Madenuru Manu: ಅತ್ಯಾಚಾರ ಪ್ರಕರಣ; ನಟ ಮಡೆನೂರು ಮನುಗೆ 14 ದಿನ ನ್ಯಾಯಾಂಗ ಬಂಧನ
Madenuru Manu: ಕಿರುತೆರೆಯ ಸಹನಟಿಯೊಬ್ಬರು ನಟ ಮಡೆನೂರು ಮನು ವಿರುದ್ಧ ಅತ್ಯಾಚಾರ ಮಾಡಿ, ಗರ್ಭಪಾತ ಮಾಡಿಸಿದ್ದಾನೆ ಎಂದು ಆರೋಪ ಮಾಡಿ ಅನ್ನಪೂರ್ಣೇಶ್ವರಿ ನಗರ ಠಾಣೆಗೆ ದೂರು ನೀಡಿದ್ದರು. ಹೀಗಾಗಿ ಪೊಲೀಸರು ಕೇಸ್ ದಾಖಲಿಸಿಕೊಂಡು, ಮಡೆನೂರು ಮನುವನ್ನು ಬಂಧಿಸಿದ್ದರು.


ಬೆಂಗಳೂರು: ಅತ್ಯಾಚಾರ ಪ್ರಕರಣದಲ್ಲಿ ಬಂಧನವಾಗಿರುವ ಕಾಮಿಡಿ ಕಿಲಾಡಿಗಳು ಖ್ಯಾತಿಯ ನಟ ಮಡೆನೂರು ಮನುಗೆ (Madenuru Manu) ನ್ಯಾಯಾಲಯವು 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ. ಎರಡು ದಿನಗಳ ತನಿಖೆ, ಮಹಜರು, ಹೇಳಿಕೆ ದಾಖಲು ಬಳಿಕ ಪೊಲೀಸರು ಮಡೆನೂರು ಮನುವನ್ನು 3ನೇ ಎಸಿಜೆಎಂ ನ್ಯಾಯಾಲಯಕ್ಕೆ ಸೋಮವಾರ ಹಾಜರುಪಡಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿರುವ ಕೋರ್ಟ್, ಆರೋಪಿಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿದೆ.
ಸಹನಟಿಯಾಗಿದ್ದ ಯುವತಿ ಮಡೆನೂರು ಮನು ವಿರುದ್ಧ ಅತ್ಯಾಚಾರ ಆರೋಪ ಮಾಡಿ ಅನ್ನಪೂರ್ಣೇಶ್ವರಿ ನಗರ ಠಾಣೆಗೆ ದೂರು ನೀಡಿದ್ದರು. ಹೀಗಾಗಿ ಪೊಲೀಸರು ಕೇಸ್ ದಾಖಲಿಸಿಕೊಂಡು, ಮಡೆನೂರು ಮನುವನ್ನು ಬಂಧಿಸಿದ್ದರು. ಮಡೆನೂರು ಮನು ನಟನೆಯ ‘ಕುಲದಲ್ಲಿ ಕೀಳ್ಯಾವುದೊ’ ಸಿನಿಮಾ ಬಿಡುಗಡೆ ಸಂದರ್ಭದಲ್ಲಿಯೇ ಕಿರುತೆರೆ ನಟನಿಗೆ ಸಂಕಷ್ಟ ಎದುರಾಗಿದೆ.
ಪೊಲೀಸರ ವಶದಲ್ಲಿದ್ದ ಮನುವಿನ ವಿಚಾರಣೆ ನಡೆಸಿ ಮನು ಇದ್ದ ಮನೆ, ಸಂತ್ರಸ್ತೆ ಇದ್ದ ಮನೆ, ಕೆಲ ರೆಸಾರ್ಟ್ಗಳು ಇತ್ಯಾದಿಗಳ ಕಡೆ ಕರೆದೊಯ್ದು ಸ್ಥಳ ಮಹಜರನ್ನು ಪೊಲೀಸರು ಕಳೆದ ಎರಡು ದಿನಗಳಲ್ಲಿ ಮಾಡಿದ್ದರು. ತನಿಖೆ ಮುಗಿದ ಬಳಿಕ ಇಂದು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಇದೀಗ ಮನುಗೆ ನ್ಯಾಯಾಧೀಶರು 14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿದ್ದಾರೆ. ಹೀಗಾಗಿ ಮಡೆನೂರು ಮನು ಪರಪ್ಪನ ಅಗ್ರಹಾರ ಜೈಲಿಗೆ ಹೋಗಲಿದ್ದಾರೆ.
