Kshemavana: ಕ್ಷೇಮವನ: ಸಾಧಕರ ಪಾಲಿನ ಆಕರ್ಷಕ ಆರೋಗ್ಯಧಾಮ
Pravasi Prapancha: ಬೆಂಗಳೂರಿನಿಂದ ನೆಲಮಂಗಲ ದಾಟಿ ಕುಣಿಗಲ್ ಜಂಕ್ಷನ್ನಿಂದ ಚಿತ್ರದುರ್ಗದೆಡೆಗೆ ಪಯಣ ಬೆಳೆಸುತ್ತಿದ್ದರೆ, ಹೆದ್ದಾರಿಯ ಬಲಭಾಗದಲ್ಲಿ ಕ್ಷೇಮವನ ಎಂಬ ದೊಡ್ಡ ಫಲಕ ಕಣ್ಣಿಗೆ ಬೀಳುತ್ತದೆ. ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಇನ್ ಸ್ಟಿಟ್ಯೂಟ್ ಆಫ್ ನ್ಯಾಚುರೋಪಥಿ ಆ್ಯಂಡ್ ಯೋಗಿ ಸೈನ್ಸಸ್ ಎಂಬ ಉದ್ದದ ಹೆಸರಿಗೆ ಅನ್ವರ್ಥವಾಗಿ ಕ್ಷೇಮವನ ಎಂದು ಕರೆಸಿಕೊಳ್ಳುತ್ತಿದೆ ಈ ವೆಲ್ನೆಸ್ ರೆಸಾರ್ಟ್.

-

ಬೆಂಗಳೂರು: ಆರೋಗ್ಯಕ್ಕಿಂತ ಮಹಾಭಾಗ್ಯ ಇನ್ನೊಂದಿಲ್ಲ. ಆಸ್ತಿ ಅಂತಸ್ತು ಐಶ್ವರ್ಯ ಎಲ್ಲವೂ ಇದ್ದು ಆರೋಗ್ಯವೊಂದು ಕೈ ಕೊಟ್ಟರೆ ಎಲ್ಲವೂ ವ್ಯರ್ಥ ಸಾಧನೆ ಎಂಬಂತಾಗುತ್ತದೆ. ಇಂದಿನ ದಿನಮಾನದಲ್ಲಿ ಮನುಷ್ಯ ಗಳಿಕೆಯ ಬೆನ್ನತ್ತಿ ಓಡಿ, ಆರೋಗ್ಯವನ್ನು ಕಳೆದುಕೊಳ್ಳುತ್ತಿದ್ದಾನೆ. ದೇಹಕ್ಕೆ ಮತ್ತು ಮನಸ್ಸಿಗೆ ವಿಪರೀತ ಎನ್ನುವಷ್ಟು ಒತ್ತಡ ಕೊಟ್ಟು ಅದನ್ನು ಸೂಕ್ಷ್ಮವಾಗಿಸುತ್ತಿದ್ದಾನೆ. ಅನಾರೋಗ್ಯಗಳು ಕಾಡುತ್ತಿವೆ. ದೈಹಿಕವಾಗಿ ಸುದೃಢರಾಗಿದ್ದರೂ ಮಾನಸಿಕ ಮತ್ತು ಭಾವನಾತ್ಮಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾನೆ. ಸಮಸ್ಯೆಯ ಮೂಲ ಹುಡುಕದೆ ಡಾಕ್ಟರ್ ಎದುರು ಹಣ ಸುರಿಯುತ್ತಿದ್ದಾನೆ. ಮನುಷ್ಯ ಈಗ ಹುಡುಕಬೇಕಿರುವುದು ಸಮಸ್ಯೆಯ ಮೂಲ ಮತ್ತು ನೆಮ್ಮದಿಯ ತಾಣ. ಎಲ್ಲ ಒತ್ತಡಗಳಿಂದ, ಮಾಲಿನ್ಯಗಳಿಂದ, ಹೊರಜಗತ್ತಿನ ಸಂಪರ್ಕದಿಂದ ಮುಕ್ತಗೊಳ್ಳುವ ಒಂದು ತಾಣ ಸಿಕ್ಕರೆ, ಪ್ರತಿಯಾಗಿ ಮನುಷ್ಯ ಏನನ್ನೂ ಕೊಡಲು ಸಿದ್ಧನಿದ್ದಾನೆ. ಇಂಥ ಸಮಯದಲ್ಲಿ ಕ್ಷೇಮವನವೆಂಬ ಕ್ಷೇಮವನ ಬಹುದೊಡ್ಡ ಭರವಸೆಯಾಗಿ ಕಂಡಿದೆ.
ಬೆಂಗಳೂರಿನಿಂದ ನೆಲಮಂಗಲ ದಾಟಿ ಕುಣಿಗಲ್ ಜಂಕ್ಷನ್ನಿಂದ ಚಿತ್ರದುರ್ಗದೆಡೆಗೆ ಪಯಣ ಬೆಳೆಸುತ್ತಿದ್ದರೆ, ಹೆದ್ದಾರಿಯ ಬಲಭಾಗದಲ್ಲಿ ಕ್ಷೇಮವನ (Kshemavana) ಎಂಬ ದೊಡ್ಡ ಫಲಕ ಕಣ್ಣಿಗೆ ಬೀಳುತ್ತದೆ. ಚಿತ್ರದುರ್ಗದಿಂದ ಅದೇ ಹೆದ್ದಾರಿಯಲ್ಲಿ ಬೆಂಗಳೂರಿನತ್ತ ಚಲಿಸುತ್ತಿರುವಾಗ ರಸ್ತೆಯ ಎಡಭಾಗದಲ್ಲಿ ಅದೇ ಕ್ಷೇಮವನದ ಹೆಸರು ಆಕರ್ಷಿಸುತ್ತದೆ. ಕ್ಷೇಮವನದ ಬಗ್ಗೆ ಕೇಳಿರದವರು ವಿಹಂಗಮ ನೋಟದಲ್ಲಿ ಕ್ಷೇಮವನವನ್ನು ನೋಡಿ ಇದೊಂದು ಐಷಾರಾಮಿ ರೆಸಾರ್ಟ್ ಇರಬಹುದು ಅಂದುಕೊಳ್ಳುತ್ತಾರೆ. ಕೆಲವೇ ಕ್ಷಣಗಳಲ್ಲಿ ಸೆಳೆದುಕೊಳ್ಳುವ ಅದರ ಸೌಂದರ್ಯಕ್ಕೆ ಮಾರು ಹೋಗುತ್ತಾರೆ.
ಹೌದು, ಕ್ಷೇಮವನವನ್ನು ರೆಸಾರ್ಟ್ ಅಂದರೆ ತಪ್ಪಿಲ್ಲ. ಆದರೆ ಇದು ನಾವು ನೀವು ಅಂದುಕೊಳ್ಳುವ ಥರದ ರೆಸಾರ್ಟ್ ಅಲ್ಲ. ಇದು ವೆಲ್ ನೆಸ್ ರೆಸಾರ್ಟ್! ವೆಲ್ನೆಸ್ ಸ್ಯಾಂಕ್ಚುಯರಿ ಅಂತಲೂ ಕರೆಯಲಡ್ಡಿಯಿಲ್ಲ.
ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಇನ್ ಸ್ಟಿಟ್ಯೂಟ್ ಆಫ್ ನ್ಯಾಚುರೋಪಥಿ ಆ್ಯಂಡ್ ಯೋಗಿ ಸೈನ್ಸಸ್ ಎಂಬ ಉದ್ದದ ಹೆಸರಿಗೆ ಅನ್ವರ್ಥವಾಗಿ ಕ್ಷೇಮವನ ಎಂದು ಕರೆಸಿಕೊಳ್ಳುತ್ತಿದೆ ಈ ವೆಲ್ನೆಸ್ ರೆಸಾರ್ಟ್!

ಏನಿದು ಕ್ಷೇಮವನ?
ಮೂರು ದಶಕಗಳ ಹಿಂದೆ ಧರ್ಮಸ್ಥಳದ ಉಜಿರೆಯಲ್ಲಿ ಪ್ರಾರಂಭಗೊಂಡ ಶಾಂತಿವನ ಎಂಬ ಪ್ರಕೃತಿ ಚಿಕಿತ್ಸೆ ಕೇಂದ್ರದ ಬಗ್ಗೆ ಪ್ರತ್ಯೇಕವಾಗಿ ಹೇಳಬೇಕಿಲ್ಲ. ಅದು ಜಗತ್ತಿನಾದ್ಯಂತ ತನ್ನ ಖ್ಯಾತಿ ಹೊಂದಿದೆ. ದೇಶದ ಮೊದಲ ಪ್ರಕೃತಿ ಚಿಕಿತ್ಸೆ ಕೇಂದ್ರ ಎಂಬ ಹೆಗ್ಗಳಿಕೆ ಶಾಂತಿವನದ್ದು. ಶಾಂತಿವನದ ಜನಪ್ರಿಯತೆಯ ನಂತರ ಉಡುಪಿಯ ಮಣಿಪಾಲದಲ್ಲಿ ಸೌಖ್ಯವನ ಆರಂಭಗೊಂಡಿತು. ದೇಶದ ಮತ್ತು ರಾಜ್ಯದ ಮೂಲೆಮೂಲೆಗಳಿಂದ ಶಾಂತಿವನ ಮತ್ತು ಸೌಖ್ಯವನಕ್ಕೆ ಜನರು ಬರಲಾರಂಭಿಸಿದರು. ಆದರೆ ಎಲ್ಲರಲ್ಲೂ ಒಂದು ಮನವಿ ಇತ್ತು. ರಾಜ್ಯದ ರಾಜಧಾನಿ ಬೆಂಗಳೂರಿನ ಬಳಿ ಇದೇ ಮಾದರಿಯ ಒಂದು ಪ್ರಕೃತಿ ಚಿಕಿತ್ಸಾಕೇಂದ್ರ ಬೇಕು ಎಂದು. ಬಹುವರ್ಷದ ಆ ಬೇಡಿಕೆಗೆ ಸ್ಪಂದಿಸಿದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಸಮೂಹ ಬೆಂಗಳೂರಿನ ಹೊರವಲಯದಲ್ಲಿ ಇಪತ್ಮೂರು ಎಕರೆ ಜಾಗದಲ್ಲಿ ಬೃಹತ್ತಾದ ಸರ್ವಸೌಲಭ್ಯವೂ ಇರುವ, ಹಲವಾರು ಮಾದರಿಯ ಸಹಜ ಚಿಕಿತ್ಸೆಗಳಿರುವ ವೆಲ್ನೆಸ್ ರೆಸಾರ್ಟ್ ಮಾಡಲು ಮುಂದಾಯಿತು. ಶ್ರದ್ಧಾ ಅಮಿತ್ ಅವರ ದಕ್ಷ ಮುಂದಾಳತ್ವದಲ್ಲಿ ಅತ್ಯಂತ ಸುಸಜ್ಜಿತ ಪ್ರಕೃತಿ ಚಿಕಿತ್ಸಾ ಕೇಂದ್ರವೊಂದು ನಿರ್ಮಾಣವಾಗಿಯೇ ಬಿಟ್ಟಿತು. ಅದರ ಹೆಸರೇ ಕ್ಷೇಮವನ! ಹೆಸರಿನಲ್ಲೇ ಎಲ್ಲವನ್ನೂ ಹೇಳುವ, ಅತ್ಯಂತ ಪಾಸಿಟಿವ್ ವೈಬ್ ಕೊಡುವ ಆರೋಗ್ಯತೋಟವೇ ಈ ಕ್ಷೇಮವನ.
