Nelamangala News: ವಿಎಒ ಹಣಕ್ಕೆ ಬೇಡಿಕೆ ಇಡುವ ಹಳೇ ವಿಡಿಯೊ ವೈರಲ್; ಈ ಪ್ರಕರಣಕ್ಕೂ ನಮಗೂ ಸಂಬಂಧವಿಲ್ಲ ಎಂದ ತಹಸೀಲ್ದಾರ್
Nelamangala News: ಗ್ರಾಮ ಆಡಳಿತ ಅಧಿಕಾರಿ, ಪೌತಿ ಖಾತೆ ಮಾಡುವ ವಿಚಾರವಾಗಿ ಆರ್ಐ, ಕೇಸ್ ವರ್ಕರ್, ಶಿರಸ್ತೇದರ್, ತಹಸೀಲ್ದಾರ್ ಸೇರಿ ಮೇಲಧಿಕಾರಿಗಳಿಗೆ ಹಣ ನೀಡಬೇಕು ಎಂದು ಹೇಳಿದ್ದ ವಿಡಿಯೊ ವೈರಲ್ ಆದ ಹಿನ್ನೆಲೆಯಲ್ಲಿ ಈ ಬಗ್ಗೆ ನೆಲಮಂಗಲ ತಹಸೀಲ್ದಾರ್ ಸ್ಪಷ್ಟನೆ ನೀಡಿದ್ದಾರೆ.


ನೆಲಮಂಗಲ: ದೇವನಹಳ್ಳಿಯಲ್ಲಿ ಪ್ರಸ್ತುತ ಕೆಲಸ ಮಾಡುತ್ತಿರುವ ಗ್ರಾಮ ಆಡಳಿತ ಅಧಿಕಾರಿ (ವಿಎಒ) ಅಂಬಳಿ ಪೂಜಾ ಅವರದ್ದು ಎನ್ನಲಾದ ಹಣಕ್ಕೆ ಬೇಡಿಕೆ ಇಡುವ ವಿಡಿಯೊ (Nelamangala News) ತುಂಬ ಹಳೆಯದ್ದಾಗಿದ್ದು, ನನ್ನ ಗಮನಕ್ಕೆ ಬಂದ ತಕ್ಷಣ ಶೋಕಾಸ್ ನೋಟಿಸ್ ನೀಡಿ ಕ್ರಮ ಕೈಗೊಳ್ಳಲಾಗಿದೆ. ವಿಎಒ ಹೊರತುಪಡಿಸಿ ಯಾವ ಅಧಿಕಾರಿಗಳಿಗೂ ಈ ವಿಡಿಯೊಗೂ ಸಂಬಂಧವಿಲ್ಲ ಎಂದು ತಹಸೀಲ್ದಾರ್ ಅಮೃತ್ ಆತ್ರೇಶ್ ಸ್ಪಷ್ಟನೆ ನೀಡಿದರು.
ತಾಲೂಕಿನ ಬೈರಸಂದ್ರ ವೃತ್ತದ ಗ್ರಾಮ ಆಡಳಿತ ಅಧಿಕಾರಿ ಅಂಬಳಿ ಪೂಜಾ ಎಂಬುವವರು ಪೌತಿ ಖಾತೆ ಮಾಡುವ ವಿಚಾರವಾಗಿ ಆರ್ಐ, ಕೇಸ್ ವರ್ಕರ್, ಶಿರಸ್ತೇದಾರ್, ತಹಸೀಲ್ದಾರ್ ಸೇರಿ ಮೇಲಧಿಕಾರಿಗಳಿಗೆ ಹಣ ನೀಡಬೇಕು, ಆದ್ದರಿಂದ ನನಗೆ ಹಣ ಕೊಡಿ ಕೆಲಸ ಮಾಡಿಕೊಡುವೆ ಎಂದು ಮಾತನಾಡಿರುವ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದರಿಂದ ತಹಸೀಲ್ದಾರ್ ಪತ್ರಿಕಾಗೋಷ್ಠಿ ನಡೆಸಿ ಸ್ಪಷ್ಟನೆ ನೀಡಿದರು.
