Karnataka Budget 2026: ಸಿಎಂ ಸಿದ್ದರಾಮಯ್ಯ ಬೆಳಗ್ಗೆ 10.15ಕ್ಕೇ ಬಜೆಟ್ ಮಂಡಿಸಲು ಕಾರಣವೇನು?; ಶಾಸಕ ಸುರೇಶ್ ಕುಮಾರ್ ಹೇಳಿದ್ದೇನು?
ಸಿಎಂ ಸಿದ್ದರಾಮಯ್ಯ ಅವರು ಬಜೆಟ್ ಮಂಡಿಸಿರುವ ಸಮಯದ ಬಗ್ಗೆ ಶಾಸಕ ಸುರೇಶ್ ಕುಮಾರ್ ಮಾಡಿರುವ ಪೋಸ್ಟ್ ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಸಾಮಾನ್ಯವಾಗಿ ಬಜೆಟ್ ಮಂಡನೆ 10 ಗಂಟೆ ಅಥವಾ 11 ಗಂಟೆಗೆ ಮಾಡಲಾಗುತ್ತದೆ. ಆದರೆ ಈ ಬಾರಿ 10.15ಕ್ಕೆ ಬಜೆಟ್ ಮಂಡನೆಯಾಗಿದೆ ಯಾಕೆ ಎಂಬ ಬಗ್ಗೆ ಚರ್ಚೆ ನಡೆಯುತ್ತಿದೆ.
ಸಿಎಂ ಸಿದ್ದರಾಮಯ್ಯ ಹಾಗೂ ಶಾಸಕ ಸುರೇಶ್ ಕುಮಾರ್ -
ಬೆಂಗಳೂರು: ಸಿಎಂ ಸಿದ್ದರಾಮಯ್ಯ ಅವರು ಇಂದು ಬೆಳಗ್ಗೆ ಮಂಡಿಸಿದ ರಾಜ್ಯ ಬಜೆಟ್ನ (Karnataka Budget 2026) ಸಮಯವು ಸದ್ಯ ಚರ್ಚೆಗೆ ಗ್ರಾಸವಾಗಿದೆ. ಈ ವಿಚಾರವಾಗಿ ರಾಜಾಜಿನಗರ ಬಿಜೆಪಿ ಶಾಸಕ ಸುರೇಶ್ ಕುಮಾರ್ (Suresh Kumar) ಅಚ್ಚರಿಯ ಕಾರಣವೊಂದನ್ನು ನೀಡಿದ್ದು, ಈ ಬಗ್ಗೆ ಫೇಸ್ಬುಕ್ನಲ್ಲಿ ಪೋಸ್ಟ್ ಹಾಕಿದ್ದಾರೆ.
ಸಾಮಾನ್ಯವಾಗಿ ಬಜೆಟ್ ಮಂಡನೆ 10 ಗಂಟೆ ಅಥವಾ 11 ಗಂಟೆಗೆ ಮಾಡಲಾಗುತ್ತದೆ. ಆದರೆ ಈ ಬಾರಿ 10.15ಕ್ಕೆ ಬಜೆಟ್ ಮಂಡನೆಯಾಗಿದೆ. ಇದಕ್ಕೆ ಕಾರಣವೇನು ಎಂಬ ಕುತೂಹಲ ರಾಜಕೀಯ ವಲಯದಲ್ಲೂ ಮೂಡಿದೆ.
ಸುರೇಶ್ ಕುಮಾರ್ ಫೇಸ್ಬುಕ್ ಪೋಸ್ಟ್ನಲ್ಲೇನಿದೆ?