ಗಂಧದ ತಿಲಕ-ತಂಪು ಪಾನೀಯ!
ಕ್ಷೇಮವನದ ವಿಶೇಷವೇ ಇದು. ಇಲ್ಲಿ ಪ್ರವೇಶ ಮಾಡುವ ಪ್ರತಿಯೊಬ್ಬರನ್ನೂ ಗಂಧದ ತಿಲಕವಿಟ್ಟು ಸ್ವಾಗತಿಸಲಾಗುತ್ತದೆ. ಕುಡಿಯಲು ಆರೋಗ್ಯಕರ ತಂಪುಪಾನೀಯ ನೀಡಲಾಗುತ್ತದೆ. ಹೊಸ್ತಿಲು ದಾಟಿ ಒಳಬಂದರೆ ಅನಾರೋಗ್ಯ ಇದ್ದವರಿಗೂ ತಕ್ಷಣವೇ ಗುಣವಾಗಿಬಿಟ್ಟಿತೇನೋ ಎನಿಸುವಂಥ ವಾತಾವರಣ. ಲಘು ಸಂಗೀತ ಮೊಳಗುತ್ತಿರುವ ಈ ಅಡ್ಮಿನ್ ಬ್ಲಾಕ್ನ ಒಳಾಂಗಣ ನೋಡುವುದೇ ಒಂದು ಸೊಗಸು.
ಗರುಡ ಬ್ಲಾಕ್
ವಾಸ್ತುಪ್ರಕಾರವಾಗಿ. ಪ್ರಕೃತಿಯನ್ನೇ ಥೀಮ್ ಮಾಡಿಕೊಂಡು, ವಿಶಿಷ್ಟ ಹೆಸರುಗಳೊಂದಿಗೆ ನಿರ್ಮಾಣವಾಗಿದೆ ಕ್ಷೇಮವನ. ಇಲ್ಲಿ ಪ್ರತಿ ಬ್ಲಾಕ್ಗೂ ಒಂದೊಂದು ಹೆಸರಿದೆ. ಪ್ರತಿ ಹೆಸರಿಗೂ ಅದರದ್ದೇ ಆದ ವ್ಯಾಖ್ಯಾನವಿದೆ. ಅರ್ಥವಿದೆ. ಅಡ್ಮಿನಿಸ್ಟ್ರೇಷನ್ ನಡೆಸುವ ಬ್ಲಾಕ್ ಹೆಸರು ಗರುಡ ಬ್ಲಾಕ್! ಇದನ್ನು ಮೇಲಿನಿಂದ ನೋಡಿದರೆ ಗರುಡಪಕ್ಷಿಯ ರೀತಿಯಲ್ಲೇ ಕಾಣುತ್ತದೆ. ಹದ್ದಿನಂತೆ ವೇಗ ಮತ್ತು ಚುರುಕುತನ ಇರಬೇಕಾದದ್ದು ಅಡ್ಮಿನ್ ತಂಡದ ಕರ್ತವ್ಯ. ಹೀಗಾಗಿ ಅದನ್ನು ಬಿಂಬಿಸಲೆಂದೇ ಗರುಡ ಪಕ್ಷಿಯ ಥೀಮ್ ಇಟ್ಟುಕೊಂಡು ಈ ಕಟ್ಟಡ ನಿರ್ಮಿಸಲಾಗಿದೆ.
ವೀರೇಂದ್ರ ಹೆಗ್ಗಡೆಯವರ ಪ್ಯಾಶನ್
ಕ್ಷೇಮವನದ ಇಂಟೀರಿಯರ್ನ ಪ್ರತಿ ಹಂತದಲ್ಲೂ ಧರ್ಮಾಧಿಕಾರಿಗಳಾದ ಶ್ರೀ ವೀರೇಂದ್ರ ಹೆಗ್ಗಡೆಯವರ ಪ್ಯಾಶನ್ ಎದ್ದು ಕಾಣುತ್ತದೆ. ಇಡೀ ಕ್ಷೇಮವನದಲ್ಲಿ ಹಲವಾರು ಪುರಾತನ ಬಾಗಿಲುಗಳು, ಪಾತ್ರೆಗಳು, ಮಣ್ಣಿನ ಹಾಗೂ ಮರದ ಕಂಬಗಳು, ಆಕೃತಿಗಳು ಕಾಣಸಿಗುತ್ತವೆ. ನೂರಾರು ವರ್ಷ ಹಳೆಯ ನೆಲಸಮವಾದ ಇಂಥ ವಸ್ತುಗಳನ್ನು ಸಂಗ್ರಹಿಸುವ ವಿಶಿಷ್ಟ ಅಭ್ಯಾಸ ಹೆಗ್ಗಡೆಯವರಿಗಿದೆ. ಅವರ ಸಂಗ್ರಹ ಗುಣದ ಬಗ್ಗೆ ಕೇಳರಿಯವದವರೇ ಇಲ್ಲ. ವರ್ಷಾನುವರ್ಷ ಹಳೆಯ ಲಕ್ಷಾಂತರ ಪತ್ರಿಕೆಗಳನ್ನು ಸಂಗ್ರಹಿಸಿಟ್ಟಿದ್ದಾರೆ, ಅಂಟಿಕ್ ಕಾರುಗಳ ಸಂಗ್ರಹ ಮಾಡಿದ್ದಾರೆ. ಅದೇ ರೀತಿ ಹಳೆಯ ಗೃಹವಸ್ತುಗಳನ್ನು ಸಂಗ್ರಹಿಸಿಟ್ಟಿದ್ದ ಹೆಗ್ಗಡೆಯವರು ಅದನ್ನು ಕ್ಷೇಮವನದಲ್ಲಿ ಬಹಳ ಅದ್ಭುತವಾಗಿ ಬಳಸಿದ್ದಾರೆ. ಸರ್ ಸಿ ವಿ ರಾಮನ್ ಅವರ ಎರಡು ಕಾರ್ಗಳಲ್ಲಿ ಒಂದು ಪಯಣ ಮ್ಯೂಸಿಯಮ್ಮಿನಲ್ಲಿ ಇದ್ದರೆ ಇನ್ನೊಂದು ಕ್ಷೇಮವನದಲ್ಲಿದೆ. ಇದು ಕೂಡ ಕ್ಷೇಮವನದ ಆಕರ್ಷಣೆಯಾಗಿದೆ. ಕ್ಷೇಮವನ ತನ್ನ ವಾತಾವರಣ ಮತ್ತು ಚೆಲುವಿನಿಂದಲೇ ಮನಸ್ಸನ್ನು ತಿಳಿಗೊಳಿಸುವ ಮತ್ತು ಉತ್ಸಾಹ ತುಂಬುವ ಶಕ್ತಿ ಹೊಂದಿದೆ. ಇಂಥ ಪರಿಸರದಲ್ಲಿ ಚಿಕಿತ್ಸೆ ಬಹುಸುಲಭ. ದೇಹ ಮತ್ತು ಮನಸು ಕೂಡ ಬೇಗ ಸ್ಪಂದಿಸುತ್ತದೆ.
ಸಾಧಕರಿದ್ದಾರೆ... ರೋಗಿಗಳಿಲ್ಲ!
ಹೌದು. ಶಾಂತಿವನದ ಕಾಲದಿಂದಲೂ ಅಂಥದ್ದೊಂದು ವಿಶಿಷ್ಟ ಪದ್ಧತಿ ಅನುಸರಿಸಿಕೊಂಡು ಬರಲಾಗಿದೆ. ಇಲ್ಲಿ ಕಾಯಿಲೆ, ಆರೋಗ್ಯಸಮಸ್ಯೆ ಹೊತ್ತು ಬರುವವರನ್ನು ರೋಗಿಗಳು ಎಂದು ಹೇಳಿ ಕುಗ್ಗಿಸುವುದಿಲ್ಲ. ಬದಲಿಗೆ ಅವರನ್ನು ಸಾಧಕರೆಂದು ಕರೆಯಲಾಗುತ್ತದೆ. ಅವರಲ್ಲಿ ಪಾಸಿಟಿವಿಟಿ ತುಂಬಲಾಗುತ್ತದೆ. ಮನಸ್ಸು ದೇಹ ಮತ್ತು ಆತ್ಮದ ಸಮತೋಲನವೇ ಆರೋಗ್ಯ ಎಂಬುದು ಕ್ಷೇಮವನದ ನಂಬಿಕೆ. ನ್ಯಾಚುರೋಪಥಿಯಿಂದಲೇ ಕ್ಷೇಮಸಾಧ್ಯ ಎಂಬ ವಿಶ್ವಾಸ ಕ್ಷೇಮವನದ್ದು. ಹೀಗಾಗಿ ಜೀವನಶೈಲಿ(ಲೈಫ್ ಸ್ಟೈಲ್) ಉತ್ತಮಗೊಳಿಸುವ ಕೆಲಸಕ್ಕೆ ಇಲ್ಲಿ ಮೊದಲ ಆದ್ಯತೆ.

ಆಹಾರದಲ್ಲೇ ಇದೆ ಆರೋಗ್ಯ!
