Bike Taxi: ನಿಷೇಧದ ನಡುವೆಯೂ ಬೈಕ್ ಟ್ಯಾಕ್ಸಿ ಓಡಾಟ; ಪಾರ್ಸೆಲ್ ಹೆಸರಲ್ಲಿ ಸೇವೆ, 103 ದ್ವಿಚಕ್ರ ವಾಹನ ವಶಕ್ಕೆ
Bike Taxi: ನಿಷೇಧ ಹಿನ್ನೆಲೆಯಲ್ಲಿ ಓಲಾ, ಉಬರ್, ರ್ಯಾಪಿಡೋ ಸೇರಿ ಎಲ್ಲ ಅಗ್ರಿಗೇಟರ್ಗಳು ಬೈಕ್ ಟ್ಯಾಕ್ಸಿ ಸೇವೆ ಸ್ಥಗಿತಗೊಳಿಸಿವೆ. ಅದರಂತೆ ಆ್ಯಪ್ಗಳಲ್ಲೂ ಬೈಕ್ ಟ್ಯಾಕ್ಸಿ ಸೇವೆ ಆಯ್ಕೆ ತೆಗೆದು ಹಾಕಲಾಗಿದೆ. ಆದರೆ, ಬೈಕ್ ಪಾರ್ಸೆಲ್ ಸೇವೆ ಆರಂಭಿಸಿರುವುದರಿಂದ ಸಾರಿಗೆ ಇಲಾಖೆ ಕ್ರಮ ಕೈಗೊಂಡಿದೆ.


ಬೆಂಗಳೂರು: ರಾಜ್ಯದಲ್ಲಿ ಬೈಕ್ ಟ್ಯಾಕ್ಸಿ (Bike Taxi) ಸೇವೆಗೆ ಜೂನ್ 16ರಿಂದ ನಿಷೇಧ ಹೇರಲಾಗಿದೆ. ಆದರೆ, ಹೈಕೋರ್ಟ್ ಆದೇಶದ ಬಳಿಕವೂ ಟ್ಯಾಕ್ಸಿ ಸೇವೆ ನೀಡುತ್ತಿದ್ದ ಬೈಕ್ ಸವಾರರ ವಿರುದ್ಧ ಕ್ರಮ ಕೈಗೊಂಡಿರುವ ಸಾರಿಗೆ ಇಲಾಖೆ, 103 ಬೈಕ್ಗಳನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದೆ. ಬೈಕ್ ಟ್ಯಾಕ್ಸಿ ಸಂಸ್ಥೆಗಳು, ಆ್ಯಪ್ಗಳಲ್ಲಿ ಬೈಕ್ ಟ್ಯಾಕ್ಸಿ ಸೇವೆ ಆಯ್ಕೆ ತೆಗೆದು ಹಾಕಿ, ʼಬೈಕ್ ಪಾರ್ಸೆಲ್ʼ ಸೇವೆ ಆರಂಭಿಸಿವೆ. ಹೀಗಾಗಿ ಸಾರಿಗೆ ಇಲಾಖೆ ಕಾರ್ಯಾಚರಣೆ ಕೈಗೊಂಡು, 103 ಬೈಕ್ಗಳನ್ನು ಜಪ್ತಿ ಮಾಡಿದೆ.
ಸಾರಿಗೆ ನಿಯಮಗಳ ಪ್ರಕಾರ ಬೈಕ್ ಟ್ಯಾಕ್ಸಿ ಸೇವೆಯನ್ನು ವೈಟ್ ಬೋರ್ಡ್ ವಾಹನಗಳ ಮೂಲಕ ನೀಡುವಂತಿಲ್ಲ. ಇದಕ್ಕೆ ಸಂಬಂಧಿಸಿ ರಾಜ್ಯ ಸರ್ಕಾರದಿಂದ ಯಾವುದೇ ಮಾರ್ಗಸೂಚಿ ರೂಪುಗೊಂಡಿಲ್ಲ. ಆದರೂ, ಓಲಾ, ಉಬರ್, ರ್ಯಾಪಿಡೋ ಸೇರಿದಂತೆ ಇನ್ನಿತರ ಸಂಸ್ಥೆಗಳು ಬೈಕ್ ಟ್ಯಾಕ್ಸಿ ಸೇವೆ ನೀಡುತ್ತಿದ್ದವು. ಹೀಗಾಗಿ ಸಾರಿಗೆ ಇಲಾಖೆ ಕ್ರಮ ಕೈಗೊಂಡಿದೆ.
ಇದಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ನಲ್ಲಿ ಅರ್ಜಿ ವಿಚಾರಣೆ ನಡೆದು, ಜೂನ್ 15ರ ನಂತರ ರಾಜ್ಯದಲ್ಲಿ ಬೈಕ್ ಟ್ಯಾಕ್ಸಿ ಸೇವೆ ನೀಡುವಂತಿಲ್ಲ ಎಂದು ಹೈಕೋರ್ಟ್ ಆದೇಶಿಸಿತ್ತು. ಆ ಹಿನ್ನೆಲೆಯಲ್ಲಿ ಸಾರಿಗೆ ಇಲಾಖೆ ಅಧಿಕಾರಿಗಳು ನಗರದ ವಿವಿಧ ಭಾಗಗಳಲ್ಲಿ ತಪಾಸಣೆ ನಡೆಸಿದ ವೇಳೆ ಬೈಕ್ ಟ್ಯಾಕ್ಸಿ ಸೇವೆ ನೀಡುತ್ತಿದ್ದ 103 ಬೈಕ್ಗಳನ್ನು ವಶಕ್ಕೆ ಪಡೆದಿದ್ದಾರೆ. ಎಲ್ಲ 103 ಬೈಕ್ಗಳ ವಿರುದ್ಧ ಪ್ರಕರಣ ದಾಖಲಿಸಿ ತಲಾ 5 ಸಾವಿರ ರು. ದಂಡ ವಿಧಿಸಿದ್ದಾರೆ.
ಬೆಂಗಳೂರು ಪಶ್ಚಿಮ ಪ್ರಾದೇಶಿಕ ಸಾರಿಗೆ ಕಚೇರಿ 16 ಪ್ರಕರಣಗಳಲ್ಲಿ ಹೆಚ್ಚಿನ ಪ್ರಕರಣಗಳನ್ನು ದಾಖಲಿಸಿದ್ದರೆ, ಕೆಆರ್ ಪುರದಲ್ಲಿ13 ಪ್ರಕರಣ ಮತ್ತು ಬೆಂಗಳೂರು ಪೂರ್ವ ಆರ್ಟಿಒ ಅಧಿಕಾರಿಗಳು 12 ಪ್ರಕರಣಗಳನ್ನು ದಾಖಲಿಸಿದ್ದಾರೆ.
ಈ ಸುದ್ದಿಯನ್ನೂ ಓದಿ | Thug Life: ಕಮಲ್ಗೆ ಬಿಗ್ ರಿಲೀಫ್; ಕರ್ನಾಟದಲ್ಲಿ ಥಗ್ ಲೈಫ್ ಸಿನಿಮಾ ರಿಲೀಸ್ಗೆ ಸುಪ್ರೀಂಕೋರ್ಟ್ ಸೂಚನೆ
ನಿಷೇಧ ಹಿನ್ನೆಲೆಯಲ್ಲಿ ಓಲಾ, ಉಬರ್, ರ್ಯಾಪಿಡೋ ಸೇರಿ ಎಲ್ಲ ಅಗ್ರಿಗೇಟರ್ಗಳು ಬೈಕ್ ಟ್ಯಾಕ್ಸಿ ಸೇವೆ ಸ್ಥಗಿತಗೊಳಿಸುವುದಾಗಿ ಘೋಷಿಸಿವೆ. ಆ್ಯಪ್ಗಳಲ್ಲೂ ಬೈಕ್ ಟ್ಯಾಕ್ಸಿಸೇವೆ ಆಯ್ಕೆ ತೆಗೆದು ಹಾಕಿದೆ. ಆದರೆ, ಒಲಾ, ಉಬರ್, ಕ್ಯಾಪಿಡೋ ಸಂಸ್ಥೆಗಳು ಬೈಕ್ ಪಾರ್ಸೆಲ್ ಸೇವೆ ಆರಂಭಿಸಿವೆ. ಗ್ರಾಹಕರಿಗೆ ಟ್ಯಾಕ್ಸಿ ಸೇವೆಯ ವಸ್ತುಗಳನ್ನು ಒಂದು ಕಡೆಯಿಂದ ಇನ್ನೊಂದು ಕಡೆಗೆ ತಲುಪಿಸುವ ಸೇವೆ ನೀಡಲಾಗುತ್ತದೆ. ಆದರೆ, ಈ ಸೇವೆಯ ಮೂಲಕವೇ ಬೈಕ್ ಸವಾರರು ಟ್ಯಾಕ್ಸಿ ಸೇವೆ ನೀಡುತ್ತಿರುವುದು ಸೋಮವಾರ ಪತ್ತೆಯಾಗಿದ್ದು, ಈ ಹಿನ್ನೆಲೆಯಲ್ಲಿ ಪಾರ್ಸೆಲ್ ಸೇವೆ ಹೆಸರಿನಲ್ಲಿ ಟ್ಯಾಕ್ಸಿ ಸೇವೆ ನೀಡುವವರ ವಿರುದ್ಧ ಸಾರಿಗೆ ಇಲಾಖೆ ಕ್ರಮ ಕೈಗೊಂಡಿದೆ.
