ಮೂಳೆ ಪುನರ್ನಿರ್ಮಾಣದ ಯಶಸ್ವಿ ಶಸ್ತ್ರಚಿಕಿತ್ಸೆ: ಸ್ಪರ್ಶ್ ಆಸ್ಪತ್ರೆಯಿಂದ ಬಾಂಗ್ಲಾ ಬಾಲಕನಿಗೆ ಸಕ್ರಿಯ ಜೀವನ
ಬಾಲಕನ ಸ್ಥಿತಿ ಅವಲೋಕಿಸಿದ ಸ್ಪರ್ಶ್ ಆಸ್ಪತ್ರೆಯ ಮೂಳೆ ಕ್ಯಾನ್ಸರ್ ಶಸ್ತ್ರಚಿಕಿತ್ಸಕ ಡಾ.ಸೂರಜ್ ಹಿಂಡಿಸ್ಕೆರೆ ನೇತೃತ್ವದ ತಂಡ ಮೂಳೆ ಯನ್ನು ಜೀವಂತ ಅಂಗಾಂಶಗಳೊಂದಿಗೆ ಜೈವಿಕ ಪುನರ್ ನಿರ್ಮಾಣದ ಮೂಲಕ ನೈಸರ್ಗಿಕ ಮೂಳೆಯನ್ನು ಪುನರ್ಸ್ಥಾಪಿಸುವ ನಿಟ್ಟಿನಲ್ಲಿ ಶಸ್ತ್ರ ಚಿಕಿತ್ಸೆಯನ್ನು ಯೋಜಿಸಿತು

-

ಡಾ.ಸೂರಜ್ ಹಿಂಡಿಸ್ಕೆರೆ
ಮೂಳೆ ಕ್ಯಾನ್ಸರ್ ಶಸ್ತ್ರಚಿಕಿತ್ಸಕ , ಸ್ಪರ್ಶ್ ಆಸ್ಪತ್ರೆ, ಆರ್.ಆರ್.ನಗರ
12 ಗಂಟೆಗಳ ಸುದೀರ್ಘ ಶಸ್ತ್ರ ಚಿಕಿತ್ಸೆ
ಬೆಂಗಳೂರು: ಎಲ್ಲ ಮಕ್ಕಳಂತೆ ಆಡುತ್ತಾ ನಲಿಯುತ್ತಾ ಕಾಲಕಳೆಯಬೇಕಿದ್ದ ಬಾಂಗ್ಲಾದೇಶದ ಬಾಲಕ 5 ವರ್ಷದ ಅಬ್ದುಲ್ ಬಸಿತ್ ಅಬಿರ್ ಕಾಲಿನಲ್ಲಿ ಭಾರೀ ಗಾತ್ರದ ಗಡ್ಡೆಯಿಂದಾಗಿ ಕಳೆದೊಂದು ವರ್ಷದಿಂದ ನಡೆಯಲೂ ಅಸಾಧ್ಯವಾದ ಸ್ಥಿತಿ ನಿರ್ಮಾಣವಾಗಿತ್ತು. ಆರ್ಆರ್ನಗರ ಸ್ಪರ್ಶ್ ಆಸ್ಪತ್ರೆ ವೈದ್ಯರು ಅತ್ಯಂತ ಅಪರೂಪದ ಮೂಳೆ ಪುನರ್ನಿರ್ಮಾಣ ವಿಧಾನದಿಂದ ಶಸ್ತ್ರಚಿಕಿತ್ಸೆ ನಡೆಸಿ ಇದೀಗ ಬಾಲಕ ಇತರ ಮಕ್ಕಳಂತೆ ಸಕ್ರಿಯವಾಗಿ ಓಡಾಡುವ ಸ್ಥಿತಿಗೆ ಮರಳಿಸು ವಲ್ಲಿ ಯಶಸ್ವಿಯಾಗಿದ್ದಾರೆ.
