Bellary Firing: ಜನಾರ್ದನ ರೆಡ್ಡಿ ನೀಚ ರಾಜಕೀಯ ಮಾಡ್ತಿದ್ದಾನೆ: ಶಾಸಕ ಭರತ್ ರೆಡ್ಡಿ ವಾಗ್ದಾಳಿ
ಮೃತ ರಾಜಶೇಖರಗೆ ಸರ್ಕಾರದಿಂದ ಹಾಗೂ ವೈಯಕ್ತಿಕವಾಗಿ ಪರಿಹಾರ ಕೊಡ್ತೇವೆ. ಆಂಧ್ರ ತೆಲಂಗಾಣ ಯಾವ ಕಡೆಯಿಂದಾದ್ರೂ ಜನರನ್ನು ಕರೆಸಲಿ ನಮಗೇನು ಆಗಲ್ಲ. ಜನಾರ್ದನ ರೆಡ್ಡಿ ದ್ವೇಷದ ರಾಜಕೀಯಕ್ಕೆ ಓರ್ವ ಬಲಿಯಾಗಿಯಾದ್ದಾನೆ ಎಂದು ಶಾಸಕ ಭರತ್ ರೆಡ್ಡಿ ಕಿಡಿಕಾರಿದ್ದಾರೆ.
ಬಳ್ಳಾರಿ ಶಾಸಲ ಭರತ್ ರೆಡ್ಡಿ ಮತ್ತು ಜನಾರ್ದನ ರೆಡ್ಡಿ -
ಬಳ್ಳಾರಿ, ಡಿ.2: ಜನಾರ್ದನ ರೆಡ್ಡಿ (Janardhan Reddy) ನೀಚ ರಾಜಕೀಯ ಮಾಡ್ತಿದ್ದಾನೆ. ಅವನ ಮನೆಯ ಮುಂದೆ ಬ್ಯಾನರ್ ಹಾಕಿಲ್ಲ, ಅದು ಸಾರ್ವಜನಿಕ ಸ್ಥಳ. ಬೇಕಂತಲೇ ಜಗಳ ಮಾಡೋ ಉದ್ದೇಶದಿಂದ ತಮ್ಮ ಮನೆಯ ಮುಂದೆ ಬ್ಯಾನರ್ ಹಾಕಿತ್ತು ಎಂದು ರಂಪ ರಾಮಾಯಣ ಮಾಡ್ತಿದ್ದಾನೆ. ವಾಲ್ಮೀಕಿ ಪುತ್ಥಳಿ ಸ್ಥಾಪಿಸುವ ಕಾರ್ಯಕ್ರಮ ನಿಲ್ಲಿಸುವ ಹುನ್ನಾರವಿದೆ. ಆದರೆ ಯಾವುದೇ ಕಾರಣಕ್ಕೂ ಕಾರ್ಯಕ್ರಮ ನಿಲ್ಲುವುದಿಲ್ಲ ಎಂದು ಏಕವಚನದಲ್ಲೇ ಶಾಸಕ ಭರತ್ ರೆಡ್ಡಿ (MLA Bharat Reddy) ವಾಗ್ದಾಳಿ ನಡೆಸಿದ್ದಾರೆ.
ನಗರದಲ್ಲಿ ಶುಕ್ರವಾರ ಮಾತನಾಡಿದ ಅವರು, ನಮ್ಮ ಕಾರ್ಯಕರ್ತನ ಸಾವಾಗಿದೆ. ಆ ನೋವಿನಲ್ಲಿದ್ದೇವೆ. ಅದರೂ ವಾಲ್ಮೀಕಿ ಪುತ್ಥಳಿ ಉದ್ಘಾಟನೆ ಕಾರ್ಯಕ್ರಮ ನಿಲ್ಲೋದಿಲ್ಲ. ಅದ್ಧೂರಿಯಾಗಿ ಮಾಡ್ತೇವೆ, ಹೆಚ್ಚು ಹೆಚ್ಚು ಜನರು ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದರು.
