ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Bengaluru ORR Traffic: ಸಂಚಾರ ದಟ್ಟಣೆ; ವಿಪ್ರೋ ಕ್ಯಾಂಪಸ್‌ನಲ್ಲಿ ಸೀಮಿತ ಸಂಚಾರಕ್ಕೆ ಅನುಮತಿಸಲು ಅಜೀಂ ಪ್ರೇಮ್‌ಜಿಗೆ ಸಿಎಂ ಪತ್ರ

CM Siddaramaiah: ಪೀಕ್‌ ಅವರ್‌ನಲ್ಲಿ ಬೆಂಗಳೂರಿನ ಇಬ್ಲೂರು ಜಂಕ್ಷನ್‌ನಲ್ಲಿರುವ ಹೊರ ವರ್ತುಲ ರಸ್ತೆಯಲ್ಲಿ ಭಾರಿ ಸಂಚಾರ ದಟ್ಟಣೆ ಉಂಟಾಗುತ್ತಿದೆ. ಹೀಗಾಗಿ ವಿಪ್ರೋ ಕ್ಯಾಂಪಸ್‌ ಮೂಲಕ ಸೀಮಿತ ಸಂಚಾರಕ್ಕೆ ಅವಕಾಶ ಮಾಡಿಕೊಡಬೇಕು ಎಂದು ವಿಪ್ರೋ ಮುಖ್ಯಸ್ಥರಿಗೆ ಸಿಎಂ ಮನವಿ ಮಾಡಿದ್ದಾರೆ.

ವಿಪ್ರೋ ಕ್ಯಾಂಪಸ್‌ನಲ್ಲಿ ಸೀಮಿತ ಸಂಚಾರಕ್ಕೆ ಅನುಮತಿಸಲು ಸಿಎಂ ಪತ್ರ

-

Prabhakara R Prabhakara R Sep 23, 2025 3:46 PM

ಬೆಂಗಳೂರು: ರಾಜಧಾನಿಯ ಔಟರ್‌ ರಿಂಗ್ ರೋಡ್‌ನಲ್ಲಿ ವರ್ಷದಿಂದ ವರ್ಷಕ್ಕೆ ಸಂಚಾರ ದಟ್ಟಣೆ ಹೆಚ್ಚಳವಾಗುತ್ತಿದ್ದು, ಇದರಿಂದ ವಾಹನ ಸವಾರರು ಹೈರಾಣಾಗುತ್ತಿದ್ದಾರೆ. ಇನ್ನು ನಗರದ ಸರ್ಜಾಪುರ ಬಳಿಯ ಇಬ್ಲೂರು ಜಂಕ್ಷನ್‌ನ ಹೊರ ವರ್ತುಲ ರಸ್ತೆಯಲ್ಲಿ ತೀವ್ರ ಸಂಚಾರ ದಟ್ಟಣೆ ನಿಯಂತ್ರಣಕ್ಕೆ (Bengaluru ORR Traffic) ಸರ್ಕಾರ ಮುಂದಾಗಿದ್ದು, ಈ ಸಂಬಂಧ ವಿಪ್ರೋ ಮುಖ್ಯಸ್ಥ ಅಜೀಂ ಪ್ರೇಮ್‌ಜಿ ಅವರಿಗೆ ಸಿಎಂ ಸಿದ್ದರಾಮಯ್ಯ ಅವರು ಪತ್ರ ಬರೆದಿದ್ದಾರೆ.

ಪೀಕ್‌ ಅವರ್‌ನಲ್ಲಿ ಇಬ್ಲೂರು ಜಂಕ್ಷನ್‌ನಲ್ಲಿರುವ ಹೊರ ವರ್ತುಲ ರಸ್ತೆಯಲ್ಲಿ ಭಾರಿ ಸಂಚಾರ ದಟ್ಟಣೆ ಉಂಟಾಗುತ್ತಿದೆ. ಹೀಗಾಗಿ ವಿಪ್ರೋ ಕ್ಯಾಂಪಸ್‌ ಮೂಲಕ ಸೀಮಿತ ಸಂಚಾರಕ್ಕೆ ಅವಕಾಶ ಮಾಡಿಕೊಡಬೇಕು ಎಂದು ವಿಪ್ರೋ ಮುಖ್ಯಸ್ಥರಿಗೆ ಸಿಎಂ ಮನವಿ ಮಾಡಿದ್ದಾರೆ. ವಿಪ್ರೋ ಕ್ಯಾಂಪಸ್‌ ಮೂಲಕ ಹಾದು ಹೋಗಲು ವಾಹನಗಳಿಗೆ ಅನುಮತಿ ನೀಡಿದರೆ, ಹೊರ ವರ್ತುಲ ರಸ್ತೆಯಲ್ಲಿ ಶೇ.30 ಸಂಚಾರ ದಟ್ಟಣೆ ಕಡಿಮೆಯಾಗಲಿದೆ ಎಂದು ಅಧಿಕಾರಿಗಳು ಸಲಹೆ ನೀಡಿದ್ದರು. ಹೀಗಾಗಿ ವಿಪ್ರೋ ಮುಖ್ಯಸ್ಥರಿಗೆ ಸಿಎಂ ಪತ್ರ ಬರೆದಿದ್ದಾರೆ.