ಜೂನ್ 24ಕ್ಕೆ ಹೈಕೋರ್ಟ್ನಲ್ಲಿ ವಿಚಾರಣೆ
ಬೆಂಗಳೂರು: ರಾಜ್ಯದಲ್ಲಿ ಓಲಾ (Ola), ಉಬರ್ (Uber), ರ್ಯಾಪಿಡೊ (Rapido) ಬೈಕ್ ಟ್ಯಾಕ್ಸಿ ಸೇವೆಯನ್ನು ಜೂನ್ 16ರಿಂದ ಸ್ಥಗಿತಗೊಳಿಸಲಾಗಿತ್ತು. ಬೈಕ್ ಟ್ಯಾಕ್ಸಿ ಸೇವೆ ಮುಂದುವರಿಕೆಗೆ ಪೂರಕವಾದ ಮಧ್ಯಂತರ ಪರಿಹಾರ ನೀಡಲು ಹೈಕೋರ್ಟ್ (Karnataka High Court) ನ್ಯಾಯಪೀಠ ನಿರಾಕರಿಸಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಬೈಕ್ ಟ್ಯಾಕ್ಸಿ ಸೇವೆ (Bike Taxi Service) ಬಂದ್ ಆಗಿತ್ತು. ಈ ಕುರಿತು ಏಕ ಸದಸ್ಯ ಪೀಠದ ಆದೇಶ ಪ್ರಶ್ನಿಸಿ ಸಲ್ಲಿಸಿರುವ ಮೇಲ್ಮನವಿ ವಿಚಾರಣೆಯನ್ನು ಹೈಕೋರ್ಟ್ ವಿಭಾಗೀಯ ಪೀಠ ಜೂನ್ 24ಕ್ಕೆ ನಿಗದಿ ಪಡಿಸಿತ್ತು.
ರಾಜ್ಯದಲ್ಲಿ ಸೂಕ್ತ ನಿಯಮಗಳ ರಚನೆಯಾಗದ ಹಿನ್ನೆಲೆಯಲ್ಲಿ ಬೈಕ್ ಟ್ಯಾಕ್ಸಿಗಳ ಸೇವೆ ಸ್ಥಗಿತಗೊಳಿಸಲು ನಿರ್ದೇಶನ ನೀಡಿರುವ ಏಕ ಸದಸ್ಯಪೀಠ ಆದೇಶ ಪ್ರಶ್ನಿಸಿ ಉಬರ್ ಇಂಡಿಯಾ ಸಿಸ್ಟಮ್ಸ್ ಪ್ರೈವೇಟ್ ಲಿಮಿಟೆಡ್, ಎಎನ್ಐ ಟೆಕ್ನಾಲಜಿ ಪ್ರೈವೇಟ್ ಲಿಮಿಟೆಡ್ (ಓಲಾ), ವರ್ಕುಟಿ ಮಹೇಂದ್ರ ರೆಡ್ಡಿ (ಬೈಕ್ ಟ್ಯಾಕ್ಸಿಗಳ ಮಾಲೀಕರು) ಮತ್ತಿತರರು ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆ ನಡೆಸಿದ ಹಂಗಾಮಿ ಮುಖ್ಯ ನ್ಯಾಯಮೂರ್ತಿ ವಿ.ಕಾಮೇಶ್ವರ ರಾವ್ ಮತ್ತು ನ್ಯಾಯಮೂರ್ತಿ ಸಿ.ಎಂ.ಜೋಶಿ ಅವರಿದ್ದ ವಿಭಾಗೀಯ ನ್ಯಾಯಪೀಠ ವಿಚಾರಣೆಯನ್ನು ಮುಂದೂಡಿತ್ತು.