ಕ್ಷೇಮವನದಲ್ಲಿ ನಂದಿ ಹೆಸರಿನಲ್ಲೊಂದು ಬ್ಲಾಕ್ ಇದೆ. ಸುಂದರವಾದ ನಂದಿ ವಿಗ್ರಹಗಳು ಅಲ್ಲಿವೆ. ಈ ಭವನದ ವಿಶೇಷವೇನೆಂದರೆ, ಇದು ಆಹಾರಕ್ಕಾಗಿಯೇ ಮೀಸಲಿರುವ ವಿಂಗ್. ಇಲ್ಲಿ ಬೇಯಿಸಿದ ಆಹಾರಕ್ಕಾಗಿ, ಪಾನೀಯಗಳಿಗಾಗಿ ಮತ್ತು ಹಸಿಯ ಆಹಾರಕ್ಕಾಗಿ ವಿಶೇಷ ವಿಭಾಗಗಳಿವೆ. ಬೇಯಿಸಿದ ಆಹಾರಗಳೂ ಸಾತ್ವಿಕ ಮತ್ತು ಪೌಷ್ಟಿಕವಾಗಿದ್ದು ವೈದ್ಯರ ಸಲಹೆಯ ಮೇರೆಗೆ ಸಾಧಕರಿಗೆ ನೀಡಲಾಗುತ್ತದೆ. ಈ ಮೂರು ವಿಭಾಗಗಳಿಗೂ ಅತ್ಯಂತ ಸೂಕ್ತ ಹೆಸರುಗಳನ್ನು ಇಟ್ಟಿದ್ದಾರೆ. ಬೇಯಿಸಿದ ಆಹಾರ ಸಿಗುವ ವಿಭಾಗಕ್ಕೆ ಅಗ್ನಿ, ಹಸಿ ತರಕಾರಿ ಹಣ್ಣು ಸಲಾಡ್ ನೀಡುವ ವಿಭಾಗಕ್ಕೆ ಪೃಥ್ವಿ, ಜ್ಯೂಸ್ ಗಳು ಸಿಗುವ ವಿಭಾಗಕ್ಕೆ ಜಲ ಎಂಬ ಹೆಸರಿಡಲಾಗಿದೆ. ಅತಿ ಮುಖ್ಯವಾಗಿ, ಎಲ್ಲ ಆಹಾರಗಳನ್ನೂ ವೈದ್ಯರ ಸಲಹೆಯಂತೆಯೇ ಸೇವಿಸಬೇಕು. ಅವರು ಹೇಳುವ ಆರ್ಡರ್ ನಲ್ಲೇ ಸೇವಿಸಬೇಕು.
ಆಧುನಿಕತೆ ಮತ್ತು ಪ್ರಾಚೀನತೆಯ ಹದ!
ಹೌದು. ಕ್ಷೇಮವನ ಪುರಾತನ ಮತ್ತು ಆಧುನಿಕ ಚಿಕಿತ್ಸಾ ವಿಧಾನಗಳ ಹದವಾದ ಮಿಶ್ರಣ. ಇಲ್ಲಿ ಆಯುರ್ವೇದ ಪದ್ದತಿಯ ಪಂಚಕರ್ಮ, ಅಭ್ಯಂಗ, ಶಿರೋಧಾರ, ನಸ್ಯ, ಕಟಿಬಸ್ತಿ ಮುಂತಾದ ಚಿಕಿತ್ಸೆಗಳೂ ಇವೆ. ಆಕ್ಯುಪಂಕ್ಚರ್, ಆಕ್ಯುಪ್ರೆಶರ್ ಥರದ ಚಿಕಿತ್ಸೆಗಳೂ ಇವೆ. ಯೋಗ, ಧ್ಯಾನ ಪ್ರಾಣಾಯಮಗಳ ಜತೆಗೆ ಆಧುನಿಕ ಜಗತ್ತಿನ ಮಲ್ಟಿಜಿಮ್ ಕೂಡ ಇದೆ. ಮಣ್ಣಿನ ಚಿಕಿತ್ಸೆ, ಸೌರ ಚಿಕಿತ್ಸೆ, ಜಲ ಚಿಕಿತ್ಸೆ ಮುಂತಾದ ವಿಧಾನಗಳನ್ನೂ ಸಾಧಕರಿಗೆ ನೀಡುವ ಕ್ಷೇಮವನ ಸಾತ್ವಿಕ ಹಾಗೂ ಆರ್ಗ್ಯಾನಿಕ್ ಆಹಾರವನ್ನೇ ಇಲ್ಲಿನ ಅತಿಥಿಗಳಿಗೆ ಆಫರ್ ಮಾಡುತ್ತದೆ.
ಧಾನ್ಯಗಳೇ ಇಲ್ಲ
ಕ್ಷೇಮವನದಲ್ಲಿ ಅಕ್ಕಿ ರಾಗಿ ಮುಂತಾದ ಧಾನ್ಯಗಳ ಬದಲಿಗೆ ಹಣ್ಣು ಮತ್ತು ತರಕಾರಿಗಳ ಮೂಲಕ ಡಯಟ್ ಮಾಡಿಸುತ್ತಾರೆ. ಗ್ರೇನ್ ಲೆಸ್ ಡಯಟ್ ಇಲ್ಲಿಯ ವಿಶೇಷ. ಧಾನ್ಯಗಳಿಲ್ಲದೆಯೂ ರುಚಿಕರವಾದ ಸತ್ವಭರಿತ ಆಹಾರ ಸಾಧ್ಯ ಎಂಬುದು ಕ್ಷೇಮವನದ ಆಹಾರ ಸೇವಿಸಿದರೆ ತಿಳಿಯುತ್ತದೆ.
ಫಲ-ಪುಷ್ಪ-ತರು-ಲತಾ
ಪ್ರತಿ ಕಟ್ಟಡಕ್ಕೂ ಪ್ರಕೃತಿಯ ಹೆಸರನ್ನೇ ನಾಮಕರಣ ಮಾಡಿರುವುದು ಕ್ಷೇಮವನದ ವಿಶೇಷತೆ. ಪುಷ್ಪ ತರು, ಲತಾ ಮತ್ತು ಫಲ ಎಂಬ ಹೆಸರುಗಳ ನಾಲ್ಕು ವಿಂಗ್ಗಳು ಇಲ್ಲಿವೆ. ಪ್ರತಿ ಕಟ್ಟಡದ ಥೀಮ್ ಕೂಡ ಅದೇ ಮಾದರಿಯಲ್ಲಿದ್ದು, ಪ್ರತಿಯೊಂದು ವಿಂಗ್ನಲ್ಲೂ ಪ್ರತ್ಯೇಕ ಚಟುವಟಿಕೆಗಳಿಗೆ ಮೀಸಲಿಟ್ಟಿದ್ದಾರೆ. ಪುಷ್ಪ ಬಿಲ್ಡಿಂಗ್ ನಲ್ಲಿ ಮಸಾಜ್, ಸ್ಟೀಮ್ ರೂಮ್ ಇತ್ಯಾದಿಗಳಿದ್ದರೆ ಲತಾ ಹಾಗೂ ಫಲ ಕಟ್ಟಡದಲ್ಲಿ ಅತಿಥಿಗಳಿಗೆ ಉಳಿಯಲು ವ್ಯವಸ್ಥೆಗಳಿವೆ. ತರು ವಿಭಾಗದಲ್ಲಿ ಯೋಗ ಮತ್ತಿತರ ಸೌಲಭ್ಯಗಳಿವೆ.
ಕ್ಷೇಮವನದೊಳಗೊಂದು ವನ
ಹೌದು ಕ್ಷೇಮವನದೊಳಗೊಂದು ವನವಿದೆ. ಅತ್ಯಂತ ಅದ್ಭುತ ವಾಸ್ತು ಕಟ್ಟಡ ವನ. ಇದು ಪ್ರೀಮಿಯಂ ಮಾದರಿಯಲ್ಲಿದ್ದು, ವಿವಿಐಪಿಗಳ ಫೇವರಿಟ್ ಆಗಿದೆ. ಪುಟ್ಟ ಲಕ್ಸುರಿ ಮನೆಯನ್ನೇ ಅತಿಥಿಗಳಿಗೆ ಕೊಡಲಾಗುತ್ತದೆ. ಇದರಲ್ಲಿ ಬೆಡ್ ರೂಮ್, ಹಾಲ್ ಸೇರಿದಂತೆ ಎಲ್ಲ ಸೌಲಭ್ಯಗಳೂ ಇರುತ್ತವೆ. ವೈದ್ಯರು ಇಲ್ಲಿಗೇ ಬಂದು ಚಿಕಿತ್ಸೆ ನೀಡುತ್ತಾರೆ. ಸೋನಾಬಾತ್, ಸ್ಟೀಮ್, ಮಸಾಜ್ ರೂಮ್ ಸೇರಿದಂತೆ ಎಲ್ಲವೂ ಇಲ್ಲಿದೆ.
ಕ್ಷೇಮವನದ ಯಶಸ್ಸಿನ ಗುಟ್ಟು
ದೇಶದಲ್ಲಿ ಈಗ ಲಕ್ಷಾಂತರ ವೆಲ್ನೆಸ್ ಸೆಂಟರ್ಗಳಿವೆ, ಪ್ರಕೃತಿ ಚಿಕಿತ್ಸಾ ಕೇಂದ್ರಗಳಿವೆ. ಆದರೂ ಕ್ಷೇಮವನ ಈ ಪರಿ ಜನಪ್ರಿಯತೆ ಗಳಿಸಲು ಕಾರಣವೇನು ಎಂಬ ಪ್ರಶ್ನೆಗೆ ಉತ್ತರ ಬೇಕೆಂದರೆ ಖುದ್ದು ಒಮ್ಮೆ ಕ್ಷೇಮವನಕ್ಕೆ ಭೇಟಿ ನೀಡಬೇಕು. ಇಲ್ಲಿ ಏಳು ದಿನದ ಚಿಕಿತ್ಸೆಗೆಂದು ಬಂದವರು ವಾಪಸ್ ಹೋಗಲು ಮನಸಾಗದೇ ತಿಂಗಳುಗಟ್ಟಲೆ ಉಳಿದಿರುವ ಉದಾಹರಣೆಗಳಿವೆ. ಯಾವ ಆರೋಗ್ಯ ಸಮಸ್ಯೆ ಇಲ್ಲದಿದ್ದರೂ ಕ್ಷೇಮವನದ ವಾತಾವರಣ ಇಷ್ಟವಾಗಿ ಮೂರ್ನಾಲ್ಕು ತಿಂಗಳು ಅಲ್ಲೇ ವಾಸ್ತವ್ಯ ಹೂಡಿದವರು ಕೂಡ ಇದ್ದಾರೆ. ಕ್ಷೇಮವನದ ಆಹ್ಲಾದತೆ, ಅಲ್ಲಿನ ಪ್ರಕೃತಿ ಸೌಂದರ್ಯ, ವೈದ್ಯರು ಮತ್ತು ಇತರ ಸಿಬ್ಬಂದಿಯ ಪ್ರೀತಿ ಅಲ್ಲಿಗೆ ಬರುವವರನ್ನು ಹಿಡಿದಟ್ಟುಕೊಳ್ಳುತ್ತದೆ.
