Kannada New Movie: ಸುದೀಪ್ ಅಳಿಯ ಸಂಚಿ ಸಿನಿಮಾಗೆ ಅದ್ಧೂರಿ ಮುಹೂರ್ತ; ಕಿಚ್ಚನ ಕುಟುಂಬ ಸಾಥ್
Kannada New Movie: ಕಿಚ್ಚ ಸುದೀಪ್ ಅವರ ಅಕ್ಕನ ಮಗ ಸಂಚಿತ್ ಸಂಜೀವ್ ಹೀರೋ ಆಗಿ ಸ್ಯಾಂಡಲ್ವುಡ್ಗೆ ಅಧಿಕೃತ ಎಂಟ್ರಿ ಕೊಟ್ಟಿದ್ದಾರೆ. ಒಂದೊಳ್ಳೆ ವಿಭಿನ್ನ ಕಾನ್ಸೆಪ್ಟ್ ಸಿನಿಮಾ ಮೂಲಕ ಸಂಚಿ ಚಂದನವನಕ್ಕೆ ಕಾಲಿಟ್ಟಿದ್ದಾರೆ. ಸಂಚಿಗೆ ನಾಯಕಿಯಾಗಿ ಪೆಪೆ ಸಿನಿಮಾ ಖ್ಯಾತಿಯ ನಟಿ ಕಾಜಲ್ ಕುಂದರ್ ಕಾಣಿಸಿಕೊಳ್ಳುತ್ತಿದ್ದಾರೆ. ಈ ಕುರಿತ ವಿವರ ಇಲ್ಲಿದೆ.

ಕಿಚ್ಚ ಸುದೀಪ್ ಅಳಿಯ ಸಂಚಿ ಸಿನಿಮಾಗೆ ಮುಹೂರ್ತ

ಬೆಂಗಳೂರು, ಜ.24, 2025: ಸ್ಯಾಂಡಲ್ವುಡ್ಗೆ ಮತ್ತೊಬ್ಬ ಆರಡಿ ಕಟೌಟ್ನ ಎಂಟ್ರಿಯಾಗಿದೆ. ಕಿಚ್ಚ ಸುದೀಪ್ (Kiccha Sudeep) ಅವರ ಅಕ್ಕನ ಮಗ ಸಂಚಿತ್ ಸಂಜೀವ್ ಹೀರೋ ಆಗಿ ಸ್ಯಾಂಡಲ್ವುಡ್ಗೆ ಅಧಿಕೃತ ಎಂಟ್ರಿ ಕೊಟ್ಟಿದ್ದಾರೆ. ಒಂದೊಳ್ಳೆ ವಿಭಿನ್ನ ಕಾನ್ಸೆಪ್ಟ್ ಸಿನಿಮಾ (Kannada New Movie) ಮೂಲಕ ಸಂಚಿ ಚಂದನವನಕ್ಕೆ ಕಾಲಿಟ್ಟಿದ್ದಾರೆ. ಸಂಚಿಗೆ ನಾಯಕಿಯಾಗಿ ಪೆಪೆ ಸಿನಿಮಾ ಖ್ಯಾತಿಯ ನಟಿ ಕಾಜಲ್ ಕುಂದರ್ ಕಾಣಿಸಿಕೊಳ್ಳುತ್ತಿದ್ದಾರೆ. ಬಸವನಗುಡಿಯ ದೊಡ್ಡ ಗಣಪತಿ ದೇವಸ್ಥಾನದಲ್ಲಿ ನಡೆದ ಮುಹೂರ್ತ ಸಮಾರಂಭದಲ್ಲಿ ಸಂಚಿ ಚೊಚ್ಚಲ ಸಿನಿಮಾಗೆ ಅದ್ದೂರಿ ಚಾಲನೆ ಸಿಕ್ಕಿದೆ. ಅಳಿಯನ ಮೊದಲ ಸಿನಿಮಾಗೆ ವಿಶ್ ಮಾಡಲು ಕಿಚ್ಚ ಸುದೀಪ್ ಕೂಡ ಹಾಜರಿದ್ದು ಕ್ಲ್ಯಾಪ್ ಮಾಡುವ ಮೂಲಕ ಸಿನಿಮಾ ತಂಡಕ್ಕೆ ಶುಭಕೋರಿದರು.
