ಬೆಳಗಾವಿ: ಕಳೆದ 14 ವರ್ಷಗಳ ಸುದೀರ್ಘ ಹೋರಾಟದ ನಂತರ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ(VTU) ತನಗೆ ಸೇರಿದ್ದ 700 ಕೋಟಿ ರೂ. ಅಧಿಕ ಕಾರ್ಪಸ್ ನಿಧಿಯನ್ನು ಆದಾಯ ತೆರಿಗೆ ಇಲಾಖೆಯಿಂದ ಮರಳಿ ಪಡೆಯುವಲ್ಲಿ ಯಶಸ್ವಿಯಾಗಿದೆ.
ಆದಾಯ ತೆರಿಗೆ ಪಾವತಿಸುವಂತೆ ಕಳೆದ 2013 ರಲ್ಲಿ ವಿಟಿಯುಗೆ ನೋಟಿಸ್ ನೀಡಿದ್ದ ಐಟಿ ಇಲಾಖೆ ಕೆಲವು ಬ್ಯಾಂಕ್ ಖಾತೆಗಳನ್ನು ಮುಟ್ಟುಗೋಲು ಹಾಕಿಕೊಂಡಿತ್ತು. ಇದರಿಂದ ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕಿದ್ದ ವಿಶ್ವವಿದ್ಯಾಲಯ ನಿರಂತರ ಕಾನೂನು ಹೋರಾಟ ಮಾಡಿದ್ದಲ್ಲದೆ ಕೊನೆಗೂ ನ್ಯಾಯ ದೊರಕಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.
ಸುದೀರ್ಘ ಕಾನೂನು ಹೋರಾಟದ ನಂತರ 700 ಕೋಟಿ ರೂ. ಮೊತ್ತದ ಹಣ ಪಡೆಯುವಲ್ಲಿ ಯಶಸ್ವಿಯಾಗಿರುವ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಸಧ್ಯ ಈ ಹಣವನ್ನು ವಿವಿಯ ಸಿಬ್ಬಂದಿ ವೇತನಕ್ಕೆ ಬಳಕೆ ಮಾಡಲು ನಿರ್ಧರಿಸಿದೆ. 10 ವರ್ಷಗಳ ಅವಧಿಗೆ ರಾಷ್ಟ್ರೀಕೃತ ಬ್ಯಾಂಕ್ ನಲ್ಲಿ ಠೇವಣಿ ಇಡುವ ನಿರ್ಧಾರದ ಜೊತೆಗೆ 11ನೇ ವರ್ಷದಿಂದ ಠೇವಣಿಯಿಂದ ದೊರೆಯುವ ಬಡ್ಡಿ ಆದಾಯವನ್ನು ಸಿಬ್ಬಂದಿಯ ವೇತನ ಪಾವತಿಗೆ ಬಳಸಲು ವಿಶ್ವವಿದ್ಯಾಲಯ ಯೋಜಿಸಿದೆ.'
ಇದನ್ನೂ ಓದಿ: VTU: ಗೇಟ್ಪಾಸ್ ವಿರೋಧಿಸಿ ದಿಢೀರ್ ಪ್ರತಿಭಟನೆಗಿಳಿದ ವಿಟಿಯು ವಿದ್ಯಾರ್ಥಿಗಳು
ಏನಿದು ಪ್ರಕರಣ: ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಸ್ಥಾಪನೆಯಾದಾಗಿನಿಂದ 2013 - 13 ರ ವರೆಗೆ ಸುಮಾರು 250 ಕೋಟಿ ಆದಾಯ ತೆರಿಗೆ ಪಾವತಿಸುವಂತೆ ನೋಟಿಸ್ ನೀಡಿತ್ತು. ಇದಾದ ನಂತರ ವಿವಿಗೆ ಸಂಬಂಧಿಸಿದ ಬ್ಯಾಂಕ್ ಖಾತೆಗಳನ್ನು ಮುಟ್ಟುಗೋಲು ಹಾಕಿಕೊಂಡಿತ್ತು. ಈ ವೇಳೆ ಪರೀಕ್ಷಾ ಶುಲ್ಕ, ಸಂಯೋಜಿತ ಕಾಲೇಜುಗಳ ಶುಲ್ಕ ಹಾಗೂ ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಪ್ರತಿ ವರ್ಷ ಮರುಪಾವತಿಯಾಗಿದ್ದ ಹಣ ಎಲ್ಲವೂ ಬ್ಯಾಂಕ್ ಖಾತೆಯಲ್ಲಿತ್ತು.