ಹೊರರಾಜ್ಯ ಮತ್ತು ಹೊರದೇಶದಿಂದ ಬರುವವರಿಗೆ ಕ್ಷೇಮವನ ತಲುಪುವುದು ಕಷ್ಟವಲ್ಲ. ಬೆಂಗಳೂರು ಏರ್ ಪೋರ್ಟ್ ನಿಂದ ಬರಲು ವಾಹನ ವ್ಯವಸ್ಥೆಗಳಿವೆ. ಬೆಂಗಳೂರಿನವರಿಗೂ ಇದು ಸುಲಭವಾಗಿ ತಲುಪಬಲ್ಲ ಜಾಗ. ಒಮ್ಮೆ ಕ್ಷೇಮವನದ ಒಳಗೆ ಹೊಕ್ಕರೆ ಹೊರಜಗತ್ತಿನ ಸಂಪರ್ಕ ಕಡಿದುಹೋದಷ್ಟು ಪ್ರಶಾಂತತೆ ಸಿಗುತ್ತದೆ. ಮೊಬೈಲ್ ಫೋನ್ ಒಂದರ ಹೊರತಾಗಿ ನಿಮ್ಮನ್ನು ಡಿಸ್ಟರ್ಬ್ ಮಾಡುವ ಯಾವುದೂ ಅಲ್ಲಿರುವುದಿಲ್ಲ. ಮೊಬೈಲ್ ಬಳಕೆ ಕೂಡ ಕಡಿಮೆ ಮಾಡಿಸುತ್ತದೆ ಕ್ಷೇಮವನದ ಲೈಫ್ ಸ್ಟೈಲ್ ತರಬೇತಿ. ನಿಜ ಹೇಳುವುದಾದರೆ ಕ್ಷೇಮವನದ ಆತ್ಮೀಯ ಪರಿಸರ ಮೊಬೈಲ್ ಫೋನನ್ನೂ ಮರೆಸಿಬಿಡುತ್ತದೆ.

ಕ್ಷೇಮವನದ ರೂವಾರಿ ಶ್ರದ್ಧಾ ಅಮಿತ್
ಕ್ಷೇಮವನಕ್ಕೆ ಹೋದರೆ ಅಲ್ಲಿನ ಸಿಬ್ಬಂದಿಯ ಜತೆ, ಅತಿಥಿಗಳ ಜತೆ, ಸಾಧಕರ ಜತೆ ಹಸನ್ಮುಖ ಹೊಂದಿದ ಮಹಿಳೆಯೊಬ್ಬರು ಮೃದುವಾಗಿ ಮಾತನಾಡುತ್ತಾ ಓಡಾಡುತ್ತಿರುವುದು ನಿಮಗೆ ಕಂಡುಬರುತ್ತದೆ. ಟ್ರೆಡಿಷನಲ್ ಆಗಿ ಸರಳವಾಗಿ ಸೀರೆಯುಟ್ಟು ಎಲ್ಲರೊಂದಿಗೆ ಬೆರೆಯುತ್ತಾ ಮಾತನಾಡುತ್ತಾ ಇರುವ ಅವರು ಇನ್ಯಾರೂ ಅಲ್ಲ. ಅವರೇ ಶ್ರದ್ಧಾ ಅಮಿತ್. ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಶ್ರೀ ವೀರೇಂದ್ರ ಹೆಗ್ಗಡೆ ಮತ್ತು ಶ್ರೀಮತಿ ಹೇಮಾವತಿ ಹೆಗ್ಗಡೆಯವರ ಪುತ್ರಿ. ಸೈಕಾಲಜಿಯಲ್ಲಿ ಸ್ನಾತಕೋತ್ತರ ಪದವಿ ಹೊಂದಿರುವ ಇವರೇ ಕ್ಷೇಮವನದ ಯಶಸ್ಸಿನ ರೂವಾರಿ.
ಸಮಾಜ ಸೇವೆಯನ್ನು ಇಷ್ಟಪಟ್ಟು ಆಯ್ಕೆ ಮಾಡಿಕೊಂಡಿರುವ ಶ್ರದ್ಧಾ ಅಮಿತ್ ರವರು ಗ್ರಾಮೀಣ ಮಹಿಳೆಯರ ಅಭಿವೃದ್ಧಿಗಾಗಿ ಸಾಕಷ್ಟು ಶ್ರಮಿಸಿದ್ದಾರೆ. ಜ್ಞಾನವಿಕಾಸ ಡಿಜಿಟಲ್ ವಾಹಿನಿಯ ಮೂಲಕ ಅವರು ಮಾಡಿದ ಸಮಾಜೋಪಯೋಗಿ ಅದರಲ್ಲೂ ಮಹಿಳಾ ಸಬಲೀಕರಣಕ್ಕಾಗಿ ಮಾಡಿದ ಕೆಲಸಗಳನ್ನು ಎಂದೆಂದಿಗೂ ನೆನಪಿಟ್ಟುಕೊಳ್ಳುವಂಥದ್ದು. ಸಿರಿ ಗ್ರಾಮೋದ್ಯೋಗ ಸಂಸ್ಥೆ ಹಾಗೂ ಜ್ಞಾನವಿಕಾಸ ಜನಕೇಂದ್ರದ ಡೈರೆಕ್ಟರ್ ಕೂಡ ಆಗಿರುವ ಶ್ರದ್ಧಾ ಅವರು ಸ್ತ್ರೀಯರಲ್ಲಿ ನಾಯಕತ್ವ ಗುಣ ಬೆಳೆಸಿ ಸಬಲೀಕರಣಗೊಳಿಸುವುದನ್ನು ಗುರಿಯಾಗಿಟ್ಟುಕೊಂಡಿದ್ದಾರೆ. ಅವರನ್ನು ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಸದೃಢಗೊಳಿಸಲು ಸಾಕಷ್ಟು ಯೋಜನೆಗಳನ್ನು ಹಮ್ಮಿಕೊಂಡಿದ್ದಾರೆ. ಕ್ಷೇಮವನದಲ್ಲಿ ಸಹ ಮಹಿಳೆಯರಿಗೆ ಹೆಚ್ಚಿನ ಉದ್ಯೋಗಾವಕಾಶ ಒದಗಿಸಿರುವುದು ಕಾಣುತ್ತದೆ. ಪ್ರವಾಸ ಮತ್ತು ಓದುವಿಕೆಯತ್ತ ಹೆಚ್ಚು ಆಸಕ್ತಿ ಹೊಂದಿರುವ ಶ್ರದ್ಧಾ ಅವರ ಪ್ರಕಾರ ವೆಲ್ ನೆಸ್ ಕೂಡ ಟೂರಿಸಂ. ಒಂದು ಭಿನ್ನ ಲೋಕಕ್ಕೆ, ಆರೋಗ್ಯಲೋಕಕ್ಕೆ ಪ್ರವಾಸ ಮಾಡುವ ಪ್ರಕ್ರಿಯೆ.
ಹೀಗಿದೆ ಕ್ಷೇಮವನದ ಸೊಬಗು
ಖಾಸಗಿ ವಾಸ್ತವ್ಯಕ್ಕೂ ಅವಕಾಶ ನೀಡುವ ನಿಟ್ಟಿಲಲ್ಲಿ ವಿವಿಧ ಶ್ರೇಣಿಯ ಕಾಟೇಜ್ ಗಳು ಮತ್ತು ಆಕರ್ಷಕ ವಿನ್ಯಾಸದ ಸೂಟ್ ಗಳು ಹಾಗೂ ಸುಮಾರು ಮುನ್ನೂರಾ ಅರವತ್ತೈದು ಅತಿಥಿಗಳಿಗೆ ತಂಗುವ ವ್ಯವಸ್ಥೆ ಮಾಡಿದೆ ಕ್ಷೇಮವನ. ಇಪ್ಪತ್ಮೂರು ಎಕರೆ ವಿಸ್ತಾರದ ಈ ಬೃಹತ್ ಜಾಗದಲ್ಲಿ, ಮುನ್ನೂರಾ ಎಪ್ಪತ್ತೆಂಟು ಹಾಸಿಗೆಗಳು, ಹೊರಾಂಗಣ ಚಟುವಟಿಕೆಗಳಿಗೆ ವಿಶಾಲವಾದ ಜಾಗ, ಕೂರ್ಮ ಎಂಬ ಯೋಗ ಹಾಲ್, ನಂದಿ ಎಂಬ ಡಯಟ್ ಸೆಂಟರ್ ಎಲ್ಲವೂ ಇದೆ.
ಕ್ಷೇಮವನದಲ್ಲೊಂದು ಕೂರ್ಮ
ಹೈವೇಯಲ್ಲಿ ಓಡಾಡುವ ಪ್ರತಿಯೊಬ್ಬರನ್ನೂ ದೂರದಿಂದಲೇ ಆಕರ್ಷಿಸುವುದು ಕ್ಷೇಮವನದ ವಿನ್ಯಾಸ. ಅದರಲ್ಲೂ ಕೂರ್ಮ ವಿಭಾಗ ಕ್ಷೇಮವನದ ಬಹುಮುಖ್ಯ ಆಕರ್ಷಣೆಗಳಲ್ಲೊಂದು. ಕ್ಷೇಮವನದ ಬಗ್ಗೆ ಗೊತ್ತಾ ಅಂತ ಯಾರನ್ನೇ ಕೇಳಿದರೂ, ಈ ಆಮೆಯ ಆಕಾರದ ಮೇಲ್ಛಾವಣಿ ಬಗ್ಗೆಯೇ ಪ್ರಸ್ತಾಪಿಸುತ್ತಾರೆ. ಆಮೆಯಾಕಾರದ ಈ ಬೃಹತ್ ಕಟ್ಟಡ ಎರಡು ಅಂತಸ್ತುಗಳನ್ನು ಹೊಂದಿದ್ದು ನೆಲ ಮಹಡಿಯಲ್ಲಿ ಸುಸಜ್ಜಿತ ಈಜುಗೊಳ, ಆಧುನಿಕ ಜಿಮ್, ಯೋಗ ಸ್ಟುಡಿಯೋ, ಲೈಬ್ರರಿ ಮತ್ತು ಧ್ಯಾನ ಪ್ರದೇಶವನ್ನು ಹೊಂದಿದೆ. ಇನ್ನು ಮೇಲಿನ ಮಹಡಿಯಲ್ಲಿ ಯೋಗ ಹಾಲ್ ಮತ್ತು ಆಡಿಟೋರಿಯಂ ಇದೆ.
