MLA Pradeep Eshwar: ನಿರ್ಭೀತಿಯಿಂದ ಪರೀಕ್ಷೆ ಎದುರಿಸಿ, ಉತ್ತಮ ಭವಿಷ್ಯ ನಿಮ್ಮದಾಗಲಿದೆ: ಶಾಸಕ ಪ್ರದೀಪ್ ಈಶ್ವರ್
ಭವಿಷ್ಯದಲ್ಲಿ ಚಿಕ್ಕಬಳ್ಳಾಪುರ ಜಾಗತಿಕ ಮಹಾನಗರವಾಗಿ ಬೆಳೆಯಲಿದೆ. 2033ಕ್ಕೆ ಮೆಟ್ರೋ ಸೇವೆ ಇಲ್ಲಿಗೆ ಬರಲಿದೆ.ದೊಡ್ಡ ದೊಡ್ಡ ಕೈಗಾರಿಕೆಗಳು ಸ್ಥಾಪನೆ ಆಗಲಿವೆ. ಇಲ್ಲೆಲ್ಲಾ ಉದ್ಯೋಗ ಪಡೆಯಬೇಕಾದರೆ ಚೆನ್ನಾಗಿ ಎಸ್ಎಸ್ಎಲ್ಸಿ ಪರೀಕ್ಷೆ ಬರೆದು ಉತ್ತೀರ್ಣ ರಾಗಬೇಕು. ನೀವು ಪಿಯುಸಿ ಪರೀಕ್ಷೆಯಲ್ಲೂ ಉತ್ತೀರ್ಣರಾಗಬೇಕು. ಯಾರೂ ಕೂಡ ಫೇಲ್ ಆಗಬೇಡಿ
ಜಿಲ್ಲೆಯಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿಗಳು, ವಿಶೇಷವಾಗಿ ಸರಕಾರಿ ಶಾಲೆಯ ವಿದ್ಯಾರ್ಥಿಗಳು ಆತ್ಮವಿಶ್ವಾಸ ಬೆಳೆಸಿಕೊಂಡು ನಿರ್ಭೀತಿಯಿಂದ ಪರೀಕ್ಷೆ ಎದುರಿಸಿ, ಉತ್ತಮ ಭವಿಷ್ಯ ನಿಮ್ಮದಾಗಿರಲಿದೆ ಎಂದು ಶಾಸಕ ಪ್ರದೀಪ್ ಈಶ್ವರ್ ತಿಳಿಸಿದರು. -
ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿಗಳು, ವಿಶೇಷವಾಗಿ ಸರಕಾರಿ ಶಾಲೆಯ ವಿದ್ಯಾರ್ಥಿಗಳು ಆತ್ಮವಿಶ್ವಾಸ ಬೆಳೆಸಿಕೊಂಡು ನಿರ್ಭೀತಿ ಯಿಂದ ಪರೀಕ್ಷೆ ಎದುರಿಸಿ, ಉತ್ತಮ ಭವಿಷ್ಯ ನಿಮ್ಮದಾಗಿರಲಿದೆ ಎಂದು ಶಾಸಕ ಪ್ರದೀಪ್ ಈಶ್ವರ್(MLA Pradeep Eshwar) ತಿಳಿಸಿದರು.
ನಗರದ ಕನ್ನಡ ಭವನದಲ್ಲಿ ಶಾಲಾ ಶಿಕ್ಷಣ ಇಲಾಖೆ ವತಿಯಿಂದ ಎಸ್ಎಸ್ಎಲ್ಸಿ ವಿದ್ಯಾರ್ಥಿಗಳಿಗಾಗಿ ಏರ್ಪಡಿಸಿದ್ದ ಪ್ರೇರಣಾ ಹಾಗೂ ಪೋಷಕ ಶಿಕ್ಷಕ ಮಹಾಸಭೆ ಉದ್ಘಾಟಿಸಿ ಮಾತನಾಡಿದರು.
ಭವಿಷ್ಯದಲ್ಲಿ ಚಿಕ್ಕಬಳ್ಳಾಪುರ ಜಾಗತಿಕ ಮಹಾನಗರವಾಗಿ ಬೆಳೆಯಲಿದೆ. 2033ಕ್ಕೆ ಮೆಟ್ರೋ ಸೇವೆ ಇಲ್ಲಿಗೆ ಬರಲಿದೆ.ದೊಡ್ಡ ದೊಡ್ಡ ಕೈಗಾರಿಕೆಗಳು ಸ್ಥಾಪನೆ ಆಗಲಿವೆ. ಇಲ್ಲೆಲ್ಲಾ ಉದ್ಯೋಗ ಪಡೆಯಬೇಕಾದರೆ ಚೆನ್ನಾಗಿ ಎಸ್ಎಸ್ಎಲ್ಸಿ ಪರೀಕ್ಷೆ ಬರೆದು ಉತ್ತೀರ್ಣ ರಾಗಬೇಕು. ನೀವು ಪಿಯುಸಿ ಪರೀಕ್ಷೆಯಲ್ಲೂ ಉತ್ತೀರ್ಣರಾಗಬೇಕು. ಯಾರೂ ಕೂಡ ಫೇಲ್ ಆಗಬೇಡಿ ಎಂದು ಕಿವಿ ಮಾತು ಹೇಳಿದರು.
