ಚಿಕ್ಕಬಳ್ಳಾಪುರ/ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಮತ್ತು ಆರ್ಥಿಕ ಸಚಿವೆ ನಿರ್ಮಲಾ ಸೀತಾರಾಮನ್(Finance Minister Nirmala Sitharaman) ದೂರದೃಷ್ಟಿಯ ಮತ್ತು ಭವಿಷ್ಯ ಕೇಂದ್ರಿತ ಬಜೆಟ್ ಮಂಡಿಸಿದ್ದಕ್ಕಾಗಿ ಸಂಸದ ಡಾ.ಕೆ.ಸುಧಾಕರ್(MP Dr.K.Sudhakar) ಅಭಿನಂದನೆ ಸಲ್ಲಿಸಿದ್ದಾರೆ. ಇದು ವಿಕಸಿತ ಭಾರತ @2047 ನಿರ್ಮಿಸುವ ಐತಿಹಾಸಿಕ ಮೈಲಿಗಲ್ಲು ಎಂದು ಬಣ್ಣಿಸಿದ್ದಾರೆ.
"ಈ ಬಜೆಟ್ ಆರ್ಥಿಕ ಶಿಸ್ತು, ಸಾಮಾಜಿಕ ಸಮಾನತೆ ಮತ್ತು ಅಭಿವೃದ್ಧಿಯ ಅಪರೂಪದ ಸಮತೋಲನವಾಗಿದೆ. ಇದು ಭಾರತದ ದೀರ್ಘಕಾಲೀನ ಬದಲಾವಣೆಗೆ ಸಮಗ್ರ ನೀಲನಕ್ಷೆಯನ್ನು ನೀಡುತ್ತದೆ. ಆರ್ಥಿಕ ಬೆಳವಣಿಗೆಗೆ ಚಾಲನೆ ನೀಡುವುದು, ನಾಗರಿಕರ ನಿರೀಕ್ಷೆಗಳನ್ನು ಪೂರೈಸುವುದು ಮತ್ತು ಎಲ್ಲರಿಗೂ ಸಂಪನ್ಮೂಲ ಸಿಗುವಂತೆ ಮಾಡುವ ಮೂರು ಕರ್ತವ್ಯಗಳನ್ನು ಇಲ್ಲಿ ಹೇಳಲಾಗಿದೆ. ಜವಾಬ್ದಾರಿಯುತ ಮತ್ತು ಸುಧಾರಣೆಯ ಆಡಳಿತದ ವಿಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಬದ್ಧತೆಯನ್ನು ಈ ಬಜೆಟ್ ಪ್ರದರ್ಶಿಸುತ್ತದೆ" ಎಂದು ಡಾ.ಕೆ.ಸುಧಾಕರ್ ಹೇಳಿದ್ದಾರೆ.
ಮೂಲಸೌಕರ್ಯ ಮತ್ತು ಪ್ರಾದೇಶಿಕ ಬೆಳವಣಿಗೆ
ಮೂಲಸೌಕರ್ಯ ಅಭಿವೃದ್ಧಿಯ ಕುರಿತು ಹೇಳಿದ ಅವರು, ಚೆನ್ನೈ-ಬೆಂಗಳೂರು ಮತ್ತು ಹೈದರಾ ಬಾದ್-ಬೆಂಗಳೂರು ಮಾರ್ಗಗಳನ್ನು ಒಳಗೊಂಡಂತೆ ಏಳು ಹೈ-ಸ್ಪೀಡ್ ರೈಲು ಕಾರಿಡಾರ್ಗಳ ಘೋಷಣೆ ಅತ್ಯುತ್ತಮವಾಗಿದೆ. ವಿಶೇಷವಾಗಿ ಹೈದರಾಬಾದ್-ಬೆಂಗಳೂರು ಕಾರಿಡಾರ್, ಚಿಕ್ಕಬಳ್ಳಾ ಪುರ ಮತ್ತು ಬೆಂಗಳೂರು ಗ್ರಾಮೀಣ ಪ್ರದೇಶಗಳಲ್ಲಿ ಕೈಗಾರಿಕಾ ಬೆಳವಣಿಗೆ, ಸರಕು ಸಾಗಣೆ, ವ್ಯಾಪಾರ ವಿಸ್ತರಣೆ ಮತ್ತು ಉದ್ಯೋಗ ಸೃಷ್ಟಿಗೆ ಅಭೂತಪೂರ್ವ ಅವಕಾಶಗಳನ್ನು ಸೃಷ್ಟಿಸುವ ಹೆಬ್ಬಾಗಿಲಾಗಿದೆ. ಕರ್ನಾಟಕವನ್ನು ಪ್ರಮುಖ ಆರ್ಥಿಕ ಎಂಜಿನ್ ಆಗಿ ಬಲಪಡಿಸಲು ಇದು ಸಹಕಾರಿ ಎಂದು ವಿವರಿಸಿದರು.