ಅಶ್ವಿನಿ ಪುನೀತ್ ರಾಜ್ಕುಮಾರ್ ಕ್ಯಾಮರಾ ಆನ್ ಮಾಡುವ ಕಿಚ್ಚನ ಅಳಿಯನ ಸಿನಿಮಾಗೆ ಆಲ್ ದಿ ಬೆಸ್ಟ್ ಹೇಳಿದರು. ಇನ್ನು ಸುದೀಪ್ ಅವರ ಇಡೀ ಕುಟುಂಬ ಹಾಜರಿದ್ದು ಮನೆ ಮಗನ ಚೊಚ್ಚಲ ಚಿತ್ರದ ಮುಹೂರ್ತ ಸಮಾರಂಭಕ್ಕೆ ಜತೆಯಾಗಿದ್ದು ವಿಶೇಷವಾಗಿತ್ತು. ಸುದೀಪ್ ಅಕ್ಕ ಹಾಗೂ ನಾಯಕ ಸಂಚಿ ಅವರ ತಾಯಿ, ಸುದೀಪ್ ಅವರ ತಂದೆ ಸರೋವರ್ ಸಂಜೀವ್, ಮಗಳು ಸಾನ್ವಿ ಸೇರಿದಂತೆ ಇಡೀ ಕುಟುಂಬ ಮುಹೂರ್ತ ಸಮಾರಂಭದಲ್ಲಿ ಭಾಗಿಯಾಗಿದ್ದರು.

ಅಂದಹಾಗೆ ಸಂಚಿ ಮೊದಲ ಸಿನಿಮಾಗೆ ವಿವೇಕ ಆಕ್ಷನ್ ಕಟ್ ಹೇಳುತ್ತಿದ್ದಾರೆ. ವಿವೇಕ ಅವರಿಗೂ ಇದು ಮೊದಲ ಸಿನಿಮಾ. ಈ ಮೊದಲು ಬೇರೆ ಬೇರೆ ಭಾಷೆಯ ಸಿನಿಮಾಗಳಲ್ಲಿ ಕೆಲಸ ಮಾಡಿದ್ದ ವಿವೇಕ ಈ ಸಿನಿಮಾ ಮೂಲಕ ಮೊದಲ ಬಾರಿಗೆ ಸ್ವತಂತ್ರ ನಿರ್ದೇಶಕರಾಗಿ ಗುರುತಿಸಿಕೊಳ್ಳುತ್ತಿದ್ದಾರೆ. ಸಂಚಿ ಮೊದಲ ಸಿನಿಮಾಗೆ ಕೆಆರ್ಜಿ ಮತ್ತು ಸುದೀಪ್ ಅವರ ಸುಪ್ರಿಯಾನ್ವಿ ಪ್ರೊಡಕ್ಷನ್ಸ್ ಜಂಟಿಯಾಗಿ ನಿರ್ಮಾಣ ಮಾಡುತ್ತಿರುವುದು ವಿಶೇಷ.
ಪೂಜೆಯ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ನಿರ್ದೇಶಕ ವಿವೇಕ, 'ಇದು ಮೈಸೂರು ಮೂಲದ ಕಥೆ. 2001 ರಿಂದ 2011ರ ವರೆಗೂ ನಡೆಯುವ ಕಥೆಯಾಗಿದೆ. ಈ ಅವಧಿಯಲ್ಲಿ ನಡೆದ ಪ್ರಮುಖ ಘಟನೆಗಳು ಈ ಸಿನಿಮಾದಲ್ಲಿದೆ. ಕಥೆ ಕೇಳಿ ಇಂಪ್ರೆಸ್ ಆದ ಸಂಚಿ ಮೊದಲ ಮೀಟಿಂಗ್ನಲ್ಲೇ ಒಪ್ಪಿಕೊಂಡರು. ಆದರೆ ಸುದೀಪ್ ಅವರಿಗೆ ಕಥೆ ಹೇಳಿದ್ದು ಥ್ರಿಲ್ಲಿಂಗ್ ಅನುಭವʼ ಎಂದರು.

