ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಬೆಂಗಳೂರಿನ ಉತ್ತರ, ದಕ್ಷಿಣದಲ್ಲಿ 2 ವೈಜ್ಞಾನಿಕ ಕಸ ವಿಲೇವಾರಿ ಘಟಕ ಸ್ಥಾಪನೆ: ಡಿ.ಕೆ.ಶಿವಕುಮಾರ್‌

Waste Management unit: ಬೆಂಗಳೂರು ನಗರದ ನಾಲ್ಕು ಭಾಗದಲ್ಲೂ ವೈಜ್ಞಾನಿಕ ಕಸ ವಿಲೇವಾರಿ ಮಾಡಬೇಕು ಎಂದು ಪ್ರಯತ್ನ ಮಾಡಲಾಗುತ್ತಿದೆ. ಕಸದಿಂದ ಗ್ಯಾಸ್‌, ಬಯೋ ಗ್ಯಾಸ್‌ ಉತ್ಪಾದನೆ ಬಗ್ಗೆ ಹೆಚ್ಚು ಗಮನ ಹರಿಸುತ್ತಿದ್ದೇವೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್‌ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ 2 ವೈಜ್ಞಾನಿಕ ಕಸ ವಿಲೇವಾರಿ ಘಟಕ ಸ್ಥಾಪನೆ

ಬೆಳಗಾವಿ ಅಧಿವೇಶನದಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್‌. -

Prabhakara R
Prabhakara R Dec 9, 2025 6:28 PM

ಬೆಳಗಾವಿ, ಡಿ.09: “ಜಿಬಿಎ ವ್ಯಾಪ್ತಿಯಲ್ಲಿ ಸಂಗ್ರಹವಾಗುವ ಕಸವನ್ನು ಸಂಸ್ಕರಿಸಲು ನಗರದ ಉತ್ತರ ಹಾಗೂ ದಕ್ಷಿಣ ದಿಕ್ಕುಗಳಲ್ಲಿ ಎರಡು ಘಟಕಗಳನ್ನು (Waste Management unit) ಸ್ಥಾಪಿಸಲಾಗುವುದು. ಹೊಸ ತಂತ್ರಜ್ಞಾನದ ಮೂಲಕ ವೈಜ್ಞಾನಿಕವಾಗಿ ಕಸ ವಿಲೇವಾರಿ ಮಾಡಲಾಗುವುದು” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್‌ ತಿಳಿಸಿದರು. ದೊಡ್ಡಬಳ್ಳಾಪುರ ವ್ಯಾಪ್ತಿಯಲ್ಲಿ ಈ ಹಿಂದೆ ಮುಚ್ಚಿರುವ ಕಸ ಸಂಗ್ರಹಗಾರವನ್ನ ಸ್ಥಳಾಂತರಿಸಬೇಕು ಎನ್ನುವ ಶಾಸಕ ಧೀರಜ್‌ ಮುನಿರಾಜು ಅವರ ಪ್ರಶ್ನೆಗೆ ಅಧಿವೇಶನದಲ್ಲಿ (Karnataka Winter Session) ಡಿಸಿಎಂ ಅವರು ಉತ್ತರಿಸಿದರು.

“ದೊಡ್ಡಬಳ್ಳಾಪುರ ತಾಲೂಕಿನ ದೊಡ್ಡಬೆಳವಂಗಲ ಹೋಬಳಿ, ಗುಂದಲಹಳ್ಳಿಯಲ್ಲಿ ಒಟ್ಟು 134.10 ಎಕರೆ ಹಾಗೂ ಬೆಂಗಳೂರು ದಕ್ಷಿಣ ತಾಲೂಕಿನ ಉತ್ತರಹಳ್ಳಿ ಹೋಬಳಿಯ ಗೊಲ್ಲಹಳ್ಳಿಯಲ್ಲಿ 84.14 ಎಕರೆ ಹಾಗೂ 31.14 ಎಕರೆ ಪ್ರದೇಶವನ್ನು ನಿಗದಿಪಡಿಸಲಾಗಿದೆ” ಎಂದು ಹೇಳಿದರು.

“ಯಶವಂತಪುರ ವಿಧಾನಸಭಾ ಕ್ಷೇತ್ರದಲ್ಲಿ ಸುಮಾರು 26 ಎಕರೆ ಪ್ರದೇಶದಲ್ಲಿ ವೈಜ್ಞಾನಿಕ ಕಸ ವಿಲೇವಾರಿ ಘಟಕವನ್ನು ಪ್ರಾರಂಭ ಮಾಡಲಾಗಿದೆ. ನಗರದ ನಾಲ್ಕು ಭಾಗದಲ್ಲೂ ವೈಜ್ಞಾನಿಕ ಕಸ ವಿಲೇವಾರಿ ಮಾಡಬೇಕು ಎಂದು ಪ್ರಯತ್ನ ಮಾಡುತ್ತಿರುವೆ. ಕಸದಿಂದ ಗ್ಯಾಸ್‌, ಬಯೋ ಗ್ಯಾಸ್‌ ಉತ್ಪಾದನೆ ಬಗ್ಗೆ ಹೆಚ್ಚು ಗಮನ ಹರಿಸುತ್ತಿದ್ದೇವೆ” ಎಂದರು.

