ಲಖನೌ, ಆ. 9: ಮದುವೆ ಹೆಸರಿನಲ್ಲಿ ವಂಚಿಸುವ ಪ್ರಕರಣ ಇತ್ತೀಚೆಗೆ ಹೆಚ್ಚಾಗುತ್ತಿದೆ. ಅದರಲ್ಲೂ ಈ ಮೋಸದ ಜಾಲಕ್ಕೆ ವಿದ್ಯಾವಂತರೇ ಬಲಿಯಾಗುತ್ತಿದ್ದಾರೆ. ಇದೀಗ ಬಿಜೆಪಿ ಶಾಸಕರೊಬ್ಬರ ಪುತ್ರಿಗೇ ವಂಚಕನೊಬ್ಬ ಟೋಪಿ ಹಾಕಿದ್ದಾನೆ. ಈಗಾಗಲೇ 25 ಬಾರಿ ಮದುವೆಯಾಗಿರುವ ಆತ ತನ್ನ ಗುರುತು ಮರೆಮಾಚಿ ಶಾಸಕರ ಮಗಳನ್ನೇ ಕೈ ಹಿಡಿದಿದ್ದಾನೆ. ಸದ್ಯ ಆತನ ಮೋಸದ ಜಾಲ ಬಯಲಾಗಿದ್ದು, ದೂರು ದಾಖಲಾಗಿದೆ. ಉತ್ತರ ಪ್ರದೇಶದ ಶಾಸಕ ಜ್ಞಾನ್ ತಿವಾರಿ ಮತ್ತು ಅವರ ಪುತ್ರಿಗೆ ವಂಚಕ ಮೋಸ ಮಾಡಿದ್ದು, ಸದ್ಯ ಪ್ರಕರಣ ದಾಖಲಾಗಿದೆ (Crime News). ಈ ಪ್ರಕರಣ ಬೆಳಕಿಗೆ ಬರುತ್ತಿದ್ಧಂತೆ ದೇಶವೇ ಬೆಚ್ಚಿ ಬಿದ್ದಿದೆ.
ಸೆವತ ಕ್ಷೇತ್ರದ ಬಿಜೆಪಿ ಶಾಸಕ ಜ್ಞಾನ್ ತಿವಾರಿ ಇದೀಗ ರೀಯುಸಾ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ಎಫ್ಐಆರ್ ದಾಖಲಿಸಿದ್ದಾರೆ. ಅಪರಾಧಿಯನ್ನು ಪ್ರಖಾರ್ ತ್ರಿವೇದಿ ಎಂದು ಗುರುತಿಸಲಾಗಿದೆ. ಪ್ರಖಾರ್ ತ್ರಿವೇದಿ ಮತ್ತು ಆತನ ತಂದೆ ಅನುಜ್ ತ್ರಿವೇದಿಯನ್ನು ಪೊಲೀಸರು ಬಂಧಿಸಿದ್ದಾರೆ.
ಬಿಜೆಪಿ ಶಾಸಕ ಜ್ಞಾನ್ ತಿವಾರಿ ಅವರ ವಿಡಿಯೊ:
ವಿಡಿಯೊ ಮೂಲಕ ಘಟನೆ ವಿವರಿಸಿದ ಶಾಸಕ
ತಮ್ಮ ಮಗಳಿಗೆ ಆಗಿರುವ ಮೋಸವನ್ನು ಜ್ಞಾನ್ ತಿವಾರಿ ವಿಡಿಯೊ ಮೂಲಕ ವಿವರಿಸಿದ್ದಾರೆ. ಪ್ರಖಾರ್ ತ್ರಿವೇದಿ ಜತೆಗಿನ ಎಲ್ಲ ರೀತಿಯ ಸಂಬಂಧವನ್ನು ಕಡಿದುಕೊಂಡು ಪುತ್ರಿಯನ್ನು ತಮ್ಮ ಮನೆಗೆ ಕರೆದುಕೊಂಡು ಬಂದಿರುವುದಾಗಿ ತಿಳಿಸಿದ್ದಾರೆ. ಈ ಮದುವೆಯಿಂದ ತಾವು ಹಾಗೂ ಮಗಳು ಸಾಕಷ್ಟು ತೊಂದರೆ ಅನುಭವಿಸಿದ್ದಾಗಿ ಹೇಳಿದ್ದಾರೆ. ಇದು ತಮ್ಮ ಸಾರ್ವಜನಿಕ ಜೀವನದ ಮೇಲೂ ಪರಿಣಾಮ ಬೀರಿದೆ ಎಂದಿದ್ದಾರೆ. ಪ್ರಖಾರ್ ತ್ರಿವೇದಿ ತಮ್ಮ ಕುಟುಂಬಕ್ಕೆ ಮೋಸ ಮಾಡಿದ್ದು, ಕಠಿಣ ಶಿಕ್ಷೆ ವಿಧಿಸಬೇಕೆಂದು ಆಗ್ರಹಿಸಿದ್ದಾರೆ.