ಉದ್ಯಮಗಳ ಬೆಳವಣಿಗೆ
ಸಣ್ಣ ಮತ್ತು ಮಧ್ಯಮ ಕೈಗಾರಿಕೆ (ಎಂಎಸ್ಎಂಇ), ನವೋದ್ಯಮ ಮತ್ತು ಮುಂದಿನ ಆಧುನಿಕ ಉತ್ಪಾದನಾ ಕ್ಷೇತ್ರಕ್ಕೆ ಬಜೆಟ್ ನೀಡಿರುವ ಆದ್ಯತೆಯನ್ನು ಸಂಸದ ಡಾ.ಕೆ.ಸುಧಾಕರ್ ಶ್ಲಾಘಿಸಿದರು. "ಕಾರ್ಪೊರೇಟ್ ಮಿತ್ರ ಯೋಜನೆ, ಆತ್ಮನಿರ್ಭರ ಭಾರತ ನಿಧಿಯಡಿ 4,000 ಕೋಟಿ ರೂ.ಅನುದಾನ ಮತ್ತು ಸೆಮಿ ಕಂಡಕ್ಟರ್ ಕ್ಷೇತ್ರಕ್ಕೆ 40 ಸಾವಿರ ಕೋಟಿ ರೂ. ಹಂಚಿಕೆ ಮುಂತಾದ ಕ್ರಮಗಳಿಂದ ಉದ್ಯಮ ಕ್ಷೇತ್ರದ ಬೆಳವಣಿಗೆ ವೇಗವಾಗಲಿದೆ. ಇವು ದೇಶೀಯ ಉತ್ಪಾದನೆಯನ್ನು ಬಲಪಡಿಸಿ, ದೊಡ್ಡ ಪ್ರಮಾಣದ ಉದ್ಯೋಗಗಳನ್ನು ಸೃಷ್ಟಿಸಲಿವೆ. ಕರ್ನಾಟಕದಲ್ಲಿ ತಂತ್ರಜ್ಞಾನ ಆಧಾರಿತ ಬೆಳವಣಿಗೆ ಕಂಡುಬರಲಿದೆ. ಜಾಗತಿಕ ಹೂಡಿಕೆಗಳು ಹೆಚ್ಚಿ, ಅಧಿಕ ಮೌಲ್ಯದ ಉದ್ಯೋಗಗಳು ದೊರೆತಲಿದೆ" ಎಂದು ಅವರು ಹೇಳಿದರು.