ಸಂಸತ್ತಿನಲ್ಲಿ ಕಾವೇರಲಿರುವ ಚುನಾವಣಾ ಆಯೋಗದ ಎಸ್‌ಐಆರ್‌ ಪ್ರಕ್ರಿಯೆ!

ಕಸ ವಿಲೇವಾರಿಯಿಂದ ತೊಂದರೆಯಿಲ್ಲ; ರೈತರ ಮನವೊಲಿಸಿ

ಕಸ ವಿಲೇವಾರಿ ಘಟಕ ಮತ್ತೆ ತೆರೆದರೆ ಜನರ ವಿರೋಧಕ್ಕೆ ಕಾರಣವಾಗುತ್ತದೆ ಎಂದು ಶಾಸಕ ಧೀರಜ್‌ ಮುನಿರಾಜು ಅವರು ಹೇಳಿದಾಗ, “ಈಗ ತಂತ್ರಜ್ಞಾನ ಮುಂದುವರಿದಿದೆ. ಜನರಿಗೆ ಮನವರಿಕೆ ಮಾಡಿ ನಾನು ಬರುತ್ತೇನೆ. ಈ ಘಟಕಗಳನ್ನು ನಗರದ ನಾಲ್ಕೈದು ಕಡೆ ಮಾಡುತ್ತೇವೆ. ಇದರಿಂದ ಯಾರಿಗೂ ತೊಂದರೆಯಾಗುವುದಿಲ್ಲ. ಇದೇ ರೀತಿಯ ಘಟಕವನ್ನು ನಾನು ಕನಕಪುರದಲ್ಲಿಯೂ ತೆರೆಯಲು ಹೊರಟಿದ್ದೇನೆ. ಬಿಡದಿಯಲ್ಲಿಯೂ ಮಾಡುತ್ತಿದ್ದೇವೆ, ನಗರದ ಒಳಭಾಗದಲ್ಲಿ, ದಾಸರಹಳ್ಳಿ, ರಾಮಲಿಂಗಾರೆಡ್ಡಿ ಅವರ ಕ್ಷೇತ್ರದಲ್ಲಿಯೂ ಸಣ್ಣ ಪ್ರಮಾಣದಲ್ಲಿ ಕೆಲಸ ಮಾಡಲಾಗುತ್ತಿದೆ” ಎಂದರು.

ಬ್ಲ್ಯಾಕ್‌ ಸೋಲ್ಜರ್‌ ಫ್ಲೈ ಬಳಸಿ ಕಸದಿಂದ ಗೊಬ್ಬರ

“ಬೆಂಗಳೂರಿನ ಸುತ್ತಲಿನ ಪ್ರದೇಶದ ಕಸ ಸೇರಿ 2,500 ಟನ್‌ ಸೇರಿ ನಗರದಲ್ಲಿ 8 ಸಾವಿರ ಟನ್‌ ಕಸ ಉತ್ಪಾದನೆಯಾಗುತ್ತದೆ ಇದನ್ನು ಎಲ್ಲಿ ಹಾಕುವುದು ಎನ್ನುವುದೇ ದೊಡ್ಡ ಪ್ರಶ್ನೆಯಾಗಿದೆ. ಮಂಗಳೂರಿನಲ್ಲಿ ರೇಷ್ಮೆ ಹುಳ ಮಾದರಿಯ ಬ್ಲ್ಯಾಕ್‌ ಸೋಲ್ಜರ್‌ ಫ್ಲೈ ಬಳಸಿಕೊಂಡು ಕಸವನ್ನು ಗೊಬ್ಬರ ಮಾಡಲಾಗಿದೆ. ಇದು ಕಸವನ್ನು ತಿಂದು ಗೊಬ್ಬರ ಮಾಡುತ್ತದೆ. ಈ ಪ್ರಯೋಗವನ್ನು ಬೆಂಗಳೂರಿನಲ್ಲೂ ಪ್ರಯೋಗಿಸಲಾಗಿವುದು. ಇದರ ಬಗ್ಗೆ ಪ್ರಧಾನಿ ಮೋದಿಯವರು ಸಹ ಎಕ್ಸ್‌ ಮಾಡಿದ್ದರು” ಎಂದರು.

