ಢಾಕಾ, ಆ. 23: ಕೆಲವು ತಿಂಗಳ ವಿರಾಮದ ಬಳಿಕ ಬಾಂಗ್ಲಾದೇಶದಲ್ಲಿ ಮತ್ತೆ ಹಿಂದೂಗಳ ಸಾಮೂಹಿಕ ಹತ್ಯೆ ನಡೆದಿದೆ (Bangladesh Horror). ನಿವೃತ್ತ ಶಿಕ್ಷಕ, ಅವರ ಪತ್ನಿ ಮತ್ತು ಇಬ್ಬರು ಮಕ್ಕಳು ಸೇರಿ ನಾಲ್ವರ ಮೃತದೇಹ ನಿಗೂಢ ರೀತಿಯಲ್ಲಿ ಪತ್ತೆಯಾಗಿದ್ದು, ಹಲವು ಅನುಮಾನ ಮೂಡಿಸಿದೆ. ರಂಗ್ಪುರದಲ್ಲಿರುವ ದಸ್ಪಾರಾದ ಅವರ ಮನೆಯಲ್ಲಿ ಮೃತದೇಹ ಕಂಡು ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆಗಸ್ಟ್ 22ರ ರಾತ್ರಿ 11:30ರ ವೇಳೆ ಮೃತದೇಹ ಪತ್ತೆಯಾಗಿದೆ. ಮೃತರನ್ನು ರಂಗ್ಪುರ ಜಿಲ್ಲಾ ಸ್ಕೂಲ್ನ ನಿವೃತ್ತ ಶಿಕ್ಷಕ ಗಣಪತಿ ಚಕ್ರಬರ್ತಿ (65), ಪತ್ನಿ ಪ್ರೀತಿಲತಾ ಚಕ್ರಬರ್ತಿ (50) ಮತ್ತು ಅವರ ಪುತ್ರಿ ಅಗಾಮಿ ಚಕ್ರಬರ್ತಿ ಪ್ರಾರ್ಥಿ (23) ಹಾಗೂ ಪುತ್ರ ಪ್ರಿಯಮ್ ಚಕ್ರಬರ್ತಿ (12) ಎಂದು ಗುರುತಿಸಲಾಗಿದೆ.
ಆಗಸ್ಟ್ 22ರ ರಾತ್ರಿ 11:30ರ ಸುಮಾರಿಗೆ ರಂಗ್ಪುರದ ದಸ್ಪಾರಾ (ಮಚುವಾಪಾರಾ) ಪ್ರದೇಶದಲ್ಲಿರುವ ಲಾಕ್ ಆದ ಮನೆಯಿಂದ ಮೃತದೇಹಗಳನ್ನು ಹೊರತೆಗೆಯಲಾಯಿತು. ʼದಿ ಡೈಲಿ ಸ್ಟಾರ್ʼ ವರದಿಯ ಪ್ರಕಾರ, ಲಾಕ್ ಆದ ಮನೆಗೆ ಪ್ರವೇಶಿಸಿದ ನಂತರ ಪೊಲೀಸರು 4 ಮೃತದೇಹಗಳನ್ನು ವಶಪಡಿಸಿಕೊಂಡಿದ್ದಾರೆ.
ಬಾಂಗ್ಲಾದೇಶದಲ್ಲಿ ಹತ್ಯೆಗೀಡಾದ ಹಿಂದೂಗಳು:
ʼʼಗಣಪತಿ 2025ರ ಡಿಸೆಂಬರ್ 31ರಂದು ರಂಗ್ಪುರ ಜಿಲ್ಲಾ ಶಾಲೆಯಿಂದ ನಿವೃತ್ತರಾಗಿದ್ದರು. ಅವರ ಪುತ್ರಿ ಅಗಾಮಿ ಈ ವರ್ಷ ರಂಗ್ಪುರ ಕಾರ್ಮೈಕಲ್ ಕಾಲೇಜಿನಿಂದ ಇಂಗ್ಲಿಷ್ನಲ್ಲಿ ಸ್ನಾತಕೋತ್ತರ ಪದವಿಯನ್ನು ಪೂರ್ಣಗೊಳಿಸಿದ್ದರು. ಪುತ್ರ ಪ್ರಿಯಮ್ ರಂಗ್ಪುರ ಜಿಲ್ಲಾ ಶಾಲೆಯಲ್ಲಿ 5ನೇ ತರಗತಿ ವಿದ್ಯಾರ್ಥಿಯಾಗಿದ್ದʼʼ ಎಂದು ರಂಗ್ಪುರ ಮೆಟ್ರೋಪಾಲಿಟನ್ ಕೊಟ್ವಾಲಿ ಪೊಲೀಸ್ ಠಾಣೆಯ ಉಸ್ತುವಾರಿ ಅಧಿಕಾರಿ ನಜ್ಮುಲ್ ಖಾದರ್ ತಿಳಿಸಿದ್ದಾರೆ.
