ಚಿಕ್ಕಬಳ್ಳಾಪು: ಜೂ.21ರಂದು ನೀಟ್ ಮರು ಪರೀಕ್ಷೆ(NEET re-examination) ನಿಗದಿಯಾಗಿದ್ದು, ಜಿಲ್ಲೆಯಲ್ಲಿ ನೀಟ್ ಪರೀಕ್ಷೆಯನ್ನು ಯಾವುದೇ ಸಮಸ್ಯೆಯಿಲ್ಲದೆ ಅತ್ಯಂತ ಪಾರದರ್ಶಕವಾಗಿ ನಡೆಸಲು ಅಗತ್ಯವಿರುವ ಎಲ್ಲಾ ಸಿದ್ದತೆಗಳನ್ನು ಜಿಲ್ಲಾಡಳಿತ ಮಾಡಿಕೊಂಡಿದೆ ಎಂದು ಜಿಲ್ಲಾಧಿಕಾರಿ ಜಿ.ಪ್ರಭು ತಿಳಿಸಿದ್ದಾರೆ.
ನಗರ ಹೊರವಲಯ ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ನಡೆದ ನೀಟ್ ಪರೀಕ್ಷೆಯ ಪೂರ್ವ ಸಿದ್ದತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ನೀಟ್ ಮರು ಪರೀಕ್ಷೆ ಇದೇ ತಿಂಗಳ 21ರ ಭಾನುವಾರದಂದು ನಡೆಯಲಿದ್ದು, ಜಿಲ್ಲೆಯ 10 ಪರೀಕ್ಷಾ ಕೇಂದ್ರಗಳಲ್ಲಿ ಯಾವುದೇ ಲೋಪದೋಷಗಳು ಮತ್ತು ಸಮಸ್ಯೆ ಇಲ್ಲದೆ ಪರೀಕ್ಷೆ ನಡೆಸಲು ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗಿದೆ. ಜಿಲ್ಲೆಯ 10 ಪರೀಕ್ಷಾ ಕೇಂದ್ರಗಳ ಪೈಕಿ ಚಿಕ್ಕಬಳ್ಳಾಪುರ ಜಿಲ್ಲಾ ಕೇಂದ್ರದಲ್ಲಿ 06 ಹಾಗೂ ಚಿಂತಾಮಣಿ ತಾಲ್ಲೂಕು ಕೇಂದ್ರದಲ್ಲಿ 04 ಪರೀಕ್ಷಾ ಕೇಂದ್ರಗಳಿರುತ್ತವೆ. ಪರೀಕ್ಷಾ ಕೇಂದ್ರಗಳಲ್ಲಿ ಅಗತ್ಯವಿರುವ ಎಲ್ಲಾ ಮೂಲ ಸೌಕರ್ಯಗಳನ್ನು ಒದಗಿಸಲು ಕ್ರಮ ಕೈಗೊಳ್ಳಲಾಗಿದೆ ಎಂದರು.
ಇದನ್ನೂ ಓದಿ: ವಿದ್ಯಾರ್ಥಿಗಳೇ ಗಮನಿಸಿ; NEET-UG 2026 ಮರು ಪರೀಕ್ಷೆಯ ನಕಲಿ ಪ್ರವೇಶ ಪತ್ರದ ಬಗ್ಗೆ ಇರಲಿ ಎಚ್ಚರ, ಮಾಹಿತಿ ಹಂಚಿಕೊಂಡ NTA
3568 ವಿದ್ಯಾರ್ಥಿಗಳು
ಜಿಲ್ಲೆಯಲ್ಲಿ ಒಟ್ಟು 3568 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದಾರೆ. ಜೂ.21ರಂದು ಪರೀಕ್ಷೆ ಮಧ್ಯಾಹ್ನ 2 ಗಂಟೆಗೆ ಆರಂಭವಾಗಲಿದ್ದು, ಎಲ್ಲಾ ವಿದ್ಯಾರ್ಥಿಗಳು ಬೆಳಗ್ಗೆ 11 ಗಂಟೆಗೆ ಆಯಾ ಪರೀಕ್ಷಾ ಕೇಂದ್ರಗಳಿಗೆ ಹಾಜರಾಗಿ ನಿಯಮಾನುಸಾರ ತಪಾಸಣೆಗೆ ಒಳಪಟ್ಟು ತಮ್ಮ ಕೊಠಡಿಗಳಿಗೆ ತೆರಳಬಹುದಾಗಿರುತ್ತದೆ. ಎಲ್ಲಾ ಪರೀಕ್ಷಾ ಕೇಂದ್ರಗಳಿಗೂ ಕೈಗಾರಿಕಾ ಭದ್ರತಾ ಪಡೆಯ ಯೋಧರನ್ನು ನಿಯೋಜನೆ ಮಾಡಲಾಗಿರುತ್ತದೆ. ಪ್ರತಿ ಪರೀಕ್ಷಾ ಕೇಂದ್ರಕ್ಕೂ ಪ್ರಶ್ನೆಪತ್ರಿಕೆ ಗಳನ್ನು ತಲುಪಿಸಲು ತಹಸೀಲ್ದಾರ್ ಹಾಗೂ ಬಿಇಒ ಅಧಿಕಾರಿಗಳನ್ನು ಮೇಲುಸ್ತುವಾರಿ ಅಧಿಕಾ ರಿಗಳನ್ನಾಗಿ ನೇಮಕ ಮಾಡಲಾಗಿದ್ದು, ಅವರು ಕೈಗಾರಿಕಾ ಭದ್ರತಾ ಪಡೆ ಹಾಗೂ ಪೊಲೀಸರ ಭದ್ರತೆಯಲ್ಲಿ ಪ್ರಶ್ನೆಪತ್ರಿಕೆಗಳನ್ನು ಪರೀಕ್ಷಾ ಕೇಂದ್ರಗಳಿಗೆ ತಲುಪಿಸಲಿದ್ದಾರೆ ಎಂದು ತಿಳಿಸಿದರು.
