ಚಿಕ್ಕಬಳ್ಳಾಪುರ : ಬಿಜೆಪಿ ಪಕ್ಷ ಮತ್ತು ಅದು ಕಲ್ಪಿಸುವ ವೇದಿಕೆಗಳು ನಮಗೆ ತಾಯಿ ಇದ್ದಂತೆ. ಇಂತಹ ಪಕ್ಷದ ಬಗ್ಗೆ ಯಾರೊ ಎನೋ ಹಗುರವಾಗಿ ಅವಾಚ್ಯವಾಗಿ ಮಾತನಾಡಿ ದರೆ ಕೇಳಿಸಿಕೊಂಡು ಸುಮ್ಮನಿರುವ ಪೈಕಿ ನಾನಲ್ಲ.ಶಾಸಕ ಪ್ರದೀಪ್ ಅವರೇ ನಿಮ್ಮ ಸ್ಥಾನದ ಘನತೆ ಗೌರವ ಅರ್ಥ ಮಾಡಿಕೊಂಡು ಅದಕ್ಕೆ ಗೌರವ ಬರುವ ರೀತಿಯಲ್ಲಿ ಮಾತನಾಡುವುದನ್ನು ಇನ್ನಾದರೂ ಕಲಿಯಿರಿ ಎಂದು ಭಗತ್ ಸಿಂಗ್ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಸಂದೀಪ್ ಬಿ ರೆಡ್ಡಿ ಮನವಿ ಮಾಡಿದರು.
ತಾಲೂಕಿನ ಸಬ್ಬೇನಹಳ್ಳಿ ಗ್ರಾಮದಲ್ಲಿ ಶುಕ್ರವಾರ ಶ್ರೀವೇಣುಗೋಪಾಲಸ್ವಾಮಿ ದೇವಾಲ ಯದ ದ್ವಾರ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಬಿಜೆಪಿ ಪಕ್ಷದ ಬಗ್ಗೆ ಯಾರೋ ಏನೋ ಮಾತನಾಡುತ್ತಾರೆ ಎಂದರೆ ಕೈಕಟ್ಟಿ ಕೂರುವವರು ನಾವಲ್ಲ.ನಮ್ಮ ಊರಿನವರೇ ಆದ ಶಾಸಕ ಪ್ರದೀಪ್ ಈಶ್ವರ್ ಅವರಲ್ಲಿ ಮನವಿ ಮಾಡು ತ್ತೇನೆ. ನಮ್ಮ ಊರಿನ ನನ್ನ ಕಿರಿಯ ಸಹೋದರ ನೀವು.ಯಾವುದೇ ರಾಜಕೀಯ ಹಿನ್ನೆಲೆಯಿಲ್ಲದೆ ಬಂದು ಶಾಸಕರಾಗಿದ್ದೀರಿ. ಈ ಸಾಧನೆ ಮಾಡಿ ತಾವು 3 ವರ್ಷಗಳಾಗಿವೆ. ಇದು ನಿಮ್ಮೊಬ್ಬರ ಸಾಧನೆ ಅಲ್ಲ.ದೊಡ್ಡ ಶಕ್ತಿಯಾಗಿ ಬೆಳೆದು ಅಭಿವೃದ್ದಿ ಹರಿಕಾರ ಎನ್ನಿಸಿ ಕೊಂಡಿದ್ದ ಡಾ.ಕೆ.ಸುಧಾಕರ್ ಅವರ ಮೇಲಿದ್ದ ಆಡಳಿತ ವಿರೋಧಿ ಅಲೆಯ ಜತೆಗೆ ಚಿಕ್ಕಬಳ್ಳಾಪುರಕ್ಕೆ ದಿಕ್ಸೂಚಿ ಆಗುತ್ತೀರಿ ಎಂದು ಭಾವಿಸಿ ನಿಮ್ಮನ್ನು ಗೆಲ್ಲಿಸಿದರು ಎಂದರು.
ಆಯ್ಕೆ ಮಾಡಿದ್ದಕ್ಕೆ ನಿಮ್ಮ ಮಾತು ಮಾತ್ರ ಕಾರಣವಲ್ಲ, ಕಾಂಗ್ರೆಸ್ ಪಕ್ಷದ ಗ್ಯಾರೆಂಟಿ ಗಳನ್ನು ನಂಬಿಯೂ ನಿಮಗೆ ಮತದಾರ ಮತಹಾಕಿದ್ದಾನೆ. ನಿಮ್ಮ ಸಮಾಸ ಸೇವೆ, ಅಮ್ಮಾ ಅಂಬುಲೆನ್ಸ್ ಸೇವೆಗಳ ಬಗ್ಗೆ, ವಿದ್ಯಾರ್ಥಿ ವೇನತನದ ಅಪಾರವಾದ ಪ್ರೀತಿಯಿದೆ. ನಿಮ್ಮ ಮಾತು ಮತ್ತು ನಡತೆ ಬಗ್ಗೆಯೂ ಇದೇ ಪ್ರೀತಿ ಬೆಳೆಯುವಂತೆ ನೋಡಿಕೊಳ್ಳಿ ಎಂದರು.
ಕೆಟ್ಟ ಉದಾಹರಣೆ ಆಗಬೇಡಿ??
ಆದರೆ ನಿಮ್ಮ ಮಾತು ಮತ್ತು ನಡತೆಯಿಂದಾಗಿ ಚಿಕ್ಕಬಳ್ಳಾಪುರ ಕರ್ನಾಟಕದಾದ್ಯಂತ ಅನೇಕ ಬಾರಿ ನಗೆಪಾಟಲಿಗೆ ಒಳಗಾಗುವಂತೆ ಆಗಿದೆ.ಈ ತಾಲೂಕಿನ ಸಹೃದಯ ಪ್ರಜೆಯಾಗಿ ತಮ್ಮಲ್ಲಿ ಮನವಿ ಮಾಡುತ್ತೇನೆ.ನಿಮ್ಮ ಮಾತಿನ ಮೇಲೆ ಹಿಡಿತ ಇದ್ದರೆ ಉಜ್ವಲ ಭವಿಷ್ಯ ವಿದೆ. ದೇವರು ಎಲ್ಲರಿಗೂ ಸೋಲನ್ನು ಅರಗಿಸಿಕೊಳ್ಳುವ ಶಕ್ತಿ ಕೊಟ್ಟಿರುತ್ತಾನೆ. ಆದರೆ ಕೆಲವರಿಗೆ ಗೆಲುವನ್ನು ಅರಗಿಸಿಕೊಳ್ಳುವ ಶಕ್ತಿ ನೀಡಿರಲ್ಲ.ಸಕ್ಸಸ್ ತಲೆಗೆ ಹತ್ತುವುದು ಬೇಡ. ನೀವು ಅದಕ್ಕೆ ಎಕ್ಸಾಂಪಲ್ ಆಗುವುದು ಬೇಡ ಎಂದರು.
ಸೈದ್ದಾಂತಿಕ ಟೀಕೆಯಿರಲಿ!!
ವಿಶ್ವದ ದೊಡ್ಡ ಪಕ್ಷವಾದ ಬಿಜೆಪಿ ಬಗ್ಗೆ ಸೈದಾಂತಿಕವಾಗಿ ಟೀಕೆ ಮಾಡಿ. ನಿಮ್ಮ ಆರೋಪ ಗಳಿಗೆ ದಾಖಲೆಯಿಟ್ಟುಕೊಂಡು ಮಾತಾಡಿ.ಇದನ್ನು ಬಿಟ್ಟು ಏನೋ ಮಾತನಾಡಬೇಕು ಎಂದು ಹುಂಬತನದಲ್ಲಿ ಮೂರ್ಖರು, ಮುಟ್ಟಾಳರು, ಕಳ್ಳರು ಎಂದು ಕರೆಯುವುದು ತಪ್ಪು. ಕಳ್ಳರಾಗಿದ್ದರೆ ಹಿಡಿದು ಜೈಲಿಗೆ ಹಾಕಿಸಿ, ಎಷ್ಟು ಜನರನ್ನು ನೀವು ಜೈಲಿಗೆ ಹಾಕಿಸಿ ದ್ದೀರಿ ಎಂಬುದನ್ನು ಹೇಳಿ ಎಂದರು.
ಶುದ್ದೀಕರಣ ಕೇಳಬಹುದಾ?