ನಾಯಕಿ ಕಾಜಲ್ ಮಾತನಾಡಿ 'ನನಗೆ ಈ ಅವಕಾಶ ಕೊಟ್ಟಿದ್ದಕ್ಕೆ ಇಡೀ ಸಿನಿಮಾ ತಂಡಕ್ಕೆ ಹಾಗೂ ನಿರ್ದೇಶಕ ವಿವೇಕ ಅವರಿಗೆ ಧನ್ಯವಾದಗಳು. ಸಂಚಿ ಅವರ ಜತೆ ಕೆಲಸ ಮಾಡಲು ಎಕ್ಸಾಯಿಟ್ ಆಗಿದ್ದೀನಿ. ನಮ್ಮ ತಂಡಿದಿಂದ ಉತ್ತಮ ಸಿನಿಮಾ ನಿರೀಕ್ಷೆ ಮಾಡಬಹುದುʼ ಎಂದರು.
ನಟ ಮಯೂರ್ ಪಟೇಲ್ ಮಾತನಾಡಿ, ನನ್ನ ಸಿನಿಮಾ ಜೀವನದಲ್ಲೇ ಮೊದಲ ಬಾರಿಗೆ ಇಂತಹ ಪಾತ್ರ ಮಾಡುತ್ತಿದ್ದೇನೆ ಎಂದರು.
ಹೊಸ ಪ್ರತಿಭೆಯನ್ನು ಲಾಂಚ್ ಮಾಡುತ್ತಿರುವ ಖುಷಿ ಇದೆ. ಕನ್ನಡ ಇಂಡಸ್ಟ್ರಿಗೆ ಅನೇಕ ನಾಯಕರ ಅವಶ್ಯಕತೆ ಇದೆ. ಹಾಗಾಗಿ ಸಂಚಿ ಅವರನ್ನು ಲಾಂಚ್ ಮಾಡುತ್ತಿರುವುದು ಹೆಮ್ಮೆ ಇದೆ. ಸುಪ್ರಿಯಾನ್ವಿ ಪ್ರೊಡಕ್ಷನ್ಸ್ ಜತೆ ಸೇರಿ ಸಿನಿಮಾ ಮಾಡುತ್ತಿರುವುದು ಖುಷಿಯಿದೆ ಎಂದು ನಿರ್ಮಾಪಕ ಯೋಗಿ ಜಿ ರಾಜ್ ಅವರು ಹೇಳಿದರು.
ನಿರ್ಮಾಪಕ ಕಾರ್ತಿಕ್ ಗೌಡ ಮಾತನಾಡಿ, ನಿರ್ದೇಶಕ ವಿವೇಕ ಅವರನ್ನು ಕರೆದುಕೊಂಡು ಬಂದಿದ್ದು ನಟ ಧನಂಜಯ. ಬಳಿಕ ಈ ಕಥೆಯನ್ನು ಸಂಚಿ ಮಾಡಬೇಕು ಅಂತ ಅಂದುಕೊಂಡು ಸುದೀಪ್ ಅವರ ಬಳಿ ಕಥೆ ಹೇಳಿದೆವು. ಬಳಿಕ ಸುದೀಪ್ ಅವರು ಒಪ್ಪಿಕೊಂಡು ಅವರೂ ಕೂಡ ಈ ಸಿನಿಮಾಗಾಗಿ ಸಿಕ್ಕಾಪಟ್ಟೆ ಕೆಲಸ ಮಾಡಿದ್ದಾರೆ ಎಂದರು.