ರಾಜ್ಯದ ಮುಖ್ಯಮಂತ್ರಿ ಹಾಗೂ ಹಣಕಾಸು ಸಚಿವರಾದ ಸಿದ್ದರಾಮಯ್ಯನವರು ಶುಕ್ರವಾರ ಬೆಳಗ್ಗೆ 10.15 ಗಂಟೆಗೆ ವಿಧಾನಸಭೆಯಲ್ಲಿ ಈ ವರ್ಷದ ಬಜೆಟ್ ಅನ್ನು ಮಂಡಿಸುತ್ತಿದ್ದಾರೆ. 10 ಗಂಟೆ ಅಲ್ಲ, 10.30 ಗಂಟೆ ಅಲ್ಲ, 11.00 ಗಂಟೆ ಅಲ್ಲ. ಏಕೆ 10.15 ಗಂಟೆಗೆ ಎಂದು ಕುತೂಹಲದಿಂದ ವಿಚಾರಿಸಿದಾಗ ಗೊತ್ತಾಗಿದ್ದು ಈ ವಿಚಾರ. ಏಕೆಂದರೆ ಶುಕ್ರವಾರ, ಬೆಳಗ್ಗೆ 10.30 ಗಂಟೆಯಿಂದ ರಾಹುಕಾಲ! ಬೆಳಗ್ಗೆ 7.30 ಗಂಟೆ ಯಿಂದ 9 ಗಂಟೆಯವರೆಗೂ ಗುಳಿಕಕಾಲ. #ಮೂಢನಂಬಿಕೆ ಎಂಬ ಹ್ಯಾಷ್ಟ್ಯಾಗ್ನೊಂದಿಗೆ ಸುರೇಶ್ ಕುಮಾರ್ ಪೋಸ್ಟ್ ಮಾಡಿದ್ದಾರೆ.
ರಾಹುಕಾಲ ಆರಂಭಕ್ಕೂ ಮೊದಲು ಬಜೆಟ್ ಮಂಡನೆ ಆರಂಭಿಸಬೇಕೆಂಬ ಕಾರಣಕ್ಕೆ 10.15 ಗಂಟೆಯನ್ನು ಆಯ್ಕೆ ಮಾಡಿರಬಹುದೇ ಎಂಬ ಅನುಮಾನವನ್ನು ಸುರೇಶ್ ಕುಮಾರ್ ವ್ಯಕ್ತಪಡಿಸಿದ್ದಾರೆ.
ಸುರೇಶ್ ಕುಮಾರ್ ಅವರ ಈ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಸಿಎಂ ಅವರು ಒಂದುಕಡೆ ಜ್ಯೋತಿಷ್ಯ ನಂಬಲ್ಲ ಎನ್ನುತ್ತಾರೆ, ಮತ್ತೊಂದೆಡೆ ರಾಹುಕಾಲ, ಗುಳಿಕಕಾಲ ನೋಡುತ್ತಾರೆ. ಈ ಸಮಯದ ಹಿಂದೆ ನಿಜವಾಗಿಯೂ ಜ್ಯೋತಿಷ್ಯದ ಕಾರಣವಿದೆಯೇ ಎಂದು ನೆಟ್ಟಿಗರು ಕಮೆಂಟ್ ಮಾಡಿದ್ದಾರೆ.
Karnataka Budget 2026: ಅಮರ್ಥ್ಯಸೇನ್ ಅಶಯ ಬಿಂಬಿಸಿದ ರಾಜ್ಯ ಬಜೆಟ್; 11 ಜಿ ಮಾದರಿ ಎಂದರೇನು?
ಆದರೆ ಸರ್ಕಾರ ಈ ಬಗ್ಗೆ ಯಾವುದೇ ದೃಢೀಕರಣ ನೀಡಿಲ್ಲ. ಸಾಮಾನ್ಯವಾಗಿ ವಿಧಾನಸಭೆಯ ಕಾರ್ಯಚಟುವಟಿಕೆಗಳ ವೇಳಾಪಟ್ಟಿ, ವಿಧಾನಮಂಡಲದ ಪ್ರಕ್ರಿಯೆಗಳು ಹಾಗೂ ಆಡಳಿತಾತ್ಮಕ ಕಾರಣಗಳ ಆಧಾರದ ಮೇಲೆ ಸಮಯ ನಿಗದಿಯಾಗುವುದು ರೂಢಿಯಾಗಿದೆ.