ಏನಾಗ್ತಿದೆ ಬಾಂಗ್ಲಾದೇಶದಲ್ಲಿ? ಮುಂದುವರಿದ ಹಿಂದೂಗಳ ಮೇಲಿನ ದೌರ್ಜನ್ಯ; 10 ದಿನಗಳ ಅಂತರದಲ್ಲಿ 3 ಹಿಂದೂಗಳ ಹತ್ಯೆ
ಪ್ರೀತಿಲತಾ ಅವರ ಸಹೋದರಿ ಪೂಜಾ ಚಕ್ರವರ್ತಿ ಆಗಸ್ಟ್ 20ರಂದು ಮಧ್ಯಾಹ್ನ ಕೊನೆಯ ಬಾರಿ ಫೋನ್ನಲ್ಲಿ ಮಾತನಾಡಿದ್ದರು. ಕುಟುಂಬವು ಬಳಸುತ್ತಿದ್ದ 4 ಮೊಬೈಲ್ ಫೋನ್ಗಳು ಆಗಸ್ಟ್ 20ರ ರಾತ್ರಿಯಿಂದ ಸ್ವಿಚ್ ಆಫ್ ಆದ ಹಿನ್ನೆಲೆಯಲ್ಲಿ ಅವರಿಗೆ ಅನುಮಾನ ಮೂಡಿತ್ತು.
ʼʼ4 ಫೋನ್ಗಳು ಸ್ವಿಚ್ ಆಫ್ ಆಗಿದ್ದ ಹಿನ್ನೆಲೆಯಲ್ಲಿ ದಸ್ಪಾರಾದ ಅವರ ಮನೆಗೆ ಶನಿವಾರ ಆಗಮಿಸಿದೆವು. ನಾವು ಬರುವ ವೇಳೆ ಮೈನ್ ಗೇಟ್ ಲಾಕ್ ಆಗಿದ್ದರೆ, ಲೈಟ್ಗಳೆಲ್ಲ ಆಫ್ ಆಗಿದ್ದವು. ಅನುಮಾನಗೊಂಡು ಪೊಲೀಸರಿಗೆ ತಿಳಿಸಿದೆವು. ಅವರು ಬಂದು ಬಾಗಿಲು ಒಡೆದು ಒಳ ಪ್ರವೇಶಿಸಿದರುʼʼ ಎಂದು ಪೂಜಾ ಚಕ್ರವರ್ತಿ ತಿಳಿಸಿದ್ದಾರೆ. ಇದುವರೆಗೆ ಪೊಲೀಸರಿಗೆ ಕೊಲೆಗೆ ಕಾರಣ ಕಂಡು ಹಿಡಿಯಲು ಸಾಧುವಾಗಿಲ್ಲ.
ʼʼನನ್ನ ಸಹೋದರಿ ಮತ್ತು ಆಕೆಯ ಕುಟುಂಬವನ್ನು ಯಾರು ಕೊಲೆ ಮಾಡಿದ್ದಾರೆ ಎನ್ನುವುದು ಅರ್ಥವಾಗುತ್ತಿಲ್ಲ. ಯಾವಾಗ ಹೀಗಾಯ್ತು ಎನ್ನುವುದು ತಿಳಿಯದೆ ಗೊಂದಲ ಮೂಡಿದೆ. ನನ್ನ ಸಹೋದರಿಯ ಪತಿ ತುಂಬಾ ಉತ್ತಮ ವ್ಯಕ್ತಿ. ಅವರಿಗೆ ಯಾರೂ ಶತ್ರುಗಳಿಲ್ಲ. ದಸ್ಪಾರಾದಲ್ಲಿ ಅವರು ಇತ್ತೀಚೆಗೆ ಹೊಸ ಮನೆ ನಿರ್ಮಿಸಿದ್ದಾರೆʼʼ ಎಂದು ಪೂಜಾ ವಿವರಿಸಿದ್ದಾರೆ.
ಬಾಂಗ್ಲಾದೇಶದಲ್ಲಿ ಮುಂದುವರಿದ ಹಿಂದೂಗಳ ಹತ್ಯಾಕಾಂಡ; ಗುಂಡಿಟ್ಟು ಪತ್ರಕರ್ತನ ಕೊಲೆ
ಮೃತದೇಹ ಪತ್ತೆಯಾಗಿದ್ದು ಎಲ್ಲಿ?
ತಾಯಿ-ಮಗಳ ಮೃತದೇಹ ಸ್ಟೇರ್ಕೇಸ್ ಬಳಿ ಪತ್ತೆಯಾಗಿದ್ದರೆ, ಗಣಪತಿ ಅವರ ನಿಶ್ಚಲ ದೇಹ ಮಹಡಿ ಮೇಲೆ ಕಂಡು ಬಂತು. ಇನ್ನು ಮಗನ ಶವ ಬೆಡ್ ಮೇಲೆ ಇತ್ತು. ಪೊಲೀಸ್ ತನಿಖೆಯ ಬಳಿಕ ಸಾವಿನ ರಹಸ್ಯ ಹೊರ ಬೀಳಲಿದೆ. ಸಾಮೂಹಿಕ ಆತ್ಮಹತ್ಯೆಯೇ ಅಥವಾ ಕೊಲೆಯೇ ಎನ್ನುವ ಬಗ್ಗೆಯೂ ಪರಿಶೀಲನೆ ನಡೆಯಲಿದೆ.
ವಿದೇಶ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
ʼಪ್ರವಾಸಿ ಪ್ರಪಂಚʼ ವೆಬ್ಸೈಟ್ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ.