ಚಿಕ್ಕಬಳ್ಳಾಪುರ: ವೇಗವಾಗಿ ಹರಡುವ ಆಕ್ರಮಣಕಾರಿ ಕಳೆಗಿಡವಾಗಿರುವ ಪಾರ್ಥೇನಿಯಂ ಕೃಷಿ, ಪರಿಸರ ಹಾಗೂ ಮಾನವ–ಜಾನುವಾರುಗಳ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆ ಇರುವುದರಿಂದ, ಇದನ್ನು ವೈಜ್ಞಾನಿಕ ಹಾಗೂ ಸಮಗ್ರ ರೀತಿಯಲ್ಲಿ ನಿಯಂತ್ರಿಸಬೇಕು ಎಂದು ಜಿಕೆವಿಕೆಯ ಸಂಪನ್ಮೂಲ ವ್ಯಕ್ತಿ ಡಾ.ಕೆ.ಎನ್.ಗೀತಾ ಸಲಹೆ ನೀಡಿದರು.
ತಾಲೂಕಿನ ಗಂಗರೇಕಾಲುವೆ ಗ್ರಾಮದಲ್ಲಿ ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಗಾಂಧಿ ಕೃಷಿ ವಿಜ್ಞಾನ ಕೇಂದ್ರದ ವತಿಯಿಂದ ಹಮ್ಮಿಕೊಂಡಿದ್ದ ಪಾರ್ಥೇನಿಯಂ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಹೊಲದ ಬದು, ರಸ್ತೆ ಬದಿ ಹಾಗೂ ಖಾಲಿ ಜಾಗಗಳನ್ನು ಸ್ವಚ್ಛವಾಗಿಟ್ಟು ಕೊಂಡು ಸೂಕ್ತ ಕಳೆ ನಿರ್ವಹಣಾ ಕ್ರಮಗಳನ್ನು ಅನುಸರಿಸುವ ಮೂಲಕ ಪಾರ್ಥೇನಿಯಂ ನಿಯಂತ್ರಣಕ್ಕೆ ಮುಂದಾಗಬೇಕು ಎಂದರು.
ಪಾರ್ಥೇನಿಯಂ ಗುರುತಿಸುವಿಕೆ, ಕೃಷಿ ಬೆಳೆಗಳ ಮೇಲಿನ ಪರಿಣಾಮ, ಮಾನವ ಮತ್ತು ಜಾನುವಾರು ಗಳ ಆರೋಗ್ಯದ ಮೇಲೆ ಉಂಟಾಗಬಹುದಾದ ದುಷ್ಪರಿಣಾಮ ಹಾಗೂ ಪರಿಸರ ಹಾನಿಯ ಕುರಿತು ಅವರು ಮಾಹಿತಿ ನೀಡಿದರು. ಪಾರ್ಥೇನಿಯಂ ಜಾಗೃತಿ ವಾರದ ಅಂಗವಾಗಿ ವಿದ್ಯಾರ್ಥಿಗಳು ಗ್ರಾಮದಲ್ಲಿ ಜಾಗೃತಿ ಮೆರವಣಿಗೆ ನಡೆಸಿದರು.
ಬೇಕರಿ ಉತ್ಪನ್ನ ತಯಾರಿಕೆಗೆ ತರಬೇತಿ
ಗ್ರಾಮೀಣ ಯುವಕರು ಹಾಗೂ ಮಹಿಳೆಯರಲ್ಲಿ ಉದ್ಯಮಶೀಲತೆ ಬೆಳೆಸಿ ಸ್ವಾವಲಂಬಿ ಜೀವನೋ ಪಾಯಕ್ಕೆ ಉತ್ತೇಜನ ನೀಡುವ ಉದ್ದೇಶದಿಂದ ಬೇಕರಿ ಉತ್ಪನ್ನಗಳ ತಯಾರಿಕೆ ಹಾಗೂ ಮೌಲ್ಯ ವರ್ಧನೆ ಕುರಿತು ತರಬೇತಿ ನೀಡಲಾಯಿತು. ಸ್ವಚ್ಛತೆ, ಗುಣಮಟ್ಟ, ಪ್ಯಾಕೇಜಿಂಗ್, ಮಾರುಕಟ್ಟೆ, ಉತ್ಪಾದನಾ ವೆಚ್ಚ ಹಾಗೂ ಲಾಭಾಂಶದ ಕುರಿತು ಮಾಹಿತಿ ನೀಡಲಾಯಿತು. ಕೇಕು, ತೆಂಗಿನ ಕುಕ್ಕೀಸ್ ಸೇರಿದಂತೆ ವಿವಿಧ ಉತ್ಪನ್ನಗಳ ತಯಾರಿಕೆಯ ಪ್ರಾಯೋಗಿಕ ತರಬೇತಿಯನ್ನೂ ನೀಡಲಾಯಿತು.
ಕಾರ್ಯಕ್ರಮದಲ್ಲಿ ಡಾ.ಎನ್.ಮಂಜುಳಾ, ಡಾ.ಪ್ರಕೃತಿ ಎನ್.ರಾಜ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.