣದ (Telangana) ನಿಜಾಮಾಬಾದ್ (Nizamabad) ಜಿಲ್ಲೆಯಲ್ಲಿ ನಡೆದಿದೆ. ಬೋರ್ಗಂ (ಕೆ) ಗ್ರಾಮದ ಮಕ್ಳೂರು ಪ್ರದೇಶದ ನಿವಾಸಿ ಪಾಳ್ನಾಟಿ ರಮೇಶ್ ಹತ್ಯೆಗಾದ ವ್ಯಕ್ತಿ. ಸೌಮ್ಯಾ ಕೊಲೆ ಮಾಡಿದ ಮಹಿಳೆ.
ಸುಮಾರು 13 ವರ್ಷಗಳ ಹಿಂದೆ ಸೌಮ್ಯ ಮತ್ತು ರಮೇಶ್ ಪ್ರೇಮ ವಿವಾಹವಾಗಿದ್ದರು. ರಮೇಶ್ ಖಾಸಗಿ ಹಣಕಾಸು ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದರೆ, ಸೌಮ್ಯ ನಿಜಾಮಾಬಾದ್ನ ಖಾಸಗಿ ಶಾಲೆಯೊಂದರಲ್ಲಿ ಉದ್ಯೋಗಿಯಾಗಿದ್ದಳು.
ಪೊಲೀಸ್ ಪ್ರಕಾರ ಸೌಮ್ಯಾ ತನ್ನದೇ ಶಾಲೆಯಲ್ಲಿ ದೈಹಿಕ ಶಿಕ್ಷಣ ಶಿಕ್ಷಕನಾಗಿ ಕೆಲಸ ಮಾಡುತ್ತಿದ್ದ ದಿಲೀಪ್ ಎಂಬಾತನೊಂದಿಗೆ ಅನೈತಿಕ ಸಂಬಂಧ ಹೊಂದಿದ್ದಳು. ಇದೇ ವಿಚಾರಕ್ಕೆ ರಮೇಶ್ ಮತ್ತು ಸೌಮ್ಯಾ ನಡುವೆ ಆಗಾಗ ಜಗಳ ನಡೆಯುತ್ತಿತ್ತು. ಇದರಿಂದ ರೋಸಿ ಹೋಗಿದ್ದ ಸೌಮ್ಯಾ ಮತ್ತು ದಿಲೀಪ್ ಕೊನೆಗೆ ರಮೇಶ್ ಅನ್ನು ಕೊಲ್ಲುವ ಸಂಚು ರೂಪಿಸಿದ್ದಾರೆ.
ಪ್ಲಾನ್ ಮಾಡಿದಂತೆ ದಿಲೀಪ್ ತನ್ನ ಸಂಬಂಧಿ ಮಡಾಪುರ ಗ್ರಾಮದ ಅಭಿಷೇಕ್ನನ್ನು ಸಂಪರ್ಕಿಸಿದ್ದ. ಆತ ಜಿತೇಂದ್ರ ಎಂಬ ಸುಪಾರಿ ಕಿಲ್ಲರ್ ಜತೆ ಮಾತನಾಡಿ, ಇನ್ನೂ ಮೂವರನ್ನು ಗ್ಯಾಂಗ್ಗೆ ಸೇರಿಸಿಕೊಂಡಿದ್ದ. ಹಂತಕರಿಗೆ ಮುಂಗಡವಾಗಿ 35,000 ರುಪಾಯಿ ನೀಡಲು ಸೌಮ್ಯಾ ತನ್ನ ಉಂಗುರವನ್ನು ಅಡವಿಟ್ಟಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
2025ರ ಆಗಸ್ಟ್ನಲ್ಲೇ ರಮೇಶ್ನ ಬೈಕ್ಗೆ ಕಾರಿನಿಂದ ಡಿಕ್ಕಿಪಡಿಸಿ ಕೊಲ್ಲಲು ಹಂತಕರು ಪ್ರಯತ್ನಿಸಿದ್ದರು. ಆದರೆ ರಮೇಶ್ ಪಾರಾಗಿದ್ದು, ಮಕ್ಳೂರು ಪೊಲೀಸ್ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದರು. ಬಳಿಕ ಆರೋಪಿಗಳು ಮತ್ತೊಂದು ಅವಕಾಶಕ್ಕಾಗಿ ಕಾಯುತ್ತಿದ್ದರು.