ಬಸಿತ್ ಅಬಿರ್ ಬಾಂಗ್ಲಾದೇಶದ ಹತ್ತಾರು ವೈದ್ಯರಲ್ಲಿ, ಶಸ್ತ್ರ ಚಿಕಿತ್ಸಕರಲ್ಲಿ ಚಿಕಿತ್ಸೆ ಪಡೆದರೂ ಯಾವುದೇ ಪರಿಣಾಮವಾಗದೇ ನಡೆಯಲಾಗದ ಸ್ಥಿತಿಗೆ ತಲುಪಿದಾಗ ಚಿಕಿತ್ಸೆಗಾಗಿ ಬೆಂಗಳೂರಿಗೆ ಬಂದು ಆರ್ಆರ್ನಗರದ ಸ್ಪರ್ಶ್ ಆಸ್ಪತ್ರೆಗೆ ದಾಖಲಾಗಿದ್ದ. ಬಾಲಕನ ಸ್ಥಿತಿ ಅವಲೋಕಿಸಿದ ಸ್ಪರ್ಶ್ ಆಸ್ಪತ್ರೆಯ ಮೂಳೆ ಕ್ಯಾನ್ಸರ್ ಶಸ್ತ್ರಚಿಕಿತ್ಸಕ ಡಾ.ಸೂರಜ್ ಹಿಂಡಿಸ್ಕೆರೆ ನೇತೃತ್ವದ ತಂಡ ಮೂಳೆ ಯನ್ನು ಜೀವಂತ ಅಂಗಾಂಶಗಳೊಂದಿಗೆ ಜೈವಿಕ ಪುನರ್ನಿರ್ಮಾಣದ ಮೂಲಕ ನೈಸರ್ಗಿಕ ಮೂಳೆಯನ್ನು ಪುನರ್ಸ್ಥಾಪಿಸುವ ನಿಟ್ಟಿನಲ್ಲಿ ಶಸ್ತ್ರ ಚಿಕಿತ್ಸೆಯನ್ನು ಯೋಜಿಸಿತು.
ಇದನ್ನೂ ಓದಿ: Bangalore News: ಮಾನಸಿಕ ಆರೋಗ್ಯ ಅಭಿಯಾನಗಳಿಗಾಗಿ ಎಚ್ಎಲ್ಎಲ್ ನಿಂದ ನಿಮ್ಹಾನ್ಸ್ ಜತೆ ಒಪ್ಪಂದ
ಸಾಮಾನ್ಯವಾಗಿ ಇಷ್ಟು ಚಿಕ್ಕಮಕ್ಕಳಿಗೆ ಕತ್ತರಿಸಿದ ಮೂಳೆಯ ಭಾಗದಲ್ಲಿ ಕೃತಕ ಲೋಹದ ಮೂಳೆ ಯನ್ನು ಬದಲಿಯಾಗಿ ಬಳಸಲಾಗುವುದಿಲ್ಲ.ಹೀಗಾಗಿ ಮಕ್ಕಳು ಶೀಘ್ರವಾಗಿ ಗುಣಮುಖ ರಾಗಬಲ್ಲ ಮತ್ತು ಮಕ್ಕಳ ಬೆಳವಣಿಗೆಯೊಂದಿಗೆ ಮೂಳೆಯೂ ಬೆಳವಣಿಗೆಯಾಗುವ ಮೂಲಕ ಎಲ್ಲ ಚಟುವಟಿಕೆಗಳನ್ನು ಸಾಮಾನ್ಯ ಮಕ್ಕಳಂತೆ ಮಾಡುವಂತಾಗಲು ದೇಶದಲ್ಲೇ ಅತ್ಯಂತ ಅಪರೂಪದ ಈ ಶಸ್ತ್ರ ಚಿಕಿತ್ಸಾ ವಿಧಾನವನ್ನು ಬಳಸಲಾಯಿತು ಎಂದು ಡಾ.ಹಿಂಡಿಸ್ಕೆರೆ ತಿಳಿಸಿದರು.

