ಲೈಂಗಿಕ ದೌರ್ಜನ್ಯ; 70 ವರ್ಷದ ಪತಿ ವಿರುದ್ಧ ದೂರು ನೀಡಿದ ನಿವೃತ್ತ ಪ್ರಾಧ್ಯಾಪಕಿ
Bengaluru News: ದಾಂಪತ್ಯ ಜೀವನದುದ್ದಕ್ಕೂ ನಿರಂತರ ಮಾನಸಿಕ, ದೈಹಿಕ, ಆರ್ಥಿಕ ಹಾಗೂ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಿ ಮಹಿಳೆಯೊಬ್ಬರು ಗಂಡನ ವಿರುದ್ಧ ಬೆಂಗಳೂರಿನ ಗೋವಿಂದರಾಜನಗರ ಠಾಣೆಗೆ ದೂರು ಸಲ್ಲಿಸಿದ್ದಾರೆ. ತಮ್ಮ ಮೇಲೆ ನಡೆಯುತ್ತಿದ್ದ ದೌರ್ಜನ್ಯದ ಬಗ್ಗೆ ವಿವಾಹವಾದ ಬರೋಬ್ಬರಿ 42 ವರ್ಷಗಳ ಬಳಿಕ ವೃದ್ಧ ಮಹಿಳೆ ಮೌನ ಮುರಿದಿದ್ದಾರೆ.
ಸಾಂದರ್ಭಿಕ ಚಿತ್ರ. -
ಬೆಂಗಳೂರು, ಡಿ.17: ತನ್ನ ಮೇಲೆ ನಿರಂತರವಾಗಿ ದೌರ್ಜನ್ಯ ಎಸಗುತ್ತಿದ್ದ ಪತಿಯ ಬಗ್ಗೆ ವಿವಾಹವಾದ ಬರೋಬ್ಬರಿ 42 ವರ್ಷಗಳ ಬಳಿಕ ನಿವೃತ್ತ ಸರ್ಕಾರಿ ಪ್ರಾಧ್ಯಾಪಕಿಯೊಬ್ಬರು ಮೌನ ಮುರಿದಿದ್ದು, ಗಂಡನ ವಿರುದ್ಧ ದೂರು ದಾಖಲಿಸಿದ್ದಾರೆ. 70 ವರ್ಷದ ಪತಿ ವಿರುದ್ಧ 67 ವರ್ಷದ ನಿವೃತ್ತ ಸರ್ಕಾರಿ ಪ್ರಾಧ್ಯಾಪಕಿ, ಗೋವಿಂದರಾಜನಗರ ಠಾಣೆಯಲ್ಲಿ (Bengaluru News) ದೂರು ದಾಖಲಿಸಿದ್ದಾರೆ. ದಾಂಪತ್ಯ ಜೀವನದುದ್ದಕ್ಕೂ ನಿರಂತರ ಮಾನಸಿಕ, ದೈಹಿಕ, ಆರ್ಥಿಕ ಹಾಗೂ ಲೈಂಗಿಕ ದೌರ್ಜನ್ಯ (Physical Abuse) ಎಸಗಿದ್ದಾರೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ.
ಹೌದು, ವ್ಯಕ್ತಿಗೆ ವಯಸ್ಸಾಗುತ್ತಿದ್ದಂತೆ ಲೈಂಗಿಕ ಹಿಂಸಾಚಾರ ಹಾಗೂ ಕೌಟುಂಬಿಕ ದೌರ್ಜನ್ಯ ಕಡಿಮೆ ಆಗುವುದಿಲ್ಲ ಎಂಬುವುದು ಈ ಪ್ರಕರಣದಿಂದ ಮತ್ತೊಮ್ಮೆ ದೃಢವಾಗಿದೆ. ತಾನು ಹಾಗೂ ಇಬ್ಬರು ಪುತ್ರರು 8 ದಿನದೊಳಗೆ ಒಳಗಾಗಿ ಮನೆಯಿಂದ ಹೊರಹೋಗಬೇಕು ಎಂದು ಗಂಡ, ಲೀಗಲ್ ನೋಟಿಸ್ ನೀಡಿದ್ದರಿಂದ ವೃದ್ಧ ಮಹಿಳೆಯು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.