ಅಪ್ರಾಪ್ತ ಮಗಳನ್ನೇ ವೇಶ್ಯಾವಾಟಿಕೆಗಿಳಿಸಿದ ಪಾಪಿ ತಂದೆ, ಅಜ್ಜಿ ಸೇರಿ 12 ಮಂದಿ ಬಂಧನ
ಡಿ. 19ರ ರಾತ್ರಿ ಊಟದ ನಂತರ, ಸೌಮ್ಯಾ ಸುಮಾರು 10 ನಿದ್ರೆ ಮಾತ್ರೆಗಳನ್ನು ನೀರಿನಲ್ಲಿ ಬೆರೆಸಿ ರಮೇಶ್ಗೆ ಕುಡಿಸಿದಳು. ರಮೇಶ್ ಗಾಢ ನಿದ್ರೆಗೆ ಜಾರಿದ ಬಳಿಕ, ಸೌಮ್ಯ ದಿಲೀಪ್ಗೆ ಕರೆ ಮಾಡಿದಳು. ಸುಪಾರಿ ಹಂತಕರಿಂದ ಪ್ರತಿಕ್ರಿಯೆ ಸಿಗದ ಕಾರಣ, ದಿಲೀಪ್ ಮತ್ತು ಅಭಿಷೇಕ್ ಬೋರ್ಗಂ ಗ್ರಾಮಕ್ಕೆ ತೆರಳಿ, ಟವಲ್ನಿಂದ ರಮೇಶ್ನ ಕತ್ತು ಬಿಗಿದು ಕೊಲೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಸೌಮ್ಯಾ ನಂತರ ರಮೇಶ್ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ಹೇಳಿ ಅನುಮಾನ ಬರದಂತೆ ಅಂತ್ಯಕ್ರಿಯೆಯನ್ನೂ ನೆರವೇರಿಸಿದ್ದಾಳೆ. ಆದರೆ ಇಸ್ರೇಲ್ನಲ್ಲಿ ವಾಸವಾಗಿರುವ ರಮೇಶ್ನ ಸಹೋದರ ಕೇತಿರ್ ಅವರಿಗೆ ಅನುಮಾನ ಉಂಟಾಗಿ ವಿದೇಶದಿಂದಲೇ ಮಕ್ಳೂರು ಪೊಲೀಸರಿಗೆ ದೂರು ನೀಡಿದ ಬಳಿಕ ಪ್ರಕರಣಕ್ಕೆ ಟ್ವಿಸ್ಟ್ ಬಂದಿದೆ. ಆ ದೂರಿನ ಆಧಾರದ ಮೇಲೆ ಡಿ. 24ರಂದು ಪೊಲೀಸರು ರಮೇಶ್ ಅವರ ಮೃತದೇಹವನ್ನು ಸಮಾಧಿಯಿಂದ ಹೊರತೆಗೆದು ಪುನಃ ಮರಣೋತ್ತರ ಪರೀಕ್ಷೆ ನಡೆಸಿದಾಗ ಇದು ಕೊಲೆ ಎಂಬುದು ಗೊತ್ತಾಗಿದೆ.
ಬಳಿಕ ಪೊಲೀಸರು ಸೌಮ್ಯಾ ಬಂಧಿಸಿ ವಿಚಾರಣೆ ನಡೆಸಿದಾಗ, ರಮೇಶ್ 2 ಕೋಟಿ ರುಪಾಯಿ ಹೆಚ್ಚು ಮೌಲ್ಯದ ಹಲವು ವಿಮಾ ಪಾಲಿಸಿಗಳನ್ನು ತೆಗೆದುಕೊಂಡಿದ್ದರು. ಅದನ್ನು ಪಡೆಯಲು ಹಾಗೂ ಪ್ರಿಯಕರನೊಂದಿಗೆ ಹೊಸ ಜೀವನ ಆರಂಭಿಸಲು ರಮೇಶ್ನ ಹತ್ಯೆ ಪ್ಲಾನ್ ಮಾಡಿದ್ದಾಗಿ ಒಪ್ಪಿಕೊಂಡಿದ್ದಾಳೆ.
ಸದ್ ಸೌಮ್ಯಾ, ದಿಲೀಪ್, ಅಭಿಷೇಕ್ ಹಾಗೂ ಸುಪಾರಿ ಹಂತಕರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಹಾಗೂ ಪರಾರಿಯಾಗಿರುವ ಇನ್ನೊಬ್ಬ ಆರೋಪಿ ಮೋಹ್ಸಿನ್ಗಾಗಿ ಶೋಧಕಾರ್ಯ ನಡೆದಿದೆ ಎಂದು ಎಸಿಪಿ ರಾಜ ವೆಂಕಟ ರೆಡ್ಡಿ ತಿಳಿಸಿದ್ದಾರೆ.