ಕಸದ ಮಾಫಿಯಾ ನಿಯಂತ್ರಣಕ್ಕೆ ಕಾನೂನಿನಲ್ಲಿರುವ ಅವಕಾಶಗಳನ್ನು ನೋಡಲಾಗುವುದು

ಕಸದ ಮಾಫಿಯಾವನ್ನು ಬಗ್ಗುಬಡಿಯಲು ಹೊಸ ಕಾಯ್ದೆ ತನ್ನಿ, ಇದಕ್ಕೆ ವಿರೋಧ ಪಕ್ಷವು ಬೆಂಬಲ ನೀಡುತ್ತದೆ ಎಂದು ಅಶೋಕ್‌ ಅವರು ಹೇಳಿದಾಗ ಅದಕ್ಕೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಅವರು, “ಕಸದ ಮಾಫಿಯಾ ಮಟ್ಟ ಹಾಕಲು ಕಾನೂನಿನಲ್ಲಿ ಏನೆಲ್ಲಾ ಅವಕಾಶವಿದೆ ಎಂಬುದನ್ನು ನೋಡುತ್ತೇನೆ. ಇದರ ಬಗ್ಗೆ ಕ್ರಮ ತಗೆದುಕೊಳ್ಳಲಾಗುವುದು. ಬಿಜೆಪಿ ಸಮಯದಲ್ಲಿ 89 ಪ್ಯಾಕೇಜ್‌ಗಳನ್ನು ಕಸ ವಿಲೇವಾರಿಗೆ ತರಲಾಗಿತ್ತು. ಇದನ್ನು ಜಾರಿಗೆ ತರಲು ಆಗಲೇ ಇಲ್ಲ. ನ್ಯಾಯಾಲಯಕ್ಕೆ ತೆರಳಿದ್ದರು. ಈಗ ಏನೇನೋ ಮಾಡಿ 33 ಪ್ಯಾಕೇಜ್‌ಗಳನ್ನು ತರಲಾಗಿದೆ” ಎಂದರು.

ಮದ್ಯ ಸಂಗ್ರಹಕ್ಕೆ ಪ್ರತ್ಯೇಕ ನೀತಿ ಬೇಕಿದೆ

ಹಳ್ಳಿಗಳಲ್ಲಿ ಅಕ್ರಮ ಮದ್ಯಕ್ಕೆ ಕಡಿವಾಣ ಹಾಕುವಂತೆ ಅಬಕಾರಿ ಸಚಿವರಿಗೆ ಶಾಸಕ ಸಿ.ಬಿ.ಸುರೇಶ್‌ ಬಾಬು ಅವರು ಮನವಿ ಮಾಡಿದರು. ಈ ವೇಳೆ ಶಾಸಕ ಸುರೇಶ್‌ ಬಾಬು ಅವರು ಆನ್‌ ಲೈನ್‌ ಮೂಲಕ ಮದ್ಯ ಮಾರಾಟಕ್ಕೆ ಸರ್ಕಾರ ಚಿಂತನೆ ಮಾಡಬೇಕು ಎಂದು ಅಬಕಾರಿ ಸಚಿವರಾದ ಆರ್‌.ಬಿ ತಿಮ್ಮಾಪುರ ಅವರಿಗೆ ಒತ್ತಾಯಿಸಿದರು. ಈ ವೇಳೆ ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರು ಮಾತನಾಡಿದರು.

“ಮನೆಗಳಲ್ಲೂ ಏಳೆಂಟು ಬಾಟಲ್‌ಗಳಿಗಿಂತ ಹೆಚ್ಚು ಮದ್ಯ ಸಂಗ್ರಹ ಮಾಡಬಾರದು ಎನ್ನುವ ನಿಯಮವಿದೆ. ಮನೆಗೆ ಬಂದವರೆಲ್ಲಾ ಒಂದೊಂದು ಬಾಟಲ್‌ ನೀಡುತ್ತಿರುತ್ತಾರೆ. ಆದಾಯ ತೆರಿಗೆ ಇಲಾಖೆ ಸೇರಿದಂತೆ ಅನೇಕರು ಬಂದು ಇದಕ್ಕೂ ಒಂದು ಕೇಸ್‌ ದಾಖಲು ಮಾಡುತ್ತಿದ್ದಾರೆ. ಆದ ಕಾರಣಕ್ಕೆ ಮನೆಯಲ್ಲಿ ಸಂಗ್ರಹ ಮಾಡುವುದಕ್ಕೂ ಪ್ರತ್ಯೇಕ ಅಧಿಕೃತ ಮುದ್ರೆ ಒತ್ತುವ ಬಗ್ಗೆ ಚರ್ಚೆ ನಡೆಸಬೇಕಿದೆ” ಎಂದರು