Bengaluru ORR traffic

ಸಿಎಂ ಪತ್ರದಲ್ಲಿ ಏನಿದೆ?

ಅಜೀಂ ಪ್ರೇಮ್‌ಜಿ ಅವರೇ, ಕರ್ನಾಟಕದ ಐಟಿ ಕ್ಷೇತ್ರ ಪ್ರಗತಿ ಮತ್ತು ಒಟ್ಟಾರೆ ಸಾಮಾಜಿಕ-ಆರ್ಥಿಕ ಅಭಿವೃದ್ಧಿಗೆ ವಿಪ್ರೋದ ನಿರಂತರ ಕೊಡುಗೆಯನ್ನು ಪ್ರಾಮಾಣಿಕವಾಗಿ ಪ್ರಶಂಸಿಸುತ್ತೇನೆ. ಪ್ರಸ್ತುತ ಬೆಂಗಳೂರು ಎದುರಿಸುತ್ತಿರುವ ಪ್ರಮುಖ ಸವಾಲುಗಳಲ್ಲಿ ಟ್ರಾಫಿಕ್‌ ಸಮಸ್ಯೆ ಒಂದು. ವಿಶೇಷವಾಗಿ ಇಬ್ಲೂರು ಜಂಕ್ಷನ್‌ನಲ್ಲಿರುವ ಹೊರ ವರ್ತುಲ ರಸ್ತೆ (ORR) ಕಾರಿಡಾರ್‌ನಲ್ಲಿ ಪೀಕ್ ಅವರ್‌ನಲ್ಲಿ ತೀವ್ರ ಸಂಚಾರ ದಟ್ಟಣೆ ಉಂಟಾಗುತ್ತಿದೆ. ಹೀಗಾಗಿ ಅಗತ್ಯ ಭದ್ರತಾ ಕ್ರಮಗಳಿಗೆ ಒಳಪಟ್ಟು ವಿಪ್ರೋ ಕ್ಯಾಂಪಸ್ ಮೂಲಕ ಸೀಮಿತ ವಾಹನ ಸಂಚಾರಕ್ಕೆ ಅನುಮತಿ ನೀಡಬೇಕಿದೆ. ಇದರಿಂದ ಔಟರ್‌ ರಿಂಗ್‌ ರೋಡ್‌ನ ಪಕ್ಕದ ಪ್ರದೇಶಗಳಲ್ಲಿ, ವಿಶೇಷವಾಗಿ ಪೀಕ್ ಅವರ್‌ನಲ್ಲಿ ಸುಮಾರು ಶೇ.30 ರಷ್ಟು ದಟ್ಟಣೆಯನ್ನು ಕಡಿಮೆ ಮಾಡಬಹುದು. ಈ ವಿಷಯದಲ್ಲಿ ನಿಮ್ಮ ಬೆಂಬಲವು ಸಂಚಾರ ಅಡಚಣೆಗಳನ್ನು ನಿವಾರಿಸಲು ಅನುಕೂಲವಾಗಲಿದೆ. ಈ ಬಗ್ಗೆ ನಿಮ್ಮ ತಂಡವು ನಮ್ಮ ಅಧಿಕಾರಿಗಳೊಂದಿಗೆ ಚರ್ಚಿಸಿ, ಪರಸ್ಪರ ಸ್ವೀಕಾರಾರ್ಹ ಯೋಜನೆಯನ್ನು ರೂಪಿಸಬೇಕು ಎಂದು ಪತ್ರದಲ್ಲಿ ಸಿಎಂ ಮನವಿ ಮಾಡಿದ್ದಾರೆ.



ಈ ಸುದ್ದಿಯನ್ನೂ ಓದಿ | Bengaluru Airport: ಬೆಂಗಳೂರು ಏರ್‌ಪೋರ್ಟ್‌ನಲ್ಲಿ ದಸರಾ ಸಂಭ್ರಮ; ಸೆ.29ರವರೆಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