ಮೊದಲೇ ಹೇಳಿದಂತೆ ಕ್ಷೇಮವನ ನಮ್ಮ ದೇಹದಲ್ಲಿ ಸ್ವಾಭಾವಿಕವಾಗಿರುವ ಹೀಲಿಂಗ್ ಶಕ್ತಿಯನ್ನು ಮತ್ತೆ ಜಾಗೃತಗೊಳಿಸುವ ಆರೋಗ್ಯಧಾಮ. ಮನುಷ್ಯನ ದೇಹದ ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು ರೂಪಿಸಿರುವ ಆರೋಗ್ಯಪೂರ್ಣ ಜೀವನಕ್ರಮವೇ ಕ್ಷೇಮವನದ ವೈಶಿಷ್ಟ್ಯ. ಕೃತಕ ಔಷಧಗಳ ಹಂಗಿಲ್ಲದೆ ಸ್ವಾಭಾವಿಕ ರೀತಿಯಲ್ಲಿ ಸಮಗ್ರ ಆರೋಗ್ಯವನ್ನು ಕಾಪಾಡಿಕೊಳ್ಳಲು ಬಯಸುವವರಿಗೆ ಸೂಕ್ತ ಆರೋಗ್ಯಧಾಮ ಈ ಕ್ಷೇಮವನ.
ಆರೋಗ್ಯದ ಐದು ವಿಶಿಷ್ಟ ಧಾರೆಗಳ ಸಂಗಮ
ನಿಮ್ಮ ದೇಹದ ಆರೋಗ್ಯವನ್ನು ಮರಳಿ ಗಳಿಸಿಕೊಡಲು ನೀಡಲಾಗುವ ಎಲ್ಲಾ ಔಷಧೋಪಚಾರಗಳನ್ನು ‘ಕ್ಷೇಮ’ದ ಐದು ತತ್ವಗಳ ಆಧಾರದಲ್ಲಿ ರೂಪಿಸಲಾಗಿದೆ. ಅತ್ಯಂತ ಜಾಗರೂಕತೆಯಿಂದ ರೂಪಿಸಲಾಗಿರುವ ಮನಸ್ಸು-ದೇಹ, ಪೌಷ್ಠಿಕತೆ, ನಿದ್ರೆ, ಅನ್ನನಾಳದ (ಆಂತರ್ಯದ) ಆರೋಗ್ಯ ಮತ್ತು ಚೈತನ್ಯ ಚಿಕಿತ್ಸಾ ಪದ್ಧತಿಗಳನ್ನು ಕ್ಷೇಮವನದಲ್ಲಿ ಪಾಲಿಸಲಾಗುತ್ತದೆ.
ಆಹಾರ – ಆಹಾರ ಮತ್ತು ಪೌಷ್ಠಿಕತೆ
ದೀಪನ್ – ಅನ್ನನಾಳದ ಆರೋಗ್ಯ
ನಿದ್ರಾ - ನಿದ್ರೆಯಿಂದ ಆರೋಗ್ಯದ ಪುನರುತ್ಥಾನ
ಸ್ಮೃತಿ – ಮನಸ್ಸು ಮತ್ತು ದೇಹದ ಆರೋಗ್ಯ
ಊರ್ಜಾ – ಚೈತನ್ಯ ಮತ್ತು ಸಮತೋಲನ
ಆಹಾರ – ಆಹಾರ ಮತ್ತು ಪೌಷ್ಠಿಕತೆ
ಆಹಾರದಿಂದ ಆರೋಗ್ಯ ಆಹಾರದಲ್ಲಿಯೇ ಆರೋಗ್ಯ ಅಡಗಿದೆ ಅನ್ನೋದು ನಮ್ಮ ಪರಂಪರೆಯಿಂದ ಬಳುವಳಿಯಾಗಿ ಬಂದ ಸತ್ಯ. ಹೀಗಾಗಿ ತಜ್ಞರ ಮಾರ್ಗದರ್ಶನದಲ್ಲಿ ಪರಿಣತ ಬಾಣಸಿಗರು ತಯಾರಿಸುವ ಆಹಾರ ಕ್ಷೇಮವನದ ಸಾಧಕರ ಚೈತನ್ಯದ ಮೂಲ. ಸ್ಥಳೀಯ ವಾತಾವರಣಕ್ಕೆ ತಕ್ಕ ರೀತಿಯ ಸಮತೋಲಿತ ಆಹಾರವನ್ನು ನೀಡುವುದು ಇಲ್ಲಿನ ಕ್ರಮ. ಪ್ರತಿಯೊಬ್ಬರ ಆರೋಗ್ಯ ಪರಿಸ್ಥಿತಿಗೆ ತಕ್ಕ ಹಾಗೆ ವೈಯಕ್ತಿಕವಾಗಿ ರೂಪಿಸಿದ ಆಹಾರ ಕ್ರಮಗಳನ್ನು ಇಲ್ಲಿ ಪಾಲಿಸಲಾಗುತ್ತದೆ. ಇಲ್ಲಿ ರೂಪಿಸಿಕೊಡುವ ಆಹಾರಕ್ರಮ ನಿಮ್ಮ ಜೀವನದುದ್ದಕ್ಕೂ ಆರೋಗ್ಯ ಕಾಪಾಡುವ ಸಂಜೀವಿಯಂತೆ ಕೆಲಸ ಮಾಡುತ್ತದೆ.
ದೀಪನ್ – ಅನ್ನನಾಳದ ಆರೋಗ್ಯ
ದೇಹಪ್ರಕೃತಿಗೆ ಸೂಕ್ತವಾದ ಆಹಾರದಿಂದ ನಮ್ಮ ಅಂತಃಸತ್ವ ಮತ್ತಷ್ಟು ಬಲವಾಗುತ್ತದೆ. ಹೀಗಾಗಿ ಕ್ಷೇಮವನದಲ್ಲಿ ಆಹಾರದ ಪ್ರತಿಯೊಂದು ತಟ್ಟೆಗಳನ್ನೂ ಎಚ್ಚರಿಕೆಯಿಂದ ಸಿದ್ಧಪಡಿಸಲಾಗುತ್ತದೆ. ಹಸಿ ಮತ್ತು ಬೇಯಿಸಿದ ಆಹಾರಗಳೆರಡಕ್ಕೂ ಪ್ರತ್ಯೇಕವಾದ ಮಹತ್ವ ಇದ್ದು ನಿಮ್ಮ ಆರೋಗ್ಯಕ್ಕೆ ಪೂರಕವಾದ ಆಹಾರಗಳನ್ನೇ ಇಲ್ಲಿ ನೀಡಲಾಗುತ್ತದೆ. ಇದರಿಂದಾಗಿ ಅನ್ನನಾಳದ ಆರೋಗ್ಯ ಉತ್ತಮವಾಗಿ, ಜೀರ್ಣಕ್ರಿಯೆ ಸರಾಗವಾಗಿ ದೇಹದ ಬಹಳಷ್ಟು ಆರೋಗ್ಯ ಸಮಸ್ಯೆಗಳು ಮೂಲದಿಂದಲೇ ನಿವಾರಣೆಯಾಗುತ್ತವೆ. ದೇಹ ಆರೋಗ್ಯವಾಗಿದ್ದಾಗ ಮಾನಸಿಕ ಆರೋಗ್ಯವೂ ಸದೃಢವಾಗುತ್ತದೆ. ಇದು ಅನ್ನದಿಂದ ಆರೋಗ್ಯ ಅನ್ನುವ ಪರಿಕಲ್ಪನೆಯ ಮೂಲ.

ನಿದ್ರಾ - ನಿದ್ರೆಯಿಂದ ಆರೋಗ್ಯದ ಪುನರುತ್ಥಾನ
ವಿರಾಮದಿಂದ ಆರಾಮ. ದೇಹಕ್ಕೆ ನಿದ್ರೆ ಬಹಳ ಮುಖ್ಯ. ಇದು ಆರೋಗ್ಯ ರಕ್ಷಣೆಯಲ್ಲಿ ಪ್ರಮುಖ ಪಾತ್ರ ವಹಿಸುವ ಕ್ರಿಯೆಯೂ ಹೌದು. ನಿದ್ರೆ ದೇಹಕ್ಕೆ ವಿಶ್ರಾಂತಿ ನೀಡುವುದರ ಜೊತೆಗೆ ದೇಹಾರೋಗ್ಯವನ್ನು ಸುಸ್ಥಿತಿಯಲ್ಲಿಡಲು ನೆರವಾಗುತ್ತದೆ. ನಿದ್ರೆಯಿಂದಲೇ ಆರೋಗ್ಯ ಪುನರುತ್ಥಾನಗೊಳಿಸುವ ಸಲುವಾಗಿ ತಜ್ಞ ಶುಶ್ರೂಶಕರು “ಸರ್ಕಾರ್ಡಿಯನ್ ರಿದಂ” ಅನ್ನುವ ವೈಜ್ಞಾನಿಕ ತತ್ವದ ಆಧಾರದಲ್ಲಿ ನಿಮ್ಮ ಮನಸ್ಸನ್ನು ವಿಶ್ರಾಂತ ಸ್ಥಿತಿಯಲ್ಲಿರಿಸಲು ನೆರವಾಗುತ್ತಾರೆ. ನಿದ್ರೆಯ ವೇಳೆಯಲ್ಲಿ ದೇಹದ ಜೊತೆಗೆ ಮನಸ್ಸು ಕೂಡಾ ವಿರಾಮ ಪಡೆಯುವುದರಿಂದ ನಿದ್ರೆಯಿಂದ ಎದ್ದ ತಕ್ಷಣ ಹೊಸ ಚೈತನ್ಯದೊಂದಿಗೆ ಕಾರ್ಯನಿರ್ವಹಿಸಲು ನಿಮ್ಮ ದೇಹ-ಮನಸ್ಸು ಸಿದ್ದವಾಗುತ್ತದೆ.
