ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Bengaluru Stampede: ಮೊದಲೇ ಎಚ್ಚೆತ್ತುಕೊಂಡಿದ್ದರೆ ಬೆಂಗಳೂರು ಕಾಲ್ತುಳಿತ ತಪ್ಪಿಸಬಹುದಿತ್ತು; ಸಂಭ್ರಮದ ಮನೆಯಲ್ಲಿ ಸೂತಕದ ಛಾಯೆ ಇರುತಿರಲಿಲ್ಲ ಎಂದ ತಜ್ಞರು

ಜೂ. 4ರಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದ ಹೊರಗೆ ಸಂಭವಿಸಿದ ಕಾಲ್ತುಳಿತಕ್ಕೆ ಸಿಲುಕಿ 11 ಮಂದಿ ಆರ್‌ಸಿಬಿ ಅಭಿಮಾನಿಗಳು ಮೃತಪಟ್ಟಿದ್ದಾರೆ. ಸೂಕ್ತ ಸೌಲಭ್ಯ ಕಲ್ಪಿಸಲು ವಿಫಲವಾದ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದೆ. ಈ ಮಧ್ಯೆ ಎಚ್ಚರ ವಹಿಸಿದ್ದರೆ ಅನಾಹುತ ತಪ್ಪಿಸಬಹುದಿತ್ತು ಎಂದು ತಜ್ಞರು ಹೇಳಿದ್ದಾರೆ.

ಮೊದಲೇ ಎಚ್ಚೆತ್ತುಕೊಂಡಿದ್ದರೆ ಬೆಂಗಳೂರು ಕಾಲ್ತುಳಿತ ತಪ್ಪಿಸಬಹುದಿತ್ತು

Profile Ramesh B Jun 6, 2025 5:27 PM

ಬೆಂಗಳೂರು: ಆರ್‌ಸಿಬಿ ವಿಜಯೋತ್ಸವ ಹೆಸರಲ್ಲಿ ರಾಜ್ಯ ರಾಜಧಾನಿಯಲ್ಲಿ ಜೂ. 4ರಂದು ಕಂಡು ಕೇಳರಿಯರದ ಭೀಕರ ದುರಂತವೊಂದು ನಡೆದಿದೆ. ಆರ್‌ಸಿಬಿ ತಂಡದ ಆಟಗಾರರನ್ನು ಕಣ್ತುಂಬಿಕೊಳ್ಳಲು ಚಿನ್ನಸ್ವಾಮಿ ಕ್ರೀಡಾಂಗಣ ಹೊರಗಡೆ ನೆರೆದಿದ್ದ ಅಭಿಮಾನಿಗಳ ಪೈಕಿ 11 ಮಂದಿ ದಾರುಣವಾಗಿ ಮೃತಪಟ್ಟಿದ್ದಾರೆ (Bengaluru Stampede). ಈ ಅಮಾಯಕರ ಬಲಿಯಿಂದಾಗಿ ಇಡೀ ದೇಶವೇ ಆಘಾತಕ್ಕೊಳಗಾಗಿದೆ. ಈ ಮಧ್ಯೆ ಪರಿಸ್ಥಿತಿಯನ್ನು ನಿಯಂತ್ರಿಸಲು ವಿಫಲವಾದ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶವೂ ವ್ಯಕ್ತವಾಗುತ್ತಿದೆ. ''ಸ್ವಲ್ಪ ಎಚ್ಚೆತ್ತುಕೊಂಡಿದ್ದರೆ ಈ ದೊಡ್ಡ ಅನಾಹುತವನ್ನು ತಪ್ಪಿಸಬಹುದಿತ್ತುʼ' ಎಂದು ಬೆಂಗಳೂರಿನ ಮಾಜಿ ಪೊಲೀಸ್‌ ಆಯುಕ್ತ ಭಾಸ್ಕರ್‌ ರಾವ್‌ (Bhaskar Rao) ತಿಳಿಸಿದ್ದಾರೆ.