“ಅಮೆಜಾನ್‌, ಸ್ವಿಗ್ಗಿ ಸೇರಿದಂತೆ ಅನೇಕ ಕಂಪೆನಿಗಳು ತರಕಾರಿ, ಮಾತ್ರೆ ಸೇರಿ ಅಗತ್ಯ ವಸ್ತುಗಳನ್ನು ಫೋನ್‌ ಮಾಡಿದರೆ ಸಾಕು ಮನೆ ಬಾಗಿಲಿಗೆ ತಂದುಕೊಡುತ್ತಾರೆ. ಇವರುಗಳೇ ಲಿಕ್ಕರ್‌ ಶಾಪ್‌ಗಳಿಗೆ ತೆರಳಿ ಮದ್ಯ ತಂದುಕೊಡುವುದಿಲ್ಲ ಎನ್ನುವುದಕ್ಕೆ ಏನು ಗ್ಯಾರಂಟಿಯಿದೆ. ಇದರ ಬಗ್ಗೆ ನಾನೂ ಎಷ್ಟೋ ಕಡೆ ಕೇಳಿದ್ದೇನೆ. ಇದರ ಬಗ್ಗೆ ಮುಖ್ಯಮಂತ್ರಿಯವರಿಗೂ ಒಮ್ಮೆ ಹೇಳುತ್ತಿದ್ದೆ” ಎಂದರು.

“ಕರಾವಳಿ ಭಾಗದ ಒಂದಷ್ಟು ಕಡೆ ಬಾರ್‌ಗಳಿಗೆ ಅನುಮತಿ ನೀಡುತ್ತಿಲ್ಲ. ಆದರೂ ಅಲ್ಲೆಲ್ಲಾ ಬಿಯರ್‌ಗಳನ್ನು ಮಾರಾಟ ಮಾಡಲಾಗುತ್ತಿದೆ. ಕಳ್ಳತನವಾಗಿ ಬೀಚ್‌ಗಳಲ್ಲಿ ಮಾರಾಟ ಮಾಡುವ ಬದಲು ಅಧಿಕೃತವಾಗಿ ಅನುಮತಿ ನೀಡುವುದು ಒಳ್ಳೆಯದು” ಎಂದು ತಿಳಿಸಿದರು.

ರೌಂಡ್‌ ರಾಬಿನ್‌ ಪದ್ಧತಿ ರದ್ದು

“ಖಾತೆ ವಿಲೇವಾರಿಗೆ ತಂದಿದ್ದ ರೌಂಡ್‌ ರಾಬಿನ್‌ ಪದ್ಧತಿಯನ್ನು ರದ್ದು ಮಾಡಲಾಗಿದೆ. ಜಿಬಿಎ ವ್ಯಾಪ್ತಿಯಲ್ಲಿ ಇ-ಖಾತೆ ಹಂಚಿಕೆಗೆ 6,450 ಅರ್ಜಿಗಳು ಮಾತ್ರ ಬಾಕಿಯಿರುವ ಕಾರಣಕ್ಕೆ ಹಳೆ ಪದ್ಧತಿಯಲ್ಲಿಯೇ ಅರ್ಜಿಗಳನ್ನು ವಿಲೇವಾರಿ ಮಾಡಲಾಗುವುದು” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್‌ ಅವರು ತಿಳಿಸಿದರು.

ಬೆಂಗಳೂರಿನ ವಾಯು ಮಾಲಿನ್ಯ ನಿಯಂತ್ರಣಕ್ಕೆ ಕ್ರಮ: ಡಿಕೆಶಿ

ವಿಧಾನಸಭೆ ಪ್ರಶ್ನೋತ್ತರ ಕಲಾಪದ ವೇಳೆ ಶಾಸಕ ಗೋಪಾಲಯ್ಯ ಅವರು ಜಿಬಿಎ ವ್ಯಾಪ್ತಿಯಲ್ಲಿ ಇ ಖಾತೆಗಳನ್ನು ನೀಡಲು ತಂದಿರುವ ರೌಂಡ್‌ ರಾಬಿನ್‌ ಪದ್ಧತಿಯಿಂದ ಅನಾನುಕೂಲವಾಗುತ್ತಿರುವುದು ಗಮನಕ್ಕೆ ಬಂದಿದೆಯೇ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, “ಇ ಖಾತೆ ಯೋಜನೆಯಡಿ ಜಿಬಿಎ ವ್ಯಾಪ್ತಿಯಲ್ಲಿ ಒಟ್ಟು 43,382 ಅರ್ಜಿಗಳು ಸಲ್ಲಿಕೆಯಾಗಿದ್ದವು. ಇವುಗಳಲ್ಲಿ 31,274 ಅರ್ಜಿಗಳನ್ನು ವಿಲೇ ಮಾಡಲಾಗಿದೆ. 5,448 ಅರ್ಜಿಗಳನ್ನು ತಿರಸ್ಕರಿಸಲಾಗಿದೆ” ಎಂದರು.