Bangalore News: ಅವಧಿಗೂ ಮುನ್ನ ಜನಿಸಿದ 830 ಗ್ರಾಂ ತೂಕದ ಶಿಶುವನ್ನು ರಕ್ಷಿಸುವಲ್ಲಿ ಯಶಸ್ವಿಯಾದ ವೈದ್ಯರು!
Bangalore News: ಅವಧಿಗೂ ಮುನ್ನ ಜನಿಸಿದ 830 ಗ್ರಾಂ ತೂಕದ ಶಿಶುವನ್ನು ಎರಡು ತಿಂಗಳ ಕಾಲ ನವಜಾತ ಶಿಶುಗಳ ತೀವ್ರ ನಿಗಾ ಘಟಕದಲ್ಲಿ (NICU) ಇರಿಸಿ ಚಿಕಿತ್ಸೆ ನೀಡಲಾಯಿತು ಎಂದು ಬೆಂಗಳೂರಿನ ವಾಸವಿ ಆಸ್ಪತ್ರೆಯ ಮಕ್ಕಳ ತಜ್ಞ ಡಾ. ಅಶೋಕ್ ಎಂ.ವಿ. ತಿಳಿಸಿದ್ದಾರೆ. ಈ ಕುರಿತ ವಿವರ ಇಲ್ಲಿದೆ.


ಬೆಂಗಳೂರು: ತಾಯಿ ಹೊಟ್ಟೆಯಲ್ಲಿನ ಮಗುವಿನ ಬಗೆಗೆ ಅದೆಷ್ಟೇ ಕಾಳಜಿ ವಹಿಸಿದರು ಕೆಲವೊಮ್ಮೆ ಇದ್ದಕ್ಕಿದ್ದಂತೆ ಸಮಸ್ಯೆಗಳು ಎದುರಾಗಿ ಬಿಡುತ್ತವೆ. ಅವುಗಳನ್ನ ದಾಟಿ ಮಗುವನ್ನು ರಕ್ಷಿಸಿಕೊಳ್ಳುವುದು ಪವಾಡವೇ ಆಗಿರುತ್ತೆ. ಅಂಥಹ ಅಪರೂಪದ ಪ್ರಕರಣದಲ್ಲಿ ಯಶಸ್ವಿಯಾಗಿದ್ದಾರೆ ವಾಸವಿ ಆಸ್ಪತ್ರೆಯ ವೈದ್ಯರು. ಕೇವಲ 28 ವಾರಗಳಿಗೆ ಗರ್ಭಿಣಿಯೊಬ್ಬರು 830 ಗ್ರಾಂ ತೂಕದ ಮಗುವಿಗೆ ಜನ್ಮ ನೀಡಿರುವ ಘಟನೆ ಬೆಂಗಳೂರಿನ(Bangalore News)ವಾಸವಿ ಆಸ್ಪತ್ರೆಯಲ್ಲಿ ನಡೆದಿದೆ. ತಾಯಿ ಅಧಿಕ ರಕ್ತದೊತ್ತಡ ಸಮಸ್ಯೆ ಸೇರಿದಂತೆ ಇನ್ನೂ ಹಲವು ಸಮಸ್ಯೆಗಳಿಂದ ಬಳಲುತ್ತಿದ್ದರು. ಹೀಗಾಗಿ ತುರ್ತು ಪರಿಸ್ಥಿತಿ ಎದುರಾದ ಹಿನ್ನೆಲೆ 12 ವಾರಗಳ ಮುಂಚಿತವಾಗಿ ಗರ್ಭಿಣಿಗೆ ಸಿಸೇರಿಯನ್ ಮೂಲಕ ಹೆರಿಗೆ ಮಾಡಬೇಕಾಯಿತು. ತದನಂತರ ಮಗುವಿಗೆ ಉಸಿರಾಟದ ಬೆಂಬಲ ನೀಡಿ ಪ್ರತಿಕ್ರಿಯಿಸುವಂತೆ ಮಾಡಲಾಯಿತು. ಬಳಿಕ ಮಗುವನ್ನು ಎರಡು ತಿಂಗಳ ಕಾಲ ನವಜಾತ ಶಿಶುಗಳ ತೀವ್ರ ನಿಗಾ ಘಟಕದಲ್ಲಿ (ಎನ್ಐಸಿಯು) ಇರಿಸಿ ಚಿಕಿತ್ಸೆ ನೀಡಲಾಯಿತು ಎಂದು ಬೆಂಗಳೂರಿನ ವಾಸವಿ ಆಸ್ಪತ್ರೆಯ ಮಕ್ಕಳ ತಜ್ಞ ಡಾ. ಅಶೋಕ್ ಎಂ.ವಿ. ತಿಳಿಸಿದ್ದಾರೆ.