ʼʼಚುನಾವಣೆ ವೇಳೆ ಫಲಿತಾಂಶ ಹೊರ ಬಂದ ನಂತರ ಮೆರವಣಿಗೆ ನಡೆಸುವುದನ್ನು ತಪ್ಪಿಸುತ್ತೇವೆ. ಅದೇ ಮಾದರಿಯನ್ನು ಇಲ್ಲಿಯೂ ಅನ್ವಯಿಸಬೇಕಾಗಿತ್ತು. ಸರ್ಕಾರ ನಿಷೇಧಿತ ಪ್ರದೇಶದಲ್ಲಿ ಸಂಭ್ರಮಾಚರಣೆ ನಡೆಸಲು ಆತುರಪಟ್ಟಿತುʼʼ ಎಂದು ಹೇಳಿದ್ದಾರೆ.



ಈ ಸುದ್ದಿಯನ್ನೂ ಓದಿ: Bengaluru stampede: ಬೆಂಗಳೂರು ಕಾಲ್ತುಳಿತ ಪ್ರಕರಣ; ಸಿಎಂ ರಾಜಕೀಯ ಕಾರ್ಯದರ್ಶಿ ಹುದ್ದೆಯಿಂದ ಗೋವಿಂದರಾಜು ವಜಾ

ಸರ್ಕಾರ ಮತ್ತು ಪೊಲೀಸರು ಎಚ್ಚರಿಕೆ ವಹಿಸಿದ್ದರೆ ದುರಂತ ತಪ್ಪಿಸಬಹುದಾಗಿತ್ತು. ಸಂಬಂಧಪಟ್ಟ ಎಲ್ಲ ಏಜೆನ್ಸಿಗಳು ಮತ್ತು ಮಧ್ಯಸ್ಥಗಾರರೊಂದಿಗೆ ಸಮಾಲೋಚನೆ ನಡೆಸಿ ಸಮನ್ವಯತೆಯೊಂದಿಗೆ ಅಭಿಮಾನಿಗಳ ಉತ್ಸಾಹ ಕಡಿಮೆಯಾದ ನಂತರ ಆಚರಣೆ ಮಾಡಬಹುದಿತ್ತು ಎಂದು ತಜ್ಞರು ತಿಳಿಸಿದ್ದಾರೆ. ಬರೋಬ್ಬರಿ 18 ವರ್ಷಗಳ ಬಳಿಕ ಆರ್‌ಸಿಬಿ ಕಪ್‌ ಗೆದ್ದುಕೊಂಡ ಹಿನ್ನೆಲೆಯಲ್ಲಿ ಅಭಿಮಾನಿಗಳು ಅತ್ಯುತ್ಸಾಹದಲ್ಲಿದ್ದರು. ಹೀಗಾಗಿ ಸರ್ಕಾರ ಆತುರಪಡದೆ ಸ್ವಲ್ಪ ದಿನಗಳ ಕಾಲ ಕಾಯಬೇಕಿತ್ತು ಎಂದಿದ್ದಾರೆ.

ಜೂ. 4ರಂದೇ ಸಂಭ್ರಮಾಚರಣೆ ನಡೆಸುವುದಾಗಿ ಆರ್‌ಸಿಬಿ ಮ್ಯಾನೇಜ್‌ಮೆಂಟ್‌ ಘೋಷಿಸಿತ್ತು. ಜತೆಗೆ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಉಚಿತ ಪ್ರವೇಶ ಎಂದು ತಿಳಿಸಿತ್ತು. ಆರ್‌ಸಿಬಿ ಬೆಂಗಳೂರಿನಲ್ಲಿ ವಿಜಯೋತ್ಸವ ಮೆರವಣಿಗೆ ಫೋಸ್ಟ್ ಮಾಡುತ್ತಿದ್ದಂತೆಯೇ ಹಿರಿಯ ಅಧಿಕಾರಿಯೊಬ್ಬರು, ಸಂಭ್ರಮಾಚರಣೆಯನ್ನು ಮುಂದೂಡಿ, ಭಾನುವಾರ ಆಚರಿಸುವುದು ಒಳ್ಳೇಯದು ಎಂದು ಹೇಳಿದ್ದರು. ಆದರೆ ಅದನ್ನು ನಿರ್ಲಕ್ಷಿಸಲಾಯಿತು ಎಂದು ಮೂಲಗಳು ತಿಳಿಸಿವೆ.