2 ವರ್ಷಗಳ ಹಿಂದೆ ಮದುವೆ
2024ರಲ್ಲಿ ಜ್ಞಾನ್ ಅವರ ಪುತ್ರಿಗೆ ಪ್ರಖಾರ್ ಜತೆ ಮದುವೆಯಾಗಿತ್ತು. ಮಿಶ್ರಿಖ್ನ ಚಂದ್ರವಾಲ್ ನಿವಾಸಿಯಾಗಿದ್ದ ಪ್ರಖಾರ್ ತನ್ನನ್ನು ಉದ್ಯಮಿ ಎಂದು ಪರಿಚಯಿಸಿಕೊಂಡಿದ್ದ. ಪ್ರಖಾರ್ ಮಹಾರಾಷ್ಟ್ರದ ಮುಂಬೈ ಮೂಲದವನಾಗಿದ್ದು, ಆತನಿಗೆ ಈ ಹಿಂದೆಯೇ ಮದುವೆಯಾಗಿದ್ದ. ಇದರ ಜತಗೆ ತನ್ನ ಅಪರಾಧ ಹಿನ್ನೆಲೆಗಳೆನ್ನೆಲ್ಲ ಮುಚ್ಚಿಟ್ಟು ಶಾಸಕರ ಮಗಳ ಕೈ ಹಿಡಿದಿದ್ದ. ಸ್ಥಳೀಯರಲ್ಲಿ ಸಾಕಷ್ಟು ವಿಚಾರಿಸಿಯೇ ಮಗಳ ಮದುವೆ ಮಾಡಿದ್ದಾಗಿ ಜ್ಞಾನ್ ತಿಳಿಸಿದ್ದಾರೆ. ಅಚ್ಚರಿಯ ಸಂಗತಿ ಎಂದರೆ ಆಗೆಲ್ಲ ಎಲ್ಲರೂ ಆತನ ಬಗ್ಗೆ ಧನಾತ್ಮಕ ಅಂಶಗಳನ್ನೇ ಹೇಳಿದ್ದರು. ಆ ರೀತಿ ತನ್ನನ್ನು ಗುರುತಿಸಿಕೊಂಡಿದ್ದ.
RSS ಸದಸ್ಯ ಎಂದು ಡೋಂಗಿ, ಮೋದಿ ಫೋಟೋ ಬಳಸಿ ವಂಚನೆ
ಸೋಷಿಯಲ್ ಮೀಡಿಯಾ ಮೂಲಕ ಬಂಡವಾಳ ಬಯಲು
ಮದುವೆಯಾದ ವರ್ಷಗಳ ಬಳಿಕ ಸೋಷಿಯಲ್ ಮೀಡಿಯಾ ಮೂಲಕ ಪ್ರಖಾರ್ನ ಬಂಡವಾಳ ಬಯಲಾಗತೊಡಗಿತು. ಪ್ರಖಾರ್ ಮಹಾರಾಷ್ಟ್ರ ಸೇರಿ ವಿವಿಧ ರಾಜ್ಯಗಳಲ್ಲಿ ಈಗಾಗಲೇ ಮದುವೆಯಾಗಿರುವುದು ಗೊತ್ತಾಯಿತು. ಅಲ್ಲದೆ ಆ ಮೂಲಕ ಕೋಟ್ಯಂತರ ರುಪಾಯಿ ವಂಚಿಸಿದ್ದಾನೆ ಎಂದು ಬಿಜೆಪಿ ಶಾಸಕ ಜ್ಞಾನ್ ಹೇಳಿದ್ದಾರೆ. ಪ್ರಖಾರ್ ನಕಲಿ ಗುರುತಿನ ಚೀಟಿಗಳನ್ನು ಬಳಸಿಕೊಂಡು 25 ಬಾರಿ ವಿವಾಹವಾಗಿದ್ದಾಗಿ ಅವರು ತಿಳಿಸಿದ್ದಾರೆ. ಸದ್ಯ ಈ ಪ್ರಕರಣ ಸಂಚಲನ ಮೂಡಿಸಿದೆ. ಶಾಸಕರನ್ನೇ ವಂಚಿಸುತ್ತಾರೆ ಎಂದರೆ ಜನ ಸಾಮಾನ್ಯರ ಪಾಡೇನು ಎಂದು ಹಲವರು ಪ್ರಶ್ನಿಸಿದ್ದಾರೆ. ಪಕ್ಷೇತರವಾಗಿ ಇಂತಹ ಕೃತ್ಯಗಳನ್ನು ಖಂಡಿಸಬೇಕು ಎಂಬ ಆಗ್ರಹ ಕೇಳಿ ಬಂದಿದೆ.
ದೇಶದ ಇನ್ನಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
ʼಪ್ರವಾಸಿ ಪ್ರಪಂಚʼ ವೆಬ್ಸೈಟ್ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ.