ಚಿಕ್ಕಬಳ್ಳಾಪುರ: ಕಾಂಗ್ರೆಸ್ ಪಕ್ಷದ ಕೆಲ ಶಾಸಕರ ವಿದೇಶ ಪ್ರವಾಸ(Foreign trip of MLA)ವು ಖಾಸಗಿ ಪ್ರವಾಸ ವಾಗಿದ್ದು, ಅದರಲ್ಲಿ ರಾಜಕೀಯವನ್ನು ಎಳೆದು ತರುವುದು ಬೇಡ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ (Dr.M.C.Sudhakar)ತಿಳಿಸಿದ್ದಾರೆ.
ನಗರದಲ್ಲಿ ಗುರುವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ, ಶಾಸಕರ ವಿದೇಶ ಪ್ರವಾಸ ಕುರಿತು ತಾವು ಅವರೊಂದಿಗೆ ಮಾತುಕತೆ ನಡೆಸಿರುವುದಾಗಿ ತಿಳಿಸಿದರು.
ಬೆಳಗಾವಿ ಅಧಿವೇಶನದ ಸಂದರ್ಭದಲ್ಲೇ ಹೈನುಗಾರಿಕೆ ಮತ್ತು ಹೈನು ಉದ್ಯಮ(Dairy farming and the dairy industry) ಬಗ್ಗೆ ಹೆಚ್ಚಿನ ಮಾಹಿತಿ ಪಡೆದುಕೊಳ್ಳುವ ಉದ್ದೇಶದಿಂದ ವಿದೇಶ ಪ್ರವಾಸ ಕೈಗೊಳ್ಳುವ ಬಗ್ಗೆ ಚಿಂತನೆ ನಡೆದಿತ್ತು. ಈ ಪ್ರವಾಸವನ್ನು ಅವರು ತಮ್ಮ ಸ್ವಂತ ಖರ್ಚಿನಿಂದ ಕೈಗೊಂಡಿ ದ್ದು, ಇದಕ್ಕೂ ರಾಜ್ಯ ರಾಜಕೀಯಕ್ಕೆ ಯಾವುದೇ ರೀತಿಯ ಸಂಬಂಧ ಇಲ್ಲ ಎಂದು ಸ್ಪಷ್ಟ ಪಡಿಸಿದರು.
ಮುಖ್ಯಮಂತ್ರಿ ಬದಲಾವಣೆ ಕುರಿತ ಪ್ರಶ್ನೆಗೆ ಉತ್ತರಿಸಿದ ಸಚಿವರು,ಮುಖ್ಯಮಂತ್ರಿ ಉಪ ಮುಖ್ಯಮಂತ್ರಿ ಅನ್ಯೋನ್ಯವಾಗಿದ್ದಾರೆ. ಭಿನ್ನಾಭಿಪ್ರಾಯ ಎನ್ನುವುದು ಯಾವುದೂ ಇಲ್ಲ. ರಾಜ್ಯ ರಾಜಕೀಯ ಬೆಳವಣಿಗೆಗಳನ್ನು ಹೈಕಮಾಂಡ್ ಸಮಗ್ರವಾಗಿ ಗಮನಿಸುತ್ತಿದ್ದು, ಸೂಕ್ತ ಸಮಯದಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳಲಿದೆ. ಹೈಕಮಾಂಡ್ ತೀರ್ಮಾನಕ್ಕೆ ನಾವು ಎಲ್ಲರೂ ಬದ್ಧರಾಗಿರುತ್ತೇವೆ. ಈ ವಿಷಯದಲ್ಲಿ ಅನಾವಶ್ಯಕ ಗದ್ದಲ ಸೃಷ್ಟಿಸುವುದು ಬೇಡ ಎಂದರು.
ಇನ್ನು ಮನರೇಗಾ ಬದಲಾಗಿ ವಿಬಿಜಿ ರಾಮ್ಜಿ ಕಾಯ್ದೆ ಕುರಿತು ಮಾತನಾಡಿದ ಅವರು, ದೇಶದ ಜ್ವಲಂತ ಸಮಸ್ಯೆಗಳಿಂದ ಜನರ ಗಮನವನ್ನು ಬೇರೆಡೆ ಸೆಳೆಯಲು ಕೇಂದ್ರ ಸರ್ಕಾರ ತಂತ್ರ ರೂಪಿಸುತ್ತಿದೆ. ಪ್ರಧಾನಿ ಅಮೇರಿಕಾದ ಮುಂದೆ ಮಂಡಿಯೂರುತ್ತಿರುವುದು ಸರಿಯಲ್ಲ. ಕೇವಲ ಎರಡು–ಮೂರು ಉದ್ಯಮಿಗಳ ಕೈಗೆ ದೇಶದ ಪ್ರಮುಖ ಸಂಸ್ಥೆಗಳು ಒಪ್ಪಿಸಲಾಗುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ.ದೇಶವನ್ನು ಯಾವ ದಿಕ್ಕಿಗೆ ಕೊಂಡೊಯ್ಯಲಾಗುತ್ತಿದೆ ಎಂಬ ಭಯ ಉಂಟಾಗಿದೆ ಎಂದರು.
ಈ ವೇಳೆ, ಚಿಮುಲ್ ನಾಮ ನಿರ್ದೇಶಿತ ಸದಸ್ಯ ಕಾಕಲಚಿಂತೆ ರಾಜಣ್ಣ, ನಂದಿ ರಮೇಶ್, ಮುರಳಿ, ಎಸ್.ಪಿ.ಶ್ರೀನಿವಾಸ್, ಭರಣಿ ವೆಂಕಟೇಶ್ ಇದ್ದರು.