ವಿಶೇಷ ಚೇತನರ ಆರೋಗ್ಯ ಸ್ಥಿತಿಗತಿಗಳ ಸಮೀಕ್ಷಾ ವರದಿ ಬಿಡುಗಡೆ
ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಈಗೀಗ ವಿಕಲಚೇತನರಿಗೂ ಸಿಗಬೇಕಾದ ಎಲ್ಲಾ ಸವಲತ್ತುಗಳು ಸಿಗುತ್ತಿದೆ. ಆದರೆ, ಅವರಿಗಾಗಿಯೇ ಸರ್ಕಾರ ನೀಡುತ್ತಿರುವ ಸೌಲಭ್ಯಗಳು ಅವರಿಗೆ ತಲುಪುತ್ತಿವೆಯೇ ಎಂಬುದರ ಬಗ್ಗೆಯೂ ಗಮನಹರಿಸಬೇಕು ಎಂದರು. ಇನ್ನು, ವಿಕಲಚೇತನರೊಂದಿಗೆ ಮಾತನಾಡುವಾಗ ಪ್ರತಿಯೊಬ್ಬರು ಒಂದಷ್ಟು ಸೂಕ್ಷ್ಮತೆಯ ಮನೋಭಾವ ಹೊಂದಿರಬೇಕು, ಆಗ ಮಾತ್ರ ಅವರ ಭಾವನೆ ಗಳಿಗೆ ದಕ್ಕೆಯಾಗದಂತೆ ಸಂವಹನ ನಡೆಸಲು ಸಾಧ್ಯ


ಬೆಂಗಳೂರು: ವಿಶೇಷ ಚೇತನರಿಗೆ ಸಿಗಬೇಕಾದ ಎಲ್ಲಾ ಸೌಲಭ್ಯಗಳು ಅವರಿಗೆ ನೇರ ತಲುಪುವ ನಿಟ್ಟಿನಲ್ಲಿ ಸರ್ಕಾರ ಕ್ರಮ ಕೈಗೊಳ್ಳಬೇಕು, ಜೊತೆಗೆ, ಜನಸಾಮಾನ್ಯರು ವಿಶೇಷ ಚೇತನರೊಂದಿಗೆ ಸಂವಹಿಸುವಾಗ ಸೂಕ್ಷತೆ ಹೊಂದಿರಬೇಕು ಎಂದು ಹೃದಯತಜ್ಞ ಡಾ. ವಿವೇಕ್ ಜವಳಿ ಅಭಿಪ್ರಾಯ ಪಟ್ಟರು. ಅಸ್ಥಾ ಹಾಗೂ ಅಂಗವಿಕಲರಿಗಾಗಿ ಉದ್ಯೋಗ ಉತ್ತೇಜನ ರಾಷ್ಟ್ರೀಯ ಕೇಂದ್ರ (NCPEDP) ಸಹಯೋಗದಲ್ಲಿ ನಡೆಸಿದ “ವಿಶೇಷ ಚೇತನರ ಆರೋಗ್ಯ ಸ್ಥಿತಿ-ಗತಿಗಳ” ಸಮೀಕ್ಷಾ ವರದಿಯನ್ನು ಬಿಡುಗಡೆ ಮಾಡಿದರು.
ಈ ವೇಳೆ ಮಾತನಾಡಿದ ಅವರು, ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಈಗೀಗ ವಿಕಲಚೇತನರಿಗೂ ಸಿಗಬೇಕಾದ ಎಲ್ಲಾ ಸವಲತ್ತುಗಳು ಸಿಗುತ್ತಿದೆ. ಆದರೆ, ಅವರಿಗಾಗಿಯೇ ಸರ್ಕಾರ ನೀಡುತ್ತಿರುವ ಸೌಲಭ್ಯಗಳು ಅವರಿಗೆ ತಲುಪುತ್ತಿವೆಯೇ ಎಂಬುದರ ಬಗ್ಗೆಯೂ ಗಮನಹರಿಸಬೇಕು ಎಂದರು. ಇನ್ನು, ವಿಕಲಚೇತನರೊಂದಿಗೆ ಮಾತನಾಡುವಾಗ ಪ್ರತಿಯೊಬ್ಬರು ಒಂದಷ್ಟು ಸೂಕ್ಷ್ಮತೆಯ ಮನೋಭಾವ ಹೊಂದಿರಬೇಕು, ಆಗ ಮಾತ್ರ ಅವರ ಭಾವನೆಗಳಿಗೆ ದಕ್ಕೆಯಾಗದಂತೆ ಸಂವಹನ ನಡೆಸಲು ಸಾಧ್ಯ. ಅಸ್ಥಾ ಹಾಗೂ ಎನ್ಸಿಪಿಇಡಿಪಿ ಸಹಯೋಗದಲ್ಲಿ ವಿಕಲಚೇತನರ ಆರೋಗ್ಯ ಸ್ಥಿತಿಗತಿಗಳ ಬಗ್ಗೆ ಸಮೀಕ್ಷೆ ನಡೆಸಿರುವುದು ಶ್ಲಾಘನೀಯ, ಈ ಮೂಲಕನಾದರೂ ಅವರ ಆರೋಗ್ಯ ದ ಬಗ್ಗೆ ಪ್ರತಿಯೊಬ್ಬರ ಗಮನಸೆಳೆಯಲು ಸಾಧ್ಯ ಎಂದರು.
