ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ರಾಜ್ಯದ ಯುವ ಉದ್ಯಮಿ ಕೌಶಿಕ್‌ ಮುದ್ದಾಗೆ ರಾಷ್ಟ್ರಪತಿ, ಪ್ರಧಾನಿ ಮೋದಿ ಅಭಿನಂದನೆ

ಗಣರಾಜ್ಯೋತ್ಸವ ಆಚರಣೆಯ ಸಂದರ್ಭದಲ್ಲಿ ರಾಷ್ಟ್ರಪತಿ ಭವನದಲ್ಲಿ ನಡೆದ ಔತಣಕೂಟದಲ್ಲಿ ರಾಜ್ಯದ ಯುವ ಉದ್ಯಮಿ ಹಾಗೂ ಎಥೆರಿಯಲ್‌ ಮಿಷನ್ಸ್‌ ಕಂಪನಿಯ ಸಹ ಸಂಸ್ಥಾಪಕ ಕೌಶಿಕ್‌ ಮುದ್ದಾ ಭಾಗವಹಿಸಿದ್ದರು. ವಿಜ್ಞಾನ ಮತ್ತು ತಂತ್ರಜ್ಞಾನ ವಲಯದಲ್ಲಿ ಮಾಡಿರುವ ಸಾಧನೆಯನ್ನು ಪರಿಗಣಿಸಿ ರಾಷ್ಟ್ರಪತಿ ಭವನದಲ್ಲಿ ಔತಣಕೂಟಕ್ಕೆ ಆಹ್ವಾನ ಲಭಿಸಿತ್ತು.

ಸಂಗ್ರಹ ಚಿತ್ರ

ಬೆಂಗಳೂರು: ಗಣರಾಜ್ಯೋತ್ಸವ ಆಚರಣೆಯ ಸಂದರ್ಭದಲ್ಲಿ ರಾಷ್ಟ್ರಪತಿ (Kaushik Mudda) ಭವನದಲ್ಲಿ ನಡೆದ ಔತಣಕೂಟದಲ್ಲಿ ರಾಜ್ಯದ ಯುವ ಉದ್ಯಮಿ ಹಾಗೂ ಎಥೆರಿಯಲ್‌ ಮಿಷನ್ಸ್‌ ಕಂಪನಿಯ ಸಹ ಸಂಸ್ಥಾಪಕ ಕೌಶಿಕ್‌ ಮುದ್ದಾ ಭಾಗವಹಿಸಿದ್ದರು. ರಾಷ್ಟ್ರಪತಿ ಭವನದಲ್ಲಿ ಜನವರಿ 26ಕ್ಕೆ ನಡೆದ ಸಮಾರಂಭದಲ್ಲಿ ಪ್ರತಿ ವರ್ಷ ವಿಜ್ಞಾನಿಗಳು, ಎಂಜಿನಿಯರ್‌, ಚಿಂತಕರು, ನಾನಾ ಕ್ಷೇತ್ರಗಳ ಸಾಧಕರನ್ನು ಆಹ್ವಾನಿಸಲಾಗುತ್ತದೆ. ಇದು ಆ ಸಾಧಕರಿಗೆ ಸರಕಾರ ನೀಡುವ ಗೌರವದ ದ್ಯೋತಕವೂ ಆಗಿದೆ.