ವಿಚಾರಣೆ ವೇಳೆ ಅಡ್ವೊಕೇಟ್ ಜನರಲ್ ಶಶಿಕಿರಣ್ ಶೆಟ್ಟಿ ವಾದಿಸಿ, ನಾಲ್ಕು ಚಕ್ರದ ವಾಹನಗಳು ಮತ್ತು ಮೂರು ಚಕ್ರದ ವಾಹನಗಳು ಅನುಮತಿ ಪಡೆದು ತೆರಿಗೆ ಪಾವತಿಸಿ ಬಾಡಿಗೆ ವಾಹನಗಳಾಗಿ ಕಾರ್ಯ ನಿರ್ವಹಿಸುತ್ತಿವೆ. ದ್ವಿಚಕ್ರವಾಹನಗಳು ಬಾಡಿಗೆ ವಾಹನಗಳಾಗಿ ಕಾರ್ಯಾಚರಿಸಲು ಸಾಧ್ಯವಿಲ್ಲ. ದ್ವಿಚಕ್ರ ವಾಹನಗಳು ಬಾಡಿಗೆ ವಾಹನಗಳಾಗಿ ಕಾರ್ಯಾಚರಣೆ ನಡೆಸಲು 8 ರಾಜ್ಯಗಳಲ್ಲಿ ಮಾತ್ರ ಅನುಮತಿ ನೀಡಲಾಗಿದೆ ಎಂದು ನ್ಯಾಯಪೀಠಕ್ಕೆ ತಿಳಿಸಿದ್ದರು. ವಾದ ಆಲಿಸಿದ ನ್ಯಾಯಪೀಠ, ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿ ಮುಂದಿನ ವಿಚಾರಣೆಯನ್ನು ಜೂನ್ 24ಕ್ಕೆ ಮುಂದೂಡಿತ್ತು.
ಇದನ್ನೂ ಓದಿ: Bike Taxi Ban: ಓಲಾ, ಉಬರ್, ರ್ಯಾಪಿಡೋಗೆ ಶಾಕ್; ಬೈಕ್ ಟ್ಯಾಕ್ಸಿ ಸೇವೆ ನಿರ್ಬಂಧ ಆದೇಶಕ್ಕೆ ತಡೆ ನೀಡಲು ಹೈಕೋರ್ಟ್ ನಕಾರ
ಮೋಟಾರು ವಾಹನ ಕಾಯ್ದೆಯ ನಿಯಮಗಳ ಪ್ರಕಾರವಾಗಿ ಹಳದಿ ನೋಂದಣಿ ಫಲಕ ಹೊಂದಿರುವ ಸಾರಿಗೆ ವಾಹನಗಳಂತೆ ಬೈಕ್ ಟ್ಯಾಕ್ಸಿಗೆ ಅನುಮತಿ ನೀಡಬೇಕು ಎಂಬುದಾಗಿ ರಾಜ್ಯ ಸರಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಕೋರಿ ಉಬರ್ ಇಂಡಿಯಾ ಸಿಸ್ಟಮ್ಸ್ ಪ್ರೈವೇಟ್ ಲಿಮಿಟೆಡ್, ರೊಪ್ಪೆನ್ ಟ್ರಾನ್ಸ್ಪೊರ್ಟೇಶನ್ ಸರ್ವೀಸಸ್ ಪ್ರೈವೇಟ್ ಲಿಮಿಟೆಡ್ ಮತ್ತು ಎಎನ್ಐ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್ ಪ್ರತ್ಯೇಕ ಅರ್ಜಿಗಳನ್ನು ಸಲ್ಲಿಸಿದ್ದವು. ಈ ಅರ್ಜಿಗಳ ವಿಚಾರಣೆ ನಡೆಸಿದ್ದ ನ್ಯಾಯಪೀಠ, ಬೈಕ್ ಸೇವೆಯನ್ನು ಸ್ಥಗಿತಗೊಳಿಸಲು ಆದೇಶಿಸಿತ್ತು. ಇದನ್ನು ಪ್ರಶ್ನಿಸಿ ಅಗ್ರಿಗೇಟರ್ ಸಂಸ್ಥೆಗಳು ಹೈಕೋರ್ಟ್ ದ್ವಿಸದಸ್ಯ ಪೀಠಕ್ಕೆ ಮೇಲ್ಮನವಿ ಸಲ್ಲಿಸಿದ್ದರು.