ಶಾಸಕರಾಗುವುದಕ್ಕೂ ಮೊದಲು ಹತ್ತಾರು ಬಾರಿ ಹೋರಾಟ ಮಾಡಿ, ಹೆಚ್.ಎನ್.ವ್ಯಾಲಿ ನೀರಿನ 3ನೇ ಹಂತದ ಶುದ್ಧೀಕರಣ ಆಗಲಿಲ್ಲ ಎಂದರೆ ಜನತೆ ಅಪಾಯಕ್ಕೆ ಸಿಲುಕುತ್ತಾರೆ ಕ್ಯಾನ್ಸರ್ ಬರುತ್ತೆ, ಕಿಡ್ನಿ ಫೇಲ್ ಆಗುತ್ತದೆ ಎಂದು ಹೋರಾಟ ಮಾಡಿದ್ದೀರಿ. ನಿಮ್ಮ ಮಾತು ಗಳಿಂದ ನಾವೆಲ್ಲಾ ಪ್ರಭಾವಿತರಾಗಿದ್ದೆವು.ಇವತ್ತು ನಿಮಗೆ ಸಂವಿಧಾನದತ್ತ ಅಧಿಕಾರವಿದೆ. ಈ 3 ವರ್ಷಗಳಲ್ಲಿ ಎಷ್ಟು ಅನುದಾನವನ್ನು 3ನೇ ಹಂತದ ಶುದ್ದಿಕರಣಕ್ಕೆ ಇಟ್ಟಿದ್ದೀರಿ? ನಾವು ಕೇಳಬಹುದಾ? ಎಂದು ಪ್ರಶ್ನಿಸಿದ ಅವರು ಆಚಾರವಿಲ್ಲದ ನಾಲಿಗೆ ತೋರಿಸುವು ದಕ್ಕಿಂತ ಕೆಲಸ ಮಾಡಿ ತೋರಿಸಿ, ಆಕಾಶಕ್ಕೆ ಉಗಿಯುವ ಕೆಲಸ ಮಾಡಬೇಡಿ ಎಂದರು.
ನೀವೇ ನಮ್ಮ ಶಾಸಕರು!!
ನೀವು ಶಿಕ್ಷಕರು, ಮೋಟಿವೇಷನ್ ಸ್ಪೀಕರ್ ನೀವು ಆಡುವ ಮಾತುಗಳನ್ನು ಸಮಾಜ ಆಲಿಸುತ್ತಿರುತ್ತದೆ.ಕೆಟ್ಟದಾಗಿ ಮಾತನಾಡಿದರೆ ನಿಮ್ಮ ಅನುಯಾಯಿಗಳು ಇನ್ನೂ ಕಟ್ಟದಾಗಿ ಮಾತನಾಡುತ್ತಾರೆ.ಜಿ.ರಾಮ್ ಜಿ ಬಗ್ಗೆ ಹೋರಾಟ ಮಾಡಲಿ? ಕಳ್ಳರು ಎನ್ನಲು ಅವರಿಗೆ ಯಾವ ಅಧಿಕಾರ ಇದೆ.೩ನೇ ಹಂತದ ಶುದ್ದೀಕರಣ ಯಾಕೆ ಆಗುತ್ತಿಲ್ಲ, ಪರಿಣಾಮ ಕಿಡ್ನಿ ಪೈಲೂರು ಆಗುತ್ತಿದೆ.೨೨ ಸಾವಿರ ನಿವೇಶನ ಯಾಕೆ ಕೊಡಲಾಗುತ್ತಿಲ್ಲ? ಮೂರ್ಖ ಮುಟ್ಟಾಳ ಎಂದರೆ ದಾರಿಯಲ್ಲಿ ಹೋಗುವ ವ್ಯಕ್ತಿ ನಿಮ್ಮನ್ನು ಇನ್ನೇನೋ ಅನ್ನುತ್ತಾನೆ, ಆಗಲೂ ನಾವು ನಿಮ್ಮ ಪರವಾಗಿ ಮಾತನಾಡುತ್ತೇನೆ. 5 ವರ್ಷ ನೀವು ಒಪ್ಪಲಿ ಬಿಡಲಿ ನೀವೇ ನಮ್ಮ ಶಾಸಕರು.ಕೇವಲ 80 ಸಾವಿರ ಮತದಾರರಿಗೆ ಮಾತ್ರ ನೀವು ಶಾಸಕರಲ್ಲ,ಕ್ಷೇತ್ರದ ಎಲ್ಲರಿಗೂ ನೀವು ಶಾಸಕರೇ ಎಂದರು.