ಕೃಷಿ ಮತ್ತು ಗ್ರಾಮೀಣ ಆರ್ಥಿಕತೆಯ ಪುನರುಜ್ಜೀವನ
ಈ ಬಜೆಟ್ ರೈತರು ಮತ್ತು ಗ್ರಾಮೀಣ ಅಭಿವೃದ್ಧಿಯನ್ನು ರಾಷ್ಟ್ರೀಯ ಅಭಿವೃದ್ಧಿಯ ಹೃದಯ ಭಾಗದಲ್ಲಿ ಇರಿಸಿದೆ ಎಂದಿರುವ ಅವರು, ಬಹುಭಾಷಾ AI ಆಧಾರಿತ ಭಾರತ್ ವಿಸ್ತಾರ್ ಯೋಜನೆ, ರೈತ ಉತ್ಪಾದಕ ಸಂಸ್ಥೆಗಳಿಗೆ (FPOs) ಬೆಂಬಲ, ಕ್ರೆಡಿಟ್ ಲಿಂಕ್ಡ್ ಜಾನುವಾರು ಅಭಿವೃದ್ಧಿ, 500 ಜಲಮೂಲಗಳ ಸೃಷ್ಟಿ ಮತ್ತು ಮಹಾತ್ಮ ಗಾಂಧಿ ಗ್ರಾಮ ಸ್ವರಾಜ್ ಮಿಷನ್ ಅನ್ನು ಶ್ಲಾಘಿಸಿದ್ದಾರೆ. "ಈ ಕ್ರಮಗಳು ಗ್ರಾಮೀಣ ಆದಾಯವನ್ನು ಹೆಚ್ಚು ಮಾಡಲಿದೆ. ಸುಸ್ಥಿರತೆ ಹೆಚ್ಚಿಸುವ ಉದ್ದೇಶವನ್ನು ಇದು ಹೊಂದಿದೆ. ಇದು ಚಿಕ್ಕಬಳ್ಳಾಪುರ, ಕೋಲಾರ ಮತ್ತು ಬೆಂಗಳೂರು ಗ್ರಾಮೀಣ ಪ್ರದೇಶದ ಕೃಷಿ ಆರ್ಥಿಕತೆಗೆ, ವಿಶೇಷವಾಗಿ ತೋಟಗಾರಿಕೆ, ಡೇರಿ, ರೇಷ್ಮೆ ಕೃಷಿ ಮತ್ತು ಸಂಬಂಧಿತ ವಲಯಗಳಿಗೆ ಪ್ರಯೋಜನವನ್ನು ನೀಡುತ್ತದೆ" ಎಂದು ಹೇಳಿದ್ದಾರೆ.
ಸಾಂಪ್ರದಾಯಿಕ ಕೈಗಾರಿಕೆ ಮತ್ತು ರಫ್ತು ಉತ್ತೇಜನ
ರಾಷ್ಟ್ರೀಯ ಫೈಬರ್ ಮಿಷನ್, ಮೆಗಾ ಜವಳಿ ಪಾರ್ಕ್ಗಳು ಮತ್ತು ಕೈಮಗ್ಗ ಮತ್ತು ಕರಕುಶಲ ವಸ್ತು ಗಳಿಗೆ ಬೆಂಬಲ ನೀಡಿರುವುದರಿಂದ ಸಾಂಪ್ರದಾಯಿಕ ಕೈಗಾರಿಕೆ ಮತ್ತು ಜಾಗತಿಕ ಸ್ಪರ್ಧಾತ್ಮಕತೆ ಹೆಚ್ಚಲಿದೆ. ಶ್ರೀಗಂಧ, ಗೋಡಂಬಿ ಮತ್ತು ಕೋಕೋ ಕೃಷಿಗೆ ವಿಶೇಷ ಯೋಜನೆಗಳನ್ನು ನೀಡಿರುವು ದರಿಂದ ಕರ್ನಾಟಕದ ಕೃಷಿ ಆರ್ಥಿಕತೆ ಬೆಳೆಯಲಿದೆ ಹಾಗೂ ರಫ್ತು ಹೆಚ್ಚಲಿದೆ. ಜೊತೆಗೆ ಸುಸ್ಥಿರ ಗ್ರಾಮೀಣ ಜೀವನೋಪಾಯಕ್ಕೆ ಬೆಂಬಲ ದೊರೆಯಲಿದೆ ಎಂದು ಅವರು ಹೇಳಿದರು.