1983ರಲ್ಲಿ ಕನ್ನಿಂಗ್ಹ್ಯಾಮ್ ರಸ್ತೆಯ ಸಭಾಂಗಣದಲ್ಲಿ ವಿವಾಹವಾದ ಮಹಿಳೆ, ಕರ್ನಾಟಕದಾದ್ಯಂತ ಅನೇಕ ಕಾಲೇಜುಗಳಲ್ಲಿ ಸೇವೆ ಸಲ್ಲಿಸಿದ ನಂತರ ಪ್ರಾಂಶುಪಾಲರಾಗಿ ನಿವೃತ್ತಿ ಹೊಂದಿದ್ದರು. ತನ್ನ ಪತಿ ತನ್ನ ವೃತ್ತಿಪರ ಯಶಸ್ಸಿಗೆ ಅಸಮಾಧಾನಗೊಂಡಿದ್ದರು. ತನ್ನ ಪಿಎಚ್ಡಿ ಮತ್ತು ಬಡ್ತಿಗಳನ್ನು ಕಡೆಗಣಿಸಿದರು. ಸಂಬಳ, ಪಿಂಚಣಿ, ಗ್ರಾಚ್ಯುಟಿ ಮತ್ತು ಆಸ್ತಿಗಳನ್ನು ಸಹ ತನ್ನ ಹೆಸರಿಗೆ ವರ್ಗಾಯಿಸಲು ಒತ್ತಾಯಿಸಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾರೆ.
1993 ರಲ್ಲಿ ಕುದುರೆಮುಖದಲ್ಲಿ ಕೆಲಸದಿಂದ ತೆಗೆದ ನಂತರ ಗಂಡ, ತನ್ನ ಗಳಿಕೆಯನ್ನು ಅವಲಂಬಿಸಿದ್ದರು. ದೌರ್ಜನ್ಯವನ್ನು ಮುಂದುವರಿಸುತ್ತಾ ಆರ್ಥಿಕ ನಿಯಂತ್ರಣ ಸಾಧಿಸಿದ್ದಾರೆ ಎಂದು ಹೇಳಿಕೊಂಡಿದ್ದಾರೆ.
ಇನ್ನು ನವೆಂಬರ್ 22 ರಂದು ಮನೆ ಸ್ವಚ್ಛಗೊಳಿಸುವಾಗ ತನ್ನನ್ನು ಗಂಡ ಬಲವಂತವಾಗಿ ಕೋಣೆಗೆ ಎಳೆದುಕೊಂಡು ಹೋಗಿ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ.ಪ್ರತಿರೋಧ ಒಡ್ಡಿದಾಗ ಒದ್ದು, ಕತ್ತು ಹಿಸುಕಿ ಹಲ್ಲೆ ಮಾಡಿ, ಅವಾಚ್ಯವಾಗಿ ನಿಂದಿಸಿದ್ದಾರೆ. ಅಲ್ಲದೇ ತನ್ನನ್ನು ಮತ್ತು ಇಬ್ಬರು ಗಂಡು ಮಕ್ಕಳನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾರೆ. ಸಿಸಿಟಿವಿ ಕ್ಯಾಮೆರಾಗಳಲ್ಲಿ ಹಲ್ಲೆ ದೃಶ್ಯ ಸೆರೆಯಾಗಿದೆ ಎಂದು ಅವರು ಹೇಳಿದ್ದಾರೆ.
ಕೌಟುಂಬಿಕ ಕಲಹ; ಪತ್ನಿಯನ್ನು ಕತ್ತುಹಿಸುಕಿ ಕೊಂದು ಪತಿಯೂ ಆತ್ಮಹತ್ಯೆ!
ಇನ್ನು ಹೃದಯ ಸಮಸ್ಯೆ ಹಿನ್ನೆಲೆ ಬೈಪಾಸ್ ಶಸ್ತ್ರಚಿಕಿತ್ಸೆಗೆ ಮಹಿಳೆ ಒಳಗಾಗಿದ್ದು, ಉಸಿರಾಟದ ತೊಂದರೆಗೆ ಚಿಕಿತ್ಸೆ ಪಡೆಯುತ್ತಿದ್ದರು. ಆದರೂ ವೈವಾಹಿಕ ಬಂಧವನ್ನು ಉಳಿಸಿಕೊಳ್ಳುವ ಆಸೆಯಿಂದ ದೂರು ನೀಡಲು ಹಿಂಜರಿಯುತ್ತಿದ್ದರು. ಹೀಗಾಗಿ ಅವರು ನೀಡಿದ ದೂರು ಆಧರಿಸಿ ಭಾರತೀಯ ನ್ಯಾಯ ಸಂಹಿತೆ ಕಾಯ್ದೆಯಡಿ ಪತಿಯ ಕ್ರೌರ್ಯ, ದೌರ್ಜನ್ಯ ಸೇರಿ ಹಲವು ಸೆಕ್ಷನ್ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಆರೋಪಿಯ ವಯಸ್ಸನ್ನು ಗಮನದಲ್ಲಿಟ್ಟುಕೊಂಡು ವಿಚಾರಣೆಗೆ ಹಾಜರಾಗುವಂತೆ ಪೊಲೀಸರು ನೋಟಿಸ್ ನೀಡಿದ್ದಾರೆ.