ಅಂಬಳಿ ಪೂಜಾ ವಿಡಿಯೊ ಹಳೆಯದ್ದಾಗಿದ್ದು, ಅದಕ್ಕೂ ನಮಗೂ ಯಾವುದೇ ಸಂಬಂಧವಿಲ್ಲ. ತಾಲೂಕಿನಲ್ಲಿ 300ಕ್ಕೂ ಹೆಚ್ಚು ಕಂದಾಯ ಇಲಾಖೆಯಲ್ಲಿ ಕೆಲಸ ಮಾಡುತ್ತಾರೆ. ಕೆಲವರು ತಪ್ಪುಗಳು ನಮ್ಮ ಗಮನಕ್ಕೆ ಬರುವುದಿಲ್ಲ, ಗಮನಕ್ಕೆ ಬಂದ ತಕ್ಷಣ ನಾವು ಕ್ರಮ ಕೈಗೊಳ್ಳುತ್ತೇನೆ. ಅದೇ ರೀತಿ ವಿವಿ ಪೂಜಾರವರ ಪ್ರಕರಣದಲ್ಲಿಯೂ ಕ್ರಮವಾಗಿದೆ. ಯಾವುದೇ ಅಧಿಕಾರಿಗಳು ಈ ರೀತಿ ವರ್ತನೆ ತೋರಿದರೆ ಮುಲಾಜಿಲ್ಲದೆ ಕ್ರಮಕೈಗೊಳ್ಳಲಾಗುತ್ತದೆ.
ತಿಳಿಯುತ್ತಿದ್ದಂತೆ ನೋಟಿಸ್
ನಾನು ತಹಸೀಲ್ದಾರ್ ಆಗಿ ಬರುವ ಮೊದಲಿನ ವಿಡಿಯೊ ಇರಬೇಕು, ನಾನು ಬಂದ ಕೆಲ ದಿನಗಳ ನಂತರ ಗ್ರಾಮದ ಕೆಲವರು ಒಂದು ಮಾಹಿತಿ ನೀಡಿದರು. ಈಗ 2024 ಜುಲೈ 15ರಂದು ಕಾರಣ ಕೇಳಿ ನೋಟಿಸ್ ನೀಡಿದ್ದೆ. ಸರಿಯಾದ ಉತ್ತರ ನೀಡದ ಪರಿಣಾಮ ಜಿಲ್ಲಾಧಿಕಾರಿಗಳಿಗೆ ಪೂಜಾ ವಿರುದ್ಧ ಕ್ರಮಕೈಗೊಳ್ಳುವಂತೆ ವರದಿ ನೀಡಲಾಗಿತ್ತು. 2025 ಜ.6 ರಂದು ವಿಎಒ ಪೂಜಾ ದೇವನಹಳ್ಳಿಯ ಚನ್ನರಾಯಪಟ್ಟಣಕ್ಕೆ ವರ್ಗಾವಣೆ ಮಾಡಿ ಜಿಲ್ಲಾಧಿಕಾರಿಗಳು ಆದೇಶ ಮಾಡಿದ್ದರು. ಈಗಗಾಲೇ ಆ ಸ್ಥಳಕ್ಕೆ ವಿಎ ಪೂಜಾ ವರ್ಗಾವಣೆ ಆಗಿದ್ದಾರೆ. ವಿಡಿಯೋ ತುಂಬ ಹಳೆಯದ್ದಾಗಿದ್ದು ಈಗಗಾಲೇ ಕ್ರಮ ಕೈಗೊಳ್ಳಲಾಗಿದೆ ಎಂದರು.
ಈ ಸುದ್ದಿಯನ್ನೂ ಓದಿ | T.G.M.C. Bank: ಟಿ.ಜಿ.ಎಂ.ಸಿ ಬ್ಯಾಂಕ್ನಲ್ಲಿ 200 ಕೋಟಿ ಅವ್ಯವಹಾರ ಆರೋಪ; ಎಫ್ಐಆರ್ ದಾಖಲು
ದೂರುದಾರರಿಲ್ಲ
ವಿಡಿಯೊದಲ್ಲಿರುವ ಖಾತೆ ಮಾಡಿಸಲು ಬಂದಿದ್ದ ಮಹಿಳೆ ಅಥವಾ ಅವರ ಕಡೆಯವರು ಇಲ್ಲಿಯವರೆಗೂ ಯಾರೂ ಬಂದು ದೂರು ನೀಡಿಲ್ಲ. ಕೆಲ ಗ್ರಾಮಸ್ಥರು ವಿಡಿಯೊ ವಿಚಾರವಾಗಿ ಗಮನಕ್ಕೆ ತಂದ ತಕ್ಷಣ ಕ್ರಮಕೈಗೊಳ್ಳಲಾಗಿದೆ. ನಮ್ಮ ವ್ಯಾಪ್ತಿಯಲ್ಲಿ ಕ್ರಮ ತೆಗೆದುಕೊಳ್ಳುವ ಕೆಲಸ ಮಾಡಿದ್ದೇವೆ. ಈಗ ದೇವನಹಳ್ಳಿಯಲ್ಲಿ ಕೆಲಸ ಮಾಡುತ್ತಿದ್ದು, ಜಿಲ್ಲಾಧಿಕಾರಿಗಳು ಹೆಚ್ಚಿನ ಕ್ರಮಕ್ಕೆ ಮುಂದಾಗುತ್ತಾರೆ ಎಂದರು.