ಬಸವಕಲ್ಯಾಣದಲ್ಲಿ ಬಸವೇಶ್ವರರ ರಥೋತ್ಸವದ ವೇಳೆ ಘೋರ ದುರಂತ; ರಥದ ಚಕ್ರಕ್ಕೆ ಸಿಲುಕಿ ವ್ಯಕ್ತಿ ಸಾವು
Bidar News: ಬೀದರ್ ಜಿಲ್ಲೆಯ ಬಸವಕಲ್ಯಾಣ ನಗರದಲ್ಲಿ ಬಸವೇಶ್ವರ ದೇವಸ್ಥಾನ ಜಾತ್ರಾ ಮಹೋತ್ಸವ ವೇಳೆ ಭೀಕರ ಅವಘಡ ಸಂಭವಿಸಿದೆ. ರಥ ಎಳೆಯುವ ವೇಳೆ ಆಯಾ ತಪ್ಪಿ ಚಕ್ರಕ್ಕೆ ಸಿಲುಕಿ ಗಾಯಗೊಂಡಿದ್ದ ಧನರಾಜ ಚಾಕೂರೆ (65) ಮೃತಪಟ್ಟಿದ್ದಾರೆ.
ಮೃತ ವ್ಯಕ್ತಿ ರಾಜ ಚಾಕೂರೆ (ಸಂಗ್ರಹ ಚಿತ್ರ) -
ಬೀದರ್, ಏ. 23: ಜಿಲ್ಲೆಯ ಬಸವಕಲ್ಯಾಣ ನಗರದಲ್ಲಿ (Bidar News) ಬಸವೇಶ್ವರ ದೇವಸ್ಥಾನ ಜಾತ್ರಾ ಮಹೋತ್ಸವ ವೇಳೆ ಭೀಕರ ಅವಘಡ ಸಂಭವಿಸಿದ್ದು ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ. ರಥೋತ್ಸವ ಸಂಭ್ರಮದಲ್ಲಿ ರಥ ಎಳೆಯುವ ವೇಳೆ ಆಯಾ ತಪ್ಪಿ ಚಕ್ರಕ್ಕೆ ಸಿಲುಕಿ ಗಾಯಗೊಂಡಿದ್ದ ಧನರಾಜ ಚಾಕೂರೆ (65) ಮೃತಪಟ್ಟಿದ್ದಾರೆ.
ಧನರಾಜ ಮೂಲತಃ ಹುಲಸೂರ ತಾಲೂಕಿನ ಮುಚಳಂಬ ಗ್ರಾಮದ ನಿವಾಸಿ. ಅವರ ಎರಡು ಕಾಲುಗಳ ಮೇಲಿಂದ ರಥದ ಚಕ್ರ ಸಾಗಿದೆ. ಇದರಿಂದ ಅವರ ಕಾಲುಗಳಿಗೆ ಗಂಭೀರವಾಗಿ ಗಾಯವಾಗಿತ್ತು. ಕೂಡಲೇ ಅವರನ್ನು ಬಸವಕಲ್ಯಾಣ ನಗರದ ಸರಕಾರಿ ಆಸ್ಪತ್ರೆಗೆ ದಾಖಲಿಸಿ ಪ್ರಥಮ ಚಿಕಿತ್ಸೆ ನೀಡಲಾಗಿತ್ತು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಕಲಬುರಗಿಯ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಸಾವನಪ್ಪಿದ್ದಾರೆ. ಇನ್ನೊರ್ವ ವ್ಯಕ್ತಿ ರೀಷಿಬ್ ಎಂಬಾತನ ಕಾಲುಗಳಿಗೆ ಗಂಭೀರ ಗಾಯಗಳಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಸೋಲಾಪೂರ ಆಸ್ಪತ್ರೆಗೆ ರವಾನಿಸಲಾಗಿದೆ.