ಸ್ಮೃತಿ – ಮನಸ್ಸು ಮತ್ತು ದೇಹದ ಆರೋಗ್ಯ
ಮನಸ್ಸು ಮತ್ತು ದೇಹದ ನಡುವಿನ ಸಂಪರ್ಕ ಶಕ್ತಿಯನ್ನು ಜಾಗೃತಗೊಳಿಸಿದರೆ ಬಹಳಷ್ಟು ಆರೋಗ್ಯಲಾಭಗಳು ನಿಮ್ಮದಾಗುತ್ತವೆ. ಹೀಗಾಗಿ ಕ್ಷೇಮವನದಲ್ಲಿ ಪ್ರಾಚೀನ ಧ್ಯಾನ ಪದ್ಧತಿ ಮತ್ತು ಆಧುನಿಕ ಮನಃಶಾಸ್ತ್ರ ಇವೆರಡರಿಂದಲೂ ಪ್ರೇರಣೆ ಪಡೆದು ವಿಶಿಷ್ಟ ಉಪಚಾರ ವಿಧಾನಗಳನ್ನು ರೂಪಿಸಲಾಗಿದೆ. ಇವುಗಳ ಮೂಲಕ ನಿಮ್ಮ ದೇಹದ ವೈಯಕ್ತಿಕ ಅಗತ್ಯಗಳಿಗೆ ತಕ್ಕಂಥ ಉಪಶಮನ ವಿಧಾನಗಳನ್ನು ಕ್ಷೇಮವನದಲ್ಲಿ ಅನುಸರಿಸಲಾಗುತ್ತದೆ.
ಊರ್ಜಾ – ಚೈತನ್ಯ ಮತ್ತು ಸಮತೋಲನ
ನಿಮ್ಮ ಚೈತನ್ಯ ಶಕ್ತಿಯನ್ನು ಉದ್ದೀಪನಗೊಳಿಸಿದರೆ ಅದು ಶಾರೀರಿಕ ಆರೋಗ್ಯವನ್ನು ಉನ್ನತ ಮಟ್ಟದಲ್ಲಿಟ್ಟುಕೊಳ್ಳಲು ನೆರವಾಗುತ್ತದೆ. ಈ ಚೈತನ್ಯಶಕ್ತಿ ದೇಹಾರೋಗ್ಯದ ಮೂಲವೂ ಹೌದು. ಹೀಗಾಗಿ ಕ್ಷೇಮವನದಲ್ಲಿ ಚೈತನ್ಯ ಉಪಶಮನ ವಿಧಾನಗಳನ್ನು ಅನುಸರಿಸಲಾಗುತ್ತದೆ. ಇದು ದೇಹದ ಚೈತನ್ಯ ಶಕ್ತಿಯನ್ನು ಜಾಗೃತಗೊಳಿಸಿ ಜೀವಕೋಶಗಳ ಬೆಳವಣಿಗೆ ಮತ್ತು ದುರಸ್ತಿಗೆ ನೆರವಾಗುತ್ತದೆ. ಇಲ್ಲಿನ ತಜ್ಞರು ನಿಮ್ಮ ದೇಹದ ಚೈತನ್ಯ ಕೇಂದ್ರಗಳು ಪ್ರಕೃತಿಯಲ್ಲಿರುವ ಎಲೆಕ್ಟ್ರೋಮ್ಯಾಗ್ನೆಟಿಕ್ ಶಕ್ತಿ, ಬೆಳಕು, ಶಬ್ದ ಮತ್ತು ಸೂಕ್ಷ್ಮ ಶಕ್ತಿಯ ಮೂಲಗಳನ್ನು ಸಮರ್ಥವಾಗಿ ಬಳಸಿಕೊಂಡು ಪರಿಣಾಮಕಾರಿ ಉಪಶಮನ ಕಂಡುಕೊಳ್ಳಲು ನೆರವಾಗುತ್ತಾರೆ.
ನಮ್ಮ ಸಮಗ್ರ ಚಿಕಿತ್ಸಾ ವಿಧಾನ
ನಿಮ್ಮ ವೈಯಕ್ತಿಕ ಆರೋಗ್ಯದ ಅಗತ್ಯಗಳು ಏನಿವೆ ಅನ್ನುವುದನ್ನು ಕಂಡುಕೊಳ್ಳುವುದಕ್ಕೆ ಕ್ಷೇಮವನ ಪ್ರಥಮ ಆದ್ಯತೆ ನೀಡುತ್ತದೆ. ಆಧುನಿಕ ಜೀವನಶೈಲಿ, ನಗರವಾಸ ಇವೆಲ್ಲಾ ಸೃಷ್ಟಿಮಾಡುವ ಮಾನಸಿಕ ಒತ್ತಡ ಹಲವು ಆರೋಗ್ಯ ಸಮಸ್ಯೆಗಳ ಮೂಲ. ನೀವು ಸಕ್ಕರೆ ಖಾಯಿಲೆ, ಹೈಪರ್ ಟೆನ್ಷನ್, ಅಸ್ತಮಾದಂಥ ಸಮಸ್ಯೆಗಳಿಂದ ಬಳಲುತ್ತಿದ್ದರೆ, ಅವುಗಳನ್ನು ನಿಯಂತ್ರಿಸಲು ಆರೋಗ್ಯಕರ ಜೀವನ ಪದ್ದತಿಗಳನ್ನು ಹುಡುಕುತ್ತಿದ್ದರೆ ಇಲ್ಲಿನ ಪ್ರಾಕೃತಿಕ ಚಿಕಿತ್ಸಾ ವಿಧಾನಗಳು ನಿಮಗೆ ನೆರವಾಗುತ್ತವೆ. ಕ್ಷೇಮವನದ ಶುಶ್ರೂಷಾ ವಿಧಾನಗಳಲ್ಲಿ ಹಲವು ಆಯ್ಕೆಗಳಿದ್ದು ಮೂರು ದಿನದಿಂದ ಇಪ್ಪತ್ತೊಂದು ದಿನಗಳ ಸಮಗ್ರ ಕ್ಷೇಮಪಾಲನ ಪ್ಯಾಕೇಜ್ಗಳು ಇಲ್ಲಿ ಲಭಿಸುತ್ತವೆ. ಪೌಷ್ಠಿಕಾಂಶ, ಉಪಶಮನ, ವ್ಯಾಯಾಮ ಮತ್ತು ವಿಶ್ರಾಂತಿಯಿಂದ ಪ್ರೇರಣೆ ಪಡೆದ ಹಲವು ಶುಶ್ರೂಷಾ ವಿಧಾನಗಳು ಕ್ಷೇಮವನದಲ್ಲಿವೆ.
ಅಕ್ಯುಪಂಕ್ಚರ್
ಚೀನಾದ ಅತ್ಯಂತ ಪ್ರಾಚೀನ ಚಿಕಿತ್ಸಾ ಕ್ರಮಗಳಲ್ಲಿ ಈ ಅಕ್ಯುಪಂಕ್ಚರ್ ಕೂಡಾ ಒಂದು. ವಿಶೇಷವಾಗಿ ರೂಪಿತವಾದ ಸೂಜಿಗಳು ಮತ್ತೆ ಸಕ್ಷನ್ ಕಪ್ಗಳನ್ನು ಬಳಸಿಕೊಂಡು ನೀಡುವ ಈ ಚಿಕಿತ್ಸೆ ದೇಹದ ಇಮ್ಯುನಿಟಿ ವ್ಯವಸ್ಥೆಯನ್ನು ಜಾಗೃತಗೊಳಿಸುತ್ತದೆ. ದೇಹದ ಚೈತನ್ಯ ಹರಿಯುವ ಮಾರ್ಗವಾದ ಮೆರಿಡಿಯನ್ ಚಾನಲ್ನಲ್ಲಿನ ಅಡೆ-ತಡೆಗಳನ್ನು ನಿವಾರಿಸುವ ಮೂಲಕ ಅಕ್ಯುಪಂಕ್ಚರ್ ದೇಹದ ಆರೋಗ್ಯವನ್ನು ಸ್ವಾಭಾವಿಕವಾಗಿಯೇ ಮರಳಿಸುತ್ತದೆ.
ಡಯಟ್ ಮತ್ತು ಉಪವಾಸ ಥೆರಪಿ
ದೇಹಾರೋಗ್ಯದಲ್ಲಿ ಡಯಟ್ ಅಂದರೆ ಆಹಾರಕ್ರಮ ಮತ್ತು ಉಪವಾಸ ಪ್ರಮುಖ ಸಾಧನವಾಗಿ ಕೆಲಸಮಾಡುತ್ತವೆ. ಸಾಧಕರ ದೇಹದ ಅಗತ್ಯಕ್ಕೆ ತಕ್ಕ ಹಾಗೆ ವೈಜ್ಞಾನಿಕ ರೀತಿಯಿಂದ ರೂಪಿಸಲಾದ ಡಯಟ್ ಆರೋಗ್ಯವನ್ನು ಕಾಪಾಡುವುದರ ಜೊತೆಗೆ ಸಮಸ್ಯೆಗಳ ಉಪಶಮನಕ್ಕೂ ನೆರವಾಗುತ್ತವೆ.
ಹೈಡ್ರೋಥೆರಪಿ
ನೀರಿಗೆ ಅದ್ಭುತ ಚಿಕಿತ್ಸಕ ಶಕ್ತಿಯಿದೆ. ಸಾಕಷ್ಟು ನೀರು ಕುಡಿಯುವುದರಿಂದಲೇ ಹಲವು ಆರೋಗ್ಯಲಾಭಗಳು ನಮ್ಮ ದೇಹಕ್ಕೆ ಸಿಗುತ್ತವೆ. ಕ್ಷೇಮವನದಲ್ಲಿ ನೀರಿನ ಹರಿವು ಮತ್ತು ಚಿಕಿತ್ಸಕ ಗುಣಗಳನ್ನು ಬಳಸಿಕೊಂಡು ಹಲವು ವಿಶಿಷ್ಟ ಉಪಶಮನ ಕ್ರಿಯೆಗಳನ್ನು ರೂಪಿಸಲಾಗಿದೆ. ಸ್ನಾನ, ಪ್ಯಾಕ್ ಗಳು, ಜೆಟ್ ಗಳು, ನೀರೊಳಗಿನ ಮಸಾಜ್ ಕ್ರಮಗಳ ಮೂಲಕ ನೀರಿನ ಚಿಕಿತ್ಸಕ ಶಕ್ತಿಯನ್ನು ಇಲ್ಲಿ ಬಳಸಿಕೊಳ್ಳಲಾಗುತ್ತದೆ.