ಅತ್ಯಂತ ಕರಾರುವಾಕ್ಕಾದ ಶಸ್ತ್ರ ಚಿಕಿತ್ಸಾ ಯೋಜನೆ ರೂಪಿಸುವ ಸಲುವಾಗಿ ಅತ್ಯಂತ ಸುಧಾರಿತ ಸ್ಕ್ಯಾನಿಂಗ್ ಮತ್ತು 3ಡಿ ವಿನ್ಯಾಸಗಳನ್ನು ರಚಿಸಲಾಯಿತು. ಕಾಲಿನ ಬಹುತೇಕ ಎಲ್ಲಾ ಭಾಗದಲ್ಲೂ ಗಡ್ಡೆ ಬೆಳೆದುಕೊಂಡಿತ್ತು. ಈ ಗಡ್ಡೆ ಮತ್ತೆ ಬೆಳೆಯದೇ ಇರುವುದನ್ನು ಖಾತರಿಪಡಿಸಿಕೊಳ್ಳ ಬೇಕಾ ಗಿತ್ತು. ಹೀಗಾಗಿ ರೋಗ ಪೀಡಿತ ಗಡ್ಡೆಯನ್ನು ಸಂಪೂರ್ಣವಾಗಿ ತೆಗೆದು ಹಾಕುವುದು ಅನಿವಾರ್ಯ ವಾಗಿತ್ತು. ಜೊತೆಗೆ ಆರೋಗ್ಯಪೂರ್ಣ ಮೂಳೆಗೆ ಒಂದಿಷ್ಟೂ ಘಾಸಿಯಾಗದಂತೆ ಗರಿಷ್ಟ ಪ್ರಮಾಣ ದಲ್ಲಿ ಈ ಮೂಳೆಯನ್ನು ಉಳಿಸಿಕೊಂಡು 12 ಗಂಟೆಗಳ ಸುದೀರ್ಘ ಶಸ್ತ್ರ ಚಿಕಿತ್ಸೆ ನಡೆಸಲಾಯಿತು ಎಂದು ಡಾ.ಹಿಂಡಿಸ್ಕೆರೆ ವಿವರಿಸಿದರು.
ಅಲಾಗ್ಗ್ರಾಫ್ಟ್ ಅಂದರೆ ಒಂದು ವ್ಯಕ್ತಿಯಿಂದ ಅಂಗಾಂಶವನ್ನು ಅಥವಾ ಅಂಗವನ್ನು ಅದೇ ಜಾತಿಯ ಅನುವಂಶಿಕವಾಗಿ ಹೋಲದ ವ್ಯಕ್ತಿಗೆ ಕಸಿ ಮಾಡುವ ವಿಧಾನವನ್ನು ಸಾಮಾನ್ಯವಾಗಿ ಬಳಸಲಾಗುತ್ತದೆ. ಅದೃಷ್ಟವಶಾತ್ ಎಂಎಸ್ಆರ್ ಮೂಳೆ ಬ್ಯಾಂಕ್ನಲ್ಲಿ ಸಂರಕ್ಷಿಸಿ ಇಡಲಾದ ಮೂಳೆಯ ಅಂಗಾಂಶವು ಬಾಲಕನಿಗೆ ಹೊಂದಾಣಿಕೆ ಆಗುತ್ತಿತ್ತು. ಆದರೆ ಇದು ಜೈವಿಕವಾಗಿ ಜೀವಂತವಲ್ಲದ ಮೂಳೆಯಾಗಿದ್ದು ಭವಿಷ್ಯದಲ್ಲಿ ಸಮಸ್ಯೆಯಾಗುವ ಕಾರಣದಿಂದ ಬಾಲಕನ ಮತ್ತೊಂದು ಕಾಲಿನ ಮೂಳೆಯ ಭಾಗವನ್ನು ಪ್ಲಾಸ್ಟಿಕ್ ಸರ್ಜನ್ಗಳು