ಚಿಂತಾಮಣಿ: ತಾಲೂಕಿನ ಪೆರಮಾಚನಹಳ್ಳಿ ಪಂಚಾಯಿತಿ ವ್ಯಾಪ್ತಿಯ ವೆಂಕಟಪುರ ಗ್ರಾಮದಲ್ಲಿ ಶ್ರೀ ಗ್ರಾಮದೇವತೆ ಗಂಗಮ್ಮ ದೇವಿಯ ಮೊದಲನೇ ವರ್ಷದ ಅದ್ದೂರಿ ವಾರ್ಷಿಕೋತ್ಸವ ಹಾಗೂ ಮಂಡಲ ಪೂಜಾ ಕಾರ್ಯಕ್ರಮವು ಅತ್ಯಂತ ಸಡಗರ-ಸಂಭ್ರಮದಿಂದ ಜರುಗಿತು.
ದೇವಸ್ಥಾನದ ಪ್ರತಿಷ್ಠಾಪನೆಯಾಗಿ ಒಂದು ವರ್ಷ ಪೂರೈಸಿರುವ ಹಿನ್ನೆಲೆಯಲ್ಲಿ,ಗ್ರಾಮದೇವತೆಗೆ ವಿಶೇಷವಾಗಿ ಹೂವಿನ ಅಲಂಕಾರ ಹಾಗೂ ವಿವಿಧ ಧಾರ್ಮಿಕ ಪೂಜಾ ಕೈಂಕರ್ಯಗಳನ್ನು ಹಮ್ಮಿಕೊಳ್ಳಲಾಗಿತ್ತು.
ಮುಂಜಾನೆಯಿಂದಲೇ ದೇವಸ್ಥಾನದಲ್ಲಿ ವಿಶೇಷ ಹೋಮ,ಹವನ ಹಾಗೂ ಮಹಾಮಂಗಳಾರತಿ ನಡೆಯಿತು. ನೂರಾರು ಭಕ್ತರು ದೇವಿಯ ದರ್ಶನ ಪಡೆದು ಪುನೀತರಾದರು.
ಇದನ್ನೂ ಓದಿ: Chinthamani News: ಭಾಗವತವು ಭಗವಂತನಲ್ಲಿ ನಂಬಿಕೆ ಹೆಚ್ಚಿಸುತ್ತದೆ: ಧರ್ಮಾಧಿಕಾರಿ ಡಾ||ಎಂ.ಆರ್.ಜಯರಾಮ್
ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಗ್ರಾಮದ ಪ್ರಮುಖರಾದ ಚನ್ನಕೃಷ್ಣಪ್ಪ, ಅಳಿಯಾ ಶಿವಣ್ಣ, ಶಬರೀಶ, ಸುಧಾಕರ್,ಮಂಜುನಾಥ್ ಹಾಗೂ ದಿನ್ನೆ ಕುಟುಂಬದವರು, ಊರಿನ ಹಿರಿಯರು ಮತ್ತು ಮುಖಂಡರು ಭಾಗವಹಿಸಿದ್ದರು.
ವಾರ್ಷಿಕೋತ್ಸವದ ಅಂಗವಾಗಿ ಗ್ರಾಮಸ್ಥರಿಗೆ ಹಾಗೂ ಸುತ್ತಮುತ್ತಲಿನ ಹತ್ತಾರು ಹಳ್ಳಿಗಳಿಂದ ಬಂದಿದ್ದ ಭಕ್ತಾದಿಗಳಿಗೆ ಬೃಹತ್ ಅನ್ನದಾನ ವ್ಯವಸ್ಥೆ ಮಾಡಲಾಗಿತ್ತು. ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ತೀರ್ಥ ಪ್ರಸಾದ ಸ್ವೀಕರಿಸಿದರು.ಭವ್ಯವಾಗಿ ಅಲಂಕರಿಸಲ್ಪಟ್ಟ ಗೋಪುರ ಮತ್ತು ದೇವಿಯ ವಿಗ್ರಹವು ಭಕ್ತರ ಕಣ್ಮನ ಸೆಳೆಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಗ್ರಾಮದ ಮುಖಂಡರು, "ಗ್ರಾಮದೇವತೆ ಗಂಗಮ್ಮ ದೇವಿಯ ಕೃಪೆಯಿಂದ ಎಲ್ಲರಿಗೂ ಸುಖ,ಶಾಂತಿ ಮತ್ತು ಸಮೃದ್ಧಿ ಸಿಗಲಿ"ಎಂದು ಹಾರೈಸಿದರು. ವೆಂಕಟಪುರ ಮತ್ತು ಸುತ್ತಮುತ್ತಲಿನ ಗ್ರಾಮಸ್ಥರ ಸಕ್ರಿಯ ಸಹಭಾಗಿತ್ವದಲ್ಲಿ ಕಾರ್ಯಕ್ರಮವು ಯಶಸ್ವಿಯಾಗಿ ನೆರವೇರಿತು.