ಮಸಾಜ್
ನಮ್ಮ ಮಸಾಜ್ ಆಧಾರಿತ ಚಿಕಿತ್ಸೆಗಳು ದೇಹದ ನೋವು ನಿವಾರಿಸುವುದಲ್ಲದೇ, ರಕ್ತಪರಿಚಲನೆಯನ್ನು ಸುಗಮಗೊಳಿಸುತ್ತವೆ. ಕೀಲುಗಳನ್ನು ಬಲಪಡಿಸುತ್ತವೆ. ಸ್ನಾಯು ಮತ್ತು ನರಗಳ ಒತ್ತಡಗಳನ್ನು ಕಡಿಮೆ ಮಾಡಿ ದೇಹ ಹಾಗೂ ಮನಸ್ಸಿಗೆ ವಿಶ್ರಾಂತಿ ಪಡೆಯಲು ಸಹಾಯ ಮಾಡುತ್ತವೆ. ಇವು ಕ್ಷೇಮವನದ ಸಾಧಕರು ಶೀಘ್ರವಾಗಿ ಚೇತರಿಸಿಕೊಳ್ಳಲು ನೆರವಾಗುತ್ತದೆ.
ಮಡ್ ಥೆರಪಿ
ಸೃಷ್ಟಿ ನಮಗೆ ಕೊಟ್ಟಿರುವ ಅಪರೂಪದ ಶಕ್ತಿ ಮಣ್ಣು. ಈ ಮಣ್ಣಿನ ಚಿಕಿತ್ಸೆಯು ಚರ್ಮ, ಕೀಲುಗಳು ಮತ್ತು ಜೀರ್ಣಕ್ರಿಯೆಗೆ ಒಳ್ಳೆಯದು. ಮಣ್ಣು ನಮ್ಮ ದೇಹವನ್ನು ತಂಪಾಗಿಸುವ, ಉರಿಯೂತ ಶಮನಗೊಳಿಸುವ ಮತ್ತು ಹೈಡ್ರೇಟಿಂಗ್ ಗುಣಲಕ್ಷಣಗಳನ್ನು ಹೊಂದಿದೆ. ಮಣ್ಣಿನ ಚಿಕಿತ್ಸೆಗಳು ವಿಶ್ರಾಂತಿ ಮತ್ತು ಆರೋಗ್ಯದ ಪ್ರಯೋಜನಗಳನ್ನು ದೇಹಕ್ಕೆ ನೀಡುತ್ತವೆ.
ಫಿಸಿಯೋಥೆರಪಿ
ವೈದ್ಯಕೀಯವಾಗಿ ತರಬೇತಿ ಪಡೆದ ನಮ್ಮ ಫಿಸಿಯೋಥೆರಪಿಸ್ಟ್ ಗಳು ತಮ್ಮ ಕ್ಷೇತ್ರದಲ್ಲಿನ ಹೊಸತನಗಳಿಗೆ ತಕ್ಷಣ ಸ್ಪಂದಿಸುತ್ತಾರೆ. ನೀವು ಗಾಯದಿಂದ ಚೇತರಿಸಿಕೊಳ್ಳುತ್ತಿದ್ದರೆ ಅಥವಾ ದೀರ್ಘಕಾಲಿಕ ಅನಾರೋಗ್ಯ ಸ್ಥಿತಿಯಲ್ಲಿದ್ದರೆ ಫಿಸಿಯೋಥೆರಪಿ ದೇಹದ ನೋವನ್ನು ಸಮರ್ಥವಾಗಿ ನಿರ್ವಹಿಸಲು ನಾವು ನಿಮಗೆ ಸಹಾಯ ಮಾಡುತ್ತೇವೆ.
ರಿಫ್ಲೆಕ್ಸಾಲಜಿ
ರಿಫ್ಲೆಕ್ಸಾಲಜಿ ಮನಸ್ಸನ್ನು ಶಾಂತಗೊಳಿಸುವ ಒಂದು ಚಿಕಿತ್ಸಾ ಕ್ರಮ. ನಮ್ಮ ಪಾದದ ಅಡಿಭಾಗಕ್ಕೆ ವಿಶಿಷ್ಟರೀತಿಯಲ್ಲಿ ಒತ್ತಡ ಕೊಡುವ ಮೂಲಕ ಈ ಉಪಶಮನ ನೀಡಲಾಗುತ್ತದೆ. ನಾನ್-ಇನ್ವೇಸಿವ್ ಅಂದರೆ ಶಸ್ತ್ರಚಿಕಿತ್ಸೆ ರಹಿತ ಚಿಕಿತ್ಸೆಯ ಮಾದರಿ ಇದು. ಈ ಮೂಲಕ ಅಂಗಗಳಿಗೆ ಸಂಬಂಧಿಸಿದ ಒತ್ತಡದ ಬಿಂದುಗಳನ್ನು ಸಕ್ರಿಯಗೊಳಿಸಿ ದೇಹಾರೋಗ್ಯವನ್ನು ಸುಧಾರಿಸಲಾಗುತ್ತದೆ.

ಯೋಗ
ಯೋಗವು ದೈಹಿಕ-ಮಾನಸಿಕ ಆರೋಗ್ಯ ಮತ್ತು ಅಧ್ಯಾತ್ಮಿಕ ಔನ್ನತ್ಯದ ಸಾಧನ. ನಿರ್ದೇಶಿತ ಆಸನಗಳು, ಉಸಿರಾಟ ನಿಯಂತ್ರಣ, ಶುದ್ಧೀಕರಣ ಮತ್ತು ಧ್ಯಾನದ ಮೂಲಕ ಯೋಗ ಚಿಕಿತ್ಸೆಗಳು ಆಂತರಿಕ ಆರೋಗ್ಯ ಮತ್ತು ಸಮತೋಲನವನ್ನು ಹೆಚ್ಚಿಸುತ್ತವೆ. ಕ್ಷೇಮವನದಲ್ಲಿ ಸಮಕಾಲೀನ ಜೀವನಶೈಲಿಯನ್ನು ಸುಧಾರಿಸಲು ಸಾಂಪ್ರದಾಯಿಕ ಯೋಗ ವಿಧಾನಗಳನ್ನು ವೈಜ್ಞಾನಿಕ ದೃಷ್ಟಿಕೋನದೊಂದಿಗೆ ಅನುಸರಿಸಲಾಗುತ್ತದೆ.
ಹಲವಾರು ಪ್ರಶಸ್ತಿ
ನ್ಯಾಚುರೋಪತಿ ಕ್ಷೇತ್ರದಲ್ಲಿ ಅತ್ಯುತ್ತಮ ಸೇವೆ ಸಲ್ಲಿಸುತ್ತಿರುವ ಕ್ಷೇಮವನಕ್ಕೆ ಹಲವಾರು ಪ್ರಶಸ್ತಿ ಗೌರವಗಳು ಅರಸಿ ಬಂದಿವೆ. ಪ್ರಧಾನ ವೈದ್ಯರಾಗಿರುವ ಡಾ. ನರೇಂದ್ರ ಶೆಟ್ಟಿಯವರೂ ಹಲವಾರು ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. ಕ್ಷೇಮವನದ ಡೈರೆಕ್ಟರ್ ಶ್ರೀಮತಿ ಶ್ರದ್ಧಾ ಅಮಿತ್ ಅವರಿಗೆ 2024ರ ಸಾಲಿನ ಆಯುಷ್ ಟಿವಿ ನ್ಯಾಷನಲ್ ಹೆಲ್ತ್ ಅವಾರ್ಡ್ ನೀಡಲಾಗಿದ್ದು, ನ್ಯಾಚುರೋ ಪಥಿ ಕ್ಷೇತ್ರದ ಜೀವಮಾನದ ಸಾಧನೆಗಾಗಿ ಈ ಮನ್ನಣೆ ಸಿಕ್ಕಿದೆ. ಡಾ.ನರೇಂದ್ರ ಶೆಟ್ಟಿ ಅವರಿಗೆ ಇಂಡಿಯನ್ ಹಾಸ್ಪಿಟಾಲಿಟಿ ಲೀಡರ್ ಶಿಪ್ ಅವಾರ್ಡ್ ಸೇರಿದಂತೆ TEDXRUAS ಸ್ಪೀಕರ್ ಆಹ್ವಾನಿತರಾಗಿ ಗುರುತಿಸಿಕೊಂಡಿದ್ದಾರೆ.
ಕ್ಷೇಮವನಕ್ಕೆ ದೊರೆತಿರುವ ಇನ್ನು ಕೆಲವು ಪ್ರಶಸ್ತಿಗಳು ಹೀಗಿವೆ:
- ಟೈಮ್ಸ್ ಬ್ಯುಸಿನೆಸ್ ಅವಾರ್ಡ್ -2024
- ಸಿಲ್ವರ್ ಅವಾರ್ಡ್ ವೆಲ್ ನೆಸ್ ಬ್ರ್ಯಾಂಡ್ 2024
- ಏಷ್ಯಾ’ಸ್ ಬೆಸ್ಟ್ ವೆಲ್ ನೆಸ್ ರಿಟ್ರೀಟ್ 2025
- ಟ್ರಿಪ್ ಅಡ್ವೈಸರ್ ಟ್ರಾವೆಲ್ಲರ್ಸ್ ಚಾಯ್ಸ್ ಅವಾರ್ಡ್
- ಕೆಟಿಸಿಸಿ ಕರ್ನಾಟಕ ಬ್ಯುಸಿನೆಸ್ ಅವಾರ್ಡ್ 2025
- 2025ರ ಗೋವಾ ಅಂತಾರಾಷ್ಟ್ರೀಯ ಟ್ರೇಡ್ ಫೇರ್ ನಲ್ಲಿ ಮನ್ನಣೆ

ಕ್ಷೇಮವನದ ಶಕ್ತಿ ಡಾ. ನರೇಂದ್ರ ಕೆ. ಶೆಟ್ಟಿ
ಕ್ಷೇಮವನ ಇಂದು ಇಷ್ಟು ಜನಪ್ರಿಯವಾಗಿದೆ ಅಂದರೆ ಅಲ್ಲಿನ ವೈದ್ಯಕೀಯ ವ್ಯವಸ್ಥೆ ಮತ್ತು ತಂಡವೂ ಕಾರಣ.ಈ ಸಂದರ್ಭದಲ್ಲಿ ಇಲ್ಲಿ ಕಂಡುಬರುವ ಪ್ರಮುಖ ಹೆಸರು ಡಾ. ನರೇಂದ್ರ ಕೆ. ಶೆಟ್ಟಿ ಅವರದ್ದು. ಡಾ.ನರೇಂದ್ರ ಕೆ ಶೆಟ್ಟಿ ಕ್ಷೇಮವನದ ಚೀಫ್ ವೆಲ್ ನೆಸ್ ಆಫೀಸರ್ ಹಾಗೂ ಇಲ್ಲಿನ ವೈದ್ಯತಂಡದ ಕ್ಯಾಪ್ಟನ್. ಸುಮಾರು ಎರಡು ದಶಕಕ್ಕೂ ಹೆಚ್ಚಿನ ಅನುಭವ ಹೊಂದಿರುವ ಇವರು ದೇಶದ ಅನೇಕ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಪ್ರಮುಖ ಹುದ್ದೆಗಳನ್ನು ನಿಭಾಯಿಸಿ ಸೈ ಎನಿಸಿಕೊಂಡವರು.
