ಬೆಂಗಳೂರು: ಚಿನ್ನಸ್ವಾಮಿ ಸ್ಟೇಡಿಯಂ (Chinnaswamy stadium) ಬಳಿ ನಡೆದ ಕಾಲ್ತುಳಿತ ದುರಂತದಿಂದಾಗಿ ಹಿರಿಯ ಐಪಿಎಸ್ ಅಧಿಕಾರಿ ಬಿ.ದಯಾನಂದ (IPS officer B. Dayananda) ಅವರಿಗೆ ತಡೆಹಿಡಿಯಲಾಗಿದ್ದ ಬಡ್ತಿಯನ್ನು ಹಿಂದಕ್ಕೆ ಪಡೆದು ಡಿಜಿಪಿಯಾಗಿ ಪದ್ನೋನತಿ ನೀಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ರಾಜ್ಯ ಪೊಲೀಸ್ ತರಬೇತಿ ವಿಭಾಗದ ಎಡಿಜಿಪಿಯಾಗಿದ್ದ ದಯಾನಂದ ಅವರನ್ನ ರಾಜ್ಯ ಆಂತರಿಕ ತನಿಖಾ ವಿಭಾಗ (ಐಎಸ್ಡಿ) ಡಿಜಿಪಿಯಾಗಿ ಮುಂಬಡ್ತಿ ನೀಡಿ ಸರ್ಕಾರ ಆದೇಶಿಸಿದೆ.
2025 ರಲ್ಲಿ ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಕಾಲ್ತುಳಿತ ದುರಂತದಲ್ಲಿ ಕರ್ತವ್ಯಲೋಪ ಆರೋಪದ ಮೇರೆಗೆ ಅಂದಿನ ನಗರ ಪೊಲೀಸ್ ಆಯುಕ್ತ, ಎಡಿಜಿಪಿ ಬಿ.ದಯಾನಂದ್ ಸೇರಿದಂತೆ ಮೂವರು ಐಪಿಎಸ್ ಅಧಿಕಾರಿಗಳು ಅಮಾನತುಗೊಂಡಿದ್ದರು. ಕೆಲ ತಿಂಗಳ ಬಳಿಕ ಅಮಾನತು ಆದೇಶ ರದ್ದುಗೊಳಿಸಿತ್ತು. ಇತ್ತೀಚೆಗೆ ಇಲಾಖಾ ತನಿಖೆಯಲ್ಲಿ ದೋಷಮುಕ್ತ ಎಂದು ವರದಿ ಬಂದ ಹಿನ್ನೆಲೆಯಲ್ಲಿ ಡಿಜಿಪಿಯಾಗಿ ಬಡ್ತಿ ನೀಡಿದೆ. ಐಎಸ್ಡಿ ಮುಖ್ಯಸ್ಥರನ್ನಾಗಿಯೂ ವರ್ಗಾವಣೆ ಮಾಡಿದೆ.
ಐಪಿಎಸ್ ಅಧಿಕಾರಿಗಳ ವರ್ಗಾವಣೆ:
ಮತ್ತೊಂದೆಡೆ ನೈರುತ್ಯ ವಿಭಾಗದ ಡಿಸಿಪಿಯಾಗಿದ್ದ ಅನಿತಾ ಹದ್ದಣ್ಣನವರ್ ಅವರನ್ನ ಸಿಐಡಿ ಎಸ್ಪಿಯಾಗಿ ವರ್ಗಾವಣೆ ಮಾಡಲಾಗಿದೆ. ಡಾ.ರಾಮ್ ಎಲ್ ಅರಸಿದ್ದಿ ಡಿಸಿಪಿ ಗುಪ್ತಚರ ಬೆಂಗಳೂರು ನಗರ, ಲಕ್ಷ್ಮೀ ಗಣೇಶ್ ಕೆ. ಡಿಸಿಪಿ ಬೆಂಗಳೂರು ನಗರ ಪಶ್ಚಿಮ, ಸ್ಯಾಮ್ ವರ್ಗೀಸ್, ಡಿಸಿಪಿ (ಕಾನೂನು ಸುವ್ಯವಸ್ಥೆ ) ಮಂಗಳೂರಿಗೆ ವರ್ಗಾಯಿಸಿ ಸರ್ಕಾರ ಆದೇಶಿಸಿದೆ.
ಕೆಎಎಸ್ ಅಧಿಕಾರಿಗಳ ವರ್ಗಾವಣೆ
ಲಿಂಗಸುಗೂರು ಉಪ ವಿಭಾಗದ ಸಹಾಯಕ ಆಯುಕ್ತರಾದ ಬಸವಪ್ಪ ಕಲ್ಶೆಟ್ಟಿ ಅವರನ್ನು ಕಲಬುರಗಿಯ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಉಪ ಕಾರ್ಯದರ್ಶಿಯನ್ನಾಗಿ ನೇಮಕ ಮಾಡಲಾಗಿದೆ. ಚಿಕ್ಕಮಗಳೂರು ಉಪ ವಿಭಾಗದ ಸಹಾಯಕ ಆಯುಕ್ತರಾದ ಎಸ್. ರವಿ ಅವರನ್ನು ಕೊಟ್ಟೂರು-ಹರಿಹರ ರೈಲ್ವೆ ಬ್ರಾಡ್-ಗೇಜ್ ನಿರ್ಮಾಣ ಯೋಜನೆಯ ವಿಶೇಷ ಭೂಸ್ವಾಧೀನಾಧಿಕಾರಿಯನ್ನಾಗಿ ನೇಮಕ ಮಾಡಲಾಗಿದೆ.
ಇನ್ನು ಕಾರವಾರ ಉಪ ವಿಭಾಗದ ಸಹಾಯ ಆಯುಕ್ತರಾದ ಶಾಲಂ ಹುಸೇನ್ ಅವರನ್ನು ಧಾರವಾಡದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ವಿಶೇಷ ಭೂಸ್ವಾಧೀನಾಧಿಕಾರಿಯನ್ನಾಗಿ ನೇಮಿಸಲಾಗಿದೆ. ಬೀದರ್ ಉಪ ವಿಭಾಗದ ಸಹಾಯಕ ಆಯುಕ್ತರಾದ ಮೊಹಮ್ಮದ್ ಶಕಿಲ್ ಅವರನ್ನು ಗುಲ್ಬರ್ಗಾ ವಿಶ್ವವಿದ್ಯಾಲಯದ ಕುಲ ಸಚಿವರನ್ನಾಗಿ ನೇಮಕ ಮಾಡಲಾಗಿದೆ. ಸವಣೂರು ಉಪ-ವಿಭಾಗದ ಸಹಾಯಕ ಆಯುಕ್ತರಾಗಿದ್ದ ವಿಜಯಕುಮಾರ್ ಎಚ್.ಬಿ ಅವರನ್ನು ಗ್ರೇಟರ್ ಬೆಂಗಳೂರು ಪ್ರಾಧಿಕಾರ ಅವರನ್ನು ಸಹಾಯಕ ಆಯುಕ್ತರನ್ನಾಗಿ ನೇಮಕ ಮಾಡಲಾಗಿದೆ.