ಪೊಲೀಸರು ತೆರೆದ ವಾಹನದಲ್ಲಿ ಆಟಗಾರರ ಮೆರವಣಿಗೆಗೆ ಅನುಮತಿ ನಿರಾಕರಿಸಿದ್ದರೂ ಒತ್ತಡದ ಹಿನ್ನೆಲೆಯಲ್ಲಿ ಸ್ಟೇಡಿಯಂ ಕಾರ್ಯಕ್ರಮಕ್ಕೆ ಅನುಮತಿ ನೀಡಿದ್ದರು. ಅಲ್ಲದೆ ಪ್ರಕರಣದಲ್ಲಿ ಸರ್ಕಾರ, ಆರ್‌ಸಿಬಿ ಮ್ಯಾನೇಜ್‌ಮೆಂಟ್ ಮತ್ತು ಈವೆಂಟ್ ಆಯೋಜಕರ ನಡುವೆ ಸಮನ್ವಯದ ಕೊರತೆ ಎದ್ದು ಕಾಣಿಸುತ್ತಿತ್ತು. ಕಾರ್ಯಕ್ರಮ ಮುಂದೂಡುವಂತೆ ಹಿರಿಯ ಪೊಲೀಸ್ ಅಧಿಕಾರಿಗಳ ಸಲಹೆ ನಿರ್ಲಕ್ಷಿಸಿ, ಸೂಕ್ತ ಯೋಜನೆ ಇಲ್ಲದೆ ಕಾರ್ಯಕ್ರಮ ಆಯೋಜಿಸಿದ್ದು ಕೂಡ ಅನಾಹುತಕ್ಕೆ ಎಡೆ ಮಾಡಿಕೊಟ್ಟಿತು. ಅನೇಕ ವಿದೇಶಿ ಆಟಗಾರರು ಅಂದೇ ಹೊರಡಬೇಕಾಗಿದ್ದರಿಂದ ಮ್ಯಾನೇಜ್‌ಮೆಂಟ್‌ ತರಾತುರಿಯಲ್ಲಿ ಕಾರ್ಯಕ್ರಮ ಆಯೋಜಿಸಿತ್ತು ಎನ್ನಲಾಗಿದೆ. ಜತೆಗೆ ರಾಜಕಾರಣಿಗಳ ಒತ್ತಡ ಕೂಡ ಹೆಚ್ಚಾಗಿತ್ತು ಎಂದು ವರದಿಯೊಂದು ಹೇಳಿದೆ.

ಸರ್ಕಾರದ ನಡೆಗೆ ಭಾಸ್ಕರ್‌ ರಾವ್‌ ಗರಂ

ಕಾಲ್ತುಳಿತ ಸಂಭವಿಸಿ 11 ಮಂದಿ ಮೃತಪಟ್ಟ ಪ್ರಕರಣ ಸಂಬಂಧ ರಾಜ್ಯ ಸರ್ಕಾರ ಬೆಂಗಳೂರು ಪೊಲೀಸ್ ಆಯುಕ್ತ ಬಿ.ದಯಾನಂದ್ ಸೇರಿದಂತೆ ಐವರನ್ನು ಅಮಾನತು ಮಾಡಿದೆ. ಈ ನಡೆಯನ್ನು ಭಾಸ್ಕರ್ ರಾವ್ ಖಂಡಿಸಿದ್ದಾರೆ. ಇಷ್ಟು ಅಸಹಾಯಕರಾಗಿ, ಹೇಡಿಯಂತೆ ಮತ್ತು ಆತಂಕದಿಂದ ಈವರೆಗೆ ಯಾವ ಮುಖ್ಯಮಂತ್ರಿಯೂ ವರ್ತಿಸಿಲ್ಲ ಎಂದು ಟೀಕಿಸಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಭಯಭೀತರಾಗಿದ್ದಾರೆ. ಬೆಂಗಳೂರು ಪೊಲೀಸ್ ಆಯುಕ್ತರ ಅಮಾನತು ನಿರ್ಧಾರ ಕರ್ನಾಟಕದ ಪೊಲೀಸ್ ಇತಿಹಾಸದಲ್ಲಿ ಕರಾಳ ದಿನ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.