Bengaluru News: ಸಾವಿನಲ್ಲೂ ಒಂದಾದ ದಂಪತಿ; ಪತಿ ಮೃತಪಟ್ಟ ಸುದ್ದಿ ಕೇಳಿ ಪತ್ನಿ ಆತ್ಮಹತ್ಯೆ
Self Harming: ಬೆಂಗಳೂರಿನಲ್ಲೊಂದು ಹೃದಯವಿದ್ರಾವಕ ಘಟನೆ ನಡೆದಿದ್ದು, ಪತಿ ಮೃತಪಟ್ಟಿರುವ ಸುದ್ದಿ ತಿಳಿದು ಪತ್ನಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಮೃತರನ್ನು 48 ವರ್ಷದ ರಾಜು ಮತ್ತು 42 ವರ್ಷದ ಮೀನಾ ಎಂದು ಗುರುತಿಸಲಾಗಿದೆ. ಬೆಂಗಳೂರಿನ ಮಾದನಾಯಕನಹಳ್ಳಿಯಲ್ಲಿ ಈ ಘಟನೆ ನಡೆದಿದೆ.
ಸಾಂದರ್ಭಿಕ ಚಿತ್ರ. -
ಬೆಂಗಳೂರು, ಫೆ. 7: ಚಿಕಿತ್ಸೆ ಪಡೆಯುತ್ತಿದ್ದ ಪತಿ ಮೃತಪಟ್ಟಿದ್ದಾರೆ ಎಂದು ತಿಳಿಯುತ್ತಲೇ ಪತ್ನಿ ಆತ್ಮಹತ್ಯೆಗೆ (Self Harming) ಶರಣಾಗಿರುವ ಹೃದಯವಿದ್ರಾವಕ ಘಟನೆ ಬೆಂಗಳೂರಿನಲ್ಲಿ ನಡೆದಿದೆ (Bengaluru News). ಮೃತರನ್ನು 48 ವರ್ಷದ ರಾಜು ಮತ್ತು 42 ವರ್ಷದ ಮೀನಾ ಎಂದು ಗುರುತಿಸಲಾಗಿದೆ. ಬೆಂಗಳೂರಿನ ಮಾದನಾಯಕನಹಳ್ಳಿಯಲ್ಲಿ ಈ ಘಟನೆ ನಡೆದಿದ್ದು, ವಿಷಯ ತಿಳಿದು ಸಂಬಂಧಿಕರು ಕಂಬನಿ ಮಿಡಿದಿದ್ದಾರೆ.
ಫೆಬ್ರವರಿ 6ರಂದು ಗ್ಯಾಸ್ ಗೀಸರ್ ಲೀಕ್ ಆಗಿ ರಾಜು ತೀವ್ರ ಅಸ್ವಸ್ಥಗೊಂಡಿದ್ದರು. ಅವರನ್ನು ಪುತ್ರ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ರಾಜು ಮೃತಪಟ್ಟಿದ್ದಾರೆ. ಪತಿ ನಿಧನ ಹೊಂದಿರುವ ಸುದ್ದಿ ತಿಳಿಯುತ್ತಿದ್ದಂತೆ ಮನೆಯಲ್ಲಿಯೇ ಇದ್ದ ಮೀನಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಆ ಮೂಲಕ ದಂಪತಿ ಸಾವಿನಲ್ಲೂ ಜತೆಯಾಗಿದ್ದಾರೆ.
ʼʼಗ್ಯಾಸ್ ಗೀಸರ್ ಲೀಕ್ ಆಗಿ ರಾಜು ಅಸ್ವಸ್ಥರಾದ ಹಿನ್ನೆಲೆಯಲ್ಲಿ ಅವರನ್ನು ಶುಕ್ರವಾರ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮೀನಾ ಮನೆಯಲ್ಲಿಯೇ ಇದ್ದರು. ರಾಜು ಮೃತಪಟ್ಟಿರುವ ವಿಚಾರ ತಿಳಿಯುತ್ತಿದ್ದತೆ ಮೀನಾ ಆಘಾತಕ್ಕೊಳಗಾಗಿದ್ದರು. ಕುಸಿದು ಕೂತಿದ್ದ ಅವರು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ ಎಂದುಕೊಂಡಿರಲಿಲ್ಲ. ಮೃತ ಪತಿಯ ಮುಖವನ್ನೂ ನೋಡದೆ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರಿಬ್ಬರ ಮಧ್ಯೆ ಅಷ್ಟು ಆತ್ಮೀಯತೆ ಇತ್ತು. ಪತಿ ಇರದ ಒಂದು ಕ್ಷಣವನ್ನೂ ಅವರಿಗೆ ಊಹಿಸಲು ಸಾಧ್ಯವಿರಲಿಲ್ಲʼʼ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದಾರೆ. ಸದ್ಯ ದಂಪತಿಯ ಸಾವು ಮನೆಯವರನ್ನು ಶೋಕ ಸಾಗರದಲ್ಲಿ ಮುಳುಗಿಸಿದೆ.
ಬೆದರಿಕೆಗೆ ಅಂಜಿ ಗಂಡ ಆತ್ಮಹತ್ಯೆ; ಆರೋಪಿಗಳನ್ನು ಬಂಧಿಸದ ಪೊಲೀಸರ ವಿರುದ್ಧ ನೊಂದ ಪತ್ನಿ ಆಕ್ರೋಶ
ಹಿಂದೆಯೂ ನಡೆದಿತ್ತು
ಪತಿಯ ಸಾವಿನ ಸುದ್ದಿಯ ಆಘಾತದಿಂದ ಪತ್ನಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೆಲವು ದಿನಗಳ ಹಿಂದೆ ನಡೆದಿತ್ತು. ಅಪಘಾತದಿಂದ ಗಾಯಗೊಂಡ ಪತಿ ಮೃತಪಟ್ಟ ಸುದ್ದಿ ಕೇಳಿ ಮನನೊಂದು ಪತ್ನಿ ನೇಣಿಗೆ ಕೊರಳೊಡ್ಡಿದ ಘಟನೆ ಕಳೆದ ವರ್ಷ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಸುತ್ತಾ ಗ್ರಾಮದಲ್ಲಿ ವರದಿಯಾಗಿತ್ತು. ಶಿಳ್ಳೆಕ್ಯಾತರ ಕ್ಯಾಂಪಿನ ಮಂಜುನಾಥ್ (25) ಮತ್ತು ಅವರ ಪತ್ನಿ ಅಮೃತಾ (21) ಮೃತರು.
2024ರ ಡಿಸೆಂಬರ್ 31ರಂದು ಬೈಕ್ನಲ್ಲಿ ಶಿಕಾರಿಪುರಕ್ಕೆ ಹೋಗುತ್ತಿದ್ದ ಮಂಜುನಾಥ್ ಅಪಘಾತಕ್ಕೊಳಗಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಕೆಲವೇ ದಿನಗಳಲ್ಲಿ ಮೃತಪಟ್ಟರು. ಸುದ್ದಿ ತಿಳಿದ ಅಮೃತಾ ಮನೆಯ ಶೆಡ್ಡಿನ ಜಂತಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದರು. ಅಮೃತಾ ಮೈಸೂರು ಮೂಲದವರಾಗಿದ್ದು, ಮಂಜುನಾಥ್ ಜತೆಗೆ 3 ವರ್ಷಗಳ ಹಿಂದ ಮದುವೆಯಾಗಿತ್ತು.