ಇದನ್ನೂ ಓದಿ: MLA Pradeep Eshwar: ನಾನು 3ನೇ ಹಂತದ ಶುದ್ಧೀಕರಣದ ಪರವಾಗಿರುವ ಶಾಸಕ: ನನ್ನ ಬದ್ಧತೆಯಲ್ಲಿ ಬದಲಿಲ್ಲ
ಗುರುಗಳ ಮಾರ್ಗದರ್ಶನ, ಸತತ ಪರಿಶ್ರಮ ನಿಮ್ಮದಾಗಿದ್ದರೆ ಗೆಲುವು ನಿಮ್ಮದಾಗಲಿದೆ. ಕಗ್ಗಲ್ಲು ಶಿಲ್ಪಿಯ ಕೈಗೆ ಸಿಕ್ಕರೆ ಶಿಲೆಯಾಗಿ ಗುಡಿಯಲ್ಲಿ ಪ್ರತಿಷ್ಠಾಪನೆಯಾಗಲಿದೆ. ಒಳ್ಳೆಯ ಶಿಲ್ಪಿಯ ಕೈಗೆ ಸಿಗಲಿಲ್ಲ ಎಂದರೆ, ಗುರುಗಳ ಮಾತು ಕೇಳಿಸಿಕೊಳ್ಳಲಿಲ್ಲ ಎಂದರೆ ಅದೇ ಗುಡಿಯ ಎದುರು ಆ ಕಲ್ಲು ಮೆಟ್ಟಿಲಾಗಬೇಕಾಗುತ್ತದೆ. ಪರಿಶ್ರಮವೇ ನಿಮ್ಮ ಭವಿಷ್ಯ ನಿರ್ಧರಿಸುವ ಮಾನದಂಡ. ಮೈಗಳ್ಳತನ ಬಿಟ್ಟು ಓದಿ ಪರೀಕ್ಷೆ ಬರೆಯಿರಿ ಎಂದರು.
ಉನ್ನತ ಅಂಕಗಳನ್ನು ಪಡೆದರೆ ಅಧಿಕಾರಿಯಾಗಿ ಕೆಲಸ ಮಾಡಬಬಹುದಷ್ಟೆ. ಕಡಿಮೆ ಅಂಕ ಬಂದಾಕ್ಷಣ ಭವಿಷ್ಯವೇ ಇಲ್ಲ ಎಂದು ಕೊರಗಬೇಕಿಲ್ಲ. ಕಡಿಮೆ ಅಂಕಗಳನ್ನು ಪಡೆದವರು ಬದುಕನ್ನು ಚಾಲೆಂಜ್ ಆಗಿ ತೆಗೆದುಕೊಂಡು ಸಂಸ್ಥೆಗಳನ್ನು ಕಟ್ಟು ನೂರಾರು ಮಂದಿಗೆ ಉದ್ಯೋಗ ನೀಡಿದ್ದಾರೆ. ಈ ಬಾರಿಯ ಪರೀಕ್ಷೆಯಲ್ಲಿ ರಾಜ್ಯಕ್ಕೆ ಟಾಪರ್ ನಮ್ಮ ಕ್ಷೇತ್ರದ ವಿದ್ಯಾರ್ಥಿಯೇ ಆಗಿರಲಿ ಎಂದು ಭಗವಂತನಲ್ಲಿ ಬೇಡುತ್ತೇನೆ. ಹೆತ್ತವರಿಗೆ ಗುರು ಗಳಿಗೆ ಗೌರವ ಕೊಟ್ಟು ಶಿಕ್ಷಣವನ್ನು ತಪಸ್ಸಿನಂತೆ ಪಡೆದರೆ ಕೀರ್ತಿವಂತರಾಗಿ ಬಾಳುತ್ತೀರಿ ಎಂದು ವಿದ್ಯಾರ್ಥಿಗಳಲ್ಲಿ ಸ್ಫೂರ್ತಿ ತುಂಬಿದರು.