ಇದನ್ನೂ ಓದಿ: Ravi Hunj Column: ಆಧ್ಯಾತ್ಮಿಕ ವೀರಶೈವ ಬಸವಣ್ಣನನ್ನು ನಿರೂಪಿಸಬೇಕಿದೆ
ಎನ್ಸಿಪಿಇಡಿಪಿ ಕಾರ್ಯನಿರ್ವಹಕ ನಿರ್ದೇಶಕ ಅರ್ಮಾನ್ ಅಲಿ, ನಮ್ಮ ದೇಶದಲ್ಲಿ ವಿಕಲಚೇತರ ನ್ನು ನಿರ್ಲಕ್ಷ್ಯ ಮಾಡಿದಷ್ಟು ಎಲ್ಲಿಯೂ ಮಾಡಲಾಗುತ್ತಿಲ್ಲ. ಜನಸಾಮಾನ್ಯರು ಸಹ ವಿಕಲಚೇತನ ರನ್ನು ಅನಾರೋಗ್ಯಪೀಡಿತ ರೀತಿಯಲ್ಲೇ ನಡೆಸಿಕೊಳ್ಳುತ್ತಿದ್ದಾರೆ, ಈ ಮನೋಭಾವ ಬದಲಾಗಬೇಕು. ಕೇಂದ್ರ ಸರ್ಕಾರದ ಆಯುಷ್ಮಾನ್ ಭಾರತ್ ವಿಮಾ ಯೋಜನೆಯಲ್ಲಿ ಮಹಿಳೆಯರು, ಹಿರಿಯ ನಾಗರಿಕರಿಗೆ ವಿಶೇಷ ಸವಲತ್ತು ನೀಡಲಾಗಿದೆ. ಆದರೆ, ವಿಶೇಷಚೇತನರಿಗೆ ಯಾವುದೇ ವಿಶೇಷ ಸಲವತ್ತು ಇಲ್ಲ. ನಮ್ಮ ದೇಶದಲ್ಲಿ ವಿಶೇಷ ಚೇತನರು ಓಡಾಡಲು ಸೂಕ್ತ ಸಾರಿಗೆ ವ್ಯವಸ್ಥೆ ಹಾಗೂ ವೀಲ್ಚೇರ್ ಸಾಗಲು ಸೂಕ್ತ ಮಾರ್ಗಗಳೇ ಇಲ್ಲ. ಈ ಬಗ್ಗೆ ಸರ್ಕಾರ ಯಾಕೆ ನಿರ್ಲಕ್ಷ್ಯ ವಹಿಸುತ್ತಿದೆ? ನಮ್ಮನ್ನೂ ಎಲ್ಲರಂತೆಯೇ ನೋಡಿ, ನಮಗೆ ನೀಡಬೇಕಾದ ಮೂಲಸೌಕರ್ಯಗಳನ್ನು ನಮ್ಮ ಹಕ್ಕೆಂದು ನೀಡಿ ಎಂದು ಆಗ್ರಹಿಸಿದರು.
ಈ ವೇಳೆ ಆಸ್ಥಾ ಛೇರ್ಮನ್ ಸುನೀಲ್ ಜೈನ್, ತುಮಕೂರು ವಿಶ್ವವಿದ್ಯಾಲಯದ ಪ್ರೊ. ಪರಶುರಾಮ್ ಇತರರು ಉಪಸ್ಥಿತರಿದ್ದರು.