ಮೃತ ರಾಜಶೇಖರಗೆ ಸರ್ಕಾರದಿಂದ ಹಾಗೂ ವೈಯಕ್ತಿಕವಾಗಿ ಪರಿಹಾರ ಕೊಡ್ತೇವೆ. ಆಂಧ್ರ ತೆಲಂಗಾಣ ಯಾವ ಕಡೆಯಿಂದಾದ್ರೂ ಜನರನ್ನು ಕರೆಸಲಿ ನಮಗೇನು ಆಗಲ್ಲ. ಜನಾರ್ದನ ರೆಡ್ಡಿ ದ್ವೇಷದ ರಾಜಕೀಯಕ್ಕೆ ಓರ್ವ ಬಲಿಯಾಗಿಯಾದ್ದಾನೆ. ಘಟನೆ ಬಗ್ಗೆ ಡಿಸಿಎಂ ನನ್ನ ಜತೆಗೆ ಮಾತನಾಡಿದ್ದಾರೆ. ನಮ್ಮ ಜತೆಗೆ ಇರೋ ಭರವಸೆ ನೀಡಿದ್ದಾರೆ ಎಂದು ತಿಳಿಸಿದರು.
ಜನಾರ್ದನ ರೆಡ್ಡಿ ಏನು ಅನ್ನೋದು ಎಲ್ಲರಿಗೂ ಗೊತ್ತಿರೋ ವಿಚಾರ. ಈಗಾಗಲೇ ಒಂದು ಪ್ರಕರಣದಲ್ಲಿ ಶಿಕ್ಷೆಯಾಗಿದೆ. ಇದೀಗ ಗಡಿ ಒತ್ತುವರಿ ಪ್ರಕರಣದಲ್ಲಿಯೂ ಶಿಕ್ಷೆಯಾಗಲಿದೆ. ಈ ವಿಚಾರ ಮರೆಮಾಚಲು ಈ ರೀತಿಯಲ್ಲಿ ಗಲಾಟೆ ಮಾಡ್ತಿದ್ದಾರೆ ಎಂದು ತಿಳಿಸಿದರು.
ಜನಾರ್ದನ ರೆಡ್ಡಿ ಸೇರಿ ಹತ್ತಕ್ಕೂ ಹೆಚ್ಚು ಜನರ ವಿರುದ್ಧ ಪ್ರಕರಣ
ಬಳ್ಳಾರಿಯಲ್ಲಿ (Bellary Firing) ನಿನ್ನೆ ರಾತ್ರಿ ನಡೆದ ಗುಂಪುಗಲಭೆ, ಫೈರಿಂಗ್ನಲ್ಲಿ ಕಾಂಗ್ರೆಸ್ ಕಾರ್ಯಕರ್ತನೊಬ್ಬ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕರಾದ ಜನಾರ್ದನ ರೆಡ್ಡಿ (Janardhana reddy), ಶ್ರೀರಾಮುಲು (Sriramulu) , ಸೋಮಶೇಖರ್ ರೆಡ್ಡಿ ಸೇರಿದಂತೆ ಹತ್ತಕ್ಕೂ ಹೆಚ್ಚು ಜನರ ವಿರುದ್ಧ ಪ್ರಕರಣ ದಾಖಲು ಮಾಡಲಾಗಿದೆ. ಕಾಂಗ್ರೆಸ್ ಕಾರ್ಯಕರ್ತ ರಾಜಶೇಖರ್ಗೆ ತಾಗಿದ ಬುಲೆಟ್ ಸರ್ಕಾರಿ ಗನ್ಮ್ಯಾನ್ದಲ್ಲ, ಅದು ಖಾಸಗಿ ಗನ್ ಮ್ಯಾನ್ನದ್ದು ಎಂದು ಎಸ್ಪಿ ರಂಜಿತ್ ಕುಮಾರ್ ಖಚಿತಪಡಿಸಿದ್ದಾರೆ.