ಅದೇ ರೀತಿ ಈ ವರ್ಷ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ಕೌಶಿಕ್‌ ಮುದ್ದಾ ಅವರಿಗೆ ಆಹ್ವಾನಿಸಲಾಗಿತ್ತು. ವಿಜ್ಞಾನ ಮತ್ತು ತಂತ್ರಜ್ಞಾನ ವಲಯದಲ್ಲಿ ಮಾಡಿರುವ ಸಾಧನೆಯನ್ನು ಪರಿಗಣಿಸಿ ರಾಷ್ಟ್ರಪತಿ ಭವನದಲ್ಲಿ ಔತಣಕೂಟಕ್ಕೆ ಆಹ್ವಾನ ಲಭಿಸಿತ್ತು. ರಾಷ್ಟ್ರಪತಿ ದ್ರೌಪದಿ ಮುರ್ಮು ಹಾಗೂ ಪ್ರಧಾನಿ ನರೇಂದ್ರ ಮೋದಿಯವರನ್ನು ಗಣರಾಜ್ಯೋತ್ಸವದ ಸಂದರ್ಭ ಭೇಟಿಯಾಗಿರುವುದು ಸಂತಸ ತಂದಿದೆ. ಇದು ನನಗೆ ಅವಿಸ್ಮರಣೀಯವಾದ ಹೆಮ್ಮೆಯ ಕ್ಷಣಗಳಾಗಿತ್ತು. ಇದು ಮತ್ತಷ್ಟು ಸಾಧನೆಗೆ ಸ್ಪೂರ್ತಿ ನೀಡಲಿದೆ ಎಂದು ಕೌಶಿಕ್‌ ಮುದ್ದಾ ಹೇಳಿದ್ದಾರೆ.

Koushik Mudda (2)

ಬೆಂಗಳೂರಿನ ಪ್ರಧಾನ ಅಂಚೆ ಕಚೇರಿಯ ಸಿಬ್ಬಂದಿ ಕೌಶಕ್‌ ಮುದ್ದಾ ಅವರ ನಿವಾಸಕ್ಕೆ ತೆರಳಿ ಆಹ್ವಾನ ಪತ್ರವನ್ನು ಕೊಟ್ಟು ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದರು. ಕೌಶಿಕ್‌ ಮುದ್ದಾ ಅವರ ತಂದೆ ಕಲಬುರಗಿ ಮೂಲದ ಕೇದಾರನಾಥ ಮುದ್ದಾ ಅವರು ಕಾರ್ಪೊರೇಟ್‌ ವಲಯದ ಕಂಪನಿಗಳಲ್ಲಿ ಸೇವೆ ಸಲ್ಲಿಸಿದ್ದರು. ಈ ಹಿಂದೆ ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿ ಆಗಿದ್ದಾಗ ವಾಣಿಜ್ಯ, ಕೈಗಾರಿಕೆ ಕುರಿತ ಸಲಹೆಗಾರರಾಗಿಯೂ ಸೇವೆ ಸಲ್ಲಿಸಿದ್ದರು.

ಪ್ರಧಾನಿ ನರೇಂದ್ರ ಮೋದಿ ಪ್ರಶಂಸೆ

ಕೌಶಿಕ್‌ ಮುದ್ದಾ ಅವರು 5ಡಿ ಪ್ರಿಂಟರ್‌ ಅನ್ನು ಅಭಿವೃದ್ಧಿಪಡಿಸಿದ್ದರು. ಇದರ ಬಗ್ಗೆ ಅವರಿಂದ ಸಮಗ್ರ ಮಾಹಿತಿ ಪಡೆದಿದ್ದ ಪ್ರಧಾನಿ ನರೇಂದ್ರ ಮೋದಿಯವರು ಕೌಶಿಕ್‌ ಮುದ್ದಾ ಅವರನ್ನು ಪ್ರಶಂಸಿಸಿದ್ದರು. ಕೋವಿಡ್‌ ಪಿಡುಗಿನ ಸಂದರ್ಭದಲ್ಲಿ ಕೌಶಿಕ್‌ ಮುದ್ದಾ ಅವರು‌ ಏಕಕಾಲದಲ್ಲಿ ಇಬ್ಬರು ರೋಗಿಗಳಿಗೆ ಆಮ್ಲಜನಕ ಪೂರೈಸುವ ಟು-ವೇ ವೆಂಟಿಲೇಟರ್‌ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿದ್ದರು.