ವರದಿ ಪ್ರಮುಖಾಂಶಗಳು
ಪ್ರಸ್ತುತ ಸಂಶೋಧನೆಯು ಕರ್ನಾಟಕದ ಬೆಂಗಳೂರು ಗ್ರಾಮಾಂತರ ಮತ್ತು ತುಮಕೂರು ಜಿಲ್ಲೆ ಗಳಾದ್ಯಂತ ವ್ಯಕ್ತಿಗಳನ್ನು ಸಮೀಕ್ಷೆ ಮಾಡಿದೆ. 2024-25ರಲ್ಲಿ ಹನ್ನೆರಡು ತಿಂಗಳ ಅವಧಿಯಲ್ಲಿ ನಡೆದ ಈ ಅಧ್ಯಯನವು, ಅಂಗವಿಕಲರ ಆರೋಗ್ಯ ಸ್ಥಿತಿಗೆ ಸಂಬಂಧಿಸಿದ ವಿವಿಧ ಅಂಶಗಳನ್ನು ಸಮಗ್ರವಾಗಿ ಒಳಗೊಂಡಿದೆ. ಅಂಗವಿಕಲರ ಮುಖ್ಯ ಆಯುಕ್ತರ ಕಚೇರಿ (CCPD) ಮತ್ತು ಜಿಲ್ಲಾ ಅಂಗವಿಕಲ ಕಲ್ಯಾಣ (DDWO) ಸಮೀಕ್ಷೆಗೆ ಸಹಕಾರ ಲಭ್ಯವಾಗಿದೆ.
* ಒಟ್ಟಾರೆ, ೭೫೮ ವಿಕಲಚೇತನರ ಅಭಿಪ್ರಾಯ ಸಂಗ್ರಹಿಸಲಾಗಿದೆ. * ಶೇ. 70 ರಿಂದ ಶೇ. 96 ರಷ್ಟು ಅಂಗವಿಕಲ ವ್ಯಕ್ತಿಗಳಿಗೆ ಮೂಲಭೂತ ಆರೋಗ್ಯ ವಿಮೆಯೇ ದೊರೆತಿಲ್ಲ.
* ಬಹುತೇಕ ವಿಕಲಚೇತನರುನಿರುದ್ಯೋಗಿಗಳಾಗಿದ್ದು, ಜೀವನೋಪಾಯಕ್ಕಾಗಿ ತಮ್ಮ ಕುಟುಂಬಗಳ ಮೇಲೆ ಅವಲಂಬಿತರಾಗಿದ್ದಾರೆ.
* ಶೇ.95 ರಷ್ಟು ವಿಕಲಚೇತನರ ಮನೆಯ ಆದಾಯವು ವರ್ಷಕ್ಕೆ 1 ಲಕ್ಷಕ್ಕಿಂತ ಕಡಿಮೆ ಇದೆ. ಈಗಾಗಲೇ ದುರ್ಬಲರಾಗಿರುವ ಈ ಜನಸಂಖ್ಯೆಯ ಅರ್ಧದಷ್ಟು ಜನರು ಕರ್ನಾಟಕದಲ್ಲಿ ತಮ್ಮ ಅಲ್ಪ ಮೊತ್ತದ 2000 ಮಾಸಿಕ ಪಿಂಚಣಿಯ ಕಾಲು ಭಾಗವನ್ನು ಮಾಸಿಕ ಆರೋಗ್ಯ ವೆಚ್ಚಗಳಿಗಾಗಿ ಖರ್ಚು ಮಾಡುತ್ತಾರೆ.
* ಗಮನಾರ್ಹ ಸಂಖ್ಯೆಯ ವಿಶೇಷ ಚೇತನರು ಸರ್ಕಾರಿ ಯೋಜನೆಗಳನ್ನು ಸುಲಭವಾಗಿ ಪಡೆಯಲು ಅನುಕೂಲವಾಗುವ ವಿಶಿಷ್ಟ ಅಂಗವೈಕಲ್ಯ ಕಾರ್ಡ್ ಹೊಂದಿಲ್ಲ ಎಂದು ಅಧ್ಯಯನದಲ್ಲಿ ತಿಳಿದು ಬಂದಿದೆ.
* ಸುಮಾರು 90% ವ್ಯಕ್ತಿಗಳು ಯಾವುದೇ ಸಹಾಯಕ ಸಾಧನಗಳನ್ನು ಬಳಸುತ್ತಿಲ್ಲ ಮತ್ತು ಆರೋಗ್ಯ ರಕ್ಷಣೆ ಅಥವಾ ವಿಮೆಗೆ ಹೊಂದಿಲ್ಲ
* ಆರೋಗ್ಯ ಸೇವೆ ಸ್ಥಿತಿ ಮತ್ತು ಸೇವೆಗಳಲ್ಲಿನ ಅಂತರವನ್ನು ನಿವಾರಿಸಲು ಮತ್ತು ಅಂಗವಿಕಲರ ಜೀವನದ ಗುಣಮಟ್ಟವನ್ನು ಹೆಚ್ಚಿಸಲು ವಿಮಾ ಯೋಜನೆಗಳು ಮತ್ತು ಮೂಲಸೌಕರ್ಯ ವಿನ್ಯಾಸಗೊಳಿಸುವುದು ಅನಿವಾರ್ಯ.