ಹಲವು ವಾಹನಗಳಿಗೆ ಡಿಕ್ಕಿ ಹೊಡೆದ ಬೊಲೆರೊ ಬೆಂಕಿಗೆ ಆಹುತಿ; 11 ಮಂದಿ ದುರ್ಮರಣ
ರಥೋತ್ಸವ ವೇಳೆ ಸಾವಿರಾರು ಭಕ್ತರು ಭಾಗಿಯಾಗಿದ್ದರು. ಒಬ್ಬರಿಗೊಬ್ಬರು ನೂಕಾಟ-ತಳ್ಳಾಟ ಉಂಟಾಗಿ ದುರ್ಘಟನೆ ನಡೆದಿದೆ ಎನ್ನಲಾಗಿದೆ. ಸ್ಥಳಕ್ಕೆ ಹಿರಿಯ ಪೋಲಿಸ್ ಅಧಿಕಾರಿಗಳು ಭೇಟಿ ನೀಡಿ ತನಿಖೆ ಆರಂಭಿಸಿದ್ದಾರೆ.
ರಥ ಹರಿದು ಮಹಿಳೆಯ ಕಾಲು ಕಟ್
ಕಳೆದ ತಿಂಗಳು ಕಲಬುರಗಿ ಜಿಲ್ಲೆಯ ಯಡ್ರಾಮಿ ತಾಲೂಕಿನ ಅರಳಗುಂಡಗಿ ಗ್ರಾಮದಲ್ಲಿ ನಡೆದ ಶರಣಬಸವೇಶ್ವರ ಜಾತ್ರೆಯ ರಥೋತ್ಸವ ವೇಳೆ ದುರ್ಘಟನೆ ಸಂಭವಿಸಿ ಮಹಿಳೆಯೊಬ್ಬರು ಗಂಭೀರವಾಗಿ ಗಾಯಗೊಂಡಿದ್ದರು. ಗ್ರಾಮದ ನಿವಾಸಿ ನಾಗಮ್ಮ ಎಂಬ ಮಹಿಳೆ ರಥದ ಚಕ್ರಕ್ಕೆ ಸಿಲುಕಿಕೊಂಡ ಪರಿಣಾಮ ಅವರ ಎರಡೂ ಕಾಲುಗಳು ಕಡಿದು ಹೋಗಿದ್ದವು.
ಅರಳಗುಂಡಗಿ ಗ್ರಾಮವು ಶರಣಬಸವೇಶ್ವರರ ಜನ್ಮಸ್ಥಳವಾಗಿರುವ ಹಿನ್ನೆಲೆಯಲ್ಲಿ ಪ್ರತಿವರ್ಷವೂ ಜಾತ್ರೆಯನ್ನು ಭಕ್ತಿಭಾವದಿಂದ ಆಚರಿಸಲಾಗುತ್ತದೆ. ಅದರಂತೆ ಮಾರ್ಚ್ 8ರ ಸಂಜೆ ಸುಮಾರು 6 ಗಂಟೆಗೆ ಜಾತ್ರೆಯ ಅಂಗವಾಗಿ ಶರಣಬಸವೇಶ್ವರ ರಥೋತ್ಸವ ಆರಂಭವಾಗಿತ್ತು. ಈ ವೇಳೆ ಗ್ರಾಮಸ್ಥರು ಉತ್ಸಾಹದಿಂದ ರಥವನ್ನು ಎಳೆಯಲು ಮುಂದಾಗಿದ್ದರು. ಜನಸಮೂಹ ಹೆಚ್ಚಾಗಿದ್ದ ಕಾರಣ ನಿಯಂತ್ರಣ ತಪ್ಪಿದ ರಥ ಜನರು ನಿಂತಿದ್ದ ದಿಕ್ಕಿಗೆ ಚಲಿಸಿತ್ತು. ಈ ವೇಳೆ ರಥದ ಸಮೀಪದಲ್ಲಿದ್ದ ನಾಗಮ್ಮ ಎಂಬ ಮಹಿಳೆ ತಪ್ಪಿಸಿಕೊಳ್ಳಲು ಸಾಧ್ಯವಾಗದೆ ರಥದ ಚಕ್ರಕ್ಕೆ ಸಿಲುಕಿಕೊಂಡಿದ್ದರು.