ನಾಯಕ ಸಂಚಿತ್ ಸಂಜೀವ್ ಮಾತನಾಡಿ, ಸಿನಿಮಾ ಕಥೆ ಕೇಳಿದ ಪ್ರಾರಂಭದಲ್ಲೇ ಇಂಪ್ರೆಸ್ ಆದೆ. ಈ ಸಿನಿಮಾ ಮೂಲಕ ನಾನು ಅದ್ಭುತವಾದ ಮೈಸೂರು ಸಿಟಿಗೆ ಮತ್ತಷ್ಟು ಹತ್ತಿರವಾಗುತ್ತಿದ್ದೇನೆ. ಕಥೆ ತುಂಬಾ ವಿಭಿನ್ನವಾಗಿದೆ. ಧನಂಜಯ ಅವರಿಗೆ ತುಂಬಾ ಧನ್ಯವಾದ ಹೇಳಲೇಬೇಕು. ಈ ಸಿನಿಮಾಗೆ ನನ್ನ ಹೆಸರನ್ನು ಸೂಚಿಸಿದ್ದೇ ಅವರು. ಬಳಿಕ ಕಾರ್ತಿಕ್ ಮತ್ತು ಯೋಗಿ ಅವರು ನನ್ನ ಮೇಲೆ ನಂಬಿಕೆ ಇಟ್ಟು ನನಗೆ ಸಿನಿಮಾ ಮಾಡುತ್ತಿದ್ದಾರೆ. ಆ ನಂಬಿಕೆ ನಾನು ಉಳಿಸಿಕೊಳ್ಳುತ್ತೇನೆ. ಸುಪ್ರಿಯಾನ್ವಿ ಪ್ರೊಡಕ್ಷನ್ಸ್ನಿಂದ ಇದು ಮೊದಲ ಸಿನಿಮಾ. ಕನ್ನಡದಲ್ಲಿ ನಡೆಯುತ್ತಿರುವ ಈ ಕೊಲಬ್ರೇಷನ್ ತುಂಬಾ ಖುಷಿಯಾಗುತ್ತದೆ ಎಂದರು.
ಈ ಸುದ್ದಿಯನ್ನೂ ಓದಿ | Republic Day Saree Fashion 2025: ಗಣರಾಜ್ಯೋತ್ಸವ ಸಂಭ್ರಮಕ್ಕೆ ಬಂತು ವೈವಿಧ್ಯಮಯ ಕಾಟನ್ ಮಿಕ್ಸ್ ಸೀರೆಗಳು
ಇದು ಮೈಸೂರು ಮೂಲದ ಕ್ರೈಂ ಥ್ರಿಲ್ಲರ್ ಸ್ಟೋರಿಯಾಗಿದೆ. ಈ ಸಿನಿಮಾದ ಫಸ್ಟ್ ಲುಕ್ ಮತ್ತು ಟೈಟಲ್ ಸಂಚಿ ಹುಟ್ಟುಹಬ್ಬಕ್ಕೆ ಅಂದರೆ ಫೆಬ್ರವರಿ 5ಕ್ಕೆ ರಿವೀಲ್ ಮಾಡಲು ಪ್ಲಾನ್ ಮಾಡಿಕೊಂಡಿದೆ ಸಿನಿಮಾತಂಡ. ಇನ್ನೂ ಸಿನಿಮಾದಲ್ಲಿ ನಟ ಮಯೂರ್ ಪಟೇಲ್, ವಿಜಯ ರಾಘವೇಂದ್ರ ಅವರ ಅಕ್ಕನ ಮಗ ಜೇಯ್, ಬಿಗ್ ಬಾಸ್ ಖ್ಯಾತಿಯ ಹಂಸ, ಮಾಲಾಶ್ರೀ ಸೇರಿದಂತೆ ದೊಡ್ಡ ತಾರಾಬಳಗವೇ ಇದೆ. ಚಿತ್ರಕ್ಕೆ ಚರಣ್ ರಾಜ್ ಸಂಗೀತ, ಶೇಖರ್ ಚಂದ್ರ ಅವರ ಛಾಯಾಗ್ರಾಹಣ, ವಿಶ್ವಾಸ್ ಆರ್ಟ್ ವರ್ಕ್ ಚಿತ್ರಕ್ಕಿದೆ.