ಮಗು ಜನಿಸಿದಾಗ ಕೇವಲ 830 ಗ್ರಾಂ ತೂಕವನ್ನು ಹೊಂದಿತ್ತು, ಜತೆಗೆ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿತ್ತು. ಹೀಗಾಗಿ ಮಗುವಿನ ಉಸಿರಾಟಕ್ಕೆ ನೆರವಾಗಲು ಇಂಟ್ಯೂಬೇಟೆಡ್ ಅಳವಡಿಸಿ ಸಿಪಿಎಪಿ ಮೂಲಕ ಬೆಂಬಲ ನೀಡಲಾಯಿತು. ಮಗುವಿನ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದ ನಂತರ ಮತ್ತು ಶ್ವಾಸಕೋಶದ ಕಾರ್ಯ ಸ್ಥಿರವಾದ ಬಳಿಕ ಆಮ್ಲಜನಕ ಪೂರೈಕೆಯನ್ನು ಸಂಪೂರ್ಣವಾಗಿ ನಿಲ್ಲಿಸಲಾಯಿತು. ಇದರ ಜತೆಗೆ ಈ ಪ್ರಕರಣದಲ್ಲಿ ವೈದ್ಯರಿಗೆ ಹಲವಾರು ಸವಾಲುಗಳು ಕೂಡ ಎದುರಾದವು. ಆರಂಭದಲ್ಲಿ ಮಗುವಿಗೆ ಹಾಲುಣಿಸುವುದು ಕೂಡ ಕಷ್ಟಕರವಾಗಿತ್ತು. ಮಗುವಿನ ಬೆಳವಣಿಗೆ ಮತ್ತು ಅದರ ನರಗಳ ಬೆಳವಣಿಗೆಗೆ ಸೂಕ್ತ ಮೇಲ್ವಿಚಾರಣೆ ಮಾಡುವ ಮೂಲಕ ಪೇರೆಂಟಲ್ ಪೌಷ್ಟಿಕಾಂಶವನ್ನು (TPN) ನೀಡಲಾಗುತ್ತಿತ್ತು. ಇದರಿಂದಾಗಿ ಅಗತ್ಯವಾದ ಐವಿ ದ್ರವಗಳು, ಪ್ರೋಟೀನ್ಗಳು, ಲಿಪಿಡ್ಗಳು ಮತ್ತು ಇತರ ಪ್ರಮುಖ ಪೋಷಕಾಂಶಗಳನ್ನು ಒದಗಿಸಲಾಯಿತು. ಮಗುವಿನ ಒಟ್ಟಾರೆ ಬೆಳವಣಿಗೆಗೆ ಹ್ಯೂಮನ್ ಮಿಲ್ಕ್ ಫೊರ್ಟಿಫೈಯರ್ (HMF), ಜೀವಸತ್ವಗಳು ಮತ್ತು ಕ್ಯಾಲ್ಸಿಯಂನಂತಹ ಪೂರಕಗಳನ್ನು ನೀಡಲಾಯಿತು ಎಂದು ವೈದ್ಯರು ತಿಳಿಸಿದರು.
ಈ ಸುದ್ದಿಯನ್ನೂ ಓದಿ | Packaged drinking water: ಪ್ಲಾಸ್ಟಿಕ್ ಬಾಟಲ್ ನೀರು ಕುಡಿಯುತ್ತೀರಾ? ಖರೀದಿಗೂ ಮುನ್ನ ಈ ವಿಷಯ ತಿಳಿದುಕೊಳ್ಳಿ
ಈ ರೀತಿ ಅಕಾಲಿಕವಾಗಿ ಜನಿಸಿದ ಕಾರಣಕ್ಕೆ ಮಗುವಿಗೆ ಸೋಂಕು ತಗುಲಿದ್ದವು, ಆದರೆ ವೈದ್ಯರು ರೋಗನಿರೋಧಕ ಔಷಧಗಳನ್ನು ನೀಡಿದ ಬಳಿಕ ಅದೃಷ್ಟವಶಾತ್ ಮಗು ಸ್ಪಂದಿಸಿತು. ಹಾಗಾಗಿ ಸೋಂಕಿನಿಂದ ಗುಣಮುಖವಾಗಲು ಸಾಧ್ಯವಾಯಿತು. ಅದಾದ ಬಳಿಕ ಮಗು ಮತ್ತೆ ಎರಡನೇ ಬಾರಿ ಸೋಂಕಿಗೆ ಒಳಗಾಯಿತು, ಮತ್ತೊಂದು ಸುತ್ತಿನ ರೋಗನಿರೋಧಕ ಔಷಧಿಗಳನ್ನು ನೀಡಲಾಯಿತು. ಅದೃಷ್ಟವೆಂದರೆ ಮಗು ಉತ್ತಮವಾಗಿ ಪ್ರತಿಕ್ರಿಯಿಸಿತು ಅಲ್ಲದೆ ಈಗ ಮಗುವಿನ ತೂಕ ಕೂಡ ಸುಧಾರಿಸಿದ್ದು, ಸದ್ಯ 6 ಕೆಜಿಗೆ ಏರಿಕೆಯಾಗಿದೆ. ಆಸ್ಪತ್ರೆಯಿಂದ ಮಗುವನ್ನು ಬಿಡುಗಡೆ ಮಾಡುವ ವೇಳೆಗೆ ಯಾವುದೇ ರೀತಿಯ ದೃಷ್ಟಿಗೆ ಸಂಬಂಧಿಸಿದ ಯಾವುದೇ ಸಮಸ್ಯೆಗಳನ್ನ ಹೊಂದಿರಲಿಲ್ಲ (ROP) ಜತೆಗೆ ಇತರ ಯಾವ ರೀತಿಯ ತೊಂದರೆಗಳು ಕಂಡುಬರಲಿಲ್ಲ. ಮತ್ತೊಂದು ಸಂತಸದ ವಿಷಯವೆಂದರೆ ಯಾವುದೇ ರೀತಿಯ ನರವೈಜ್ಞಾನಿಕ ಸಂಬಂಧಿತ ಸಮಸ್ಯೆಗಳು ಇರಲಿಲ್ಲ. ಈಗ ಮಗುವಿನ ಜತೆಗೆ ತಾಯಿಯ ಆರೋಗ್ಯ ಕೂಡ ಸುಧಾರಿಸಿದೆ ಎನ್ನುತ್ತಾರೆ ವಾಸವಿ ಆಸ್ಪತ್ರೆ ತಜ್ಞರಾದ ಡಾ. ಅಶೋಕ್ ಎಂ.ವಿ.