ಬೆಂಗಳೂರು: ಪರಪ್ಪನ ಅಗ್ರಹಾರ ಜೈಲಿನಲ್ಲಿ ( Parappana Agrahara Jail) ಸಿಸಿಬಿ ಪೊಲೀಸರು ನಡೆಸಿದ್ದ ದಾಳಿ ವೇಳೆ ಅತ್ಯಾಚಾರ ಕೇಸ್ನಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ಪ್ರಜ್ವಲ್ ರೇವಣ್ಣ (Prajwal Revanna) ಬಳಿ ಆಂಡ್ರಾಯ್ಡ್ ಫೋನ್ ಪತ್ತೆಯಾಗಿತ್ತು. ಜೈಲಿನಲ್ಲಿ ಪ್ರಜ್ವಲ್ಗೆ ರಾಜಾತಿಥ್ಯ ದೊರಕುತ್ತಿರುವುದು ಇದೀಗ ಬಟಾಬಯಲಾಗಿದೆ. ರೇಡ್ ವೇಳೆ ಪ್ರಜ್ವಲ್ ಬ್ಯಾರಕ್ನಲ್ಲಿದ್ದ ಬಟ್ಟೆಗಳ ನಡುವೆ ಮೊಬೈಲ್, ಸ್ಯಾನ್ಡಿಸ್ಕ್ ಪೆನ್ಡ್ರೈವ್, ಚಾರ್ಜರ್ ಹಾಗೂ ನೀಲಿ ಬಣ್ಣದ ಪಾಕೆಟ್ ನೋಟ್ಬುಕ್ ಪತ್ತೆಯಾಗಿದೆ. ಪ್ರಜ್ವಲ್ ರೇವಣ್ಣ ಅವರ ಬ್ಯಾರಕ್ನಲ್ಲಿ ಬಟ್ಟೆಗಳ ಮಧ್ಯೆಯೇ ಮೊಬೈಲ್ ಇತ್ತು. ಆ ಮೊಬೈಲ್ನ್ನ ಪೊಲೀಸರು ವಶಪಡಿಸಿಕೊಂಡಿದ್ದರು.
ಅಷ್ಟೇ ಅಲ್ಲದೇ ಫೋನ್ ಹಿಡಿದುಕೊಂಡು ಪ್ರಜ್ವಲ್ ಮಾತನಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಜೈಲಿನ ಸೆಲ್ನಲ್ಲಿ ಪ್ರಜ್ವಲ್ ರೇವಣ್ಣ ಮಾತನಾಡಿರುವ ವಿಡಿಯೋ ಬಿಡುಗಡೆಯಾಗಿದೆ. ಹೊರಗಡೆ ಬಾ, ನಾನು ಅವರಿಗೆ ಫೋನ್ ಮಾಡಿಲ್ಲ. ನೀನು ಹೇಳಿದ ಮೇಲೆ ಮೊನ್ನೆ ಮಾಡಿದ್ದೆ. ಅತ್ತುಕೊಂಡು ಕೂತಿದ್ದರು ನೀನು ಫೋನ್ ಮಾಡಿಲ್ಲ. ಏನ್ ಮಾಡುತ್ತಿದ್ದೆ ಎಂದು ಫೋನ್ನಲ್ಲಿ ಪ್ರಜ್ವಲ್ ರೇವಣ್ಣ ಸಂಭಾಷಣೆ ನಡೆಸಿದ್ದಾರೆ. ಆದರೆ, ಅಪರಾಧಿ ಪ್ರಜ್ವಲ್ ರೇವಣ್ಣ ಜೈಲಿನಲ್ಲಿ ಯಾರ ಬಳಿ ಮಾತನಾಡಿದ್ದಾರೆ ಎನ್ನುವುದನ್ನು ಪತ್ತೆ ಹಚ್ಚಬೇಕಿದೆ.
ವಿಡಿಯೋ ನೋಡಿ
ಕರ್ತವ್ಯ ಲೋಪ ಹಿನ್ನೆಲೆ ಅಸಿಸ್ಟೆಂಟ್ ಸೂಪರಿಂಟೆಂಡೆಂಟ್ ಈರಣ್ಣ ಅನ್ನೋರನ್ನ ಸಸ್ಪೆಂಡ್ ಮಾಡಲಾಗಿದೆ. ಅಷ್ಟೇ ಅಲ್ಲದೆ, ಜೈಲು ಎಸ್ಪಿ ಅನ್ಶುಕುಮಾರ್ಗೂ ಡಿಜಿಪಿ ಅಲೋಕ್ ಕುಮಾರ್ ನೋಟಿಸ್ ಜಾರಿ ಮಾಡಿದ್ದಾರೆ. ಕರ್ತವ್ಯ ಲೋಪಕ್ಕೆ ಕಾರಣ ನೀಡುವಂತೆ ಸೂಚಿಸಿದ್ದಾರೆ. ಸದ್ಯ ಪ್ರಜ್ವಲ್ನನ್ನು ವಿಐಪಿ ಬ್ಯಾರಕ್ನಿಂದ ಜನರಲ್ ಬ್ಯಾರಕ್ಗೆ ಸ್ಥಳಾಂತರಿಸಲಾಗಿದೆ ಎಂದು ತಿಳಿದು ಬಂದಿದೆ.
ನಟ ದರ್ಶನ್ ಇರುವ ಬ್ಯಾರಕ್ ಕೂಡ ಶೋಧಿಸಲಾಗಿದೆ. ಆದರೆ ಮೊಬೈಲ್ ಮತ್ತು ಇತರ ಯಾವುದೇ ನಿಷೇಧಿತ ವಸ್ತುಗಳು ಪತ್ತೆಯಾಗಿಲ್ಲ. ಈ ಹಿಂದೆ ದರ್ಶನ್ ಅವರು ಅಲ್ಲಿನ ಸಹಚರ ಕೈದಿಗಳ ಜೊತೆ, ಸಿಗರೇಟ್ ಸೇದುತ್ತ ಕುಳಿತ ವಿಡಿಯೊ ವೈರಲ್ ಆಗಿತ್ತು. ಅದಾದ ಮೇಲೆ ಅವರನ್ನ ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡಲಾಗಿತ್ತು.