ಇಲ್ಲಿ ಆಧುನಿಕ ಚಿಕಿತ್ಸಾ ವಿಧಾನಗಳನ್ನು ಪರಿಚಯಿಸುವಲ್ಲಿ ಹಾಗೂ ಗುಣಮಟ್ಟದ ಚಿಕಿತ್ಸೆ ಒದಗಿಸುತ್ತಿರುವುದರಲ್ಲಿ ನರೇಂದ್ರ ಕೆ. ಶೆಟ್ಟಿಯವರ ಪಾತ್ರ ಹಿರಿದು. ವೆಲ್ ನೆಸ್ ಚಿಕಿತ್ಸೆಗಳ ಅಪಾರ ಜ್ಞಾನ ಹೊಂದಿರುವ ಇವರು ಅದನ್ನು ಅಷ್ಟೇ ಅದ್ಭುತವಾಗಿ ಅನುಷ್ಠಾನಕ್ಕೆ ತಂದು ಎಲ್ಲೆಡೆ ಮೆಚ್ಚುಗೆ ಗಳಿಸಿದ್ದಾರೆ.
ಡಾ. ಶೆಟ್ಟಿ ಕ್ಲಿನಿಕಲ್, ಆಪರೇಷನಲ್ ಹಾಗೂ ಮ್ಯಾನೇಜೀರಿಯಲ್ ಕೌಶಲ್ಯಗಳಲ್ಲಿ ಪರಿಣತಿ ಹೊಂದಿರುವುದರ ಜೊತೆಗೆ ಗ್ರಾಹಕ ಸೇವೆ, ಜೀವನಶೈಲಿ ಬದಲಾವಣೆ ಹಾಗೂ ಮಾರ್ಕೆಟಿಂಗ್ ವಿಷಯಗಳಲ್ಲಿಯೂ ಆಳವಾದ ತಿಳಿವಳಿಕೆ ಹೊಂದಿದ್ದಾರೆ. ಮಂಗಳೂರು ವಿಶ್ವವಿದ್ಯಾಲಯದಿಂದ ನ್ಯಾಚುರೋಪತಿ ಮತ್ತು ಯೋಗ ವಿಜ್ಞಾನಗಳಲ್ಲಿ ಪದವಿ, ಆಡ್ವಾನ್ಸ್ಡ್ ಸ್ಪಾ ತಂತ್ರಜ್ಞಾನ ಮತ್ತು ಚಿಕಿತ್ಸಾ ಪಿಜಿ ಡಿಪ್ಲೊಮಾ, ಹಾಗೂ ಸ್ವಿಟ್ಜರ್ಲ್ಯಾಂಡ್ನ ಔರಿಚ್ನಲ್ಲಿ CIDESCO ನಿಂದ ಬ್ಯೂಟಿ ಥೆರಪಿ, ಬ್ಯಾಸಿಕ್ ಬ್ಯೂಟಿ/ ಜನರಲ್ ಎಸ್ಟೆಟಿಕ್ಸ್/ ಬಾಡಿ ಥೆರಪಿ/ ವಿಶೇಷ ವಿಷಯಗಳು ಕುರಿತ ಪಿಜಿ ಡಿಪ್ಲೊಮಾ ಪದವಿಗಳನ್ನು ಪಡೆದಿದ್ದಾರೆ. ಇವರು ಕ್ಷೇಮವನದ ಹಿರಿಮೆ ಹೆಚ್ಚಿಸುವಲ್ಲಿ ಬಹಳ ಕೊಡುಗೆ ನೀಡಿದ್ದಾರೆ.

ಯಶಸ್ಸಿನ ಹಿಂದಿದ್ದಾರೆ ಶ್ರೇಯಸ್ ಕುಮಾರ್
ಕ್ಷೇಮವನದ ಯಶಸ್ಸಿನಲ್ಲಿ ಹಲವು ಶಕ್ತಿಗಳ ಪಾಲಿದೆ. ಪ್ರಾಜೆಕ್ಟ್ ಡೈರೆಕ್ಟರ್ ಆಗಿರುವ ಶ್ರೇಯಸ್ ಕುಮಾರ್ ಅವರಲ್ಲೊಬ್ಬರು. ಎಸ್ಡಿಎಂ ಸಂಸ್ಥೆಗಳ ಗುಂಪಿನಲ್ಲಿ ಶ್ರೇಯಸ್ ಕುಮಾರ್ ಪ್ರಮುಖ ತಂಡದ ಸದಸ್ಯರಾಗಿ ಕಾರ್ಯನಿರ್ವಹಿಸುತ್ತಿದ್ದು, ಕಳೆದ 12 ವರ್ಷಗಳಿಂದ ತಮ್ಮ ನವೀನ ಆಲೋಚನೆಗಳು ಮತ್ತು ಸಮರ್ಪಿತ ಸೇವೆಯಿಂದ ಸಂಸ್ಥೆಯ ಪ್ರತಿಷ್ಠೆಯನ್ನು ಇನ್ನಷ್ಟು ಎತ್ತರಕ್ಕೇರಿಸಿದ್ದಾರೆ. ಇಂಜಿನಿಯರ್ ಪದವೀಧರರಾಗಿರುವ ಶ್ರೇಯಸ್, ಪ್ರಾಜೆಕ್ಟ್ ಮ್ಯಾನೇಜ್ಮೆಂಟ್ ಕ್ಷೇತ್ರದಲ್ಲಿ ಮಹತ್ತರವಾದದ್ದನ್ನು ಸಾಧಿಸುವ ಗುರಿ ಹೊತ್ತವರು. ಎಸ್ಡಿಎಂ ಗುಂಪಿನ ದೀರ್ಘಕಾಲೀನ ದೃಷ್ಟಿಕೋನವನ್ನು ನೇತೃತ್ವ ತಂಡದೊಂದಿಗೆ ಹಂಚಿಕೊಂಡು, ಪ್ರತಿಯೊಬ್ಬ ಉದ್ಯೋಗಿಯಲ್ಲೂ ಸಂಸ್ಥೆಯ ಗುರಿಗಳನ್ನು ಬಲಪಡಿಸುವಲ್ಲಿ ಅವರು ತೊಡಗಿಸಿಕೊಂಡಿದ್ದಾರೆ. ವೆಲ್ ನೆಸ್ ಮತ್ತು ಹಾಸ್ಪಿಟಾಲಿಟಿ ಕ್ಷೇತ್ರಗಳಲ್ಲಿ ಜಾಗತಿಕ ಮಟ್ಟದ ಮಾನದಂಡಗಳಿಗೆ ಸಮನಾದ ಮೂಲಸೌಕರ್ಯಗಳನ್ನು ನಿರ್ಮಿಸಲು ಅವರ ಪರಿಣತಿ ಮಹತ್ವದ ಪಾತ್ರವಹಿಸಿದೆ.
ಧರ್ಮಸ್ಥಳದಲ್ಲಿ ಜನಿಸಿ ಬೆಳೆದ ಶ್ರೇಯಸ್ ಕುಮಾರ್, ಅಮೇರಿಕದ ಯುನಿವರ್ಸಿಟಿ ಆಫ್ ಬೆರ್ಕ್ಲಿ ಯಿಂದ ಎಂಜಿನಿಯರಿಂಗ್ ಮತ್ತು ಪ್ರಾಜೆಕ್ಟ್ ಮ್ಯಾನೇಜ್ಮೆಂಟ್ ನಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಬೆಂಗಳೂರು ಬಿಎಮ್ಎಸ್ ಕಾಲೇಜಿನಲ್ಲಿ ಕಂಪ್ಯೂಟರ್ ಸೈನ್ಸ್ ಮತ್ತು ಎಂಜಿನಿಯರಿಂಗ್ ನಲ್ಲಿ ಬಿಇ ಪದವಿ ಪೂರ್ಣಗೊಳಿಸಿದ ನಂತರವೇ ಪ್ರಾಜೆಕ್ಟ್ ಮ್ಯಾನೇಜ್ಮೆಂಟ್ ಕ್ಷೇತ್ರಕ್ಕೆ ಪ್ರವೇಶಿಸಿ, ಎಸ್ಡಿಎಂ ಗುಂಪಿನಲ್ಲಿ ಪ್ರಾಜೆಕ್ಟ್ ಡೈರೆಕ್ಟರ್ ಆಗಿ ನೇಮಕಗೊಂಡರು.
ಅವರ ಯಶಸ್ವಿ ಯೋಜನೆಗಳಲ್ಲಿ ಎಸ್ಡಿಎಂ ಸೂಪರ್-ಸ್ಪೆಷಾಲಿಟಿ ಆಸ್ಪತ್ರೆ ಧಾರವಾಡ, ಎಸ್ಡಿಎಂ ಆಯುರ್ವೇದ ಕಾಲೇಜು ಬೆಂಗಳೂರು, ಎಸ್ಡಿಎಂ ಯೋಗಕ್ಷೇಮ ಹಾಸನ, ಬೀಡು ಧರ್ಮಸ್ಥಳ, ಎಸ್ಡಿಎಂ ಆಯುರ್ವೇದ ಕಾಲೇಜು ಹಾಸನ, ಎಸ್ಡಿಎಂ ಸಿಬಿಎಸ್ಇ ಶಾಲೆ ಮಂಗಳೂರು, ಎಸ್ಡಿಎಂ ಆಯುರ್ವೇದ ಆಸ್ಪತ್ರೆ ಉಡುಪಿ ಹಾಗೂ ಎಸ್ಡಿಎಂ ನ್ಯಾಚರ್ಕ್ಯೂರ್ ಆಸ್ಪತ್ರೆ ನೆಲಮಂಗಲ ಮುಂತಾದ ಯೋಜನೆಗಳು ಸೇರಿವೆ. ಅವರ ಸಮಗ್ರ ಶೈಲಿಯ ಕಾರ್ಯವಿಧಾನ ಅನೇಕ ನವೀನ ಯೋಜನೆಗಳಲ್ಲಿ ಪ್ರತಿಫಲಿತವಾಗಿದೆ.