ಮಾನವ ಸಂಪನ್ಮೂಲದ ಅಭಿವೃದ್ಧಿ ಮತ್ತು ಸಾಮಾಜಿಕ ಭದ್ರತೆ
ಬಜೆಟ್ನ ಮಾನವ ಪ್ರಗತಿ ಕೇಂದ್ರಿತ ವಿಧಾನದ ಬಗ್ಗೆ ಹೇಳಿರುವ ಸಂಸದ ಡಾ.ಕೆ.ಸುಧಾಕರ್, ಜಿಲ್ಲಾ ಆಸ್ಪತ್ರೆಗಳನ್ನು ಮೇಲ್ದರ್ಜೆಗೇರಿಸುವುದು, ಆಪಘಾತ ಆರೈಕೆ ಕೇಂದ್ರಗಳ ವಿಸ್ತರಣೆ ಮತ್ತು ಪ್ರತಿ ಜಿಲ್ಲೆ ಯಲ್ಲಿ ವಿದ್ಯಾರ್ಥಿನಿಯರಿಗೆ ಹಾಸ್ಟೆಲ್ಗಳ ನಿರ್ಮಾಣ ಸೇರಿದಂತೆ ಆರೋಗ್ಯ ಮತ್ತು ಸಾಮಾಜಿಕ ಮೂಲಸೌಕರ್ಯಕ್ಕಾಗಿ ಅನುದಾನ ನೀಡಿರುವುದು ಉತ್ತಮವಾಗಿದೆ. ಈ ಕ್ರಮಗಳು ಸಾಮಾಜಿಕ ನ್ಯಾಯ, ಆರೋಗ್ಯ ರಕ್ಷಣೆ ಮತ್ತು ಲಿಂಗ ಸಮಾನತೆಯಲ್ಲಿ ಸರ್ಕಾರದ ಬದ್ಧತೆಯನ್ನು ತೋರಿದೆ ಎಂದು ಹೇಳಿದರು.
ತೆರಿಗೆ ಸುಧಾರಣೆ: ಮಧ್ಯಮ ವರ್ಗ ಮತ್ತು ಉದ್ಯಮಗಳಿಗೆ ಪರಿಹಾರ
ವಿಳಂಬ ತೆರಿಗೆ ಸಲ್ಲಿಕೆಗೆ ಕ್ರಿಮಿನಲ್ ಶಿಕ್ಷೆ ರದ್ದು, ಆರೋಗ್ಯ ಮತ್ತು ಶಿಕ್ಷಣ ವೆಚ್ಚಗಳ ಮೇಲಿನ ಟಿಸಿಎಸ್ 5% ರಿಂದ 2% ಕ್ಕೆ ಇಳಿಕೆ, ಸರಳೀಕೃತ, ಪಾರದರ್ಶಕ ಆದಾಯ ತೆರಿಗೆ ಚೌಕಟ್ಟು ಸೇರಿದಂತೆ ತರ್ಕಬದ್ಧ ತೆರಿಗೆ ಕ್ರಮಗಳನ್ನು ಡಾ.ಕೆ.ಸುಧಾಕರ್ ಸ್ವಾಗತಿಸಿದ್ದಾರೆ. "ಈ ಸುಧಾರಣೆಗಳು ಮಧ್ಯಮ ವರ್ಗ ಮತ್ತು ಉದ್ಯಮಿಗಳಿಗೆ ಸರಿಯಾದ ಪರಿಹಾರ ಒದಗಿಸುತ್ತವೆ. ಇದರಿಂದ ಸರ್ಕಾರದ ಮೇಲೆ ವಿಶ್ವಾಸ ಹೆಚ್ಚಲಿದೆ ಎಂದರು.
ಕೇಂದ್ರ ಬಜೆಟ್ 2026–27 ಕೇವಲ ಹಣಕಾಸಿನ ದಾಖಲೆಯಲ್ಲ. ಇದು ರೈತರು, ಯುವಕರು, ಉದ್ಯಮಿ ಗಳು ಮತ್ತು ಮಧ್ಯಮ ವರ್ಗದವರ ಆಕಾಂಕ್ಷೆಗಳನ್ನು ರಾಷ್ಟ್ರೀಯ ಧ್ಯೇಯಕ್ಕೆ ಜೋಡಿಸುವ ಕಾರ್ಯ ತಂತ್ರವಾಗಿದೆ. ನಿಜವಾದ ವಿಕಸಿತ ಭಾರತದತ್ತ ಭಾರತದ ಪ್ರಯಾಣವನ್ನು ವೇಗಗೊಳಿಸುವ ನಿಟ್ಟಿ ನಲ್ಲಿ, ಜನ ಕೇಂದ್ರಿತ ಮತ್ತು ಬೆಳವಣಿಗೆ ಆಧಾರಿತ ಬಜೆಟ್ ಮಂಡಿಸಿದ್ದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಮತ್ತು ಆರ್ಥಿಕ ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ನನ್ನ ಪ್ರಾಮಾಣಿಕ ಅಭಿನಂದನೆಗಳು ಎಂದು ಹೇಳಿದ್ದಾರೆ.