ರಕ್ತ ಸಂಚಲನ ಇರುವಂತೆಯೇ ರೋಗಪೀಡಿತ ಮತ್ತೊಂದು ಕಾಲಿಗೆ ಕಸಿ ಮಾಡಿದರು. ಈ ಮೂಲಕ ಜೀವಂತವಲ್ಲದ ಮೂಳೆಗೆ ಜೀವ ನೀಡುವ ಮೂಲಕ ಅತ್ಯಂತ ಅಪರೂಪದ ಮತ್ತು ಅಷ್ಟೇ ಸವಾಲಿನಿಂದ ಕೂಡಿದ ಶಸ್ತ್ರಚಿಕಿತ್ಸೆ ಮಾಡಲಾಯಿತು ಎಂದು ಪ್ಲಾಸ್ಟಿಕ್ ಸರ್ಜರಿ ತಂಡದ ಡಾ.ದೀಪಕ್ ಕೆ.ಎಲ್ ಮತ್ತು ಡಾ.ಗುಣಶೇಖರ ವುಪ್ಪಲಪಾಠಿ ತಿಳಿಸಿದರು.
ವಿದೇಶಗಳಲ್ಲಿ ಮೂಳೆ ಬ್ಯಾಂಕ್ಗಳು ಸುಸಜ್ಜಿತವಾಗಿವೆ. ಈ ಮೂಲಕ ವಿದೇಶಗಳಲ್ಲಿ ಅಲೋ ಗ್ರಾಫ್ಟ್ಸ್ ಕಸಿ ಮೂಲಕ ಜೀವವನ್ನು ಮತ್ತು ಕಾಲನ್ನು ಉಳಿಸಲು ಸಾಧ್ಯವಾಗುತ್ತದೆ. ಆದರೆ ಭಾರತ ದಲ್ಲಿ ಮೂಳೆ ದಾನ ಮತ್ತು ಅಂತಹ ಸೌಕರ್ಯಗಳನ್ನು ಪಡೆಯುವ ಕುರಿತು ಜಾಗೃತಿ ಕಡಿಮೆ ಇದ್ದು ಈ ಕುರಿತು ವೈದ್ಯಕೀಯ ಕ್ಷೇತ್ರ ಮತ್ತು ಸಾರ್ವಜನಿಕರಲ್ಲಿ ಹೆಚ್ಚಿನ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದು ಸ್ಪರ್ಶ್ ಆಸ್ಪತ್ರೆ ಸಮೂಹದ ಅಧ್ಯಕ್ಷ ಡಾ.ಶರಣ್ ಶಿವರಾಜ್ ಪಾಟೀಲ್ ಅಭಿಪ್ರಾಯಪಟ್ಟರು. ಸ್ಪರ್ಶ್ ಆಸ್ಪತ್ರೆಯ ಈ ಅಪರೂಪದ ಶಸ್ತ್ರ ಚಿಕಿತ್ಸೆ ಸಾಧನೆಯು ಆರೋಗ್ಯ ಕ್ಷೇತ್ರದ ಸಾಧ್ಯತೆಗಳನ್ನು ಪುನರ್ ವ್ಯಾಖ್ಯಾನಿಸುವುದರ ಜೊತೆಗೆ ಸ್ಪರ್ಶ್ನಲ್ಲಿ ನಾವೀನ್ಯತೆ, ಪರಿಣತಿ ಮತ್ತು ಸಹಾನುಭೂತಿ ಹೇಗೆ ಸಮನ್ವಯವಾಗಿ ಕೆಲಸ ಮಾಡುತ್ತದೆ ಎಂಬುದಕ್ಕೆ ಸಾಕ್ಷಿಯಾಗಿದೆ ಎಂದರು.