ಸಾವಿಗೆ ನೀವೇ ಕಾರಣ??
3ನೇ ಹಂತದ ಶುದ್ಧಿಕರಣಕ್ಕೆ ಈ ಬಾರಿಯ ಬಜೆಟ್ನಲ್ಲಿ ಹಣ ಇಡಲಿಲ್ಲ ಎಂದರೆ ಶಾಸಕರೇ ನಾವು ನಿಮಗೆ ಘೇರಾವ್ ಹಾಕುತ್ತೇವೆ.ಸಮಸ್ತ ಜನತೆ ನಿಮ್ಮ ಮನೆ ಮುಂದೆ ಅಹೋರಾತ್ರಿ ಧರಣಿ ಪ್ರತಿಭಟನೆ ನಡೆಸುತ್ತೇವೆ. ಉಪವಾಸ ಸತ್ಯಾಗ್ರಹ ನಡೆಸುತ್ತೇವೆ. ಜನತೆ ಸತ್ತೋಗು ತ್ತಿದ್ದಾರೆ. ನಿಮಗೆ ಬಿಡುವಿದ್ದರೆ ಕಂದವಾರದ ಹತ್ತಿರ ಎರಡು ದಿನ ವಾಸ್ತವ್ಯ ಮಾಡಿ. ಸೊಳ್ಳೆಗಳ ಕಾಟ ವಿಪರೀತ ಆಗಿದೆ. ಪೆರೇಸಂದ್ರ ಮೆಡಿಕಲ್ ಕಾಲೇಜಿನಲ್ಲಿ ಈವರೆಗೂ ಆಸ್ಪತ್ರೆ ಪ್ರಾರಂಭವಾಗದೆ, ಸಕಾಲಕ್ಕೆ ಚಿಕಿತ್ಸೆ ದೊರೆಯದೆ ಮಾರ್ಗ ಮದ್ಯೆ ಸಾಯುತ್ತಿದ್ದಾರೆ. ಇದಕ್ಕೆಲ್ಲಾ ನೀವೇ ಕಾರಣ ಎಂದು ಆಕ್ರೋಶದಿಂದ ನುಡಿದರು.
ಮುಖ್ಯಮಂತ್ರಿಗಳಿಗೆ ಮನವಿ
ರಾಜ್ಯದ ಲಕ್ಷಾಂತರ ಕೋಟಿ ಬಜೆಟ್ನಲ್ಲಿ 2-3 ಸಾವಿರ ಕೋಟಿ ಮೀಸಲಾಗಿಟ್ಟು ಹೆಚ್.ಎನ್ ವ್ಯಾಲಿಯ ವಿಷದ ನೀರನ್ನು ಕುಡಿಯುತ್ತಿರುವವರಿಗೆ ಶುದ್ಧನೀರು ಕೊಡಿ. ಮೆಡಿಕಲ್ ಕಾಲೇಜಿ ನಲ್ಲಿ ತುರ್ತಾಗಿ ಆಸ್ಪತ್ರೆ ತೆರೆಯಿರಿ. ಪ್ರವಾಸೋದ್ಯಮಕ್ಕೆ ಒತ್ತು ನೀಡಿ, ರಸ್ತೆ ಸೇರಿ ಮೂಲಭೂತ ಸೌಕರ್ಯ ಒದಗಿಸಿ.ಹೂವಿನ ಮಾರುಕಟ್ಟೆ ಬೇಗೆ ಕಟ್ಟಿ ಲೋಕಾರ್ಪಣೆ ಮಾಡಿ, ಚಿಕ್ಕಬಳ್ಳಾಪುರವನ್ನು ಮಲತಾಯಿಯಂತೆ ಕಾಣಬೇಡಿ ಎಂದು ಮುಖ್ಯಮಂತ್ರಿಗಳಿಗೆ ಮನವಿ ಮಾಡಿದರು.