ನಿಯಮ ಪಾಲಿಸಿ!!
ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್.ಟಿ.ಎ)ಯ ನಿರ್ದೇಶನದಂತೆ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳು ಪೆನ್, ಪೆನ್ಸಿಲ್, ಕ್ಯಾಲುಕಲೇಟರ್, ಜಾಮಿಟ್ರಿ ಬಾಕ್ಸ್ ಒಳಗೊಂಡಂತೆ ಯಾವುದೇ ಲೇಖನ ಸಾಮಗ್ರಿ ಹಾಗೂ ಸಂಪರ್ಕ ಸಾಧನಗಳಾದ ಮೊಬೈಲ್ ಪೋನ್, ಸ್ಮಾರ್ಟ್ ವಾಚ್, ಬ್ಲೂಟೂತ್ ಇಯರ್ ಪೋನ್, ಪೇಜರ್, ಹೆಲ್ತ್ ಬ್ಯಾಂಡ್, ಬೆಲ್ಟ್, ವ್ಯಾಲೆಟ್, ಗಾಗಲ್ಸ್, ಹ್ಯಾಂಡ್ ಬ್ಯಾಗ್, ಕೈಗಡಿಯಾರ, ಕ್ಯಾಪ್ಗಳನ್ನು ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಗಳಿಗೆ ತರುವುದನ್ನು ಸಂಪೂರ್ಣವಾಗಿ ನಿಷೇಧಿಸ ಲಾಗಿದೆ. ಇದನ್ನು ಎಲ್ಲಾ ವಿದ್ಯಾರ್ಥಿಗಳು ಕಡ್ಡಾಯವಾಗಿ ಪಾಲಿಸಲು ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದರು.
ವಸ್ತ್ರ ಸಂಹಿತೆ ಕಡ್ಡಾಯ!!
ವಸ್ತ್ರ ಸಂಹಿತೆ ಪಾಲಿಸುವುದು ಕಡ್ಡಾಯವಾಗಿದ್ದು, ಅನವಶ್ಯಕ ಗೊಂದಲಗಳಿಗೆ ಅವಕಾಶ ಮಾಡಿ ಕೊಡದೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು. ಪರೀಕ್ಷಾ ಕೇಂದ್ರದ ಒಳಗೆ ಯಾವುದೇ ರೀತಿಯ ತಿಂಡಿ ತಿನಿಸುಗಳನ್ನು ತರುವಂತಿಲ್ಲ. ಆದರೆ, ಕುಡಿಯುವ ನೀರಿಗಾಗಿ ಪಾರದರ್ಶಕ ನೀರಿನ ಬಾಟಲ್ ತರಲು ಅವಕಾಶ ನೀಡಲಾಗಿದೆ. ವಿದ್ಯಾರ್ಥಿಗಳು ಪರೀಕ್ಷಾ ಪ್ರವೇಶ ಪತ್ರದಲ್ಲಿ ನೀಡಲಾದ ಎಲ್ಲಾ ಸೂಚನೆಗಳನ್ನು ಚಾಚೂ ತಪ್ಪದೇ ಪಾಲಿಸಬೇಕು ಎಂದು ತಿಳಿಸಿದರು.
15 ನಿಮಿಷ ಹೆಚ್ಚಳ!!