ಎಥಿರಿಯಲ್‌ ಮಿಷನ್ಸ್‌ ಸ್ಥಾಪನೆ

ಎಥಿರಿಯಲ್‌ ಮಿಷನ್ಸ್‌ ತಂತ್ರಜ್ಞಾನ ಅಧಾರಿತ ಸ್ಟಾರ್ಟಪ್‌ ಆಗಿದೆ. ಏರೋಸ್ಪೇಸ್‌, ರಕ್ಷಣೆ, ಆರೋಗ್ಯ, ಅರೆವಾಹಕ ವಲಯಗಳಲ್ಲಿ ಇದರ ಹೈಟೆಕ್‌ ಉತ್ಪನ್ನಗಳ ಬಳಕೆಯಾಗುತ್ತವೆ. ಇದು ಸಿಎನ್‌ಸಿ ಯಂತ್ರಗಳನ್ನು ಉತ್ಪಾದಿಸುತ್ತಿದ್ದು, ಸಿಇಎಸ್‌ ಬೆಸ್ಟ್‌ ಆಫ್‌ ಇನ್ನೋವೇಶನ್ಸ್‌ ಪ್ರಶಸ್ತಿಯನ್ನು ಗಳಿಸಿದೆ. ಭಾರತೀಯ ಕೈಗಾರಿಕಾ ಒಕ್ಕೂಟ ಸಿಐಐನಿಂದ ಟಾಪ್‌ ಸ್ಟಾರ್ಟಪ್‌ ಪ್ರಶಸ್ತಿಯನ್ನು ಗಳಿಸಿದೆ.

ಅಪ್ರತಿಮ ಸಾಧಕ ಉದ್ಯಮಿ

ಕೌಶಿಕ್‌ ಮುದ್ದಾ ಅವರು ಯುವ ಉದ್ಯಮಿಗಳಿಗೆ ಮಾದರಿಯಾಗಿದ್ದಾರೆ. ಬೆಂಗಳೂರಿನ ಆರ್‌ ವಿ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಎಲೆಕ್ಟ್ರಾನಿಕ್ಸ್‌ ಆಂಡ್‌ ಕಮ್ಯುನಿಕೇಶನ್ಸ್‌ ಓದಿದ ಬಳಿಕ ಸ್ನೇಹಿತ ನವೀನ್‌ ಜೈನ್ ಜತೆಗೂಡಿ‌ 2014ರಲ್ಲಿ ಸ್ಟಾರ್ಟಪ್‌ ಆರಂಭಿಸಿದ್ದರು. ತಂದೆಯವರಿಂದಲೂ ಆರಂಭಿಕ ಬಂಡವಾಳವನ್ನು ಬಯಸದೆ, ಸ್ವಂತ ದುಡಿಮೆ, ಉಳಿತಾಯದ ಹಣದಿಂದ ಸ್ಟಾರ್ಟಪ್‌ ಸ್ಥಾಪಿಸಿದ್ದರು. ಈಗ 500ಕ್ಕೂ ಹೆಚ್ಚು ಮಂದಿಗೆ ಉದ್ಯೋಗವನ್ನು ಇದೇ ಎಥಿರಿಯಲ್‌ ಮಿಷನ್ಸ್‌ ಕಲ್ಪಿಸಿರುವುದು ವಿಶೇಷ. ಬೆಂಗಳೂರಿನ ಪೀಣ್ಯದಲ್ಲಿ ಇದರ ಕಚೇರಿ ಇದೆ.‌ ಸಿಎನ್‌ಸಿ ಯಂತ್ರಗಳನ್ನು ಕಂಪನಿ ತಯಾರಿಸುತ್ತಿದೆ. ಏರೋಸ್ಪೇಸ್‌, ಡಿಫೆನ್ಸ್‌,‌ ಹೆಲ್ತ್‌ ಕೇರ್‌, ಸೆಮಿಕಂಡಕ್ಟರ್ ಉದ್ದಿಮೆಗೆ ಬೇಕಾದ ಹೈಟೆಕ್ ಬಿಡಿಭಾಗಗಳನ್ನು ಉತ್ಪಾದಿಸುತ್ತಿದೆ. ಎಂಐಟಿ ಟೆಕ್ನಾಲಜಿ ರಿವ್ಯೂ ವತಿಯಿಂದ ಇನ್ನೊವೇಟರ್ಸ್‌ ಅಂಡರ್‌ 35 ಇಂಡಿಯಾ ಪ್ರಶಸ್ತಿ ಕೌಶಿಕ್‌ ಮುದ್ದಾ ಅವರಿಗೆ ಲಭಿಸಿದೆ.