ಆದಾಯ ತೆರಿಗೆ ಮುಟ್ಟುಗೋಲು ಹಾಕಿಕೊಂಡ ಬ್ಯಾಂಕ್ ಖಾತೆಯಲ್ಲಿ ಇದ್ದ ಕಾರ್ಪಸ್ ನಿಧಿ ಬಳಸಿಕೊಳ್ಳಲು ಸಾಧ್ಯವಾಗದ ಹಿನ್ನೆಲೆಯಲ್ಲಿ ವಿವಿಗೆ ತೀವ್ರ ಆರ್ಥಿಕ ಸಂಕಷ್ಟ ಎದುರಾಗಿತ್ತು. ಈ ವೇಳೆ 12 (ಎ) ಅಡಿಯಲ್ಲಿ ವಿಶ್ವವಿದ್ಯಾಲಯ ತೆರಿಗೆ ವಿನಾಯತಿ ಪಡೆದಿಲ್ಲ ಎಂಬುದು ಐಟಿ ವಾದವಾಗಿತ್ತು. ಅಷ್ಟೇ ಅಲ್ಲದೆ ಕಾನೂನು ಹೋರಾಟದಲ್ಲಿಯೂ ತಾತ್ಕಾಲಿಕ ಗೆಲುವು ಸಾಧಿಸಿತ್ತು.
ಕೆಲವು ತಿಂಗಳ ಹಿಂದೆ ಕುಲಪತಿ ವಿದ್ಯಾಶಂಕರ್ ಅವರು ವಿಶ್ವವಿದ್ಯಾಲಯದ ಅಧಿಕಾರಿಗಳ ಸಭೆ ಕರೆದು, ಆದಾಯ ತೆರಿಗೆ ಇಲಾಖೆಗೆ ಸಂಬಂಧಿಸಿದ ಎಲ್ಲಾ ಕಡತಗಳನ್ನು ಪರಿಶೀಲಿಸುವಂತೆ ಸೂಚಿಸಿ ದರು. ಜೊತೆಗೆ ನಿರಂತರ ಕಾನೂನು ಹೋರಾಟದ ಫಲವಾಗಿ 700 ಕೋಟಿ ರೂ. ಕಾರ್ಪಸ್ ನಿಧಿ ಮರಳಿ ಪಡೆಯುವಲ್ಲಿ ಯಶಸ್ವಿಯಾಗಿದೆ.
![]()
ಆರ್ ಟಿ ಐ ಮೂಲಕ ಅರ್ಜಿ ಸಲ್ಲಿಸಿದ ವೇಳೆ ವಿಶ್ವವಿದ್ಯಾಲಯವು 1999ರಲ್ಲಿಯೇ 12(ಎ) ಅಡಿಯಲ್ಲಿ ತೆರಿಗೆ ವಿನಾಯಿತಿಗಾಗಿ ಅರ್ಜಿ ಸಲ್ಲಿಸಿದ್ದು ತಿಳಿದುಬಂದಿದೆ. ಈ ಕುರಿತು ಅಗತ್ಯ ದಾಖಲೆಗಳನ್ನು ಸೇರಿಸಿಕೊಂಡು ಕಾನೂನು ಹೋರಾಟದ ಫಲವಾಗಿ ವಿವಿಗೆ ಸೇರಿದ್ದ 700 ಕೋಟಿ ರೂ. ಹಣ ಪಡೆಯುವಲ್ಲಿ ಯಶಸ್ವಿಯಾಗಿದ್ದೇವೆ.
ಪ್ರೊ.ಎಸ್.ವಿದ್ಯಾಶಂಕರ್, ಕುಲಪತಿ, ವಿಟಿಯು