ಎಸ್ಎಸ್ಎಲ್ಸಿ ಎಂಬುದು ವಿದ್ಯಾರ್ಥಿ ಜೀವನದ ಮೊದಲ ಘಟ್ಟ.ಇದಕ್ಕೆ ಹೆದರುವ ಅಗತ್ಯವಿಲ್ಲ,ಮೊದಲ ಪರೀಕ್ಷೆಯಲ್ಲಿ ಪಾಸಾಗಿಯೇ ತೀರುತ್ತೇನೆ ಎಂಬ ಆತ್ಮವಿಶ್ವಾಸದಲ್ಲಿ ಪರೀಕ್ಷೆ ಎದುರಿಸಿ.ಮಾಡುವ ಕೆಲಸದಲ್ಲಿ ನಂಬಿಕೆಯಿಡಿ, ಮನಸ್ಸಿಟ್ಟು ಓದಿ, ಅರ್ಥ ಮಾಡಿ ಕೊಂಡು ಓದಿ, ಅಪ್ಪ ಅಮ್ಮನ ಕಷ್ಟ, ಕುಟುಂಬದ ಸ್ಥಿತಿಗತಿ ನೆನೆಪಿಗೆ ತಂದುಕೊಂಡು ಅಭ್ಯಾಸ ಮಾಡಿದರೆ ಯಾವುದೂ ಕಷ್ಟವಾಗದು.ವಿಜಯ ಕಟ್ಟಿಟ್ಟ ಬುತ್ತಿ ಎಂದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ನವೀನ್ಭಟ್ ಮಾತನಾಡಿ ಈ ಬಾರಿಯ ಎಸ್ಎಸ್ಎಲ್ಸಿ ಪಿಯುಸಿ ಪರೀಕ್ಷೆ ಬರೆಯುತ್ತಿರುವ ಜಿಲ್ಲೆಯ ವಿದ್ಯಾರ್ಥಿಗಳು ಉತ್ತಮ ಸಾಧನೆಯ ಮೂಲಕ ಜಿಲ್ಲೆಯ ಶ್ರೇಣಿಯನ್ನು ಮೇಲಕ್ಕೆತ್ತಬೇಕು.ನೀವು ಹೀಗೆ ಮಾಡುತ್ತೀರೆಂಬ ವಿಶ್ವಾಸ ಜಿಲ್ಲಾಡಳಿತಕ್ಕೆ, ಶಾಲಾ ಶಿಕ್ಷಣ ಇಲಾಖೆಗೆ ಇದೆ. ಎಲ್ಲರಿಗೂ ಶುಭವಾಗಲಿ ಎಂದರು.
ಕಾರ್ಯಕ್ರಮದಲ್ಲಿ ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಕ ರಮೇಶ್, ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ನಾರಾಯಣಸ್ವಾಮಿ, ರಾಜ್ಯ ಕಾರ್ಯದರ್ಶಿ ಅಮರ್ ನಾರಾಯಣ ಸ್ವಾಮಿ, ಬಿಇಒ ಸುಕನ್ಯ ಮತ್ತಿತರರು ಇದ್ದರು.
![]()
ಮಕ್ಕಳೇ ಎಸ್ಎಸ್ಎಲ್ಸಿ ಪರೀಕ್ಷೆ ಎಂಬುದು ನೀವು ಈ ಹಿಂದೆ ಬರೆದಿರುವ ಪರೀಕ್ಷೆಯಂತೆ ಒಂದು ಸಾಮಾನ್ಯ ಪರೀಕ್ಷೆಯಷ್ಟೆ. 8, 9ನೇ ತರಗತಿ ಪರೀಕ್ಷೆಗೆ ಸಿದ್ಧತೆ ಮಾಡಿಕೊಳ್ಳುವಂತೆ ಗುರುಗಳ ಮಾರ್ಗದರ್ಶನದಲ್ಲಿ ಇದಕ್ಕೂ ಮಾಡಿಕೊಳ್ಳಿ. ಹಬ್ಬಹರಿದಿನಗಳಲ್ಲಿ ಹೇಗೆ ಸಂತೋಷದಿಂದ ಅದರ ಎಲ್ಲಾ ಕಾರ್ಯಚಟವಟಿಕೆಗಳಲ್ಲಿ ಭಾಗಿಯಾಗುತ್ತೀರೋ ಅದೇ ರೀತಿ ಪರೀಕ್ಷೆಗೂ ಹಬ್ಬದ ಸಂತೋಷ ಸಂಭ್ರಮ ಉಳಿಸಿಕೊಳ್ಳಿ. ಪರೀಕ್ಷೆ ಹಿಂದಿನ ದಿನ ಚೆನ್ನಾಗಿ ನಿದ್ದೆ ಮಾಡಿ, ಆತಂಕ ರಹಿತ ಮನಸ್ಸಿನಲ್ಲಿ ಪರೀಕ್ಷಾ ಕೇಂದ್ರಕ್ಕೆ ತೆರಳಿ. ಆತ್ಮ ವಿಶ್ವಾಸದಲ್ಲಿ ಪರೀಕ್ಷೆ ಬರೆದರೆ ಖಚಿತವಾದ ಫಲಿತಾಂಶ ನಿಮ್ಮದಾಗಲಿದೆ.
-ಜಿ.ಪ್ರಭು ಜಿಲ್ಲಾಧಿಕಾರಿ ಚಿಕ್ಕಬಳ್ಳಾಪುರ.