ಶಾಸಕ ಭರತ್ ರೆಡ್ಡಿ ಆಪ್ತ ಚಾನಾಳ್ ಶೇಖರ್ ನೀಡಿದ ದೂರಿನನ್ವಯ ಪ್ರಕರಣ ದಾಖಲು ಮಾಡಲಾಗಿದೆ. ಬ್ಯಾನರ್ ಹಾಕುವ ವಿಚಾರದಲ್ಲಿ ಗಲಾಟೆ ಮಾಡಿದ್ದಾರೆ. ಹಾಕಿರುವ ಬ್ಯಾನರ್ ಕಿತ್ತು ಹಾಕಿ ಬೈದು ದೌರ್ಜನ್ಯ ಮಾಡಿದ್ದಾರೆ. ಗುಂಪು ಗುಂಪಾಗಿ ಕಲ್ಲು, ಕಟ್ಟಿಗೆ, ಮಚ್ಚು ಮತ್ತು ಸೋಡ ಬಾಟಲಿ ಹಿಡಿದುಕೊಂಡು ಬಂದು ದಾಳಿ ಮಾಡಿದ್ದಾರೆ ಎಂದು ಬ್ರೂಸ್ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ. ಜನಾರ್ದನ ರೆಡ್ಡಿ, ಸೋಮಶೇಖರ್ ರೆಡ್ಡಿ, ಶ್ರೀರಾಮುಲು, ಮೋತ್ಕರ್ ಶ್ರೀನಿವಾಸ್, ಪ್ರಕಾಶ್ ರೆಡ್ಡಿ, ರಮಣ, ಪಾಲಣ್ಣ, ದಿವಾಕರ್, ಮಾರುತಿ ಪ್ರಸಾದ್, ದಮ್ಮೂರ್ ಶೇಖರ್, ಅಲಿಖಾನ್ ಆರೋಪಿತರಾಗಿದ್ದಾರೆ.
ರಾಜಶೇಖರ್ಗೆ ತಾಗಿದ ಬುಲೆಟ್ ಸರ್ಕಾರಿ ಗನ್ ಮ್ಯಾನ್ನದ್ದಲ್ಲ. ಬುಲೆಟ್ ಹಾರಿದ್ದು ಖಾಸಗಿ ಗನ್ ಮ್ಯಾನ್ನ ರಿವಾಲ್ವರ್ನಿಂದ ಎಂದು ಘಟನಾ ಸ್ಥಳದ ಉಸ್ತುವಾರಿ ಎಸ್ಪಿ ರಂಜಿತ್ ಕುಮಾರ್ ಖಚಿತ ಪಡಿಸಿದ್ದಾರೆ. ನಿನ್ನೆ ಗಲಾಟೆ ವೇಳೆ ರಾಜಶೇಖರ್ ಸಾವಾಗಿದೆ. ಅದು ಪೊಲೀಸರು ಫೈರ್ ಮಾಡಿದಾಗ ತಗುಲಿರುವ ಬುಲೆಟ್ ಅಲ್ಲ. ಅದು ಖಾಸಗಿ ರಿವಾಲ್ವರ್ ಬುಲೆಟ್. ಇದರ ಬಗ್ಗೆ ತನಿಖೆ ಮಾಡ್ತೇವೆ, ಮಾಹಿತಿ ಸಂಗ್ರಹಿಸುತ್ತಿದ್ದೇವೆ. ಸಿಸಿ ಕ್ಯಾಮರಾಗಳ ಪರಿಶೀಲನೆಯನ್ನೂ ಮಾಡುತ್ತೇವೆ. ಘಟನೆಗೆ ಸಂಬಂಧಿಸಿದಂತೆ ಈಗಾಗಲೇ ಭರತ್ ರೆಡ್ಡಿ ಬೆಂಬಲಿಗರು ನಾಲ್ಕು ಕೇಸ್ ದಾಖಲಿಸಿದ್ದಾರೆ ಎಂದು ರಂಜಿತ್ ಕುಮಾರ್ ತಿಳಿಸಿದ್ದಾರೆ.