ಮಡೆನೂರು ಮನು ವಿರುದ್ಧ ಫಿಲಂ ಚೇಂಬರ್ಗೆ ದೂರು
ಮಡೆನೂರು ಮನು ಸಿನಿಮಾ ಹೀರೋ ಆಗಿ ಎಂಟ್ರಿ ಕೊಡುವ ಸಮಯದಲ್ಲಿಯೇ ಜೀವನದಲ್ಲಿ ದೊಡ್ಡ ಹೊಡೆತ ಬಿದ್ದಿದೆ. ಅತ್ಯಾಚಾರ, ಲೈಂಗಿಕ ದೌರ್ಜನ್ಯ, ಬೆದರಿಕೆ ಪ್ರಕರಣಗಳು ಮನು ವಿರುದ್ಧ ದಾಖಲಾಗಿದ್ದು, ಪೊಲೀಸರು ಪ್ರಕರಣ ತನಿಖೆ ನಡೆಸುತ್ತಿದ್ದಾರೆ. ಇದರ ಬೆನ್ನಲ್ಲೇ ಮಡೆನೂರು ಅವರದ್ದು ಎನ್ನಲಾದ ಹಳೆಯ ಆಡಿಯೋ ಒಂದು ವೈರಲ್ ಆಗಿದ್ದು, ಆಡಿಯೋನಲ್ಲಿ ಮನು, ಶಿವರಾಜ್ ಕುಮಾರ್, ದರ್ಶನ್, ಧ್ರುವ ಸರ್ಜಾ ಇನ್ನೂ ಕೆಲವು ಸ್ಟಾರ್ ನಟರ ಬಗ್ಗೆ ಅವಹೇಳನಕಾರಿಯಾಗಿ ಬೈಯ್ದಿರುವುದು ದಾಖಲಾಗಿದೆ.
ಮಡೆನೂರು ಮನು ಅವರದ್ದು ಎನ್ನಲಾದ ಆಡಿಯೋ ವೈರಲ್ ಆಗುತ್ತಿದ್ದಂತೆ ಶಿವರಾಜ್ ಕುಮಾರ್ ಅವರ ಅಭಿಮಾನಿಗಳು ಮನು ವಿರುದ್ಧ ಆಕ್ರೋಶ ಹೊರಹಾಕಿದ್ದು, ಫಿಲಂ ಚೇಂಬರ್ಗೆ ಸೋಮವಾರ ದೂರು ದಾಖಲು ಮಾಡಿದ್ದಾರೆ. ಅತ್ಯಾಚಾರ ಆರೋಪ ಸೇರಿದಂತೆ ಹಲವು ಆರೋಪಗಳನ್ನು ಹೊತ್ತಿರುವ ಹಾಗೂ ಚಿತ್ರರಂಗದ ಹಿರಿಯ ನಟರ ಬಗ್ಗೆ ಗೌರವ ಇಲ್ಲದ, ನಟರ ಬಗ್ಗೆ ತುಚ್ಛವಾಗಿ ಮಾತನಾಡಿರುವ ಮನುವನ್ನು ಚಿತ್ರರಂಗದಿಂದ ನಿಷೇಧಿಸಬೇಕೆಂದು ಅಭಿಮಾನಿಗಳು ದೂರು ಸಲ್ಲಿಸಿದ್ದಾರೆ.
ಫಿಲಂ ಚೇಂಬರ್ಗೆ ಮಾತ್ರವೇ ಅಲ್ಲದೆ, ನಿರ್ದೇಶಕರ ಸಂಘ, ನಿರ್ಮಾಪಕರ ಸಂಘಕ್ಕೂ ಸಹ ಮಡೆನೂರು ಮನು ವಿರುದ್ಧ ದೂರು ಸಲ್ಲಿಸಿದ್ದು, ಮೇ 28 ರಂದು ಎನ್ಆರ್ ರಮೇಶ್ ಅವರ ನೇತೃತ್ವದಲ್ಲಿ ಸುದ್ದಿಗೋಷ್ಠಿ ನಡೆಸಿ ಮಡೆನೂರು ಮನು ಅನ್ನು ಚಿತ್ರರಂಗದಿಂದ ಬ್ಯಾನ್ ಮಾಡುವಂತೆ ಒತ್ತಾಯ ಮಾಡುವುದಾಗಿ ನಿರ್ಧರಿಸಿದ್ದಾರೆ.