ಈ ಬಾರಿ ಎಲ್ಲಾ ವಿದ್ಯಾರ್ಥಿಗಳಿಗೆ ಹೆಚ್ಚುವರಿಯಾಗಿ 15 ನಿಮಿಷಗಳ ಪರೀಕ್ಷೆ ಬರೆಯುವ ಕಾಲಾವ ಕಾಶ ನೀಡಲಾಗಿದೆ. ವಿದ್ಯಾರ್ಥಿಗಳು ಕಡ್ಡಾಯವಾಗಿ ಪೋಸ್ಟ್ ಅಳತೆಯ ಒಂದು ಭಾವಚಿತ್ರವನ್ನು ಪರೀಕ್ಷಾ ಕೇಂದ್ರಕ್ಕೆ ತರಬೇಕು. ಪೋಷಕರು ಈ ಎಲ್ಲಾ ಸೂಚನೆಗಳನ್ನು ತಮ್ಮ ಮಕ್ಕಳಿಗೆ ತಪ್ಪದೇ ಪಾಲಿಸುವಂತೆ ಅಗತ್ಯ ಮತ್ತು ಸೂಕ್ತ ಸೂಚನೆಗಳನ್ನು ನೀಡುವ ಮೂಲಕ ಈ ಬಾರಿಯ ನೀಟ್ ಮರು ಪರೀಕ್ಷೆ ಜಿಲ್ಲೆಯಲ್ಲಿ ಅತ್ಯಂತ ಸುಸೂತ್ರವಾಗಿ ಮತ್ತು ಸುಗಮವಾಗಿ ಹಾಗೂ ಪಾರದರ್ಶಕ ವಾಗಿ ನಡೆಯಲು ಸಹಕರಿಸುವಂತೆ ಕೋರಲಾಗಿದೆ.
ಪ್ರತಿ ಪರೀಕ್ಷಾ ಕೇಂದ್ರಕ್ಕೆ ಒಬ್ಬರು ಹಾಗೂ ಪ್ರಶ್ನೆಪತ್ರಿಕೆಗಳನ್ನು ಸಾಗಿಸುವ ವಾಹನದ ಭದ್ರತೆಗೆ ಒಬ್ಬರು ಸೇರಿದಂತೆ ಎಲ್ಲಾ ಪರೀಕ್ಷಾ ಕೇಂದ್ರಗಳು ಮತ್ತು ವಾಹನಗಳಿಗೆ ಒಟ್ಟು 20 ಮಂದಿ ಕೈಗಾರಿಕಾ ಭದ್ರತಾ ಪಡೆಯನ್ನು ನಿಯೋಜಿಸಲಾಗಿದೆ. ಈ ಬಾರಿ ಪರೀಕ್ಷಾ ಕೇಂದ್ರದಲ್ಲಿಯೇ ಎಲ್ಲಾ ವಿದ್ಯಾರ್ಥಿಗಳಿಗೆ ಅಗತ್ಯವಿರುವ ಪೆನ್ನುಗಳನ್ನು ನೀಡಲಾಗುವುದು. ವಿದ್ಯಾರ್ಥಿಗಳು ಪೆನ್ನುಗಳನ್ನು ಪರೀಕ್ಷಾ ಕೇಂದ್ರಕ್ಕೆ ತರುವ ಅಗತ್ಯವಿರುವುದಿಲ್ಲ ಹಾಗೂ ಯಾವುದೇ ರೀತಿಯ ಗಡಿಯಾರಗಳನ್ನು ವಿದ್ಯಾರ್ಥಿಗಳು ತರುವಂತಿಲ್ಲ, ಪ್ರತಿ ಕೊಠಡಿಯಲ್ಲೂ ಗೋಡೆ ಗಡಿಯಾರವನ್ನು ಅಳವಡಿಸ ಲಾಗಿರುತ್ತದೆ. ಎಂಬುದನ್ನು ವಿಶೇಷವಾಗಿ ಗಮನಿಸುವಂತೆ ಜಿಲ್ಲಾಧಿಕಾರಿಗಳು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಶಲ್ ಚೌಕ್ಸೆ, ಅಪರ ಜಿಲ್ಲಾಧಿಕಾರಿ ಡಾ.ಎನ್.ಭಾಸ್ಕರ್, ಉಪವಿಭಾಗಾಧಿಕಾರಿ ಡಿ.ಹೆಚ್. ಅಶ್ವಿನ್, ನೀಟ್ ಪರೀಕ್ಷೆಯ ಜಿಲ್ಲಾ ನೋಡಲ್ ಅಧಿಕಾರಿ ಮುನಿರಾಜು, ಪರೀಕ್ಷಾ ಕರ್ತವ್ಯಕ್ಕೆ ನಿಯೋಜನೆಗೊಂಡಿರುವ ಪ್ರಾಂಶುಪಾಲರು, ಉಪನ್ಯಾಸಕರು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು. ಪರೀಕ್ಷಾ ಕೇಂದ್ರಗಳ ವಿವರಗಳನ್ನು ಸುದ್ದಿಯೊಂದಿಗೆ ಲಗತ್ತಿಸಲಾಗಿದೆ.